Advertisement

ಭಾರತದ ಯುವಕರಿಗೆ ಶಿಕ್ಷಣವಿದೆ, ಕೌಶಲವಿಲ್ಲ!

09:46 AM Nov 16, 2019 | mahesh |

ಭಾರತದಲ್ಲಿ 2030ರ ಸುಮಾರಿಗೆ ಶೇ. 47ರಷ್ಟು ಯುವ ವಿದ್ಯಾರ್ಥಿಗಳು ಮಾತ್ರ ಕೌಶಲ ಹೊಂದಿರಲಿದ್ದಾರೆ ಎಂದು ಯುನಿಸೆಫ್ನ ವರದಿಯೊಂದು ಎಚ್ಚರಿಸಿದೆ. ಈ ವರದಿಯಲ್ಲಿ ಭಾರತ ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆಗೆ ಕಾರಣ ಏನು ಎಂಬುದನ್ನೂ ಉಲ್ಲೇಖೀಸಲಾಗಿದೆ. ಇಲ್ಲಿ ವರದಿ ಹೇಳಿದ್ದೇನು? ಎಂಬುದನ್ನು ನೀಡಲಾಗಿದೆ.

Advertisement

ಏಷ್ಯಾ ಖಂಡದಲ್ಲೇ ಭಾರತದಲ್ಲಿ ಅತೀ ಹೆಚ್ಚು ಮಾಧ್ಯಮಿಕ ಶಾಲಾ ಶಿಕ್ಷಿತರಿದ್ದಾರೆ. ಆದರೆ ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಮಕ್ಳಳು ಕೌಶಲಾಧಾರಿತ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಮುಂಬರುವ 2030ರ ಸುಮಾರಿಗೆ 12ನೇ ತರಗತಿ ಪೂರೈಸಿದ 30 ಕೋಟಿ ಯುವ ಜನರು ಇರಲಿದ್ದಾರೆ.

ಸದ್ಯ ಶೇ. 19ರಷ್ಟು ಮಾತ್ರ
2019ರಲ್ಲಿ ಶೇ. 19ರಷ್ಟು ವಿದ್ಯಾರ್ಥಿಗಳು ಮಾತ್ರ ಕೌಶಲ ಹೊಂದಿವರಿದ್ದು, ಮುಂಬರುವ 10 ವರ್ಷಗಳಲ್ಲಿ ಈ ಸಂಖ್ಯೆ ಶೇ.47ಕ್ಕೆ ಏರಲಿದೆ. ಅರ್ಧಕ್ಕೂ ಹೆಚ್ಚು ಎಂದರೆ ಶೇ. 53ರಷ್ಟು ಯುವ ಜನರು ನಿರ್ದಿಷ್ಟ ಕೌಶಲ ಹೊಂದಿರದೇ ಇರಬಹುದು ಎಂದು ವರದಿ ಪರೋಕ್ಷವಾಗಿ ಎಚ್ಚರಿಸಿದೆ.

ಯುನಿಸೆಫ್ ಹೇಳಿದ್ದೇನು?
ಭಾರತದಲ್ಲಿ ಒಂದು ಕಡೆ ಹೆಚ್ಚು ಪದವೀಧರರು ಹೊರಗೆ ಬರುತ್ತಿದ್ದರೂ ನುರಿತ ಅಭ್ಯರ್ಥಿಗಳು ಮಾತ್ರ ಗುರುತಿಸಲ್ಪಡುತ್ತಿಲ್ಲ. ಕೆಲವರು ತಮ್ಮ ಬಡತನದ ಕಾರಣ ಉತ್ತಮ ಕೌಶಲದಿಂದ ವಂಚಿತರಾದರೆ, ಬಹುತೇಕರು ನಿರಾಸಕ್ತಿ ಮತ್ತು ಅವಕಾಶದ ಕೊರತೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಯುನಿಸೆಫ್ ಹೇಳಿದೆ. ಈ ಸಮಸ್ಯೆ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ದಕ್ಷಿಣ ಏಷ್ಯಾದಲ್ಲೂ ಇದೆ.

