Advertisement

INS Submarine ship: ಮಲ್ಪೆ, ಮೂಲ್ಕಿ ಹೆಸರಿನ ಹಡಗು ಲೋಕಾರ್ಪಣೆ

01:57 AM Sep 11, 2024 | Team Udayavani |

ಮಂಗಳೂರು: ಕರ್ನಾಟಕದ ಪ್ರಮುಖ ಸ್ಥಳಗಳಾದ ಮಲ್ಪೆ ಮತ್ತು ಮೂಲ್ಕಿ ಎಂಬ ಹೆಸರನ್ನು ಹೊಂದಿರುವ ಆಳವಿಲ್ಲದ ನೀರಿನಲ್ಲಿ ಚಲಿಸಬಲ್ಲ 2 ಜಲಾಂತರ್ಗಾಮಿ ನಿಗ್ರಹ ಹಡಗುಗಳನ್ನು ಮಂಗಳವಾರ ಲೋಕಾರ್ಪಣೆ ಮಾಡಲಾಗಿದೆ.

Advertisement

ಭಾರತೀಯ ನೌಕಾಪಡೆ ಈ ಹಡಗುಗಳನ್ನು ತಯಾರಿಸಿದ್ದು, ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ತಯಾರು ಮಾಡಲಾಗಿದೆ. ಈ ಮೊದಲೇ ಇಂತಹ 2 ಹಡಗುಗಳನ್ನು ನೌಕಾಪಡೆಯ ವಶಕ್ಕೆ ನೀಡಲಾಗಿತ್ತು. ಈ ಹಡಗುಗಳಲ್ಲಿ ನೀರಿನಾಳದಲ್ಲಿರುವ ವಸ್ತುಗಳನ್ನು ಗುರುತಿಸಬಲ್ಲ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ.

ತೀರ ಪ್ರದೇಶದಲ್ಲಿ ಮೈನ್‌ (ನೆಲಬಾಂಬ್‌)ಗಳನ್ನು ಪತ್ತೆ ಹಚ್ಚಲು, ಜಲಂತರ್ಗಾಮಿಗಳ ಸಂಚಾರದ ಮೇಲೆ ಕಣ್ಣಿಡಲು ಇವು ಸಹಾಯ ಮಾಡುತ್ತವೆ. ಒಟ್ಟು 16 ಜಲಂತರ್ಗಾಮಿ ನಿಗ್ರಹ ಹಡಗುಗಳನ್ನು ತಯಾರು ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದ್ದು, ಕೊಚ್ಚಿ ಹಾಗೂ ಕೋಲ್ಕತಾದಲ್ಲಿರುವ ಸಂಸ್ಥೆಗಳು ತಲಾ 8 ಹಡಗುಗಳನ್ನು ತಯಾರು ಮಾಡಲಿವೆ. ಇದಕ್ಕಾಗಿ ಕೇಂದ್ರ ಸರಕಾರದ ಜತೆಗೆ 2019ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಹೆಸರು ಇರಿಸಲು ಕಾರಣ:
ಐಎನ್‌ಎಸ್‌ ಮೂಲ್ಕಿ ಹಾಗೂ ಐಎನ್‌ಎಸ್‌ ಮಲ್ಪೆ ಎಂಬ ಹೆಸರು ಇರಿಸುವುದಕ್ಕೆ ಕಾರಣವೂ ಇದೆ. ಹಿಂದೆಯೂ ಇದೇ ಹೆಸರಿನ ನೌಕೆಗಳಿದ್ದವು. ರಷ್ಯಾದಿಂದ ಆಮದು ಮಾಡಿಕೊಳ್ಳಲಾಗಿದ್ದ 6 ಮೈನ್ ಸ್ವೀಪಿಂಗ್‌ ನೌಕೆಗಳಲ್ಲಿ ಇವೂ ಸೇರಿದ್ದವು. 1984ರಿಂದ ತೊಡಗಿ 2003(ಮೂಲ್ಕಿ) ಹಾಗೂ 2006 (ಮಲ್ಪೆ)ರ ವರೆಗೆ ಕಾರ್ಯಾಚರಿಸಿದ್ದ ಈ ನೌಕೆಗಳನ್ನು ಮುಖ್ಯವಾಗಿ ಸಮುದ್ರ ತಟದಲ್ಲಿ ಕಡಲಿನ ಮೈನ್‌ ಸ್ಫೋಟಕ ಪತ್ತೆ ಮಾಡುವುದಕ್ಕೆ ಬಳಸಲಾಗುತ್ತಿತ್ತು.

