Advertisement

ವಿದ್ಯಾರ್ಥಿಯ ಜಾಲಿ ರೈಡ್‌ಗೆ ಜೀವ ಕೊಟ್ಟರು ಅಮಾಯಕರು

11:02 AM Jan 27, 2017 | Team Udayavani |

ಬೆಂಗಳೂರು: ಜಾಲಿ ರೈಡ್‌ಗೆ ತೆರಳಿದ್ದ ವಿದ್ಯಾರ್ಥಿಯೊರ್ವನ ಕಾರು ರಸ್ತೆ ವಿಭಜಕಕ್ಕೆ ಅಪ್ಪಳಿಸಿ ನಂತರ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಳ್ಳಾರಿ ರಸ್ತೆಯ ಜಕ್ಕೂರು ಬಳಿ ಗುರುವಾರ ಬೆಳಗ್ಗೆ ಸಂಭವಿಸಿದೆ.

Advertisement

ಆರ್‌.ಟಿ.ನಗರ ಸಮೀಪದ ಚಾಮುಂಡೇಶ್ವರಿ ನಗರ ನಿವಾಸಿಗಳಾದ ಬೈಕ್‌ ಸವಾರ ಎಸ್‌.ಮುರುಗನ್‌(48) ಮತ್ತು ಹಿಂಬದಿ ಸವಾರ ವೆಂಕಟೇಶ್‌ (50) ಮೃತ ದುರ್ದೈವಿಗಳು. ಈ ಸಂಬಂಧ ಜಕ್ಕೂರು ನಿವಾಸಿ, ಕಾರು ಚಾಲಕ ಇರ್ಫಾನ್‌ ಅಲಿ ಹುಸೇನ್‌(19) ಎಂಬಾತನನ್ನು ಬಂಧಿಸಲಾಗಿದೆ. ಈತ ಹೆಬ್ಟಾಳದ ಖಾಸಗಿ ಕಾಲೇಜಿನ ದ್ವೀತಿಯ ಪಿಯುಸಿ ವಿದ್ಯಾರ್ಥಿ ಎಂದು ಪೊಲೀಸರು ತಿಳಿಸಿದ್ದಾರೆ.

ಮುರುಗನ್‌ ಗಾರೆ ಕೆಲಸ ಮಾಡುತ್ತಿದ್ದು, ವೆಂಕಟೇಶ್‌ ಟೈಲರ್‌ ಆಗಿದ್ದರು. ಇಬ್ಬರು ಕೆಲಸದ ನಿಮ್ಮಿತ್ತ ಜಕ್ಕೂರು ಕಡೆಗೆ ಹೋಗಿ ಮನೆಗೆ ವಾಪಸ್‌ ಹಿಂದಿರುಗುವಾಗ ಈ ದುರ್ಘ‌ಟನೆ ಸಂಭವಿಸಿದೆ. ವಿದ್ಯಾರ್ಥಿ ಇರ್ಫಾನ್‌ ಅಲಿ ಹುಸೇನ್‌ ಗುರುವಾರ ಬೆಳಗ್ಗೆ ಕಾರಿನಲ್ಲಿ ಸ್ನೇಹಿತರೊಂದಿಗೆ ಜಾಲಿ ರೈಡ್‌ಗೆ ತೆರಳುತ್ತಿದ್ದ.

ಇರ್ಫಾನ್‌ ವೇಗವಾಗಿ ಕಾರು ಚಾಲನೆ ಮಾಡುತ್ತಿದ್ದುದರಿಂದ ಜಕ್ಕೂರು ಫ್ಲೈಯಿಂಗ್‌ ಶಾಲೆ ಬಳಿ ಅದು ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕ್ಕೆ ಅಪ್ಪಳಿಸಿದೆ. ನಂತರ ಪಕ್ಕದಲ್ಲೇ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಕೆಳಗೆ ಬಿದ್ದ ಮುರುಗನ್‌ ಮತ್ತು ವೆಂಕಟೇಶ್‌ ಮೇಲೆ ಕಾರಿನ ಚಕ್ರ ಹರಿದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಕಾರಿನಲ್ಲಿದ್ದರು ಹುಡುಗಿಯರು
ಘಟನೆ ನಡೆದ ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ವಿದ್ಯಾರ್ಥಿಯನ್ನು ಸಾರ್ವ ಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅತಿ ವೇಗವಾಗಿ ಕಾರು ಚಾಲನೆ ಮಾಡಿದ್ದೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿ ತಂದೆ ವೈದ್ಯರಾಗಿದ್ದು, ಇರ್ಫಾನ್‌ ಕಾರಿನಲ್ಲಿ ಹುಡುಗಿಯರೂ ಇದ್ದರು. ಅವರೆಲ್ಲರನ್ನೂ ಕರೆದುಕೊಂಡು ಆತ ಜಾಲಿ ರೈಡ್‌ಗೆ ಹೋಗುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next