Advertisement
ಭಾರತದ ಮಕ್ಕಳೂ ಜಗತ್ತಿನ ಇತರೆಲ್ಲ ಮಕ್ಕಳಂತೆಯೇ ಬೆಳವಣಿಗೆ ಮತ್ತು ಪ್ರಗತಿಯ ಸಾಧ್ಯತೆಗಳನ್ನು ಹೊಂದಿದ್ದಾರೆ. ಉತ್ತಮ ಬೆಳವಣಿಗೆ, ಆರೋಗ್ಯ, ವರ್ತನಾತ್ಮಕ ಮತ್ತು ಜ್ಞಾನ ಗ್ರಹಣ ಅಭಿವೃದ್ಧಿಯ ದೃಷ್ಟಿಯಿಂದ ಮಗು ಜನ್ಮ ತಾಳಿದಲ್ಲಿಂದ ತೊಡಗಿ ಎರಡು ವರ್ಷ ವಯಸ್ಸಿನವರೆಗಿನ ಅವಧಿ ಅತ್ಯಂತ ನಿರ್ಣಾಯಕ ಎಂಬುದು ಈಗಾಗಲೇ ಶ್ರುತಪಟ್ಟಿದೆ.
ಎದೆಹಾಲು ಉಣಿಸುವುದು ಅಂದರೆ ಅದಕ್ಕೆ ಪರ್ಯಾಯ ಇಲ್ಲ. ಅದು ಆಯ್ಕೆಯಲ್ಲ, ಜವಾಬ್ದಾರಿಯಾಗಿದೆ.
ಶಿಶು ಜನಿಸಿದ ಮೊದಲ ಒಂದು ತಾಸಿನೊಳಗೆ ಎದೆಹಾಲು ಉಣಿಸುವುದು ಶಿಶು ಬದುಕುಳಿಯುವ ನಿಟ್ಟಿನಲ್ಲಿ ಅತ್ಯಂತ ನಿರ್ಣಾಯಕವಾದ ಪ್ರಕ್ರಿಯೆಗಳಲ್ಲಿ ಪ್ರಮುಖವಾದುದಾಗಿದೆ. ಆದರೂ ಭಾರತದಲ್ಲಿ ಕೇವಲ ಶೇ. 41.6 ಶಿಶುಗಳು ಮಾತ್ರ ಜನ್ಮ ಪಡೆದ ಮೊದಲ ಒಂದು ತಾಸಿನಲ್ಲಿ ಸ್ತನ್ಯಪಾನ ಆರಂಭವನ್ನು ಪಡೆಯುತ್ತಾರೆ. ಸ್ತನ್ಯಪಾನವೇ ನಿಮ್ಮ ಮಗುವಿಗೆ ಆಹಾರ ನೀಡುವ ಅತ್ಯಂತ ಪ್ರಾಕೃತಿಕವಾದ ವಿಧಾನ. ಜನಿಸಿದ ಆರು ತಿಂಗಳ ಅವಧಿಯಲ್ಲಿ ನಿಮ್ಮ ಮಗುವಿಗೆ ಅಗತ್ಯವಾದ ಎಲ್ಲ ಪೌಷ್ಟಿಕಾಂಶಗಳನ್ನು ಎದೆಹಾಲು ಒದಗಿಸುತ್ತದೆ, ಮಗುವಿನ ಹಸಿವು ಮತ್ತು ಬಾಯಾರಿಕೆಯನ್ನು ತಣಿಸುತ್ತದೆ. ಇದಲ್ಲದೆ ಸ್ತನ್ಯಪಾನವು ನಿಮ್ಮ ಮತ್ತು ನಿಮ್ಮ ಶಿಶುವಿನ ನಡುವೆ ಪ್ರೇಮಮಯ ಬಾಂಧವ್ಯವೊಂದನ್ನು ಬೆಸೆಯುತ್ತದೆ. ಹಸುಳೆಯ ಪೌಷ್ಟಿಕಾಂಶ ಮತ್ತು ಮಾನಸಿಕ, ಭಾವನಾತ್ಮಕ ಅಗತ್ಯಗಳನ್ನು ತಣಿಸಲು ಸ್ತನ್ಯಪಾನವು ಅತ್ಯಂತ ಸೂಕ್ತ ಮಾರ್ಗವಾಗಿದೆ. ತಾಯಿಯ ಹಾಲು (ಎದೆಹಾಲು, ಮಾನವ ಸ್ತನ್ಯ) ಮಗುವಿನ ಪ್ರಗತಿ ಮತ್ತು ಬೆಳವಣಿಗೆಗೆ ಅಗತ್ಯವಾಗಿರುವ ಎಲ್ಲ ಪೌಷ್ಟಿಕಾಂಶಗಳನ್ನು ಸರಿಯಾದ ಸಮತೋಲಿತ ಪ್ರಮಾಣದಲ್ಲಿ ಹೊಂದಿರುತ್ತದೆ. ಜನ್ಮ ತಳೆದಿರುವ ಶಿಶುವಿಗೆ ಪೌಷ್ಟಿಕಾಂಶಗಳ ಅತ್ಯುತ್ತಮ ಮೂಲವೆಂದರೆ ಸ್ತನ್ಯ. ಎದೆಹಾಲಿನಲ್ಲಿರುವ ಅನೇಕ ಅಂಶಗಳು ನಿಮ್ಮ ಮಗುವನ್ನು ಬಹುತೇಕ ಸೋಂಕುಗಳು ಮತ್ತು ಕಾಯಿಲೆಗಳಿಂದ ರಕ್ಷಿಸುತ್ತವೆ. ಎದೆಹಾಲಿನಲ್ಲಿರುವ ಪ್ರೊಟೀನುಗಳು ಯಾವುದೇ ಫಾರ್ಮುಲಾ ಹಾಲು ಅಥವಾ ಹಸುವಿನ ಹಾಲಿಗಿಂತ ಸುಲಭವಾಗಿ ಜೀರ್ಣಗೊಳ್ಳುತ್ತವೆ. ಎದೆಹಾಲಿನಲ್ಲಿರುವ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಕೂಡ ಸುಲಭವಾಗಿ ಜೀರ್ಣವಾಗುವಂಥದ್ದು.
Related Articles
ಪಥ್ಯಾಹಾರತಜ್ಞೆ
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ.
Advertisement
(ಮುಂದುವರಿಯುತ್ತದೆ)