Advertisement

‘INDIA’ಕ್ಕೆ ಬೇಕಿದೆ ಸಮರ್ಥ ನಾಯಕತ್ವ

12:28 AM Jul 31, 2023 | Team Udayavani |

ರಾಜ್ಯ ವಿಧಾನಸಭೆ ಚುನಾವಣೆಯ ಬೆನ್ನಲ್ಲೇ ಎಲ್ಲ ರಾಜಕೀಯ ಪಕ್ಷಗಳು ಲೋಕಸಭೆ ಚುನಾವಣೆಯ ಸಿದ್ದತೆ ಆರಂಭಿಸಿವೆ. ಪ್ರಮುಖವಾಗಿ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟಗಳು ಏಕಕಾಲಕ್ಕೆ ಚುನಾವಣೆಯ ರಂಗ ತಾಲೀಮು ಆರಂಭಿಸಿವೆ.

Advertisement

ದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಆತ್ಮವಿಶ್ವಾಸದಲ್ಲಿದ್ದು, ಅದಕ್ಕೆ ಪೂರಕವಾಗಿ ತನ್ನ ಮೈತ್ರಿಕೂಟವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಎನ್‌ಡಿಎ ಮೈತ್ರಿ ಕೂಟಕ್ಕೆ ನಾಯಕತ್ವದ ವಿಚಾರದಲ್ಲಿ ಸ್ಪಷ್ಟತೆ ಇದ್ದು. ಪ್ರಧಾನಿ ಮೋದಿಯೇ ಈ ಕೂಟದ ನಾಯಕರು ಮತ್ತು ಅದರ ಶಕ್ತಿ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ಮೋದಿ ನಾಯಕತ್ವದ ಎನ್‌ಡಿಎ ಕೂಟದ ವಿರುದ್ಧ ಇದು ವರೆಗೂ ಇದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಮೈತ್ರಿಕೂಟ ದೇಶಾ ದ್ಯಂತ ಪ್ರಬಲ ಪೈಪೋಟಿ ನೀಡುವಲ್ಲಿ ವಿಫಲವಾಗಿತ್ತು. ಈ ಬಾರಿ 26 ಪಕ್ಷಗಳನ್ನೊಳಗೊಂಡ ಈ ಮೈತ್ರಿ ಕೂಟ ಇಂಡಿಯಾ (ಐಎನ್‌ಡಿಐಎ) ಹೆಸರಿನಲ್ಲಿ ಒಗ್ಗೂಡಿ ಲೋಕಸಭೆ ಚುನಾವಣೆಯ ಶಸ್ತ್ರಾಭ್ಯಾಸ ಆರಂಭಿಸಿವೆ.

ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಇಂಡಿಯಾ ಒಕ್ಕೂಟದ ಸಭೆ ಇಡೀ ದೇಶಕ್ಕೆ ಮೋದಿ ವಿರುದ್ಧ ತಮ್ಮ ಒಗ್ಗಟ್ಟು ಹಾಗೂ ಶಕ್ತಿಯನ್ನು ತೋರಿಸುವ ಪ್ರಯತ್ನ ನಡೆಸಿದೆ. ಈ ಮೈತ್ರಿಯ ಸಭೆ ದೇಶದಲ್ಲಿ ಬಿಜೆಪಿ ಹಾಗೂ ಮೋದಿಯನ್ನು ವಿರೋಧಿಸುವವರಿಗೆ ಮರುಭೂಮಿಯಲ್ಲಿನ ಓಯಸಿಸ್‌ನಂತೆ ಕಾಣಿಸುತ್ತಿದೆ.

ನಾಯಕತ್ವದ ಪ್ರಶ್ನೆ: ಪ್ರಮುಖವಾಗಿ ವಿರೋಧ ಪಕ್ಷಗಳ ಒಕ್ಕೂಟದ ಪಕ್ಷಗಳ ನಾಯಕರನ್ನು ನೋಡಿದಾಗ ಇದೊಂದು ಪ್ರಬಲ ವಿಪಕ್ಷಗಳ ಕೂಟ ಎನ್ನುವಂತೆ ಕಾಣಿಸುತ್ತದೆ. ಈ ಕೂಟದಲ್ಲಿ ಸೇರಿಕೊಂಡಿರುವ ನಾಯಕರು ತಮ್ಮ ತಮ್ಮ ರಾಜ್ಯಗಳಲ್ಲಿ ಪ್ರಭಾವ ಮತ್ತು ಅಧಿಕಾರ ಹೊಂದಿದ್ದಾರೆ.
ಆದರೆ ಇಡೀ ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರಭಾವ ಬೀರುವ ನಾಯಕರು ಯಾರೆಂದು ನೋಡಿದಾಗ ಥಟ್‌ ಅಂತ ಯಾರ ಹೆಸರು ಹೇಳು ವುದು ಎಂಬ ಬಗ್ಗೆ ಯೋಚಿಸುವಂತೆ ಇದೆ.

