Advertisement

Infectious Disease ಕರುನಾಡಿಗೆ ಜ್ವರ ಭೀತಿ: ರಾಜ್ಯ ಸರಕಾರ ಕಟ್ಟೆಚ್ಚರ

01:03 AM Jul 08, 2024 | Team Udayavani |

ಬೆಂಗಳೂರು: ರಾಜ್ಯದಲ್ಲೀಗ ಸಾಂಕ್ರಾಮಿಕ ರೋಗಗಳ ಹಾವಳಿ ಮಿತಿ ಮೀರುತ್ತಿದೆ. ಹವಾಮಾನ ಬದಲಾವಣೆಯ ಜತೆ ಜತೆಗೆ ಆರೋಗ್ಯದಲ್ಲಿಯೂ ಏರುಪೇರಾಗುತ್ತಿದೆ. ಮಳೆ ಹೆಚ್ಚಳದಿಂದ ಒಂದೆಡೆ ಡೆಂಗ್ಯೂ, ಮತ್ತೊಂದೆಡೆ ಮಲೇರಿಯಾ, ಇನ್ನೊಂದೆಡೆ ಚಿಕೂನ್‌ಗುನ್ಯಾ… ಹೀಗೆ ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಕರುನಾಡನ್ನು ವಿಪರೀತವಾಗಿ ಕಾಡತೊಡಗಿವೆ.

Advertisement

ರವಿವಾರ ಒಂದೇ ದಿನ ರಾಜ್ಯದಲ್ಲಿ 159 ಮಂದಿಯಲ್ಲಿ ಡೆಂಗ್ಯೂ ದೃಢಪಟ್ಟಿದೆ. ಇನ್ನು ಶಂಕಿತ ಝೀಕಾ ವೈರಾಣು ಸೋಂಕು ಕೂಡ ಕಂಡುಬಂದಿದ್ದು, ಒಬ್ಬರು ಈಗಾಗಲೇ ಮೃತಪಟ್ಟಿದ್ದರೂ ಆರೋಗ್ಯ ಇಲಾಖೆ ದೃಢಪಡಿಸಿಲ್ಲ. ಇದರ ಜತೆಗೆ ಹಾವೇರಿಯಲ್ಲಿ ಇಲಿ ಜ್ವರವೂ ಪತ್ತೆಯಾಗಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಹಂದಿ ಜ್ವರದ ಭಯವೂ ಆರಂಭವಾಗಿದೆ. ರಾಜ್ಯವು ಸಾಂಕ್ರಾಮಿಕ ಕಾಯಿಲೆಗಳ ಕಬಂಧಬಾಹುವಿನೊಳಗೆ ಸಿಲುಕಿಕೊಳ್ಳಲಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸೋಮವಾರ ಮತ್ತು ಮಂಗಳವಾರ ಡಿಸಿ, ಸಿಇಒಗಳ ಸಭೆ ನಡೆಸಲಿದ್ದಾರೆ.

ಡೆಂಗ್ಯೂ ಸಹಿತ ಕಳೆದ ವರ್ಷವಿಡೀ 18 ಸಾವಿರ ಮಂದಿ ವಿವಿಧ ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗಿದ್ದರೆ, 2024ರ ಜನವರಿಯಿಂದ ಜೂನ್‌ 30ರ ವರೆಗೆ 8 ಸಾವಿರ ಮಂದಿ ಮಾತ್ರ ತುತ್ತಾಗಿದ್ದರು. ಆದರೆ ಒಂದು ವಾರದಿಂದ ಪ್ರಕರಣಗಳ ಸಂಖ್ಯೆ ತೀವ್ರಗೊಂಡಿದೆ. ಈ ಸಂಬಂಧ ವರದಿಗಾಗಿ ಆರೋಗ್ಯ ಇಲಾಖೆ ಕಾಯುತ್ತಿದ್ದು, ಈ ಸಂಖ್ಯೆ 10 ಸಾವಿರ ದಾಟಲಿದೆ ಎಂದು ಅಂದಾಜಿಸಲಾಗಿದೆ. ಈಗಿನ ಪರಿಸ್ಥಿತಿ ಗಮನಿಸಿದರೆ ಈ ಸಂಖ್ಯೆ ಇನ್ನಷ್ಟು ಏರುವ ಮುನ್ಸೂಚನೆಗಳಿವೆ.

