Advertisement

ಅಸಾಂಕ್ರಾಮಿಕ ರೋಗ ತಡೆಗೆ ವಿನೂತನ ಯೋಜನೆ

06:20 AM Nov 13, 2018 | |

ಬೆಂಗಳೂರು: ಬದಲಾದ ಜೀವನ ಶೈಲಿಯಿಂದ ಗ್ರಾಮೀಣ ಭಾಗದಲ್ಲೂ  ರಕ್ತದೊತ್ತಡ, ಸಕ್ಕರೆ ಖಾಯಿಲೆ, ಕ್ಯಾನ್ಸರ್‌ ಇನ್ನಿತರ ಕಾಯಿಲೆಗಳು ಹೆಚ್ಚುತ್ತಿವೆ. 

Advertisement

ಈ ಹಿನ್ನೆಲೆಯಲ್ಲಿ ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಮಾಡಿ, ಆ ಬಗ್ಗೆ ಜಾಗೃತಿ ಮೂಡಿಸಿ ಸೂಕ್ತ ಚಿಕಿತ್ಸೆ ನೀಡುವ ವಿನೂತನ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ.

ಸಾಮಾನ್ಯವಾಗಿ ಜ್ವರ, ಕೆಮ್ಮು, ಡೇಂ , ಚಿಕೂನ್‌ ಗುನ್ಯಾ ಸೇರಿದಂತೆ ಹಲವು  ಕಾಯಿಲೆಗಳು ಸುಲಭವಾಗಿ ಅನುಭವಕ್ಕೆ ಬರುತ್ತವೆ. ಆದರೆ, ಅಸಾಂಕ್ರಾಮಿಕ ರೋಗಗಳು ಅನುಭವಕ್ಕೆ ಬರುವ ವೇಳೆಗೆ ಚಿಕಿತ್ಸೆ ಪಡೆದರೂ ಗುಣಮುಖವಾಗದಂತಹ ಪರಿಸ್ಥಿತಿ ತಲುಪಿರುತ್ತವೆ. ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಭಾಗದ ಜನರ ಆರೋಗ್ಯ ತಪಾಸಣೆ ನಡೆಸಿ, ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಚಿಕಿತ್ಸೆ ಕೊಡಿಸುವುದು ಯೋಜನೆ ಉದ್ದೇಶ.

ನಗರ ಪ್ರದೇಶಗಳಲ್ಲಿ ಜನರು ನಿಯಮಿತವಾಗಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಆದರೆ, ಗ್ರಾಮೀಣ ಭಾಗದಲ್ಲಿ ಜನರು ಹಣ, ಮಾಹಿತಿ ಕೊರತೆಯಿಂದಾಗಿ ವರ್ಷಕ್ಕೊಮ್ಮೆಯೂ ಆಸ್ಪತ್ರೆಗಳ ಕಡೆಗೆ ಮುಖ ಮಾಡದಿರುವುದು ಅಧ್ಯಯನಗಳಿಂದ ತಿಳಿದುಬಂದಿದೆ. 

ಹೀಗಾಗಿ ಮೊದಲ ಹಂತದಲ್ಲಿ 6 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸಿರುವ ಆರೋಗ್ಯ ಇಲಾಖೆ, ಮುಂದೆ ರಾಜ್ಯದ ಪ್ರತೀ  ಹಳ್ಳಿಗೂ ತೆರಳಿ ಆರೋಗ್ಯ ತಪಾಸಣೆ ನಡೆಸುವ ಯೋಜನೆ ಹೊಂದಿದೆ.

Advertisement

ಈಗಾಗಲೇ ಚಿಕ್ಕಮಗಳೂರು, ಉಡುಪಿ, ಮೈಸೂರು, ರಾಯಚೂರು, ಗದಗ ಹಾಗೂ ಹಾವೇರಿ ಜಿಲ್ಲೆಗಳ ಆಯ್ದ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ಜನಸಂಖ್ಯಾಧಾರಿತ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅದರಂತೆ ಏಪ್ರಿಲ್‌ನಿಂದೀಚೆಗೆ 50 ಸಾವಿರಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಆ ಪೈಕಿ 892 ಜನರು ಮಧುಮೇಹ,  953 ಮಂದಿ ರಕ್ತದೊತ್ತಡ, 17 ಮಂದಿ ಕ್ಯಾನ್ಸರ್‌ಗೆ ಒಳಗಾಗಿರುವುದು ಕಂಡುಬಂದಿದೆ.