Advertisement

ವಿಪಕ್ಷಗಳ ಒಕ್ಕೂಟದ ನಾಯಕತ್ವವನ್ನು ಕಾಂಗ್ರೆಸ್‌ ವಹಿಸಿಕೊಳ್ಳುವುದಾದರೂ, ಈ ಒಕ್ಕೂಟಕ್ಕೆ ದೇಶದ ಜನರ ಮುಂದೆ ಯಾರ ಮುಖ ತೋರಿಸಬೇಕೆಂಬ ಸ್ಪಷ್ಟತೆ ಇಲ್ಲ. ಇದು ಈ ಕೂಟಕ್ಕೆ ಸ್ಪಷ್ಟತೆ ಇಲ್ಲದಿರುವುದಕ್ಕೆ ಸಾಕ್ಷಿ.

ಸದ್ಯದ ಪರಿಸ್ಥಿತಿಯಲ್ಲಿ ದೇಶದ ಜನತೆ ತಮ್ಮನ್ನಾಳುವ ನಾಯಕ ಯಾರಾಗುತ್ತಾರೆ ಎಂಬುದ ನ್ನು ಮೊದಲೇ ತಿಳಿದುಕೊಳ್ಳಲು ಬಯಸುತ್ತಾರೆ. ನಾಯಕನ ಆಧಾರದ ಮೇಲೆಯೇ ತಮ್ಮ ಹಕ್ಕು ಚಲಾಯಿಸುವ ತೀರ್ಮಾನ ಮಾಡುವಷ್ಟರ ಮಟ್ಟಿಗೆ ದೇಶದ ಮತದಾರ ಪ್ರಬುದ್ಧನಾಗುತ್ತಿದ್ದಾನೆ. ಪ್ರಸ್ತುತ ದೇಶದಲ್ಲಿ ಪ್ರಧಾನಿ ಮೋದಿ ನಾಯಕತ್ವ ಬಂದ ಅನಂತರ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಯಾವ ರೀತಿ ಇದೆ ಎನ್ನುವುದರ ಬಗ್ಗೆ ಅನೇಕ ರೀತಿಯ ವಿಶ್ಲೇಷಣೆಗಳು, ಆರೋಪ ಪ್ರತ್ಯಾರೋಪಗಳು ನಡೆಯುತ್ತಲೇ ಇವೆ. ಆದರೆ ವಿಶ್ವಮಟ್ಟದಲ್ಲಿ ಭಾರತ ಹಾಗೂ ಭಾರತೀಯ ಪ್ರಜೆಗಳಿಗೆ ದೊಡ್ಡಮಟ್ಟದ ಗೌರವ ಸಿಗುತ್ತಿದೆ ಎನ್ನುವ ಭಾವನೆ ಸಾಮಾನ್ಯ ಜನರಲ್ಲಿ ಮೂಡಿದೆ. ಪ್ರಧಾನಮಂತ್ರಿ ವರ್ಚಸ್ಸನ್ನೆ ನೆಚ್ಚಿಕೊಂಡು ಬಿಜೆಪಿ ಈ ಬಾರಿಯೂ ರಣರಂಗಕ್ಕಿಳಿಯಲು ಕಾರ್ಯತಂತ್ರ ರೂಪಿಸುತ್ತಿದೆ.

