Advertisement

ಕೈಗಾರಿಕೆ ಚಟುವಟಿಕೆಗಳು ಆರಂಭ

03:02 PM May 05, 2020 | Suhan S |

ಬೆಳಗಾವಿ: ಕೋವಿಡ್ 19 ವೈರಸ್‌ ಹಾವಳಿಯ ಆತಂಕದಿಂದ ಗಡಿ ಜಿಲ್ಲೆ ಬೆಳಗಾವಿ ಇನ್ನೂ ಹೊರಬಂದಿಲ್ಲ. ಆದರೆ ಕೆಂಪು ವಲಯದಿಂದ ಕಿತ್ತಳೆ ವಲಯಕ್ಕೆ ಮಾರ್ಪಾಡುಗೊಂಡಿರುವ ಜಿಲ್ಲೆಯಲ್ಲಿ ಸರಕಾರದ ಮಾರ್ಗಸೂಚಿಯಂತೆ ಕೈಗಾರಿಕಾ ಚಟುವಟಿಕೆಗಳು ಆರಂಭವಾಗಿದ್ದು ಉದ್ಯಮಿಗಳು ಹಾಗೂ ಕಾರ್ಮಿಕರಲ್ಲಿ ಸ್ವಲ್ಪ ಸಮಾಧಾನ ಉಂಟುಮಾಡಿದೆ.

Advertisement

ಸರಕಾರವು ಲಾಕ್‌ಡೌನ್‌ದಲ್ಲಿ ಸಡಲಿಕೆ ಮಾಡಿದ್ದರಿಂದ ಬೆಳಿಗ್ಗೆ ಎಂದಿನಂತೆ ಕೈಗಾರಿಕೆಗಳ ಸೈರನ್‌ ಮೊಳಗಿದವು. ಕಾರ್ಮಿಕರು ಸಮವಸ್ತ್ರ ಧರಿಸಿ ಕೆಲಸಕ್ಕೆ ಬಂದರು. ಕೆಲಸ ಮತ್ತೆ ಶುರುಮಾಡಿದ ಲಗುಬಗೆ ಎಲ್ಲರ ಮುಖದಲ್ಲಿ ಕಂಡಿತಾದರೂ ಒಳಗೊಳಗೆ ಕೋವಿಡ್ 19  ಜೊತೆಗೆ ಆರ್ಥಿಕ ಮುಗ್ಗಟ್ಟಿನ ಆತಂಕ ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು. ಕಳೆದ ಮೂರು ವಾರಗಳಿಂದ ಉದ್ಯಮಬಾಗ ಕೈಗಾರಿಕಾ ಪ್ರದೇಶ ವಾಹನಗಳ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು. ಸೋಮವಾರದಿಂದ ಕೈಗಾರಿಕೆಗಳ ಆರಂಭಕ್ಕೆ ಚಾಲನೆ ನೀಡಬಹುದು ಎಂದು ಸರಕಾರ ಹಸಿರು ನಿಶಾನೆ ಘೋಷಣೆ ಮಾಡುತ್ತಿದ್ದಂತೆ ಬೆಳಿಗ್ಗೆಯಿಂದ ವಾಹನಗಳ ಓಡಾಟ ಎಂದಿನಂತೆ ಕಂಡುಬಂತು. ಮತ್ತೆ ಕೈಗಾರಿಕೆಗಳ ಚಟುವಟಿಕೆ ಹೊಸ ವಿಶ್ವಾಸದೊಂದಿಗೆ ಆರಂಭವಾಯಿತು.

ಜಿಲ್ಲೆಯಲ್ಲಿ ಒಟ್ಟು 60 ಸಾವಿರ ಸಣ್ಣ ಹಾಗೂ ಅತೀ ಸಣ್ಣ ಕೈಗಾರಿಕೆಗಳು ನೋಂದಣಿ ಮಾಡಿಕೊಂಡಿವೆ. ಸಕ್ಕರೆ ಕಾರ್ಖಾನೆಗಳು ಸೇರಿದಂತೆ 70 ದೊಡ್ಡ ಪ್ರಮಾಣದ ಕೈಗಾರಿಕೆಗಳಿವೆ. ಈ ಎಲ್ಲ ಕೈಗಾರಿಕೆಗಳಿಂದ ವಾರ್ಷಿಕವಾಗಿ ಸಾವಿರಾರು ಕೋಟಿ ವಹಿವಾಟು ನಡೆಯುತ್ತಿದ್ದು ಈಗ ಕೋವಿಡ್ 19  ವೈರಸ್‌ದಿಂದ ಇದೆಲ್ಲಕ್ಕೂ ಬರೆಬಿದ್ದಿದೆ. ಬಹುತೇಕ ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ವೇತನ ನೀಡುವದು ಕಷ್ಟವಾಗಿದೆ ಎಂಬ ಆತಂಕ ಉದ್ಯಮಿಗಳನ್ನು ಕಾಡುತ್ತಿದೆ.

ಸರಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಸೋಮವಾರ ಬಹುತೇಕ ಕೈಗಾರಿಕೆಗಳು ಕಾರ್ಯಾರಂಭ ಮಾಡಿವೆ. ಪ್ರತಿಶತ 50 ರಷ್ಟು ಕಾರ್ಮಿಕರು ಕೆಲಸಕ್ಕೆ ಬಂದಿದ್ದಾರೆ. ಆದರೆ ಹೊಸದಾಗಿ ಉತ್ಪಾದನೆ ಮಾಡಲು ಇನ್ನೂ ಸಮಯ ಬೇಕು. ಈ ಒಂದು ವಾರ ಕೈಗಾರಿಕೆಗಳ ಆವರಣ ಸ್ವಚ್ಛಮಾಡುವದು, ಸ್ಥಗಿತವಾಗಿರುವ ಯಂತ್ರಗಳ ನಿರ್ವಹಣೆ, ಮರು ಆರಂಭ ಆಗಬೇಕು. ಇದಕ್ಕೆ ಸಮಯ ಹಿಡಿಯುತ್ತದೆ. ಇದಾದ ಬಳಿಕ ಕೈಗಾರಿಕೆಗಳಲ್ಲಿ ಬಾಕಿ ಉಳಿದುಕೊಂಡಿರುವ ಬೇಡಿಕೆಗಳನ್ನು ಪೂರ್ಣಗೊಳಿಸಬೇಕು. ನಂತರ ಉತ್ಪಾದಿತ ವಸ್ತುಗಳನ್ನು ಖರೀದಿ ಮಾಡುವ ಗ್ರಾಹಕರನ್ನು ಕಾಯಬೇಕು. ಸಮಸ್ಯೆ ಹತ್ತಾರು ಇವೆ ಎಂಬುದು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ್‌ ಜುವಳಿ ಹೇಳಿಕೆ.

ಮುಖ್ಯವಾಗಿ ಇಲ್ಲಿನ ಕೈಗಾರಿಕೆಗಳಿಗೆ ಮಹಾರಾಷ್ಟ್ರದ ಪುಣೆ, ಮುಂಬೈ ಹಾಗೂ ಗುಜರಾತ್‌ ವ್ಯಾಪಾರ ವಹಿವಾಟಿನ ಸಂಪರ್ಕವಿದೆ. ಈ ಯಾವುದೇ ಪ್ರದೇಶದಲ್ಲಿ ಕೈಗಾರಿಕೆಗಳು ಆರಂಭವಾಗಿಲ್ಲ. ಕಚ್ಚಾ ವಸ್ತುಗಳ ಪೂರೈಕೆ ಈ ಪ್ರದೇಶಗಳಿಂದ ಆಗಬೇಕು. ಆದರೆ ಇದು ಸಧ್ಯಕ್ಕೆ ಸಾಧ್ಯವಿಲ್ಲ. ಹೀಗಾಗಿ ಇನ್ನೂ ನಮಗೆ ಆತಂಕ ದೂರವಾಗಿಲ್ಲ ಎಂಬುದು ಉದ್ಯಮಿಗಳ ಹೇಳಿಕೆ.

