Advertisement

s R Praggnanandha: ಚೆಕ್‌…ಬಂದ, ಚೆಸ್‌ ಲೋಕದ ಚಂದ್ರ!

12:06 PM Aug 27, 2023 | Team Udayavani |

ಕಳೆದೊಂದು ವಾರದಿಂದ ಎಲ್ಲಾ ಮಾಧ್ಯಮಗಳಲ್ಲೂ ಪ್ರಜ್ಞಾನಂದನ ಕುರಿತು ಚರ್ಚೆಯಾಗುತ್ತಿದೆ. ಬಡವರ ಮನೆಯ ಈ ಹುಡುಗ ಚೆಸ್‌ ಆಟ ಕಲಿತದ್ದು, ಘಟಾನುಘಟಿ ಆಟಗಾರರನ್ನು ಸೋಲಿಸಿದ್ದು, ಯಶಸ್ಸಿನ ಒಂದೊಂದೇ ಮೆಟ್ಟಿಲೇರಿ ಗೆಲುವಿನ ನಗೆ ಬೀರಿದ್ದು ಅಭಿಮಾನ-ಅಕ್ಕರೆಯ ಸಂಗತಿ. ಚಂದ್ರನ ಅಂಗಳದಲ್ಲಿ ‘ಪ್ರಜ್ಞಾನ’ನ , ಚೆಸ್‌ ಅಂಗಳದಲ್ಲಿ ಪ್ರಜ್ಞಾನಂದನ ದರ್ಬಾರು ಶುರುವಾಗಿರುವುದೂ ಸ್ವಾರಸ್ಯದ ಸಂಗತಿಯೇ.

Advertisement

ಭಾರತದಲ್ಲೀಗ ಕ್ರಿಕೆಟ್‌ ಬಿಟ್ಟು, ಚೆಸ್‌ ಆಟದ ಬಗ್ಗೆ ಚರ್ಚೆ ಆಗುತ್ತಿದೆ! ಅದಕ್ಕೆ ಕಾರಣ ಪ್ರಜ್ಞಾನಂದ. ಈತನೀಗ ಭಾರತದ ಕ್ರೀಡಾ ಜಗತ್ತಿನ ನವತಾರೆ. ಪ್ರಜ್ಞಾನಂದ ಆಕ್ರಮಣಕಾರಿ ಚೆಸ್‌ ಆಟಗಾರನಲ್ಲ. ಸಂಕೀರ್ಣ ನಡೆಗಳ ಬಲೆ ಬೀಸುವುದಿಲ್ಲ. ಆದರೂ ಇವನ ನಡೆ ಎದುರಾಳಿಗೆ ಹಾವಿನ ಹೆಜ್ಜೆ! 18ನೇ ವಯಸ್ಸಿನಲ್ಲಿ ಚೆಸ್‌ ವರ್ಲ್ಡ್ ಕಪ್‌ ಫೈನಲ್‌ ತಲುಪಿದ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥ್‌ ಆನಂದ್‌ ನಂತರದಲ್ಲಿ, ಅಂಥ ಸಾಧನೆ ಮಾಡಿದ ಎರಡನೇ ಭಾರತೀಯ ಈ ಪ್ರಜ್ಞಾನಂದ. ಮೊನ್ನೆ ಗುರುವಾರ ನಡೆದ ಫೈನಲ್‌ ಪಂದ್ಯದಲ್ಲಿ ಚೆಸ್‌ ಜಗತ್ತಿನ ಶ್ರೇಷ್ಠ ಆಟಗಾರ, ಆರು ಬಾರಿಯ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್ಸನ್ ಗೆ ಕಠಿಣ ಸ್ಪರ್ಧೆ ನೀಡುವ ಮೂಲಕ ಈತ ಇಡೀ ದೇಶದ ಜನರ ಮನಗೆದ್ದ.