ಗುಣಮಟ್ಟದ ಶಿಕ್ಷಣ ಇಲ್ಲ
ವಿದ್ಯಾರ್ಥಿಗಳ ಪದವಿ ಮಟ್ಟವನ್ನು ಗಮನಿಸಿದರೆ ಭಾರತದಲ್ಲಿ ಅವರ ಅರ್ಹತೆಗೆ ಅನುಗುಣವಾಗಿ ಮೌಲ್ಯಯುತ ಶಿಕ್ಷಣ ಇಲ್ಲ ಎಂಬ ಅಂಶವೂ ಬಹಿರಂಗವಾಗಿದೆ. ವಿದ್ಯಾರ್ಥಿಗಳು ತಮ್ಮ ಕಲಿಕಾ ಹಂತದಲ್ಲಿ ಶ್ರೇಣಿಗಳನ್ನು ಉನ್ನತೀಕರಿಸುತ್ತಾ ಸಾಗಿದರೂ ಗುಣಮಟ್ಟದ ಶಿಕ್ಷಣ ಅವರಿಗೆ ತಲುಪುತ್ತಿಲ್ಲ. ಇದು ಅವರ ಜೀವನದ ಮೇಲೆ ಪ್ರಭಾವ ಬೀರುವ ಅಪಾಯವೂ ಇದೆ. ಭಾರತದಲ್ಲಿ ಸದ್ಯ ಜಾಬ್‌ ಮಾರ್ಕೆಟ್‌ ಕಳಪೆಯಾಗಲು ಮೂಲ ಕಾರಣವಾಗಿದ್ದೇ ಕೌಶಲಗಳ ಅಭಾವ. ಇದರ ಜತೆ ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗಿರುವುದೂ ಒಂದು ಕಾರಣವಾಗಿದೆ.

Advertisement

40 ಕೋಟಿ ಪದವೀಧರರು
ದಕ್ಷಿಣ ಏಷ್ಯಾ ರಾಷ್ಟ್ರಗಳಾದ ಭಾರತ, ನೇಪಾಲ, ಭೂತಾನ್‌, ಬಾಂಗ್ಲಾದೇಶ, ಮಾಲ್ದೀವ್ಸ್‌, ಶ್ರೀಲಂಕಾ ಮತ್ತು ಪಾಕಿಸ್ಥಾನದಲ್ಲಿ 2030ರ ಸುಮಾರಿಗೆ ಅಂದಾಜು 40 ಕೋಟಿ ಮಾಧ್ಯಮಿಕ ಶಿಕ್ಷಣ ಪದವೀಧರರು ಗುರುತಿಸಿಕೊಳ್ಳಲಿದ್ದಾರೆ.

2040ಕ್ಕೆ ದಕ್ಷಿಣ ಏಷ್ಯಾ ಅತಿ ದೊಡ್ಡ ಮಾನವ ಸಂಪನ್ಮೂಲ ಕ್ಷೇತ್ರ 2040ರ ಸುಮಾರಿಗೆ ದಕ್ಷಿಣ ಏಷ್ಯಾದಿಂದ ಅತೀ ದೊಡ್ಡ ಸಂಖ್ಯೆಯಲ್ಲಿ ಯುವ ಜನರು ಉದ್ಯೋಗದತ್ತ ಮುಖಮಾಡಲಿದ್ದಾರೆ. ಭಾರತ, ಪಾಕಿಸ್ಥಾನ ಮತ್ತು ಬಾಂಗ್ಲಾದ 180 ಕೋಟಿ ಮಂದಿ ಉದ್ಯೋಗಕ್ಕಾಗಿ ತಯಾರಾಗಲಿದ್ದಾರೆ.

ಭಾರತದಲ್ಲಿ ನಿರುದ್ಯೋಗ
2019ರ ಅಕ್ಟೋಬರ್‌ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ನಿರುದ್ಯೋಗದ ಪ್ರಮಾಣ ಶೇ. 8.45ರಷ್ಟಿದೆ. ಉತ್ತರ ಭಾರತದಲ್ಲಿ ಅತೀ ಹೆಚ್ಚು ನಿರುದ್ಯೋಗಿಗಳಿದ್ದಾರೆ. ತ್ರಿಪುರದಲ್ಲಿ ಅತಿ ಹೆಚ್ಚು ಶೇ. 27ರಷ್ಟಿದೆ. ಹರ್ಯಾಣದಲ್ಲಿ ಶೇ.23, ಹಿಮಾಚಲ ಪ್ರದೇಶದಲ್ಲಿ ಶೇ. 16.7ರಷ್ಟು ನಿರುದ್ಯೋಗವಿದೆ.

ಭಾರತದಿಂದ 30.6 ಕೋಟಿ
2030ರ ಸುಮಾರಿಗೆ ಭಾರತ 30.6 ಕೋಟಿ, ಬಾಂಗ್ಲಾದೇಶ 3.78 ಕೋಟಿ, ಪಾಕಿಸ್ಥಾನ 6.43 ಕೋಟಿ, ನೇಪಾಲ 71 ಲಕ್ಷ, ಶ್ರೀಲಂಕಾ 38 ಲಕ್ಷ, ಭೂತಾನ್‌ 2 ಲಕ್ಷ ಮತ್ತು ಮಾಲ್ಡೀವ್ಸ್‌ 90 ಸಾವಿರ ಪದವೀಧರರನ್ನು ಹೊಂದಲಿದೆ.

