ಹಳಿಯಾಳ: ವಿವಿಧ 7 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜು.9 ರಂದು ಜಿಲ್ಲೆಯ ಎಲ್ಲ ಶಿಕ್ಷಕರನ್ನು ಸೇರಿಸಿ, ಜಿಲ್ಲಾ ಮಟ್ಟದಲ್ಲಿ ಬೃಹತ್ ರ್ಯಾಲಿ ಮೂಲಕ ಹಕ್ಕೊತ್ತಾಯ ಮಾಡಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಳಿಯಾಳ ಘಟಕದ ಅಧ್ಯಕ್ಷ ಸತೀಶ ನಾಯ್ಕ ಭಾವಿಕೇರಿ ಹೇಳಿದರು.
ಪಟ್ಟಣದ ಅನ್ನಪೂರ್ಣ ಹೊಟೆಲ್ನಲ್ಲಿ ನಡೆಸಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, 50 ವರ್ಷಗಳ ಇತಿಹಾಸ ಹೊಂದಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸದಾ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಮತ್ತು ಇಲಾಖೆ ಗಮನ ಸೆಳೆದಿದ್ದು ಇಂದು ಶಿಕ್ಷಕರ ಇನ್ನೂ 7 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸಲಾಗುತ್ತಿದೆ ಎಂದರು.
ಒಟ್ಟೂ 3 ಹಂತಗಳಲ್ಲಿ ಬೇಡಿಕೆ ಈಡೇರಿಕೆಗಾಗಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಬೇಡಿಕೆಗಳ ಬಗ್ಗೆ ಮೊಲದ ಹಂತವಾಗಿ ಜು.30ರ ಒಳಗೆ ರಾಜ್ಯಾದ್ಯಂತ ಮನವಿ ಸಲ್ಲಿಸಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಆದರೇ ಸರ್ಕಾರ ಕಿವಿಗೊಡದೆ ಇರುವುದರಿಂದ ಎರಡನೇ ಹಂತವಾಗಿ ಜು.9 ರಂದು ಜಿಲ್ಲಾ ಮಟ್ಟದಲ್ಲಿ ಎಲ್ಲ ಶಿಕ್ಷಕರನ್ನು ಸೇರಿಸಿ ಬೃಹತ್ ರ್ಯಾಲಿಯ ಮೂಲಕ ಹಕ್ಕೋತ್ತಾಯ ಮಂಡಿಸಲಾಗುವುದು.
ಜು.9ರೊಳಗೆ ಸರ್ಕಾರ ಸ್ಪಂದಿಸಿ ಬೇಡಿಕೆ ಈಡೇರಿಸಿದ್ದೇ ಆದರೇ ಹೋರಾಟವನ್ನು ನಿಲ್ಲಿಸಲಾಗುವುದು. ಅದು ಆಗದೇ ಹೋದರೇ 3ನೇ ಹಂತವಾಗಿ ಸೆ.5 ರಂದು ನಡೆಯುವ ಶಿಕ್ಷಕರ ದಿನಾಚರಣೆ ಬಹಿಷ್ಕರಿಸಿ ವಿಧಾನಸೌಧ ಚಲೋ ನಡೆಸಲಾಗುವುದು ಎಂದು ಸತೀಶನಾಯ್ಕ ಭಾವಿಕೇರಿ ಎಚ್ಚರಿಕೆ ನೀಡಿದರು.
ಸುದ್ದಿಗೊಷ್ಠಿಯಲ್ಲಿ ಪದವಿಧರ ಶಿಕ್ಷಕರ ಸಂಘದ ಡಾರ್ವಿನ್ ಮಾಸ್ಕರನೆಸ್, ಎನ್ಪಿಎಸ್ ನೌಕರರ ಸಂಘದ ರಮೇಶ ಪಾಟೀಲ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಶಾಂತ ನಾಯ್ಕ, ಉದಯ ನಾಯ್ಕ, ಪದಾಧಿಕಾರಿಗಳಾದ ವಿಜಯಲಕ್ಷ್ಮೀ ಮುರುಗೇಶ, ಎಮ್ಪಿ ಹಿಣಿ, ಬಿಎಸ್ ಇಟಗಿ, ಸುಭಾಷ ನಾಯ್ಕ, ಎನ್.ವೈ. ಮಾದಿಗರ, ಪ್ರವೀಣ ನಾಯ್ಕ ಇದ್ದರು.