ಶ್ರದ್ಧೆ, ಶಿಸ್ತು, ಯಶಸ್ಸು…

ಪ್ರಜ್ಞಾನಂದ ಜಗತ್ತಿನ ಗಮನ ಸೆಳೆದಿದ್ದು ತನ್ನ ಹತ್ತನೇ ವಯಸ್ಸಿನಲ್ಲಿ. ಆ ವಯಸ್ಸಿಗೇ ಅಂತಾರಾಷ್ಟ್ರೀಯ ಮಾಸ್ಟರ್‌ ಆದ ಈತ, 12ನೇ ವಯಸ್ಸಿಗೆ ಗ್ರ್ಯಾಂಡ್‌ ಮಾಸ್ಟರ್‌ ಆಗಿ ದಾಖಲೆ ಮಾಡಿದ. ವರ್ಲ್ಡ್ ಚೆಸ್‌ ರ್‍ಯಾಂಕಿಂಗ್‌ನಲ್ಲಿ 29ನೇ ಸ್ಥಾನದಲ್ಲಿರುವ ಈತ ಜಗತ್ತಿನ ನಂ. 2 ಹಾಗೂ ನಂ. 3 ರ ರ್ಯಾಕಿಂಗ್‌ ಹೊಂದಿರುವ ಆಟಗಾರರನ್ನೂ ಸೋಲಿಸಿದ್ದಾನೆ!

2022ರಲ್ಲಿ ನಡೆದ ರ್ಯಾಪಿಡ್‌ ಚೆಸ್‌ ಟೂರ್ನಮೆಂಟ್‌ನಲ್ಲಿ ಕಾರ್ಲ್ಸನ್ ಕೂಡ ಪ್ರಜ್ಞಾನಂದನಿಂದ ಸೋಲು ಕಂಡಿದ್ದ. ಸಮಚಿತ್ತದ ಆಟ ಈತನ ಪ್ಲಸ್‌ ಪಾಯಿಂಟ್‌. ದಿನವೂ ಕನಿಷ್ಠ 6 ತಾಸು ಚದುರಂಗದಾಟದ ಅಭ್ಯಾಸ. ತರಬೇತುದಾರ ರಮೇಶ ಅವರು ಪ್ರತಿವಾರ ಬೆಳಿಗ್ಗೆ 9ರಿಂದ ಸಂಜೆ 5ರ ತನಕ ಆಯೋಜಿಸುವ ಚೆಸ್‌ ಶಿಬಿರದಲ್ಲಿ ಭಾಗಿ- ಇದಿಷ್ಟೂ ಪ್ರಜ್ಞಾನಂದ ಆಟ ಕಲಿಯುವ ರೀತಿ. ಪರಿಶ್ರಮಕ್ಕೆ ಪ್ರತಿಫ‌ಲ ಸಿಗುತ್ತದೆ ಎನ್ನುವುದಕ್ಕೆ ಇದೊಂದು ತಾಜಾ ಸಾಕ್ಷಿ!

Advertisement

ಬಡವರ ಮನೆಯ ಮಕ್ಕಳು:

