Advertisement

ಹಣದುಬ್ಬರದ ನಾಗಾಲೋಟಕ್ಕೆ ಕಡಿವಾಣ ಅನಿವಾರ್ಯ

12:06 AM May 18, 2022 | Team Udayavani |

ರಷ್ಯಾ-ಉಕ್ರೇನ್‌ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ಜಾಗತಿಕವಾಗಿ ಸೃಷ್ಟಿಯಾಗಿರುವ ಆರ್ಥಿಕ ಅನಿಶ್ಚಿತತೆ, ಆರ್ಥಿಕ ದಿವಾಳಿಗೆ ಸಿಲುಕಿ ನಲುಗಿ ಹೋಗಿರುವ ನೆರೆ ರಾಷ್ಟ್ರಗಳಲ್ಲಿನ ರಾಜಕೀಯ ಅರಾಜಕತೆ ಮತ್ತು ನಿರಂತರವಾಗಿ ಕಾಡುತ್ತಿರುವ ಹವಾಮಾನ ವೈಪರೀತ್ಯಗಳ ಪರಿಣಾಮ ಭಾರತ ಹಣದುಬ್ಬರದ ನಾಗಾಲೋಟಕ್ಕೆ ಸಾಕ್ಷಿಯಾಗುತ್ತಿದೆ. ವಾರದ ಹಿಂದೆಯಷ್ಟೇ ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ ದೇಶದ ಚಿಲ್ಲರೆ ಹಣದುಬ್ಬರ ಎಪ್ರಿಲ್‌ ತಿಂಗಳಿನಲ್ಲಿ ಶೇ.7.79ರಷ್ಟಾಗಿದ್ದು ಇದು ಸರಿಸುಮಾರು 8 ವರ್ಷಗಳಲ್ಲಿಯೇ ಅತ್ಯಧಿಕವಾದುದಾಗಿದೆ. ಇದೀಗ ಮಂಗಳವಾರ ಬಿಡುಗಡೆಯಾದ ಸಗಟು ಬೆಲೆ ಸೂಚ್ಯಂಕ ಹಣದುಬ್ಬರ ಪ್ರಮಾಣ ಎಪ್ರಿಲ್‌ ತಿಂಗಳಿನಲ್ಲಿ ಶೇ.15.08ರಷ್ಟು ದಾಖಲಾಗಿದ್ದು ತೀವ್ರ ಆತಂಕಕ್ಕೆಡೆ ಮಾಡಿದೆ.

Advertisement

ತೈಲೋತ್ಪನ್ನಗಳು, ಲೋಹಗಳು, ಕಚ್ಚಾತೈಲ, ನೈಸರ್ಗಿಕ ಇಂಧನ, ಆಹಾರ ಪದಾರ್ಥಗಳು, ಆಹಾರೇತರ ಉತ್ಪನ್ನಗಳು, ರಾಸಾಯನಿಕಗಳು ಮತ್ತು ರಾಸಾಯನಿಕ ಉತ#ನ್ನಗಳು ಸಹಿತ ಬಹುತೇಕ ಎಲ್ಲ ವಲಯಗಳಲ್ಲೂ ಸಗಟು ಹಣದುಬ್ಬರ ಏರುಗತಿಯಲ್ಲಿರುವುದು ಒಂದಿಷ್ಟು ಚಿಂತೆಗೀಡುಮಾಡಿದೆ. ಇನ್ನು ಉತ್ಪಾದನ ವಲಯವೂ ಕೂಡ ಹಣದುಬ್ಬರ ಹೆಚ್ಚಳದಿಂದ ಹೊರತಾಗಿಲ್ಲ.

