Advertisement

ಸಾಂಕ್ರಾಮಿಕ ರೋಗಭಯ: ‘ಸಿವಿಕ್‌ ಬೈಲಾ’ಬಾಣ!

11:42 PM Jul 25, 2019 | sudhir |

ಉಡುಪಿ: ಉಡುಪಿ ನಗರ ಪ್ರದೇಶದ ಮನೆ ಹಾಗೂ ಅಂಗಡಿಗಳ ಆವರಣದಲ್ಲಿ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಅಂಶಗಳು ಕಂಡು ಬಂದರೆ ಜಾಗದ ಮಾಲಕರು ಭಾರೀ ಮೊತ್ತದ ದಂಡ ತೆರಬೇಕಾಗುತ್ತದೆ ಎಚ್ಚರ.

Advertisement

ನಗರದಲ್ಲಿ ಜನವಸತಿ ಪ್ರದೇಶದಲ್ಲಿ ಸ್ವಚ್ಛತೆ ಕಡೆ ಗಮನಹರಿಸದ ಹಿನ್ನೆಲೆಯಲ್ಲಿ ಡೆಂಗ್ಯೂ, ಮಲೇರಿಯ, ಎಚ್1ಎನ್‌1, ಚಿಕುನ್‌ಗುನ್ಯಾದಂತಹ ಸಾಂಕ್ರಾಮಿಕ ರೋಗಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಎಷ್ಟು ಅರಿವು ಮೂಡಿಸಿದರೂ ಸಾರ್ವಜನಿಕರು ಎಚ್ಚರ ವಹಿಸದ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿ ಯಲ್ಲಿ ಸಿವಿಕ್‌ ಬೈಲಾ ಜಾರಿಗೆ ಉಡುಪಿ ನಗರಸಭೆ ಸಿದ್ಧತೆ ಮಾಡಿಕೊಂಡಿದೆ.

ಬೈಲಾದಲ್ಲಿ ಏನಿದೆ ?

ಬೈಲಾದಲ್ಲಿ ನಗರಸಭೆ ವ್ಯಾಪ್ತಿಯ ಮನೆ ಹಾಗೂ ಕಟ್ಟಡ ಆವರಣಗಳಲ್ಲಿ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಅಂಶಗಳು ಕಂಡುಬಂದರೆ ಆ ಜಾಗದ ಮಾಲಕರಿಗೆ ಮೊದಲ ಹಂತದಲ್ಲಿ ಎಚ್ಚರಿಕೆ ನೀಡಲಾಗುತ್ತದೆ. ಮತ್ತೆ ಅದೇ ತಪ್ಪು ಕಂಡುಬಂದರೆ ಅಂತಹವರಿಗೆ ಸ್ಥಳದಲ್ಲಿಯೇ ಭಾರೀ ದಂಡ ವಿಧಿಸಲಾಗುತ್ತದೆ.

ಆರೋಗ್ಯ ಇಲಾಖೆಯಿಂದ ಕ್ರಮ

Advertisement

ಉಡುಪಿ ನಗರಸಭೆಗೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ‘ಬೈಲಾ’ ಕರಡು ಪ್ರತಿ ಸಲ್ಲಿಕೆಯಾಗಿದೆ. ಅಲ್ಲದೇ ಮೇ ತಿಂಗಳಿನಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ‘ಬೈಲಾ’ ಜಾರಿಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ನಗರಸಭೆ ಪ್ರಸ್ತಾವನೆ ಸಲ್ಲಿಸಲು ಎಲ್ಲ ಸಿದ್ಧತೆಗಳನ್ನು ನಡೆಸುತ್ತಿದೆ.