ಪ್ರಜ್ಞಾನಂದ ಹುಟ್ಟಿದ್ದು ಇಸವಿ 2005ರ ಅಗಸ್ಟ್‌ 10ರಂದು. ತಂದೆ ರಮೇಶ್‌ ಬಾಬು ಪೋಲಿಯೋ ಪೀಡಿತರು. ನಡೆದಾಟಕ್ಕೂ ತೊಂದರೆ. ಆದರೆ ಛಲ ಬಿಡದೆ ವಿದ್ಯಾಭ್ಯಾಸ ಮಾಡಿ ಬ್ಯಾಂಕಿನಲ್ಲಿ ಕೆಲಸ ಪಡೆದರು. ತಾಯಿ ನಾಗಲಕ್ಷ್ಮಿ ಗೃಹಿಣಿ. ಈ ದಂಪತಿಗೆ ಇಬ್ಬರು ಮಕ್ಕಳು. ಹಿರಿಯವಳು ಮಗಳು ವೈಶಾಲಿ.  ಕಿರಿಯವನು ಪ್ರಜ್ಞಾನಂದ. ಚಿಕ್ಕಂದಿನಲ್ಲಿ ಇಬ್ಬರೂ ತುಂಬಾ ತುಂಟರು, ದಿನವಿಡೀ ಟಿವಿಯ ವೀಕ್ಷಣೆ. ತುಂಟಾಟ ಹಾಗೂ ಟಿವಿ ಚಟವನ್ನು ತಪ್ಪಿಸುವ ಉದ್ದೇಶದಿಂದ ಮಕ್ಕಳನ್ನು ಯಾವುದಾದರೂ ಆಟಕ್ಕೆ ಸೇರಿಸಲು ರಮೇಶ ಬಾಬು ನಿರ್ಧರಿಸಿ, ಮೊದಲು ವೈಶಾಲಿಯನ್ನು ಚೆಸ್‌ ತರಬೇತಿಗೆ ಸೇರಿಸಿದರು. ಹಿಂದೆಯೇ ಪ್ರಜ್ಞಾನಂದ ಕೂಡ ಸೇರಿಕೊಂಡ.

ಅಕ್ಕಂದಿರ ಎದುರು ಗೆಲುವು:

ಅಕ್ಕ, ತಮ್ಮ ಇಬ್ಬರೂ ಒಬ್ಬರನ್ನೊಬ್ಬರು ಮೀರಿಸುವಂತೆ ಆಡತೊಡಗಿದರು. ಒಂದೊಂದೇ ಪಂದ್ಯ ಗೆಲ್ಲುತ್ತಾ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟ ತಲುಪಿದರು. 2013ರಲ್ಲಿ ಚೆನ್ನೈನಲ್ಲಿ ನಡೆದ “ವರ್ಲ್ಡ್ ಚೆಸ್‌ ಚಾಂಪಿಯನ್‌ ಶಿಪ್‌’ನಲ್ಲಿ ವಿಶ್ವನಾಥನ್‌ ಆನಂದ್‌ ಹಾಗೂ ಮ್ಯಾಗ್ನಸ್‌ ಕಾರ್ಲಸನ್‌ ನಡುವಿನ ಆಟ ನೋಡಲು ಜಗತ್ತೇ ಕಾತರಿಸಿತ್ತು. ಭಾರತಕ್ಕೆ ಬಂದ ಕಾರ್ಲಸನ್‌, ಒಟ್ಟಿಗೇ 20 ಮಕ್ಕಳ ಜೊತೆ ಚೆಸ್‌ ಆಡುವ ಸವಾಲಿಗೆ ಕೈ ಹಾಕಿದ. ಅದರಲ್ಲಿ ಅವನನ್ನು ಸೋಲಿಸಿ ಅಚ್ಚರಿ ಮೂಡಿಸಿದ್ದು, ಆಗ 12 ವರ್ಷದವಳಾಗಿದ್ದ ವೈಶಾಲಿ. (ಇಂದು ವೈಶಾಲಿ ಭಾರತದಲ್ಲಿ ನಂಬರ್‌ ಎರಡನೇ ಆಟಗಾರ್ತಿ!) ಕಾರ್ಲಸನ್‌ ಹಾಗೂ ಪ್ರಜ್ಞಾನಂದ ಇಬ್ಬರದ್ದೂ ಬೇರೆ ಬೇರೆ ಹಿನ್ನೆಲೆ. ಬೆಳೆದ ಪರಿ, ಆಟದ ರೀತಿ, ಬದುಕು, ಎಲ್ಲವೂ ವಿಭಿನ್ನ. ಆದರೆ ಒಂದು ವಿಷಯದಲ್ಲಿ ಮಾತ್ರ ಇಬ್ಬರಿಗೂ ಹೋಲಿಕೆ ಇದೆ. ಅದೇನೆಂದರೆ, ಇಬ್ಬರೂ ಸೋಲಿಸಿದ್ದು ತಮ್ಮ ಅಕ್ಕಂದಿರನ್ನು.