ಏರುತ್ತಿದೆ ಮರಣ ಪ್ರಮಾಣ: ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣ ಹೆಚ್ಚುತ್ತಿದ್ದು, ಆಸ್ಪತ್ರೆಗಳಿಗೆ ದಾಖಲಾಗುವವರ ಪ್ರಮಾಣ ಏರುತ್ತಿದೆ. ಮರಣ ಪ್ರಮಾಣ (ಸಿಎಫ್ಆರ್‌)ವೂ ಹೆಚ್ಚುತ್ತಿದೆ. ಇದುವರೆಗೆ 54,820 ಮಾದರಿಗಳನ್ನು ಪರೀಕ್ಷೆ ಮಾಡಿದ್ದು, 7,165 ಡೆಂಗ್ಯೂ ಪ್ರಕರಣಗಳೆಂದು ಶಂಕಿಸಲಾಗಿತ್ತು. ಈ ಪೈಕಿ 301 ಪ್ರಕರಣಗಳು ದೃಢಪಟ್ಟಿದ್ದು, 6 ಮಂದಿ ಡೆಂಗ್ಯೂ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಶಿವಮೊಗ್ಗದಲ್ಲಿ ಝೀಕಾ ವೈರಾಣು ಸೋಂಕಿನಿಂದ ಒಬ್ಬರು ಮೃತಪಟ್ಟಿರುವ ಸಂಶಯವಿದ್ದು, ಈ ಬಗ್ಗೆ ಆರೋಗ್ಯ ಇಲಾಖೆ ದೃಢೀಕರಿಸಿಲ್ಲ.

ಮಕ್ಕಳಲ್ಲಿ ಡೆಂಗ್ಯೂ ಹೆಚ್ಚು ಕಂಡುಬರುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡಬೇಕಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 130 ಸಕ್ರಿಯ ಪ್ರಕರಣಗಳಿವೆ. ಚಿಕ್ಕಮಗಳೂರಿನಲ್ಲಿ 546 ಹಾಗೂ ಮೈಸೂರಿನಲ್ಲಿ 496 ಸಕ್ರಿಯ ಪ್ರಕರಣಗಳಿವೆ.
ಆರೋಗ್ಯ ಸಚಿವರಿಂದ ಸೂಚನೆ: ಆರೋಗ್ಯ ಇಲಾಖೆ ಅಧಿಕಾರಿಗಳ ಜತೆಗೆ ಸುದೀರ್ಘ‌ ಸಭೆ ನಡೆಸಿದ ಸಚಿವ ದಿನೇಶ್‌ ಗುಂಡೂರಾವ್‌, ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, ಜಿಲ್ಲಾಧಿಕಾರಿಗಳು ಹಾಗೂ ಪಂಚಾಯತ್‌ ಸಿಇಒ ಜತೆಗೂ ಸಭೆ ನಡೆಸಿ ಸೂಚನೆಗಳನ್ನು ಕೊಟ್ಟಿದ್ದಾರೆ. ಡೆಂಗ್ಯೂ ನಿಯಂತ್ರಣ ಮತ್ತು ಜನಜಾಗೃತಿಗಾಗಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಶಾಲಾ ಶಿಕ್ಷಕರ ನೆರವು ಕೋರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