ಇಂಡಿಯಾ ಹೆಸರಿನಲ್ಲಿ ಒಗ್ಗೂಡಿರುವ ವಿಪಕ್ಷಗಳ ಮೈತ್ರಿಯ ಬಗ್ಗೆ ದೇಶದ ಜನತೆಗೆ ಸ್ಪಷ್ಟ ಚಿತ್ರಣ ದೊರೆಯಬೇಕಾದರೆ ಈ ಕೂಟದ ನಾಯಕನಾರು ಎನ್ನುವುದನ್ನು ಸ್ಪಷ್ಟಪಡಿಸುವ ಅಗತ್ಯವಿದೆ. ಈ ಮೈತ್ರಿಕೂಟದಲ್ಲಿ ಪ್ರಮುಖವಾಗಿ ಪ್ರಧಾನಿ ಸ್ಥಾನಕ್ಕೆ ಯಾರ ಹೆಸರು ಹೇಳಿದರೆ ಯಾರು ಹಿಂದೆ ಸರಿಯಬ ಹು ದು ಎನ್ನುವ ಆತಂಕ ಇದ್ದಂತೆ ಕಾಣಿಸುತ್ತದೆ. ಆದರೆ ದೇಶದ ಜನತೆಗೆ ಒಂದು ವಿಶ್ವಾಸ ಮೂಡಬೇಕಾದರೆ, ಇರುವವರಲ್ಲಿ ಯಾರಾದರೊಬ್ಬರನ್ನು ತಮ್ಮ ನಾಯಕ ಎಂದು ಘೋಷಿ ಸಿ ದ ರೆ, ಮೈತ್ರಿಕೂಟ ಮತ್ತು ದೇಶದ ಜನತೆ ಎಲ್ಲರಿಗೂ ಒಂದು ಸ್ಪಷ್ಟತೆ ದೊರೆಯುವ ಸಾಧ್ಯತೆ ಇದೆ.

ಇಂಡಿಯಾ ಮೈತ್ರಿಕೂಟದಲ್ಲಿ 26 ಪಕ್ಷಗಳಿದ್ದರೂ, ಅವುಗಳಲ್ಲಿ ರಾಜ್ಯಗಳಲ್ಲಿ ಅಧಿಕಾರ ನಡೆಸುವ ಅಥವಾ ಪ್ರಾದೇಶಿಕ ವಾಗಿಯಾದರೂ ಒಂದು ಪ್ರಬಲ ಪಕ್ಷವಾಗಿ ನಿಲ್ಲಬಲ್ಲ ಐದಾರು ಪಕ್ಷಗಳು ಮತ್ತು ನಾಯಕರು ಮಾತ್ರ ಕಾಣಿಸುತ್ತಾರೆ.
ಕಾಂಗ್ರೆಸ್‌ನಲ್ಲಿ ಗಾಂಧಿ ಕುಟುಂಬದ ಕುಡಿ ರಾಹುಲ್‌ ಗಾಂಧಿ ಹೊರತಾಗಿ ಬೇರೆ ಯಾರೂ ಆ ಸ್ಥಾನದ ಬಗ್ಗೆ ಕನಸಿನಲ್ಲೂ ಯೋಚನೆ ಮಾಡಬಾರದು ಎನ್ನುವ ಮನೋಭಾವನೆ ಇದ್ದಂತಿದೆ.

ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ರಾಹುಲ್‌ ಗಾಂಧಿ ತಮ್ಮ ಸಂಸದನ ಸ್ಥಾನಕ್ಕಾಗಿ ಕಾನೂನು ಹೋರಾಟ ನಡೆಸಿದ್ದು, ಅದಕ್ಕೆ ಈ ಚುನಾವಣೆಗೂ ಮೊದಲೇ ಪರಿಹಾರ ಸಿಗುತ್ತದೆ ಎನ್ನುವ ಬಗ್ಗೆ ಅನುಮಾನ ಇದೆ.

ರಾಹುಲ್‌ ಗಾಂಧಿ ಭಾರತ್‌ ಜೊಡೋ ಯಾತ್ರೆಯ ಮೂಲಕ ಭಾರತವನ್ನು ತಳ ಮಟ್ಟದಿಂದ ಅರಿಯುವ ಪ್ರಯತ್ನ ಮಾಡಿದ್ದು, ಅವರ ಪಾದಯಾತ್ರೆ ಕಾಂಗ್ರೆಸ್‌ಗೆ ರಾಜಕೀಯವಾಗಿ ಎಷ್ಟರ ಮಟ್ಟಿಗೆ ಲಾಭವಾಗುವುದೊ ಗೊತ್ತಿಲ್ಲ. ರಾಹುಲ್‌ ಗಾಂಧಿಯ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಈ ಯಾತ್ರೆ ದೊಡ್ಡ ಮಟ್ಟದ ಅನುಭವ ನೀಡಿದೆ. ರಾಹುಲ್‌ ನಾಯಕತ್ವದ ಬಗ್ಗೆ ಲಘುವಾಗಿ ಮಾತನಾಡುವವರಿಗೂ ಒಂದು ಸಂದೇಶ ರವಾನಿಸಿದಂತಾಗಿದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅವರ ರಾಜಕೀಯ ಭವಿಷ್ಯ ಕಾನೂನು ಸಂಘರ್ಷಕ್ಕೆ ಸಿಲುಕಿರುವುದರಿಂದ ತತ್‌ಕ್ಷಣಕ್ಕೆ ಕಾಂಗ್ರೆಸ್‌ ಅವರ ಹೊರತಾಗಿ ಮತ್ತೂಬ್ಬ ನಾಯಕನ ಬಗ್ಗೆ ಆಲೋಚಿಸುವ ಅಗತ್ಯವಿದೆ ಅನಿಸುತ್ತದೆ.