Advertisement

ಬೆಳಗಾವಿಯಲ್ಲಿರುವ ಬಹುತೇಕ ಫೌಂಡ್ರಿಗಳು ಹೆಚ್ಚು ಸಾಮರ್ಥ್ಯದ ವಿದ್ಯುತ್‌ ಸಂಪರ್ಕ ಪಡೆದುಕೊಂಡಿವೆ. ಕೈಗಾರಿಕೆಗಳು ಕೆಲಸ ಮಾಡಲಿ ಅಥವಾ ಬಿಡಲಿ ಸರಕಾರಕ್ಕೆ ಪ್ರತಿ ತಿಂಗಳು ಹಣ ತುಂಬಲೇ ಬೇಕು. ಈಗ ಕೈಗಾರಿಕೆಗಳು ಕನಿಷ್ಠ 50 ಸಾವಿರದಿಂದ 60 ಲಕ್ಷ ರೂ ಹಣ ತುಂಬುತ್ತಿವೆ. ಈ ಸಮಯದಲ್ಲಿ ಇದು ನಮಗೆ ಬಹಳ ದೊಡ್ಡ ಹೊರೆ. ಕೋವಿಡ್ 19  ಕಾರಣ ಮಹಾರಾಷ್ಟ್ರ, ಅಂಧ್ರಪ್ರದೇಶ, ಗುಜರಾತ್‌ ರಾಜ್ಯಗಳಲ್ಲಿ ಇದಕ್ಕೆ ರಿಯಾಯತಿ ನೀಡಿದ್ದಾರೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಮಾಡಬೇಕು ಎಂಬುದು ಉದ್ಯಮಿಗಳ ಆಗ್ರಹ.

ಈಗಿನ ಸ್ಥಿತಿಯಲ್ಲಿ ಕೈಗಾರಿಕೆಗಳು ಉಳಿಯುವದು ಬಹಳ ಕಷ್ಟ. ಕೈಗಾರಿಕೆಗಳನ್ನು ಆರಂಭ ಮಾಡುವದರಿಂದ ಕಿರಾಣಿ ಅಂಗಡಿಗಳಂತೆ ತಕ್ಷಣ ಆದಾಯ ಬರುವದಿಲ್ಲ. ದೇಶದಲ್ಲಿನ ವಾತಾವರಣ ನೋಡಿದರೆ ಈ ವರ್ಷ ಸಂಪೂರ್ಣ ನಷ್ಟವೇ ಗತಿ. ಹೀಗಾಗಿ ಮೈಮೇಲೆ ಅಪಾಯ ತಂದುಕೊಂಡು ಕೆಲಸ ಮಾಡುವದು ಬೇಡ ಎಂಬ ಆಲೋಚನೆ ಉದ್ಯಮಿಗಳಲ್ಲಿ ಕಾಣುತ್ತಿದೆ.

ಕೈಗಾರಿಕೆಗಳನ್ನು ಆರಂಭ ಮಾಡಿದ್ದೇವೆ ಎಂಬುದೊಂದೇ ಈಗಿರುವ ಸಮಾಧಾನ. ಸುಧಾರಿಸಿಕೊಳ್ಳಲು ಬಹಳ ಸಮಯ ಬೇಕು. ಸರಕಾರದಿಂದ ಕೇವಲ ಸಾಂತ್ವನದ ಮಾತುಗಳು ಮಾತ್ರ ಸಿಕ್ಕಿವೆ. ನಿರೀಕ್ಷೆ ಮಾಡಿದ ನೆರವು ಇದುವರೆಗೂ ಬಂದಿಲ್ಲ. ಕಾರ್ಮಿಕರಿಗೆ ಹೇಗೆ ವೇತನ ನೀಡಬೇಕು ಎಂಬ ಚಿಂತೆ ಕಾಡುತ್ತಿದೆ. ಪರಿಹಾರದ ದಾರಿ ಕಾಣುತ್ತಿಲ್ಲ. – ರೋಹನ್‌ ಜುವಳಿ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ

ಯಾವುದೇ ಸಮಸ್ಯೆ ಇಲ್ಲದೆ ಜಿಲ್ಲೆಯಲ್ಲಿ ಕೈಗಾರಿಕಾ ಚಟುವಟಿಕೆಗಳು ಆರಂಭವಾಗಿವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಮಾಸ್ಕ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆರೋಗ್ಯ ಸುರಕ್ಷತೆಯ ಬಗ್ಗೆ ಗಮನಹರಿಸಬೇಕು ಎಂದು ಕೈಗಾರಿಕೆಗಳ ಮಾಲೀಕರು ಹಾಗೂ ಕಾರ್ಮಿಕರಿಗೆ ತಿಳಿವಳಿಕೆ ಮೂಡಿಸಲಾಗಿದೆ. ಕೆಲವೊಂದು ಸಣ್ಣ ಪುಟ್ಟ ಸಮಸ್ಯೆಗಳು ಇದ್ದು ಅವುಗಳು ಸಹ ಬಗೆಹರಿಯಲಿವೆ. -ದೊಡ್ಡ ಬಸವರಾಜು, ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕಾ ಇಲಾಖೆ

 

 –ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next