Advertisement

ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಣೆಗೆ ಆಗ್ರಹ
ಈಗಿನ ಸಂದರ್ಭವನ್ನು ವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ಘೋಷಿಸುವಂತೆ ವಿಪಕ್ಷ ಬಿಜೆಪಿ ಆಗ್ರಹಿಸಿದ್ದು, ಕೋವಿಡ್‌ ಸಂದರ್ಭದಲ್ಲಿ ತೆಗೆದುಕೊಂಡ ಕೆಲವು ಕ್ರಮಗಳನ್ನು ಈಗಲೂ ತೆಗೆದುಕೊಳ್ಳಬೇಕಾಗುತ್ತದೆ. ಪ್ರಮುಖವಾಗಿ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿಗಳನ್ನು ಸಕ್ರಿಯಗೊಳಿಸಬೇಕು, ನಾಗರಿಕ ಉಪನಿಯಮ (ಸಿವಿಕ್‌ ಬೈಲಾ)ಗಳನ್ನು ಜಾರಿಗೊಳಿಸಬೇಕು. ಡೆಂಗ್ಯೂ ಕಾಯಿಲೆಯನ್ನೂ ಸಾಂಕ್ರಾಮಿಕ ರೋಗ ಎಂದು ಘೋಷಿಸಿ, ಖಾಸಗಿ ಆಸ್ಪತ್ರೆಗಳಲ್ಲಿ ಅದರ ಚಿಕಿತ್ಸೆಗೆ ಸರಕಾರ ದಿಂದಲೇ ವ್ಯವಸ್ಥೆ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಡೆಂಗ್ಯೂ ಪರೀಕ್ಷೆ ಸುಲಿಗೆ ನಿಲ್ಲುತ್ತಿಲ್ಲ: ಡೆಂಗ್ಯೂ ಪರೀಕ್ಷೆಗೆ ಸರಕಾರ ನಿಗದಿಪಡಿಸಿರುವ 300 ರೂ.ಗಿಂತ ಹೆಚ್ಚಿನ ದರವನ್ನು ಖಾಸಗಿ ಪ್ರಯೋಗಾಲಯಗಳು ಪಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಇಂದು, ನಾಳೆ ಡಿಸಿ, ಸಿಇಒಗಳ ಜತೆಗೆ ಸಭೆ: ಇತ್ತೀ ಚೆಗೆ ಭಾರೀ ಪ್ರಮಾಣದಲ್ಲಿ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳ ವರ್ಗಾವಣೆ ಮಾಡುವ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಸಿದ್ದ ಸರಕಾರವು ಐಪಿಎಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾನೂನು ವ್ಯವಸ್ಥೆ ಮತ್ತಿತರ ಅಂಶಗಳ ಹಿನ್ನೆಲೆಯಲ್ಲಿ ಸಲಹೆ-ಸೂಚನೆಗಳನ್ನು ನೀಡಿತ್ತು.

ಜು. 8ರ ಸೋಮವಾರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಪಂಚಾಯತ್‌ ಸಿಇಒಗಳ ಸಭೆ ಕರೆದಿರುವ ಸಿಎಂ ಇಡೀ ದಿನ ಸಮಾಲೋಚನೆ ನಡೆಸಲಿದ್ದಾರೆ. ಜು. 9ರ ಮಂಗಳವಾರ ಕೂಡ ಸಭೆ ಮುಂದುವರಿಸಲಿದ್ದು, ಎರಡು ದಿನಗಳ ಸಭೆಯಲ್ಲಿ ಆಡಳಿತಕ್ಕೆ ಸಂಬಂಧಿಸಿದ ವಿಚಾರಗಳ ಮೇಲೆ ಹೆಚ್ಚು ಬೆಳಕು ಚೆಲ್ಲಲಾಗುತ್ತದೆ. ರಾಜ್ಯವನ್ನು ಬಂಧಿಸಲೆತ್ನಿಸುತ್ತಿರುವ ಕಾಯಿಲೆಗಳ ಕಬಂಧಬಾಹುವಿನಿಂದ ಕಳಚಿಕೊಳ್ಳುವುದು ಹೇಗೆ, ಅದಕ್ಕಾಗಿ ಏನೇನು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಚಿಂತನ-ಮಂಥನ ನಡೆದು ಮಾರ್ಗಸೂಚಿ ಕೂಡ ಬಿಡುಗಡೆಯಾಗಬಹುದು.

ಸಾವಿನ ಪ್ರಮಾಣ ಶೇ.0.08: ಕೇಂದ್ರ ಸರಕಾರ ರಾಜ್ಯದಲ್ಲಿ ಡೆಂಗ್ಯೂನಿಂದ ಮರಣ ಪ್ರಮಾಣ ಶೇ.0.5 ಮೀರದಿರಲು ಸೂಚನೆ ನೀಡಿದ್ದು, ಅದರನ್ವಯ ರಾಜ್ಯದಲ್ಲಿ ಪ್ರಸ್ತುತ ಶೇ.0.08 ಇದೆ. ಅಂದರೆ ಕೇಂದ್ರ ಆರೋಗ್ಯ ಇಲಾಖೆ ನಿಗದಿಪಡಿಸಿದ ಮಿತಿಯಲ್ಲಿ ಅರ್ಧದಷ್ಟು ಮರಣ ಪ್ರಕರಣ ಸಂಭವಿಸಿದೆ.