ಮೈತ್ರಿಕೂಟದ ನಾಯಕರಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಮಮತಾ ಬ್ಯಾನರ್ಜಿ ಹೆಸರುಗಳು ಪ್ರಮುಖ ವಾಗಿ ಕಂಡು ಬಂದರೂ, ಮೈತ್ರಿಯೊಳಗಿದ್ದವರಿಗೆ ಅವರ ನಾಯಕ ತ್ವದ ಬಗ್ಗೆ ಅಪರಸ್ವರಗಳು ಕೇಳಿ ಬರುವ ಸಾಧ್ಯತೆ ಇದೆ. ಅಲ್ಲದೇ ಅವರು ಪ್ರತಿನಿಧಿಸುವ ಪಕ್ಷಗಳು ನಿರ್ದಿಷ್ಟ ರಾಜ್ಯಗಳಿಗೆ ಮಾತ್ರ ಸೀಮಿತವಾಗಿರುವುದರಿಂದ ಇಡೀ ದೇಶದ ಜನರನ್ನು ಸೆಳೆಯು ವುದು ಕಷ್ಟಸಾಧ್ಯವಾಗಲಿದೆ. ಈ ಇಬ್ಬರು ನಾಯಕರ ಇತಿಹಾಸ ನೋಡಿದಾಗ ರಾಜಕೀಯ ನಡೆಗಳೂ ಕೂಡ ಪ್ರಶ್ನಾರ್ಹವಾಗಿವೆ.

ಇನ್ನು ಕಾಂಗ್ರೆಸ್‌ ಕಷ್ಟಕಾಲದಲ್ಲಿದ್ದಾಗಲೆಲ್ಲ ಪಕ್ಷದ ಆದೇಶ ಪಾಲಿಸುತ್ತ, ಯಾವುದೇ ಅಧಿಕಾರಕ್ಕಾಗಿ ಒತ್ತಡ ತಂತ್ರ ಅನುಸರಿಸದೇ ಪಕ್ಷ ನಿಷ್ಠೆಗೆ ಅನ್ವರ್ಥ ಎನ್ನುವಂತೆ ನಡೆದುಕೊಂಡು ಬಂದಿರುವ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ನಾಯಕತ್ವದ ಬಗ್ಗೆ ಮೈತ್ರಿಕೂಟದ ನಾಯಕರು ಗಂಭೀರವಾಗಿ ಆಲೋಚಿಸಬಹುದು.

ಸುಮಾರು ಐವತ್ತು ವರ್ಷ ಸುದೀರ್ಘ‌ ರಾಜಕಾರಣ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಕಳೆದ ಎರಡು ದಶಕಗಳಿಂದ ರಾಷ್ಟ್ರ ರಾಜಕಾರಣದಲ್ಲಿ ಆಡಳಿತ ಪಕ್ಷದ ಭಾಗವಾಗಿ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿರುವ ಅನುಭವ ಇದೆ. ಅಲ್ಲದೇ ಕಳೆದ ಮೋದಿ ಸರಕಾರದ ಅವಧಿಯಲ್ಲಿ ಅಧಿಕೃತ ವಿಪಕ್ಷದ ನಾಯಕನ ಸ್ಥಾನ ಸಿಗದಿದ್ದರೂ, ಪ್ರಧಾನಿ ಮೋದಿ ಎದುರು ಸಮರ್ಥವಾಗಿ ವಿಪಕ್ಷದ ನಾಯಕನ ಸ್ಥಾನವನ್ನು ನಿಭಾಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಖರ್ಗೆಯವರ ಪ್ರಬಲ ಪ್ರತಿರೋಧವನ್ನು ಎದುರಿಸಲು ಕಷ್ಟ ಅನುಭವಿಸಿರುವ ಕಾರಣಕ್ಕೆ ಪ್ರಧಾನಿ ಮೋದಿಯವರು 2019ರ ಲೋಕಸಭೆ ಚುನಾವಣೆಯಲ್ಲಿ ಪಣತೊಟ್ಟು ಅವರನ್ನು ಸೋಲಿಸಿದರು ಎಂಬ ಮಾತುಗಳೂ ಕೂಡ ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು. ಖರ್ಗೆಯವರ ನಾಯಕತ್ವವನ್ನು ಬಿಂಬಿಸಲು ಗಾಂಧಿ ಕುಟುಂಬ ಕೂಡ ಮುಕ್ತ ಮನಸು ಮಾಡಬೇಕು. ಅದನ್ನೇ ತನ್ನ ಮಿತ್ರಪಕ್ಷಗಳ ನಾಯಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನೂ ಮಾಡಬೇಕು.

