Advertisement

ಉತ್ತಮ ಬಾಂಧವ್ಯ ಪಾಕಿಸ್ತಾನ ಕ್ಕೆ ಬಿಟ್ಟಿದ್ದು: ಸಚಿವ ಮುರಳೀಧರನ್‌

06:40 PM Sep 19, 2020 | Nagendra Trasi |

ನವದೆಹಲಿ:ಭಾರತದ ಜತೆಗೆ ಉತ್ತಮ ಬಾಂಧವ್ಯ ಹೊಂದಬೇಕೇ, ಬೇಡವೇ ಎನ್ನುವುದು ಪಾಕಿಸ್ತಾನ ಸರ್ಕಾರಕ್ಕೆ ಬಿಟ್ಟಿದ್ದು. ಉಗ್ರವಾದ, ಹಿಂಸೆ ಮುಕ್ತ ವಾತಾವರಣದಲ್ಲಿ ಮಾತ್ರವೇ ಶಾಂತಿ ಮಾತುಕತೆ ಸಾಧ್ಯ ಎಂದು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಗೆ ತಿಳಿಸಿದೆ.

Advertisement

ಪಾಕಿಸ್ತಾನದ ಬಗ್ಗೆ ಸರ್ಕಾರ ಹೊಂದಿರುವ ನಿರ್ಣಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಮುರಳೀ ಧರನ್‌, ಪ್ರಾದೇಶಿಕ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ನಡೆಸುತ್ತಿರುವ ಪ್ರಚೋದನಾಕಾರಿ ಕ್ರಮಗಳ ಬಗ್ಗೆ ಪ್ರಸ್ತಾಪ ಮಾಡಲಾಗುತ್ತಿದೆ.

ಭಾರತದ ನಿರಂತರ ಪ್ರಯತ್ನದಿಂದಲೇ ಜಮಾತ್‌ ಉದ್‌-ದಾವಾ, ಲಷ್ಕರ್‌-ಎ-ತೊಯ್ಬಾ, ಜೈಶ್‌-ಎ-ಮೊಹಮ್ಮದ್‌, ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆಗಳ ವಿರುದ್ಧ ಜಗತ್ತಿನ ರಾಷ್ಟ್ರಗಳು ಪ್ರಬಲವಾಗಿ ಧ್ವನಿ ಎತ್ತುವಂತಾಯಿತು. ಉಗ್ರ ಸಂಘಟನೆಗಳಿಗೆ ವಿತ್ತೀಯ ನೆರವು ನೀಡುವ ಕಾರಣ ಭಯೋತ್ಪಾದನಾ ಧನ ಸಹಾಯ ನಿಗ್ರಹ ಪಡೆ ಪಾಕಿಸ್ತಾನವನ್ನು ಗ್ರೇ ಲಿಸ್ಟ್‌ ನಲ್ಲಿ ಇರಿಸಿದೆ ಎಂದರು.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಗೌರವಾರ್ಥ ಅಮೆರಿಕದ ಹ್ಯೂಸ್ಟನ್‌ನಲ್ಲಿ ಆಯೋಜಿಸಲಾಗಿದ್ದ “ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಸರ್ಕಾರದ ವತಿಯಿಂದ ವೆಚ್ಚ ಮಾಡಲಾಗಿಲ್ಲ ಎಂಬ ಸ್ಪಷ್ಟನೆಯನ್ನು ನೀಡಿದರು.

ಗಿಲ್ಗಿಟ್‌- ಬಾಲ್ಟಿಸ್ತಾನ್‌ “ಪೂರ್ಣ ಪ್ರಮಾಣದ ಪ್ರಾಂತ್ಯ’?
ಗಿಲ್ಗಿಟ್‌- ಬಾಲ್ಟಿಸ್ತಾನ್‌ಗಳು ಜಮ್ಮು ಮತ್ತು ಕಾಶ್ಮೀರ, ಲಡಾಖ್‌ ಕೇಂದ್ರಾಡಳಿತ ಪ್ರದೇಶಕ್ಕೆ ಒಳಪಟ್ಟಿದ್ದು, ದೇಶದ ಅವಿಭಾಜ್ಯ ಅಂಗ ಎಂದು ಭಾರತ ಹೇಳಿಕೊಂಡು ಬರುತ್ತಿದ್ದರೂ, ಪಾಕ್‌ ಭಿನ್ನರಾಗ ಎತ್ತಿದೆ.

Advertisement

ಗಿಲ್ಗಿಟ್‌- ಬಾಲ್ಟಿಸ್ತಾನ್‌ಗಳನ್ನು ಪೂರ್ಣ ಪ್ರಮಾಣದ ಪಾಂತ್ಯ ಎಂದು ಘೋಷಿಸಲು ಪಾಕ್‌ ಸರ್ಕಾರ ಸಕಲ ತಯಾರಿ ಆರಂಭಿಸಿದೆ.ಪಾಕ್‌ ಆಕ್ರಮಿತ ಗಿಲ್ಗಿಟ್‌-ಬಾಲ್ಟಿಸ್ತಾನ್‌ಗೆ ಪ್ರಧಾನಿ ಇಮ್ರಾನ್‌ ಖಾನ್‌ ಶೀಘ್ರವೇ ಭೇಟಿ ನೀಡಲಿದ್ದಾರೆ.

ಎಲ್ಲ ಸಾಂವಿಧಾನಿಕ ಹಕ್ಕುಗಳನ್ನೊಳಗೊಂಡಂತೆ ಪೂರ್ಣ ಪ್ರಮಾಣದ ಪ್ರಾಂತ್ಯವೆಂದು ಘೋಷಿಸಲಿದ್ದಾರೆ ಎಂದು ಕಾಶ್ಮೀರ ಮತ್ತು ಗಿಲ್ಗಿಟ್‌- ಬಾಲ್ಟಿಸ್ತಾನ್‌ ವ್ಯವಹಾರ ಸಚಿವ ಅಲಿ ಅಮಿನ್‌ ಗಂದಾಪುರ್‌ ತಿಳಿಸಿದ್ದಾರೆ. ಗಿಲ್ಗಿಟ್‌- ಬಾಲ್ಟಿಸ್ತಾನ್‌ನ ಬೇಡಿಕೆಗೆ ತಕ್ಕಂತೆ ಆ ಭಾಗದಲ್ಲಿ ರಾಷ್ಟ್ರೀಯ ಅಸೆಂಬ್ಲಿ ಮತ್ತು ಸಂಸದ ಕ್ಷೇತ್ರಗಳನ್ನು ರಚಿಸಲಾಗುತ್ತದೆ. ಸಾಂವಿಧಾನಿಕ ಹಕ್ಕುಗಳ ಅಡಿಯಲ್ಲಿ ಸಮರ್ಪಕ ಪ್ರಾತಿನಿಧ್ಯ ನೀಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next