6 ತಿಂಗಳಲ್ಲಿ 7 ಸಾವಿರ
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಜು. 7ರ ವರೆಗೆ ರಾಜ್ಯದಲ್ಲಿ 7,165 ಮಂದಿ ಡೆಂಗ್ಯೂಗೆ ತುತ್ತಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಕಳೆದ ಬಾರಿ ಇದೇ ಅವಧಿಯಲ್ಲಿ 2,305 ಮಂದಿಯಲ್ಲಿ ಡೆಂಗ್ಯೂ ದೃಢವಾಗಿತ್ತು. ಮರಣ ಪ್ರಕರಣ ದಾಖಲಾಗಿರಲಿಲ್ಲ. ಈ ಬಾರಿ ಅತ್ಯಧಿಕ ಪ್ರಕರಣ ಬಿಬಿಎಂಪಿ ವ್ಯಾಪ್ತಿಯಲ್ಲಿ ದೃಢವಾಗಿದ್ದು, ಸುಮಾರು 1,988 ಮಂದಿಯಲ್ಲಿ ಡೆಂಗ್ಯೂ ದೃಢವಾಗಿದೆ. ಚಿಕ್ಕಮಗಳೂರು 546, ಮೈಸೂರು 494, ಹಾವೇರಿ ಜಿಲ್ಲೆಯಲ್ಲಿ 481 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ವರ್ಷದೊಳಗಿನ 134 ಮಕ್ಕಳಲ್ಲಿ, 18 ವರ್ಷದೊಳಗಿನ 2496, 18 ವರ್ಷ ಮೇಲ್ಪಟ್ಟ 4534 ಮಂದಿಯಲ್ಲಿ ಡೆಂಗ್ಯೂ ದೃಢವಾಗಿದೆ. ಇದುವರೆಗೆ 54,820 ಮಂದಿಯ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಶಂಕಿತ ಡೆಂಗ್ಯೂ: ಮತ್ತೆ 3 ಸಾವು
ಗದಗ/ಬ್ಯಾಡಗಿ/ ಮೈಸೂರು: ಶಂಕಿತ ಡೆಂಗ್ಯೂನಿಂದ ರವಿವಾರ ಇಬ್ಬರು ಮಕ್ಕಳ ಸಹಿತ ಮೂವರು ಮೃತಪಟ್ಟಿದ್ದಾರೆ. ಗದಗದಲ್ಲಿ ಚಿರಾಯಿ ಹೊಸಮನಿ (5) ಮೃತ ಬಾಲಕ. ಬ್ಯಾಡಗಿ ತಾಲೂಕಿನಲ್ಲಿ ಶಂಕಿತ ಡೆಂಗ್ಯೂನಿಂದ 9 ವರ್ಷದ ಬಾಲಕಿ ದೀಕ್ಷಾ ಮೃತಪಟ್ಟಿದ್ದಾಳೆ. ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಸಿಬಂದಿ ಮಹಿಳೆ ಲಲಿತಾ (32) ರವಿವಾರ ಮೃತಪಟ್ಟಿದ್ದು, ಡೆಂಗ್ಯೂ ಶಂಕೆಯನ್ನು ವ್ಯಕ್ತಪಡಿಸಲಾಗಿದೆ.

ರವಿವಾರ 159 ಡೆಂಗ್ಯೂ ದೃಢ
ರಾಜ್ಯದಲ್ಲಿ ರವಿವಾರ 159 ಮಂದಿಯಲ್ಲಿ ಡೆಂಗ್ಯೂ ದೃಢವಾಗಿದೆ. ಶಂಕಿತ 954 ಮಂದಿಯ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಡೆಂಗ್ಯೂ ನಿಯಂತ್ರಣ: ಗ್ರಾ.ಪಂಚಾಯತ್‌ಗಳಿಗೆ ಸೂಚನೆಗಳೇನು?