ಆಡಳಿತಾಧಿಕಾರಿಗಳ ಒಪ್ಪಿಗೆ

ನಗರಸಭೆಯ ವ್ಯಾಪ್ತಿಯಲ್ಲಿ ಯಾವುದೇ ‘ಬೈಲಾ’ ಜಾರಿಗೆ ತರಬೇಕಾದರೆ ಮೊದಲು ನಗರಸಭೆ ಸದಸ್ಯರ ಒಂದಾಗಿ ಒಪ್ಪಿಗೆ ಸೂಚಿಸಿದ ಬಳಿಕ ಸರಕಾರಕ್ಕೆ ಕಳುಹಿಸಬೇಕು. ಆದರೆ ಪ್ರಸ್ತುತ ನಗರಸಭೆ ಚುನಾವಣೆ ಮುಗಿದು ಸರಿ ಸುಮಾರು 1 ವರ್ಷ ಆದರೂ ಜನಪ್ರತಿನಿಧಿಗಳು ಅಧಿಕಾರ ಸ್ವೀಕರಿಸದ ಹಿನ್ನೆಲೆ ಜಿಲ್ಲಾಧಿಕಾರಿಗಳು ನಗರಸಭೆ ಆಡಳಿತ ಅಧಿಕಾರಿಯಾಗಿ ನಿರ್ಣಯ ಕೈಗೊಳ್ಳಬೇಕಾಗಿದೆ.

ಪ್ರತಿ ನಾಗರಿಕನ ಜವಾಬ್ದಾರಿ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಸಿವಿಕ್‌ ಬೈಲಾ ಚಾಲ್ತಿಯಲ್ಲಿದೆ. ಉಡುಪಿ ನಗರದಲ್ಲಿಯೂ ಸಾಂಕ್ರಾಮಿಕ ರೋಗ ಪ್ರಕರಣ ಹೆಚ್ಚಿದ ಹಿನ್ನೆಲೆಯಲ್ಲಿ ಸಿವಿಕ್‌ ಬೈಲಾ ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದ್ದಾರೆ. ಅಧಿಕಾರಿಗಳು ಜನವಸತಿ ಆವರಣದಲ್ಲಿ ಸೊಳ್ಳೆ ಉತ್ಪತ್ತಿ ಕಾರಣವಾಗುವ ಅಂಶಗಳು ಕಂಡು ಬಂದ ಪ್ರದೇಶದಲ್ಲಿ ಉದ್ದಿಮೆದಾರರಿಗೆ 15,000 ರೂ. ವರೆಗೆ ದಂಡ ವಿಧಿಸಲಾಗಿದೆ.