ಭೂತಾನ್‌ ಅತಿ ಹೆಚ್ಚು
ಅತಿ ಹೆಚ್ಚಿನ ಸಂಖ್ಯೆಯ ಕೌಶಲವುಳ್ಳ ವಿದ್ಯಾರ್ಥಿಗಳನ್ನು ತಯಾರು ಮಾಡುವುದರಲ್ಲಿ 2030ರ ವೇಳೆಗೆ ಏಷ್ಯಾದಲ್ಲಿ ಭೂತಾನ್‌ ಮುಂಚೂಣಿಯಲ್ಲಿರಲಿದೆ. ಶೇ. 81ರಷ್ಟು ಇದು ವಿದ್ಯಾರ್ಥಿಗಳನ್ನು ನೀಡಲಿದೆ. ಭಾರತ ಶೇ. 47 ಪಾಕಿಸ್ಥಾನ ಶೇ. 46, ನೇಪಾಲ ಶೇ. 46 ಮತ್ತು ಮಾಲ್ಡೀವ್‌ ಶೇ. 40 ಕೌಶಲಯುಳ್ಳವರನ್ನು ತಯಾರು ಮಾಡಲಿದೆ.

ಶಿಕ್ಷಣದ ಕುರಿತು ಅಸಮಾಧಾನ
ಯುನಿಸೆಫ್ ನಡೆಸಿದ ಅಧ್ಯಯನದ ಪ್ರಕಾರ ದಕ್ಷಿಣ ಏಷ್ಯಾದವರು ತಮ್ಮಲ್ಲಿನ ಶಿಕ್ಷಣದ ಕುರಿತು ಅಸಮಾಧಾನ ಹೊಂದಿದ್ದಾರೆ. ಇಲ್ಲಿನ ಶಿಕ್ಷಣದ ಕಾರಣದಿಂದ ನಿರುದ್ಯೋಗವಿದೆ. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಆಗುತ್ತಿದ್ದರೂ ಅವುಗಳು ಆಧುನಿಕ ರೂಪವನ್ನು ಇನ್ನೂ ತಳೆದಿಲ್ಲ ಎಂದು ವರದಿ ಹೇಳಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೌಶಲಕ್ಕೆ ಸ್ಥಾನ
ನಮ್ಮ ಈಗಿನ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳಲ್ಲಿ ಕೌಶಲವನ್ನು ಬೆಳೆಸುವ ಯಾವುದೇ ಯೋಜನೆಗಳು ಇಲ್ಲ. ಈ ಕಾರಣಕ್ಕೆ ಅವರು ಕೌಶಲದಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೌಶಲವನ್ನು ಅಡಕ ಮಾಡಬೇಕು ಎಂಬ ತೀರ್ಮಾನವಾಗಿದೆ. ಮುಂಬರುವ ದಿನಗಳಲ್ಲಿ ಅದು ಪಠ್ಯದ ಭಾಗವಾಗಲಿದ್ದು, ಮಕ್ಕಳಿಗೆ ಕೌಶಲದ ಪಾಠ ಹೇಳಿಕೊಡಲಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಅದನ್ನು ಜಾರಿಗೊಳಿಸುವ ಬಗೆಯ ಕುರಿತು ಚರ್ಚೆ ಗಳು ನಡೆದಿವೆ. ಮಕ್ಕಳಲ್ಲಿ ಕೌಶಲವನ್ನು ಬೆಳೆಸುವ ನಿಟ್ಟಿನಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ವಾರದ ಒಂದು ದಿನ “ಬ್ಯಾಗ್‌ ಲೆಸ್‌’ ದಿನವನ್ನು ಜಾರಿಗೆ ತರುವ ಯೋಜನೆ ಇದೆ. ಈಗಾಗಲೇ ಕರಾವಳಿ ಸೇರಿದಂತೆ ಕೆಲವು ಜಿಲ್ಲೆಗಳ ಕೆಲವು ಶಾಲೆಗಳಲ್ಲಿ ಈ ಯೋಜನೆ ಇದೆ. ಈ ದಿನ ಮಕ್ಕಳಿಗೆ ಏನೆಲ್ಲ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂಬ ಸಂಗತಿಗಳು ಅಂತಿಮವಾಗಿದ್ದು, ಕಡೆಯ ಸುತ್ತಿನ ಪರಿಶೀಲನೆ ಬಾಕಿ ಇದೆ.
– ಎಸ್‌. ಸುರೇಶ್‌ ಕುಮಾರ್‌ , ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು

-  ಕಾರ್ತಿಕ್‌ ಅಮೈ

Advertisement

Udayavani is now on Telegram. Click here to join our channel and stay updated with the latest news.

Next