ಹೀ ಪ್ಲೇಯಿಂಗ್‌, ಪ್ರೇಯಿಂಗ್‌…

ಪ್ರಜ್ಞಾನಂದನ ಹಿಂದೆ ದೇವರಿಗಿಂತ ಹೆಚ್ಚಾಗಿ ಧೈರ್ಯವಾಗಿ ನಿಂತವಳು ಆತನ ತಾಯಿ ನಾಗಲಕ್ಷ್ಮಿ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಯಾವುದೇ ಪಂದ್ಯವಾಗಲಿ; ಆಟ ಮುಗಿದ ತಕ್ಷಣ ಪ್ರಜ್ಞಾನಂದನ ಕಣ್ಣು ಹುಡುಕುವುದು ಅಮ್ಮನನ್ನು. ಓಡಿಹೋಗಿ ಆಕೆಯನ್ನು ಅಪ್ಪಿಕೊಳ್ಳುವ ತನಕ ಇವನಿಗೆ ಸಮಾಧಾನವಿಲ್ಲ. ಮಗ ಬಂದು ಬಿಗಿಯಾಗಿ ಅಪ್ಪಿಕೊಂಡಾಗ- “ನೀನು ಗೆದ್ದೆಯೋ? ಸೋತೆಯೋ?’ ಏನೂ ಅಮ್ಮ ಕೇಳುವುದಿಲ್ಲ. ಆಕೆಗೆ ಚೆಸ್‌ ಆಟದ ಸಂಕೀರ್ಣವಾದ ತಂತ್ರವೂ ಗೊತ್ತಿಲ್ಲ. ಒಂದು ಸಂದರ್ಶನದಲ್ಲಿ ಹೇಳುತ್ತಾಳೆ: “ಹೀ ಪ್ಲೇಯಿಂಗ್‌, ಐ ಪ್ರೇಯಿಂಗ್‌’ (ಅವನು ಆಡುತ್ತಿರುತ್ತಾನೆ, ನಾನು ಪ್ರಾರ್ಥಿಸುತ್ತಿರುತ್ತೇನೆ). ಇಬ್ಬರು ಮಕ್ಕಳನ್ನು ಜಾಗತಿಕ ಮಟ್ಟದ ಆಟಗಾರರನ್ನಾಗಿ ಮಾಡಿದ ಹೆಗ್ಗಳಿಕೆ ನಾಗಲಕ್ಷ್ಮಿ ಅವರದು. ಸೋತಾಗ ಮಗನಿಗೆ ಸಮಾಧಾನ ಮಾಡಿ ಹುರಿದುಂಬಿಸುವುದು, ಹೊರನಾಡಿನಲ್ಲಿ ತೊಂದರೆ ಆಗಬಾರದು ಎಂದು ತಾನೇ ಖುದ್ದಾಗಿ ಅಡುಗೆ ಮಾಡುವುದು, ದಿನವೂ ಮಕ್ಕಳನ್ನು ತರಬೇತಿ ಕೇಂದ್ರಕ್ಕೆ ಕರೆದೊಯ್ಯುವುದು… ಇದೆಲ್ಲವೂ ಈ ಅಮ್ಮನ ಕೆಲಸ. ಮನೆಗೆಲಸದ ನಡುವೆ ಇದು ಸುಲಭವಾದ ಕೆಲಸವಲ್ಲ. ನಾಗಲಕ್ಷ್ಮಿಯವರ ಛಲ, ಮಕ್ಕಳಿಗೆ ಆಕೆ ಕೊಟ್ಟ ಬಲ ಹಾಗೂ ಪ್ರೋತ್ಸಾಹವನ್ನು  ಚೆಸ್‌ ಲೋಕದ ದಂತಕತೆ ಗ್ಯಾರಿ ಕ್ಯಾಸ್ಪರೋವ್‌ ಮೊನ್ನೆ ಹೊಗಳಿದ್ದಾರೆ.

