Advertisement
ಈ ಸೋಂಕುಗಳು ಎಂದರೇನು? ಅವು ಹೇಗೆ ಉಂಟಾಗುತ್ತವೆ?
ನಮ್ಮ ಸುತ್ತಮುತ್ತಲಿನ ಪರಿಸರವು ಬರಿಗಣ್ಣಿಗೆ ಕಾಣಿಸುವ ಅನೇಕ ಜೀವಜಂತುಗಳ ವಾಸಸ್ಥಾನವಾಗಿರುವಂತೆಯೇ ಬರಿಗಣ್ಣಿಗೆ ಕಾಣಿಸದ ಲಕ್ಷಾಂತರ ಸೂಕ್ಷ್ಮಜೀವಿ (ಬ್ಯಾಕ್ಟೀರಿಯಾ, ವೈರಸ್)ಗಳ ನೆಲೆದಾಣವೂ ಆಗಿದೆ. ಇಂತಹ ಸೂಕ್ಷ್ಮಜೀವಿಗಳಲ್ಲಿ ಅನೇಕವು ಮನುಷ್ಯನ ದೇಹದೊಳಗೆಯೂ ನೆಲೆಸಿರುತ್ತವೆ. ಆದರೆ ಇವು ನಮಗೆ ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ. ನಾವು ಬೆಳೆಸಿಕೊಂಡಿರುವ ಬಲವಾದ ರೋಗ ನಿರೋಧಕ ಶಕ್ತಿ ಒಂದು ಕಾರಣವಾದರೆ, ಅವುಗಳ ಜತೆಗೆ ನಮ್ಮ ದೇಹದ ಕೆಲವು ಕಾರ್ಯಚಟುವಟಿಕೆಗಳು ಬೆಳೆಸಿಕೊಂಡಿರುವ ಪರಸ್ಪರಾವಲಂಬಿ ಸಂಬಂಧ ಇನ್ನೊಂದು ಕಾರಣ. ಅನಾರೋಗ್ಯ ಅಥವಾ ರೋಗ ನಿರೋಧಕ ಶಕ್ತಿಯಲ್ಲಿ ಕುಸಿತ ಉಂಟಾಗುವ ತನಕ ಈ ಪರಸ್ಪರಾವಲಂಬಿ ಸೌಹಾರ್ದ ಸಂಬಂಧ ಭಂಗವಿಲ್ಲದೆ ಮುಂದುವರಿಯುತ್ತದೆ.
Related Articles
ಆರೋಗ್ಯ ಸೇವಾ ಸಂಸ್ಥೆಗಳಿಗೆ ಸಂಬಂಧಿಸಿದ ಸೋಂಕು (ಹೆಲ್ತ್ಕೇರ್ ಅಸೊಸಿಯೇಟೆಡ್ ಇನ್ಫೆಕ್ಷನ್ – ಎಚ್ಎಐ)ಯನ್ನು “ನಾಸೊಕಾಮಿಕಲ್’ ಅಥವಾ ಆಸ್ಪತ್ರೆ ಸೋಂಕು ಎಂಬುದಾಗಿಯೂ ಕರೆಯುತ್ತಾರೆ. ಆಸ್ಪತ್ರೆ ಅಥವಾ ಯಾವುದೇ ಆರೋಗ್ಯ ಸೇವಾ ಸಂಸ್ಥೆಗೆ ದಾಖಲಾದ ಸಂದರ್ಭದಲ್ಲಿ ರೋಗಿಯಲ್ಲಿ ಇಲ್ಲದೆ ಇದ್ದು, ಬಳಿಕ ಅಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಉಂಟಾಗುವ ಸೋಂಕನ್ನು ಹೀಗೆ ಕರೆಯುತ್ತಾರೆ. ಎಚ್ಎಐಯು ಆಸ್ಪತ್ರೆ ಅಥವಾ ಯಾವುದೇ ಆರೋಗ್ಯ ಸೇವಾ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಉಂಟಾಗಬಹುದು ಯಾ ಬಿಡುಗಡೆ ಹೊಂದಿದ ಬಳಿಕವೂ ಕಾಣಿಸಿಕೊಳ್ಳಬಹುದು. ಇಷ್ಟಲ್ಲದೆ, ಸಿಬಂದಿಯಲ್ಲಿ ಕಾಣಿಸಿಕೊಳ್ಳಬಹುದಾದ ಉದ್ಯೋಗಸ್ಥಳ ಸೋಂಕುಗಳೂ ಇದರಲ್ಲಿ ಸೇರಿವೆ. ಆರೋಗ್ಯ ಸೇವಾ ಪೂರೈಕೆಯ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಅತ್ಯಂತ ಸಾಮಾನ್ಯ ದುಷ್ಪರಿಣಾಮಗಳನ್ನು ಪ್ರತಿನಿಧಿಸುತ್ತವೆ ಹಾಗೂ ಇದುವರೆಗೆ ಯಾವ ದೇಶವೂ ಈ ಸಮಸ್ಯೆಯನ್ನು ಬಗೆಹರಿಸಲು ಶಕ್ತವಾಗಿಲ್ಲ.