ಗಂಭೀರ ಸ್ಥಿತಿಯ ಪ್ರಕರಣಗಳಿಲ್ಲ

ನಗರಭೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಜು. 15ವರೆಗೆ ಒಟ್ಟು 11 ಡೆಂಗ್ಯೂ ಹಾಗೂ 45 ಮಲೇರಿಯಾ ಪ್ರಕರಣ ವರದಿಯಾಗಿವೆ. ಕಾಯಿಲೆ ಪೀಡಿತರು ಗಂಭೀರ ಸ್ಥಿತಿಯಲ್ಲಿರುವ ಯಾವುದೇ ಪ್ರಕರಣವಿಲ್ಲ. -ಡಾ| ಪ್ರಶಾಂತ್‌ ಭಟ್, ರಾಷ್ಟ್ರೀಯ ರೋಗವಾಹಕ ಆಶ್ರಿತ‌ ರೋಗಗಳ ನಿಯಂತ್ರಣಾಧಿಕಾರಿ ಉಡುಪಿ.
ಸಾಂಕ್ರಾಮಿಕ ರೋಗ ಹರಡದಂತೆ ಜವಾಬ್ದಾರಿ ವಹಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ನಗರಸಭೆ ಅಥವಾ ಜಿಲ್ಲಾಡಳಿತ ಯಾವುದೇ ಕಾನೂನುಗಳನ್ನು ಮಾಡಿದರೂ ಅದು ಜಾರಿಯಾಗಲು ನಾಗರಿಕರ ಸಹಕಾರ ಅತೀ ಅಗತ್ಯ. ಸಾರ್ವಜನಿಕರು ತಮ್ಮ ಮನೆಯ ಆಸುಪಾಸಿನಲ್ಲಿರುವ ಸೊಳ್ಳೆ ಉತ್ಪತ್ತಿ ಪ್ರದೇಶಗಳ ಕುರಿತು ಎಚ್ಚರಿಕೆ ವಹಿಸಿ ಅದರ ನಿರ್ಮೂಲನೆಗೆ ಕ್ರಮ ವಹಿಸಿದರೆ ಉತ್ತಮ. ಟಯರ್‌, ಬಳಸಿದ ಸೀಯಾಳ, ಪ್ಲಾಸ್ಟಿಕ್‌ ವಸ್ತುಗಳಲ್ಲಿ ನೀರು ತುಂಬಿದ್ದರೆ ಅದನ್ನು ಆಯಾ ಪರಿಸರದವರೇ ವಿಲೇ ಮಾಡುವುದು ಉತ್ತಮ. ಖಾಸಗಿ ಪ್ರದೇಶದಲ್ಲಿ ಇಂತಹ ಸೊಳ್ಳೆ ಉತ್ಪತ್ತಿ ಕೇಂದ್ರಗಳಿದ್ದರೆ ಅದನ್ನು ನಗರಸಭೆಗೆ ತಿಳಿಸಿದರೆ ಅವರು ಈ ಪ್ರದೇಶಕ್ಕೆ ಭೇಟಿ ನೀಡಿ ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಿ ಕ್ರಮ ಕೈಗೊಳ್ಳುವರು. ಮೊದಲು ಎಚ್ಚರಿಕೆ ನೀಡಿ ಅನಂತರ ಭಾರೀ ಪ್ರಮಾಣದ ದಂಡವನ್ನೂ ವಿಧಿಸುವುರು. ಈಗಾಗಲೇ ಜಿಲ್ಲಾಡಳಿತ 2020ರ ಒಳಗಾಗಿ ಉಡುಪಿ ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಬೇಕೆಂಬ ಪಣ ತೊಟ್ಟಿದೆ. ಇದು ಈಡೇರಲು ಕೇವಲ ಇಲಾಖೆ ಶ್ರಮಿಸಿದರೆ ಸಾಲುವುದಿಲ್ಲ. ಜಿಲ್ಲೆಯ ಸಾರ್ವಜನಿಕರೆಲ್ಲರೂ ಕೈ ಜೋಡಿಸಿದರಷ್ಟೇ ಇಂತಹ ಮಹತ್ಕಾರ್ಯ ಪೂರ್ಣಗೊಳ್ಳಲು ಸಾಧ್ಯವಾಗುವುದು.

ಮಂಗಳೂರಿನಲ್ಲಿ 15,000 ರೂ. ದಂಡ!

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಸಿವಿಕ್‌ ಬೈಲಾ ಚಾಲ್ತಿಯಲ್ಲಿದೆ. ಉಡುಪಿ ನಗರದಲ್ಲಿಯೂ ಸಾಂಕ್ರಾಮಿಕ ರೋಗ ಪ್ರಕರಣ ಹೆಚ್ಚಿದ ಹಿನ್ನೆಲೆಯಲ್ಲಿ ಸಿವಿಕ್‌ ಬೈಲಾ ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದ್ದಾರೆ. ಅಧಿಕಾರಿಗಳು ಜನವಸತಿ ಆವರಣದಲ್ಲಿ ಸೊಳ್ಳೆ ಉತ್ಪತ್ತಿ ಕಾರಣವಾಗುವ ಅಂಶಗಳು ಕಂಡು ಬಂದ ಪ್ರದೇಶದಲ್ಲಿ ಉದ್ದಿಮೆದಾರರಿಗೆ 15,000 ರೂ. ವರೆಗೆ ದಂಡ ವಿಧಿಸಲಾಗಿದೆ.
– ತೃಪ್ತಿ ಕುಮ್ರಗೋಡು
Advertisement

Udayavani is now on Telegram. Click here to join our channel and stay updated with the latest news.

Next