ದೇಶದ ಶೇ. 30ಕ್ಕಿಂತಲೂ ಹೆಚ್ಚಿನ ಜನ ಸಂಖ್ಯೆ ಹೊಂದಿರುವ ಖರ್ಗೆಯವರ ಸಮುದಾಯವನ್ನೇ ಮಾನದಂಡವಾಗಿ ನೋಡುವ ಬದಲು ಅವರ ರಾಜಕೀಯ ಹಿನ್ನೆಲೆ, ಬದ್ಧತೆೆ, ಪಕ್ಷ ನಿಷ್ಠೆ ಎಲ್ಲ ಕೋನಗಳಿಂದಲೂ ಕಾಂಗ್ರೆಸ್‌ ನಾಯಕರಷ್ಟೇ ಅಲ್ಲ ಇಂಡಿಯಾ ಒಕ್ಕೂಟ ಗಂಭೀರವಾಗಿ ಯೋಚಿಸುವ ಅಗತ್ಯವಿದೆ.

ವಿಶೇಷವಾಗಿ ಕಾಂಗ್ರೆಸ್‌ಗೆ ಖರ್ಗೆ ಹಾಗೂ ಕರ್ನಾಟಕದ ಕೊಡುಗೆ ದೊಡ್ಡ ಮಟ್ಟದಲ್ಲಿದೆ. ಕಾಂಗ್ರೆಸ್‌ ರಾಷ್ಟ್ರಮಟ್ಟದಲ್ಲಿ ಹಿನ್ನಡೆ ಅನುಭವಿಸಿದಾಗಲೆಲ್ಲಾ ಕರ್ನಾಟಕದಿಂದ ಪಕ್ಷ ಮರು ಹುಟ್ಟು ಪಡೆದುಕೊಂಡಿದೆ.

ನೆಹರು ಕುಟುಂಬದ ಇಂದಿರಾಗಾಂಧಿ, ಸೋನಿಯಾ ಗಾಂಧಿ ಕರ್ನಾಟಕದಿಂದಲೇ ಚುನಾಯಿತರಾಗಲು ವೇದಿಕೆ ಕಲ್ಪಿಸಿರುವ ಇತಿಹಾಸ ಕರ್ನಾಟಕಕ್ಕಿದೆ. ಈಗಲೂ ಕಳೆದ ಹತ್ತು ವರ್ಷಗಳಿಂದ ರಾಷ್ಟ್ರಮಟ್ಟದಲ್ಲಿ ಅಸ್ತಿತ್ವಕ್ಕಾಗಿ ಪರದಾಡುತ್ತಿರುವ ಕಾಂಗ್ರೆಸ್‌ಗೆ ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆ ಹೊಸ ಹುಮ್ಮಸ್ಸು ನೀಡಿದ್ದು, ಇದನ್ನೇ ಲೋಕಸಭೆ ಚುನಾವಣೆಗೂ ಪ್ರೇರಣೆ ಯಾಗಿಟ್ಟುಕೊಂಡು ಮೋದಿಯನ್ನು ಎದುರಿಸಲು ಅಣಿಯಾಗು ತ್ತಿದ್ದು, ಅದಕ್ಕೆ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆಯವರಿಗೆ “ಇಂಡಿಯಾ’ದ ನಾಯಕತ್ವ ನೀಡುವ ಮೂಲಕ ವಿಪಕ್ಷಗಳ ಮೈತ್ರಿಕೂಟ ಭಾರತಕ್ಕೆ ಹೊಸ ಸಂದೇಶ ರವಾನಿಸಬಹುದು.

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next