Advertisement

ಟೀಮ್‌ ಇಂಡಿಯಾ ಗುರಿ ಪರಿಪೂರ್ಣ ಮುಕ್ತಾಯ

12:30 AM Jan 18, 2019 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯದಲ್ಲಿ “ಪರಿಪೂರ್ಣ ಮುಕ್ತಾಯ’ವೊಂದನ್ನು ಎದುರು ನೋಡುತ್ತಿರುವ ಟೀಮ್‌ ಇಂಡಿಯಾ, ಶುಕ್ರವಾರ ಮೆಲ್ಬರ್ನ್ನಲ್ಲಿ 3ನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು ಆಡಲಿಳಿಯಲಿದೆ. ಇದನ್ನು ಗೆದ್ದರೆ ಕಾಂಗರೂ ನಾಡಿನಲ್ಲಿ ಭಾರತದಿಂದ ಮತ್ತೂಂದು ಇತಿಹಾಸ ನಿಮಾರ್ಣಣವಾಗಲಿದೆ.

Advertisement

ಈ ಪ್ರವಾಸಕ್ಕೂ ಮುನ್ನ ಆಸ್ಟ್ರೇಲಿಯದಲ್ಲಿ ಭಾರತ ತಂಡ ಟೆಸ್ಟ್‌ ಸರಣಿ ಗೆಲ್ಲದ ನಿರಾಶೆಯಲ್ಲಿತ್ತು. ಈ ಬಾರಿ ಇದನ್ನು ನೀಗಿಸಿಕೊಂಡದ್ದು ಈಗ ಇತಿಹಾಸ. ಹಾಗೆಯೇ ಭಾರತ ತಂಡ ಇಲ್ಲಿಯ ತನಕ ಆಸ್ಟ್ರೇಲಿಯದಲ್ಲಿ ದ್ವಿಪಕ್ಷೀಯ ಏಕದಿನ ಸರಣಿಯನ್ನೂ ಗೆದ್ದದ್ದಿಲ್ಲ. ಇದಕ್ಕೀಗ ಕಾಲ ಕೂಡಿಬಂದಿದೆ. ಇದರೊಂದಿಗೆ ಆಸ್ಟ್ರೇಲಿಯ ಪ್ರವಾಸವನ್ನು ಭಾರತ ಮೊದಲ ಸಲ ಅಜೇಯವಾಗಿ ಮುಗಿಸಿದ ಹೆಗ್ಗಳಿಕೆಗೂ ಪಾತ್ರವಾಗಲಿದೆ. ಟೆಸ್ಟ್‌ ಸರಣಿಗೂ ನಡೆದ ಟಿ20 ಸರಣಿ 1-1 ಅಂತರದಿಂದ ಸಮನಾಗಿತ್ತು.

ಅಂದಹಾಗೆ, ಸುದೀರ್ಘ‌ ಏಕದಿನ ಇತಿಹಾಸವನ್ನೇ ಹೊಂದಿದ್ದರೂ ಆಸ್ಟ್ರೇಲಿಯದಲ್ಲಿ ಭಾರತ ಆಡುತ್ತಿರುವ ಕೇವಲ 2ನೇ ದ್ವಿಪಕ್ಷೀಯ ಸರಣಿ ಇದೆಂಬುದು ಅಚ್ಚರಿಯಾಗಿ ಕಾಣುತ್ತದೆ. ಇತ್ತಂಡಗಳ ನಡುವೆ ಇಲ್ಲಿ ಮೊದಲ ಏಕದಿನ ಸರಣಿ ನಡೆದದ್ದೇ 2016ರಲ್ಲಿ. ಇದನ್ನು ಭಾರತ 1-4 ಅಂತರದಿಂದ ಕಳೆದುಕೊಂಡಿತ್ತು. ಆದರೆ ಇಲ್ಲಿ ಬಹು ತಂಡಗಳು ಪಾಲ್ಗೊಂಡಿದ್ದ 2 ಏಕದಿನ ಪಂದ್ಯಾವಳಿಗಳನ್ನು ಭಾರತ ಗೆದ್ದ ದಾಖಲೆ ಇದೆ. 1985ರ ವರ್ಲ್ಡ್ ಚಾಂಪಿಯನ್‌ಶಿಪ್‌ ಆಫ್ ಕ್ರಿಕೆಟ್‌ ಮತ್ತು 2008ರ ಸಿ.ಬಿ. ಸೀರಿಸ್‌ ಟ್ರೋಫಿಗಳನ್ನು ಭಾರತ ತನ್ನದಾಗಿಸಿಕೊಂಡಿತ್ತು.

ಭಾರತಕ್ಕೆ ಬೌಲಿಂಗ್‌ ಚಿಂತೆ
ಸಿಡ್ನಿ ಪಂದ್ಯವನ್ನು 34 ರನ್‌ ಅಂತರದಿಂದ ಕಳೆದುಕೊಂಡ ಕೊಹ್ಲಿ ಪಡೆ, ಅಡಿಲೇಡ್‌ನ‌ಲ್ಲಿ 6 ವಿಕೆಟ್‌ಗಳಿಂದ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿತ್ತು. ನಾಯಕ ಕೊಹ್ಲಿ ಬಾರಿಸಿದ ಶತಕ, ಕೀಪರ್‌ ಧೋನಿ ಬಹಳ ಸಮಯದ ಬಳಿಕ ನಿಭಾಯಿಸಿದ ಮ್ಯಾಚ್‌ ಫಿನಿಶಿಂಗ್‌ ಪಾತ್ರ ಭಾರತದ ಜಯದ ಗಮನಾರ್ಹ ಅಂಶಗಳಾಗಿದ್ದವು. ಆದರೂ ವಿಶ್ವಕಪ್‌ಗೆ ಸಮರ್ಥ ತಂಡವೊಂದನ್ನು ಕಟ್ಟುವ ಹಾದಿಯಲ್ಲಿರುವ ಟೀಮ್‌ ಇಂಡಿಯಾ ಸಮಸ್ಯೆಗಳು ಬಗೆಹರಿದಿಲ್ಲ. ಇದರಲ್ಲಿ ಬೌಲಿಂಗ್‌ ವೈಫ‌ಲ್ಯ ಪ್ರಮುಖವಾದುದು.