Advertisement
ಹಲವಾರು ದೇಶಗಳಿಂದ ಸಂಗ್ರಹಿಸಲಾದ ಅಂಕಿಅಂಶಗಳ ಪ್ರಕಾರ, ಜಾಗತಿಕವಾಗಿ ಪ್ರತಿವರ್ಷ ಕೋಟ್ಯಂತರ ಮಂದಿ ಎಚ್ಎಐಯಿಂದ ಬಾಧಿತರಾಗುತ್ತಾರೆ.
ಹೆಚ್ಚು ತಲಾದಾಯ ದೇಶಗಳಿಗಿಂತ ಮಧ್ಯಮ ಮತ್ತು ಕಡಿಮೆ ತಲಾದಾಯ ದೇಶಗಳಲ್ಲಿಯೇ ಎಚ್ಎಐಯ ಹಾವಳಿ ಅಧಿಕವಾಗಿದೆ. ಆ್ಯಂಟಿಬಯಾಟಿಕ್ ಔಷಧಗಳಿಗೆ ಪ್ರತಿರೋಧ ಬೆಳೆಸಿಕೊಂಡಿರುವ ಸೂಕ್ಷ್ಮಜೀವಿಗಳ ಪ್ರಸರಣವನ್ನು ತಡೆಯುವ ಮತ್ತು ನಿಯಂತ್ರಿಸುವ ಸಂಬಂಧ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂಬುದಾಗಿ ಜಾಗತಿಕ ಮಟ್ಟದಲ್ಲಿ ಒಮ್ಮತ ಮೂಡಿದ್ದು, ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಸೋಂಕು ಪ್ರಸರಣ ನಿಯಂತ್ರಣ ಮತ್ತು ತಡೆ (ಐಪಿಸಿ) ಇದಕ್ಕೆ ಒಂದು ಪರಿಹಾರವಾಗಿದೆ.
ಪ್ರತಿದಿನ ಎಚ್ಎಐಯು ದೀರ್ಘಕಾಲಿಕ ಆಸ್ಪತ್ರೆ ವಾಸ, ದೀರ್ಘಕಾಲಿಕ ವೈಕಲ್ಯ ಮತ್ತು ಆ್ಯಂಟಿ ಮೈಕ್ರೋಬಿಯಲ್ ಔಷಧಗಳಿಗೆ ಸೂಕ್ಷ್ಮಜೀವಿಗಳ ಪ್ರತಿರೋಧ ಹೆಚ್ಚಳಗಳಿಗೆ ಕಾರಣವಾಗುತ್ತಿದ್ದು, ಇದರ ಪರಿಣಾಮವಾಗಿ ಆರೋಗ್ಯ ಸೇವಾ ಸಂಸ್ಥೆಗಳಿಗೆ, ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಹೆಚ್ಚು ವೆಚ್ಚ ಉಂಟಾಗುತ್ತದೆಯಲ್ಲದೆ ಅನವಶ್ಯಕ ಮೃತ್ಯುಗಳೂ ಉಂಟಾಗುತ್ತವೆ.