30 ವರ್ಷ ಮೇಲ್ಪಟ್ಟವರಿಗೆಲ್ಲ ತಪಾಸಣೆ:  ಯೋಜನೆಯಲ್ಲಿ ಪ್ರಾಥಮಿಕ/ ಸಮುದಾಯ ಆರೋಗ್ಯ ಕೇಂದ್ರಗಳ ಶೂಶ್ರೂಷಕಿಯರು, ಅರೇ ವೈದ್ಯಕೀಯ ಸಿಬ್ಬಂದಿಗೆ ಅಸಾಂಕ್ರಾಮಿಕ ರೋಗಗಳ ಪತ್ತೆ ಹಚ್ಚುವ ಕುರಿತು ತರಬೇತಿ ನೀಡಲಾಗಿದೆ. ಅದರಂತೆ ಅವರೆಲ್ಲ ತಮ್ಮ ವ್ಯಾಪ್ತಿಗೆ ಬರುವ ಪ್ರತಿ ಗ್ರಾಮಕ್ಕೆ ತೆರಳಿ 30 ವರ್ಷ ಮೇಲ್ಪಟ್ಟವರ ಮಾಹಿತಿ ಕಲೆ ಹಾಕಿ, ನಂತರ ಅವರನ್ನು  ತಪಾಸಣೆಗೆ ಒಳಪಡಿಸಲಿದ್ದಾರೆ. ಈ ವೇಳೆ ರೋಗದ ಗುಣಾತ್ಮಕ ಲಕ್ಷಣಗಳು ಕಂಡುಬಂದರೆ ಹೆಚ್ಚಿನ ಪರೀಕ್ಷೆಗೆ ಸಮೀಪದ ಆಸ್ಪತ್ರೆಗಳಿಗೆ  ಕಳುಹಿಸುತ್ತಾರೆ.

ರೋಗಿ ನಿರಾಕರಿಸಿದರೂ, ಚಿಕಿತ್ಸೆ ಖಚಿತ: ರೋಗ ಲಕ್ಷಣಗಳು ಕಂಡಬಂದ ಕೂಡಲೇ ಆರೋಗ್ಯ ಕೇಂದ್ರದ ಸಿಬ್ಬಂದಿ  ಸಂಬಂಧಿಸಿದ ವ್ಯಕ್ತಿಯ ಸಂಪೂರ್ಣ ವಿವರವನ್ನೊಳಗೊಂಡ ವೈದ್ಯಕೀಯ ಕಡತ ಸಿದ್ಧಪಡಿಸುತ್ತಾರೆ. ಆನಂತರ ನಿರಂತರವಾಗಿ ಆ ವ್ಯಕ್ತಿಯನ್ನು ಸಂಪರ್ಕಿಸಿ ಆಗುತ್ತಿರುವ ತೊಂದರೆ,  ಚಿಕಿತ್ಸೆ ಪಡೆಯುತ್ತಿರುವ ಹಾಗೂ ಸೂಚಿಸಿದ ಔಷಧಿಗಳನ್ನು ಕಾಲಕಾಲಕ್ಕೆ ಪಡೆಯುತ್ತಿರುವ ಬಗ್ಗೆ ಪರಿವೀಕ್ಷಣೆ ನಡೆಸುತ್ತಾರೆ. ಒಂದೊಮ್ಮೆ ರೋಗಿಯು ಅಸಡ್ಡೆ ಮಾಡಿದರೆ ಸ್ವಯಂ ಜವಾಬ್ದಾರಿಯಿಂದ ಚಿಕಿತ್ಸೆ  ನೀಡಲು  ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಈಗಾಗಲೇ  ಆರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ ಕಾರ್ಯಕ್ರಮ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಜನಸಂಖ್ಯೆ ಆಧರಿಸಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಯೋಜನೆ ವಿಸ್ತರಿಸಲಾಗುವುದು.
– ಡಾ.ಸೆಲ್ವರಾಜ್‌, ಉಪ ನಿರ್ದೇಶಕ, ಅಸಾಂಕ್ರಾಮಿಕ ರೋಗಗಳ ಘಟಕ, ಆರೋಗ್ಯ ಇಲಾಖೆ

– ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next