ಮಾದರಿಯಾಗಲಿ…

ಮಾಧ್ಯಮಗಳಲ್ಲಿ ಚದುರಂಗದಾಟದ ಚರ್ಚೆ ಆಗುತ್ತಿದೆ. ದೇಶದ ಕೋಟಿ ಕೋಟಿ ಜನರಿಗೆ ಚೆಸ್‌ ತಲುಪುತ್ತಿದೆ, ಇದೇ ನನ್ನ ಯಶಸ್ಸು ಎನ್ನುತ್ತಾನೆ ಪ್ರಜ್ಞಾನಂದ. ತನ್ನ ಮಗ ಅಂತರಾಷ್ಟ್ರೀಯ ಮಾಧ್ಯಮ­ದವರೊಡನೆ ಸಂವಾದ ಮಾಡುತ್ತಿರುವುದು, ವಿದೇಶಿಯರಿಗೆ ಹಸ್ತಾಕ್ಷರ ಹಾಕುತ್ತಿರುವುದನ್ನು ಹೆಮ್ಮೆಯಿಂದ ನೋಡುತ್ತಿರುವ ನಾಗಲಕ್ಷ್ಮೀಯವರ ಪಟ ಎಲ್ಲೆಡೆ ವೈರಲ್‌ ಆಗಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪ್ರತಿ ತಾಯಿಯೂ ಅವರ ಕಣ್ಣಲ್ಲಿ ಕಾಣುತ್ತಾರೆ. ಯಾವುದೇ ಕ್ರೀಡೆಯಲ್ಲಿನ ಒಂದು ಗೆಲುವು ಸಾವಿರಾರು ಜನರಿಗೆ ಸ್ಪೂರ್ತಿ ನೀಡುತ್ತದೆ. ತನ್ನ ಚುರುಕು ಆಟದ ಮೂಲಕ ಎಲ್ಲರ ಮನಗೆದ್ದ ಪ್ರಜ್ಞಾನಂದ, ಒಂದೆರಡು ದಶಕಗಳಾದರೂ ಚೆಸ್‌ ಲೋಕದ ಸಾರ್ವಭೌಮನಾಗಿ ಮೆರೆಯಲಿ. ಆ ಮೂಲಕ ಸಾವಿರಾರು ಮಂದಿಗೆ ಸ್ಫೂರ್ತಿಯಾಗಲಿ.

ಸಂಯಮವೇ ಶಕ್ತಿ!

ಅರ್ಜುನ ಪ್ರಶಸ್ತಿ ಪಡೆದಿರುವ ಪ್ರಜ್ಞಾನಂದ, ಪ್ರ್ಯಾಗ್‌ ಎನ್ನುವ ಹೆಸರಲ್ಲಿ ಜಗತ್ತಿಗೇ ಪರಿಚಿತನಾಗಿದ್ದಾನೆ. ಸಂಯಮದ ನಡವಳಿಕೆ, ಸರಳವಾದ “ಕ್ಲೀನ್‌ ಚೆಸ್‌’ ಆಟ ಈತನ ವಿಶೇಷತೆ. ಕಿರಿಯ  ವಯಸ್ಸಿಗೇ ಗ್ರ್ಯಾಂಡ್‌ ಮಾಸ್ಟರ್‌ ಆದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ. ಎಂಥ ಸಂದರ್ಭದಲ್ಲೂ ಸಂಯಮ ಕಳೆದುಕೊಳ್ಳದ, ಒತ್ತಡಕ್ಕೆ ಒಳಗಾಗದ Mentality Monster (ಮಾನಸಿಕವಾಗಿ ದೈತ್ಯ) ಎಂದು ಕರೆದದ್ದು ಆತನ ಎದುರಾಳಿ ಕಾರ್ಲಸನ್‌.

-ವಿಕ್ರಮ ಜೋಶಿ

Advertisement

Udayavani is now on Telegram. Click here to join our channel and stay updated with the latest news.

Next