ನಮ್ಮಲ್ಲಿ ಆ್ಯಂಟಿಬಯಾಟಿಕ್ ಔಷಧಗಳಿವೆಯಾದ್ದರಿಂದ ಚಿಂತಿಸುವ ಅಗತ್ಯವಿಲ್ಲ ಎಂದು ನಾವು ಭಾವಿಸಬಹುದು. ಆದರೆ ಈ ಸೂಕ್ಷ್ಮಜೀವಿಗಳು ಆ್ಯಂಟಿಬಯಾಟಿಕ್ಗಳಿಗೆ ಪ್ರತಿರೋಧವನ್ನು ಬೆಳೆಸಿಕೊಳ್ಳುತ್ತಿರುವುದರಿಂದ ಇನ್ನಷ್ಟು ಹೆಚ್ಚು ಸೋಂಕು ನಿಯಂತ್ರಣ ಅಗತ್ಯವಾಗಿದೆ. ಇದಕ್ಕೆ ಕಾರಣವೆಂದರೆ ನಾವು ಕಾಯಿಲೆ ಬಿದ್ದಾಗ ಒಳ್ಳೆಯ ವೈದ್ಯರನ್ನು ಸಂಪರ್ಕಿಸದೆ, ಸೋಂಕು ಸಂಬಂಧಿ ಅನಾರೋಗ್ಯವಲ್ಲದಿದ್ದರೂ ನಾವೇ ಔಷಧ ಅಂಗಡಿಗೆ ತೆರಳಿ ನೇರವಾಗಿ ಆ್ಯಂಟಿಬಯಾಟಿಕ್ ಔಷಧಗಳನ್ನು ಖರೀದಿಸಿ ಉಪಯೋಗಿಸುವುದು. ಇದರಿಂದಾಗಿ ಆ್ಯಂಟಿ ಬಯಾಟಿಕ್ಗಳ ಅತಿಯಾದ ಬಳಕೆಯಿಂದ ನಮ್ಮ ದೇಹ ಈ ಸೂಕ್ಷ್ಮಜೀವಿಗಳ ವಿರುದ್ಧ ದುರ್ಬಲವಾಗುತ್ತದೆ.
ಸೋಂಕುಕಾರಕ ಸೂಕ್ಷ್ಮಜೀವಿಗಳ ಸಂಪರ್ಕ ಕೆಳಕಂಡ ರೀತಿಯಲ್ಲಿ ನಡೆಯುತ್ತದೆ
1 ಸಂಪರ್ಕದಿಂದ ಸೋಂಕು ಹರಡುವಿಕೆ
ಸೋಂಕು ಹೊಂದಿರುವ ವ್ಯಕ್ತಿ ಅಥವಾ ಎಂಜಲು, ಗಾಯದ ಕೀವು ಇತ್ಯಾದಿ ಅವರ ದೇಹ ದ್ರವದ ನೇರ ಸಂಪರ್ಕಕ್ಕೆ ಬಂದಾಗ.
2 ಹನಿಗಳ ಮೂಲಕ ಹರಡುವಿಕೆ
ನಾವು ಮುಖ, ಬಾಯಿ, ಮೂಗನ್ನು ಮುಚ್ಚಿಕೊಳ್ಳದೆ ಕೆಮ್ಮಿದಾಗ, ಸೀನಿದಾಗ ಅಥವಾ ಉಗುಳಿದಾಗ ನಮ್ಮ ದೇಹದಲ್ಲಿರುವ ಸೋಂಕುಕಾರಕ ಸೂಕ್ಷ್ಮಜೀವಿಗಳು ಗಾಳಿಯಲ್ಲಿ ಹರಡುತ್ತವೆ. ಕ್ಷಯ, ಇನ್ಫುÉಯೆಂಜಾ, ಶೀತಜ್ವರ ಇತ್ಯಾದಿಗಳು ಹೀಗೆ ಹರಡುತ್ತವೆ.
3 ಮಲಿನ ನೀರು, ಆಹಾರ ಇತ್ಯಾದಿಗಳ ಮೂಲಕ ಹರಡುವಿಕೆ
– ಅಡುಗೆ ಮಾಡುವ ಮುನ್ನ, ಆಹಾರ ಸೇವಿಸುವುದಕ್ಕೆ ಮೊದಲು, ಶೌಚಾಲಯ ಉಪಯೋಗಿಸಿದ ಅಥವಾ ಮಲಿನ ವಸ್ತುಗಳನ್ನು ಮುಟ್ಟಿದ ಬಳಿಕ ನಾವು ನಮ್ಮ ಕೈಗಳನ್ನು ತೊಳೆದುಕೊಳ್ಳದೆ ಇದ್ದಾಗ ನಾವು ನಮ್ಮಿಂದ ಸೋಂಕನ್ನು ಇತರರಿಗೆ ಹರಡುತ್ತೇವೆ ಅಥವಾ ಇತರರಿಂದ ನಾವು ಸ್ವೀಕರಿಸುತ್ತೇವೆ.
– ಮಲಿನ ಅಥವಾ ಕೊಳಕು ನೀರನ್ನು ಕುಡಿದಾಗ.