-ಕುಡಿಯುವ ನೀರಿನ ಸರಬರಾಜು ಟ್ಯಾಂಕ್‌ಗಳು, ತೆರೆದ ತೊಟ್ಟಿಗಳು ಮತ್ತು ಸಾರ್ವಜನಿಕ ಶೌಚಾಲಯಗಳಲ್ಲಿ ನೀರು ಶೇಖರಣೆ ಮಾಡುವ ತೊಟ್ಟಿಗಳನ್ನು ವಾರಕ್ಕೊಮ್ಮೆ ಶುಚಿಗೊಳಿಸಬೇಕು.
-ಮನೆಗಳು, ಅಂಗಡಿ-ಮುಂಗಟ್ಟು, ಹೊಟೇಲ…ಗಳು, ವಾಣಿಜ್ಯ ಸಂಕೀರ್ಣಗಳು, ಸಾರ್ವಜನಿಕ ಸ್ಥಳಗಳು, ಖಾಲಿ ಜಾಗಗಳಲ್ಲಿ ದೀರ್ಘ‌ಕಾಲ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು.
-ಆವರಣಗಳು ಸ್ವತ್ಛವಾಗಿರಬೇಕು. ನಿರುಪ ಯುಕ್ತ ಮತ್ತು ತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಶೀಘ್ರ ಹಾಗೂ ಸುರಕ್ಷಿತ ವಾಗಿ ವಿಲೇವಾರಿ ಮಾಡಬೇಕು.
-ಅಂಗನವಾಡಿ, ಶಾಲಾ-ಕಾಲೇಜು, ವಸತಿ ಶಾಲೆ ಗಳ ಚಾವಣಿಗಳು ಮತ್ತು ಆವರಣಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಕ್ರಮ ಕೈಗೊಳ್ಳುವುದು
-ಸಾರ್ವಜನಿಕ ಸ್ಥಳಗಳು, ರಸ್ತೆಗಳಲ್ಲಿ ಮಳೆಯ ನೀರು ನಿಲ್ಲದಂತೆ ಗುಂಡಿ ಹಾಗೂ ತಗ್ಗುಗಳನ್ನು ಮುಚ್ಚಬೇಕು.
-ಸಾರ್ವಜನಿಕ ನಲ್ಲಿಗಳು ಹಾಗೂ ಕೊಳವೆ ಬಾವಿ ಗಳಿಂದ ಹೆಚ್ಚುವರಿ ನೀರು ಸರಾಗವಾಗಿ ಹರಿಯು ವಂತೆ ಸೂಕ್ತ ಚರಂಡಿ ವ್ಯವಸ್ಥೆ ಮಾಡಬೇಕು.
-ಈಗಾಗಲೇ ಇರುವ ಚರಂಡಿಗಳಲ್ಲಿ ಶೇಖರಣೆ ಗೊಂಡಿರುವ ಹೂಳನ್ನು ಎತ್ತಿ ನೀರು ಸರಾಗ
ವಾಗಿ ಹರಿಯುವಂತೆ ಮಾಡುವುದು.
-ಮಳೆ ನೀರು ಸಂಗ್ರಹವಾಗದಂತೆ ಕ್ರಮವಹಿ ಸಲು ನಿವೇಶನಗಳ ಮಾಲಕರಿಗೆ ಸೂಚನೆ ನೀಡ ಬೇಕು. ಪಾಲಿಸದವರಿಗೆ ದಂಡ ವಿಧಿಸಬೇಕು.
-ಎಳನೀರು ಮಾರಾಟಗಾರರು ಒಡೆದ ಎಳನೀರು ಚಿಪ್ಪುಗಳಲ್ಲಿ ನೀರು ಶೇಖರಣೆಯಾಗುವುದನ್ನು ತಡೆಗಟ್ಟಲು ಚಿಪ್ಪುಗಳನ್ನು ನಾಲ್ಕು ಭಾಗಗಳಾಗಿ ಒಡೆದು, ಬೋರಲು ಇಡಬೇಕು.
-ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಶಿಕ್ಷಣದ ಮೂಲಕ ಅರಿವು ಮೂಡಿಸಬೇಕು.

ಬೆಲೆ ಏರಿಸಿ ಲೂಟಿ ಹೊಡೆಯುತ್ತಿರುವ ಸರಕಾರದ ಬಳಿ ಡೆಂಗ್ಯೂ ನಿಯಂತ್ರಣಕ್ಕೆ, ಸ್ವತ್ಛತೆ ಕಾಪಾಡಲು ದುಡ್ಡಿಲ್ಲ. ರಕ್ತ ಪರೀಕ್ಷೆ ಮಾಡಲು 600-800 ರೂ. ಆಗುತ್ತದೆ. ಅದನ್ನು ಕೊಡುವ ಯೋಗ್ಯತೆ ಇಲ್ಲ. ಡೆಂಗ್ಯೂ ನಿಯಂತ್ರಣಕ್ಕೆ ಕಾರ್ಯಪಡೆ ಮಾಡಿಲ್ಲ, ವಿಶೇಷ ವಾರ್ಡ್‌ ಇಲ್ಲ, ಸ್ವತ್ಛತೆಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಈ ಸರಕಾರ ಐಸಿಯುನಲ್ಲಿದೆ. ಬಹಳ ದಿನ ಉಳಿಯುವುದಿಲ್ಲ.
-ಆರ್‌. ಅಶೋಕ್‌, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next