ಇವೆರಡನ್ನೂ ಬಳಿಕ ಸೇವೆಯಿಂದ ನಿವೃತ್ತಿಗೊಳಿಸಲಾಗಿತ್ತು. ಆದರೆ ಇಂತಹ ಹೆಸರನ್ನು ಸಾಮಾನ್ಯವಾಗಿ ಮತ್ತೆ ಇರಿಸಲಾಗುತ್ತದೆ. ನೌಕಾಪಡೆಯಲ್ಲಿ 150ಕ್ಕೂ ಅಧಿಕ ಹಡಗುಗಳಿದ್ದು, ಹೆಸರನ್ನು ಸಾಮಾನ್ಯವಾಗಿ ಪುನರಾವರ್ತಿಸುತ್ತಾರೆ ಎನ್ನುತ್ತಾರೆ ಮೂಲ್ಕಿಯವರೇ ಆಗಿರುವ ನಿವೃತ್ತ ನೇವಲ್‌ ಅಧಿಕಾರಿ ವೈಸ್‌ ಅಡ್ಮಿರಲ್‌ ಬಿ.ಆರ್‌.ರಾವ್‌.

Advertisement

ಹಿಂದೆ ಮೂಲ್ಕಿ ಹೇಗೆ ಆಯ್ಕೆ?
ಮೂಲ್ಕಿ ಹಿಂದೆ ರಾಜ್ಯದ ಬಂದರುಗಳಲ್ಲೊಂದಾಗಿತ್ತು, ಆಗ ದೇಶ ವಿದೇಶಗಳಿಂದ ಸಣ್ಣ ಹಡಗುಗಳು ಮೂಲ್ಕಿ ಸಮುದ್ರದ ವರೆಗೆ ಬಂದು ಅಲ್ಲಿಂದ ಶಾಂಭವಿ ನದಿಯ ಒಳಗೆ ಬರುತ್ತಿದ್ದವು, ಪ್ರಮುಖ ವಾಣಿಜ್ಯ ಚಟುವಟಿಕೆಗೆ ಆಗ ಮೂಲ್ಕಿ ಕೇಂದ್ರವಾಗಿತ್ತು. 1930ರಿಂದ 1960ರ ವರೆಗೆ ಪ್ರಯಾಣಿಕರ ಸ್ಟೀಮರ್‌ ನೌಕೆಗಳೂ ಇಲ್ಲಿಗೆ ಬಂದು ಹೋಗುತ್ತಿದ್ದವು. ಉಡುಪಿಯಿಂದ ಮಂಗಳೂರಿಗೆ ಹೋಗಲು ಫೆರ್ರಿ ಮೂಲಕ ಇಲ್ಲಿ ಜನರು ನದಿ ದಾಟುತ್ತಿದ್ದರು. ಹಾಗಾಗಿಯೇ ಬ್ರಿಟಿಷರ ಕಾಲದಲ್ಲೇ ಕಡಲ ನಕ್ಷೆಯಲ್ಲಿ ಮೂಲ್ಕಿ ಹಾಗೂ ಮಲ್ಪೆ ಇವೆರಡರ ಹೆಸರುಗಳಿದ್ದವು.

ಉಪಯೋಗವೇನು?

1. ಜಲಂತರ್ಗಾಮಿಗಳ ಸಂಚಾರ ಪತ್ತೆ ಹಚ್ಚಲು. 2. ತೀರದಲ್ಲಿ ಅಡಗಿಸಿಟ್ಟ ಬಾಂಬ್‌ ಪತ್ತೆ ಮಾಡಲು. 3. ತೀರ ಪ್ರದೇಶದ ಮೇಲೆ ಕಣ್ಗಾವಲು ಇಡಲು.
4. ದ್ವೀಪಪ್ರದೇಶಗಳ ರಕ್ಷಣೆಗಾಗಿ ಬಳಕೆ

Advertisement

Udayavani is now on Telegram. Click here to join our channel and stay updated with the latest news.

Next