ಚಿಲ್ಲರೆ ಹಣದುಬ್ಬರದ ಜತೆ ಜತೆಯಲ್ಲಿ ಸಗಟು ಹಣದುಬ್ಬರವೂ ಆಘಾತಕಾರಿ ಏರಿಕೆ ದಾಖಲಿಸಿರುವ ಹಿನ್ನೆಲೆಯಲ್ಲಿ ಆರ್‌ ಬಿಐನ ಹಣಕಾಸು ನೀತಿ ಸಮಿತಿ ಜೂನ್‌ನ ಸಭೆಯಲ್ಲಿ ಮತ್ತೆ ರೆಪೋ ದರವನ್ನು ಇನ್ನಷ್ಟು ಹೆಚ್ಚಿಸುವುದು ಬಹುತೇಕ ಖಚಿತವಾಗಿದೆ. ವಾರಗಳ ಹಿಂದೆಯಷ್ಟೇ ಆರ್‌ಬಿಐ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ರೆಪೋ ದರವನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿತ್ತು. ರೆಪೋ ದರ ಹೆಚ್ಚಳದಿಂದಾಗಿ ಸಾಲಗಳ ಮೇಲಿನ ಬಡ್ಡಿಯ ದರವನ್ನು ಬ್ಯಾಂಕ್‌ಗಳು ಈಗಾಗಲೇ ಹೆಚ್ಚಿಸಿದ್ದು ಇದು ಸಾಮಾನ್ಯ ಗ್ರಾಹಕನ ಮೇಲೆ ಮತ್ತೂಂದು ಹೊಡೆತವನ್ನು ನೀಡಿದೆ. ರೆಪೋ ದರ ಹೆಚ್ಚಳದಿಂದಾಗಿ ಹಣದ ಚಲಾವಣೆಗೆ ತಡೆ ಹಾಕಿದಂತಾಗಿ ತನ್ನಿಂತಾನೆ ಹಣದುಬ್ಬರ ಒಂದಿಷ್ಟು ನಿಯಂತ್ರಣಕ್ಕೆ ಬರುತ್ತದೆ. ಅದೇನಿದ್ದರೂ ದೀರ್ಘ‌ ಕಾಲೀನ ಪರಿಹಾರದ ಮಾತು. ರೂಪಾಯಿ ಅಪಮೌಲ್ಯಕ್ಕೆ ತಡೆ, ಕಚ್ಚಾತೈಲ ಬೆಲೆ ಏರುಗತಿಯಲ್ಲಿದ್ದರೂ ಆ ಹೊರೆಯನ್ನು ನೇರವಾಗಿ ಗ್ರಾಹಕರ ಹೆಗಲಿಗೆ ಹೊರಿಸದೆ ಈ ಹೆಚ್ಚುವರಿ ಹೊರೆಯನ್ನು ಸರಕಾರ, ತೈಲ ಕಂಪೆನಿ ಗಳು ಮತ್ತು ಗ್ರಾಹಕರಿಗೆ ಸಮಾನವಾಗಿ ವರ್ಗಾಯಿಸಿದ್ದಲ್ಲಿ ಈಗ ಸೃಷ್ಟಿ ಯಾಗಿರುವ ಹಣದುಬ್ಬರದ ಏರುಬ್ಬರಕ್ಕೆ ಕಡಿವಾಣ ಹಾಕಲು ಸಾಧ್ಯವಿತ್ತು. ಪಂಚರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ತೈಲಬೆಲೆಗಳನ್ನು ಪರಿಷ್ಕರಿ ಸಲು ತೈಲ ಕಂಪೆನಿಗಳಿಗೆ ಅನುಮತಿ ನೀಡದಿದ್ದ ಸರಕಾರ ಫ‌ಲಿತಾಂಶ ಘೋಷಣೆಯಾದ ತತ್‌ಕ್ಷಣ ತೈಲ ಬೆಲೆ ಪರಿಷ್ಕರಣೆಗೆ ಅನುಮತಿ ನೀಡಿತ್ತು ಎಂಬುದನ್ನಿಲ್ಲಿ ಉಲ್ಲೇಖೀಸಲೇಬೇಕು. ತೈಲ ಬೆಲೆಗಳ ಮೇಲೆ ಸರಕಾರ ಹಿಡಿತ ಸಾಧಿಸಿದ್ದೇ ಆದಲ್ಲಿ ಸಹಜವಾಗಿಯೇ ಬೆಲೆ ಏರಿಕೆಯ ನಾಗಾಲೋಟಕ್ಕೆ ತಡೆ ಬೀಳಲಿದೆ. ತನ್ಮೂಲಕ ಆರ್ಥಿಕತೆಯೂ ಸ್ಥಿರಗೊಳ್ಳಲು ಸಾಧ್ಯ. ಈಗಾಗಲೇ ಮಳೆಗಾಲ ಆರಂಭವಾಗಿದ್ದು ಹಲವೆಡೆ ಹವಾಮಾನ ವೈಪರೀತ್ಯಗಳು ಬಾಧಿಸಲಾರಂಭಿಸಿವೆ. ಇದು ಜನರನ್ನು ಸಂಕಷ್ಟಕ್ಕೀಡು ಮಾಡಲಿದೆ. ಸರಕಾರ ಜನಸಾಮಾನ್ಯರನ್ನು ಬೆಲೆ ಏರಿಕೆ ಸಮಸ್ಯೆಯ ಸುಳಿಯಿಂದ ಮೇಲೆತ್ತದೇ ಇದ್ದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಈ ಬಗ್ಗೆ ಕೇಂದ್ರ ಹೆಚ್ಚಿನ ಗಮನಹರಿಸಿ ಜನಸಾಮಾನ್ಯರ ಹಿತಕ್ಕೆ ಧಕ್ಕೆಯಾಗದಂತೆ ಒಂದಿಷ್ಟು ಬಿಗು ನಿಲುವನ್ನು ತಾಳುವುದು ಅತ್ಯವಶ್ಯ.

Advertisement

Udayavani is now on Telegram. Click here to join our channel and stay updated with the latest news.

Next