– ಹಸಿ ಅಥವಾ ಸರಿಯಾಗಿ ಬೇಯಿಸದ ಆಹಾರವನ್ನು ಸೇವಿಸಿದಾಗ. ಇದಕ್ಕೆ ಪರಿಹಾರವೇನು? ನಮ್ಮನ್ನು ಮತ್ತು ನಮ್ಮ ಆಪೆ¤àಷ್ಟರನ್ನು ಸೋಂಕಿನ ವಿರುದ್ಧ ರಕ್ಷಿಸಿಕೊಳ್ಳುವುದು ಹೇಗೆ?
1 ನಾವು ಮತ್ತು ನಮ್ಮ ಪರಿಸರವನ್ನು ಶುಚಿಯಾಗಿ ಇರಿಸಿಕೊಳ್ಳುವುದು.
ಕೈಗಳನ್ನು ತೊಳೆದುಕೊಳ್ಳುವುದು ಸೋಂಕು ಪ್ರಸರಣ ನಿಯಂತ್ರಣದ ಒಂದು ಪರಿಣಾಮಕಾರಿ ಕ್ರಮವಾಗಿದೆ.
2 ಶುದ್ಧವಾದ ಮತ್ತು ಕುದಿಸಿ ಆರಿಸಿದ ನೀರನ್ನು ಕುಡಿಯುವುದು.
3 ತಾಜಾ ತರಕಾರಿ ಮತ್ತು ಮಾಂಸವನ್ನು ಅಡುಗೆಗೆ ಉಪಯೋಗಿಸುವುದು.
4 ಕೆಮ್ಮುವಾಗ ಮತ್ತು ಸೀನುವಾಗ ಮುಖವನ್ನು ಮುಚ್ಚಿಕೊಳ್ಳುವುದು.
5 ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುವುದು.
6 ಯಾವುದೇ ಸೋಂಕಿನಿಂದ ಬಳಲುತ್ತಿರುವಾಗ ಇತರರಿಗೆ ಅದು ಹರಡದಂತೆ ಸಂಪರ್ಕವನ್ನು ಕಡಿಮೆ ಮಾಡಿಕೊಳ್ಳುವುದು.
7ರೋಗಿಯನ್ನು ಸಂದರ್ಶಿಸುವಾಗ ಸೋಂಕು ನಮಗೆ ಮತ್ತು ನಮ್ಮಿಂದ ರೋಗಿಗೆ ಹರಡದಂತೆ ಹ್ಯಾಂಡ್ ಸ್ಯಾನಿಟೈಸರ್ ಉಪಯೋಗಿಸುವುದು.
8 ವೈದ್ಯರು ಶಿಫಾರಸು ಮಾಡಿರುವ ಔಷಧಗಳನ್ನು ಮಾತ್ರ ಉಪಯೋಗಿಸುವುದು.
ನಮಗೆ ಸೂಕ್ಷ್ಮಜೀವಿಗಳನ್ನು ಕೊಲ್ಲುವುದು ಅಸಾಧ್ಯವಾದರೂ ಅವುಗಳಿಗೆ ಉಂಟಾಗುವ ಸೋಂಕುಗಳನ್ನು ಕಡಿಮೆ ಮಾಡುವುದು ಸಾಧ್ಯವಿದೆ. ಸೂಕ್ತವಾದ ನೈರ್ಮಲ್ಯ ಕಾಪಾಡಿಕೊಳ್ಳುವುದು ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಆರೋಗ್ಯಯುತ ಕುಟುಂಬ ಮತ್ತು ಆರೋಗ್ಯಯುತ ಸಮುದಾಯವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ನಾವು ಆರೋಗ್ಯ ಸೇವಾ ಸಿಬಂದಿಯ ಜತೆಗೆ ಪರಿಣಾಮಕಾರಿಯಾಗಿ ಕೈಜೋಡಿಸುವುದು ಸಾಧ್ಯವಿದೆ. ಆದ್ದರಿಂದ ಸೋಂಕು ನಿಯಂತ್ರಣವು ಎಲ್ಲರ ಹೊಣೆಗಾರಿಕೆ ಎನ್ನುವುದನ್ನು ನಾವು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. – ಮುಂದಿನ ವಾರಕ್ಕೆ – ಜೀವಿತಾ ವಿಯೋನಾ ಶೆಟ್ಟಿ ,
ಆಸ್ಪತ್ರೆ ಸೋಂಕು ನಿಯಂತ್ರಣ ವಿಭಾಗ,ಕಸ್ತೂರ್ಬಾ ಆಸ್ಪತ್ರೆ,ಮಣಿಪಾಲ.