ಜಸ್‌ಪ್ರೀತ್‌ ಬುಮ್ರಾ ಮತ್ತು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಗೈರಲ್ಲಿ ತಂಡದ ಬೌಲಿಂಗ್‌ ಸಮತೋಲನದಲ್ಲಿ ವ್ಯತ್ಯಯವಾಗಿರುವುದು ಸ್ಪಷ್ಟ. ಅಡಿಲೇಡ್‌ನ‌ಲ್ಲಿ ಭುವಿ-ಶಮಿ ಜೋಡಿಯ ಆರಂಭಿಕ ಸ್ಪೆಲ್‌ ಅಮೋಘವಾಗಿತ್ತು. ಆದರೆ ತೃತೀಯ ವೇಗಿಗಳಿಬ್ಬರೂ ದುಬಾರಿಯಾಗಿ ಗೋಚರಿಸಿದ್ದಾರೆ. ಸಿಡ್ನಿಯಲ್ಲಿ ಖಲೀಲ್‌ ಅಹ್ಮದ್‌ (55/0), ಅಡಿಲೇಡ್‌ನ‌ಲ್ಲಿ ಮೊಹಮ್ಮದ್‌ ಸಿರಾಜ್‌ (76/0) ಪೂರ್ತಿ ವಿಫ‌ಲರಾಗಿದ್ದರು. ಹೀಗಾಗಿ ಮೆಲ್ಬರ್ನ್ನಲ್ಲಿ ಇವರಿಬ್ಬರಿಗೂ ಅವಕಾಶ ಸಿಗುವ ಸಾಧ್ಯತೆ ಇಲ್ಲ ಎಂದೇ ಹೇಳಬೇಕು. ಎಡಗೈ ಸ್ಪಿನ್ನರ್‌ಗಳಾದ ಜಡೇಜ ಮತ್ತು ಕುಲದೀಪ್‌ ಮ್ಯಾಜಿಕ್‌ ಏನೂ ಮಾಡಿಲ್ಲ.

Advertisement

ಉಳಿದಿರುವವರೆಂದರೆ ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಮತ್ತು ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ವಿಜಯ್‌ ಶಂಕರ್‌. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಹಾಗೂ ಪಾರ್ಟ್‌ಟೈಮ್‌ ಬೌಲರ್‌ ಕೇದಾರ್‌ ಜಾಧವ್‌ ಕೂಡ ರೇಸ್‌ನಲ್ಲಿದ್ದಾರೆ. ಜಾಧವ್‌ ಅಥವಾ ವಿಜಯ್‌ ಶಂಕರ್‌ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಎಂಸಿಜಿ ಅಂಗಳ “ದೊಡ್ಡ ಬೌಂಡರಿ’ಯನ್ನು ಹೊಂದಿರುವುದರಿಂದ ಬೌಲಿಂಗ್‌ ಆಯ್ಕೆಯಲ್ಲಿ ತೀವ್ರ ಎಚ್ಚರಿಕೆ ವಹಿಸಬೇಕಾಗುತ್ತದೆ.

ರೋಹಿತ್‌, ಕೊಹ್ಲಿ ಸ್ಟಾರ್
ಭಾರತದ ಬ್ಯಾಟಿಂಗ್‌ ಸರದಿ ರೋಹಿತ್‌ ಶರ್ಮ ಮತ್ತು ವಿರಾಟ್‌ ಕೊಹ್ಲಿ ಅವರನ್ನು ಹೆಚ್ಚು ಅವಲಂಬಿಸಿದೆ. ಇವರಲ್ಲೊಬ್ಬರು ಕ್ರೀಸ್‌ ಆಕ್ರಮಿಸಿಕೊಂಡರೂ ಗೆಲುವು ಖಾತ್ರಿ ಎನ್ನಬಹುದು. ಆದರೆ ಇವರೊಂದಿಗೆ ಧವನ್‌, ರಾಯುಡು ಕೂಡ ಬ್ಯಾಟ್‌ ಬೀಸಬೇಕಾದ ಅಗತ್ಯವಿದೆ. ಹಾಗೆಯೇ ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌ನನ್ನು ಮೀರಿಸಿ ಅವಕಾಶ ಗಿಟ್ಟಿಸಿರುವ ದಿನೇಶ್‌ ಕಾರ್ತಿಕ್‌ ತಮ್ಮ ಆಯ್ಕೆಯನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಸಮರ್ಥಿಸಿಕೊಳ್ಳಬೇಕಿದೆ. ವಿಶ್ವಕಪ್‌ ತನಕ ಹೇಗೂ ತಂಡದಲ್ಲಿ ಉಳಿಯಲಿರುವ ಧೋನಿಯ ಆಟ ಅಡಿಲೇಡ್‌ ಪಂದ್ಯಕ್ಕಷ್ಟೇ ಸೀಮಿತವಾಗಬಾರದು.

ಆಸೀಸ್‌ಗೆ ಓಪನಿಂಗ್‌ ಸಮಸ್ಯೆ
ತೀವ್ರ ಒತ್ತಡದಲ್ಲಿರುವ ಆಸ್ಟ್ರೇಲಿಯ ಕೂಡ ಸಮಸ್ಯೆಯಿಂದ ಮುಕ್ತವಾಗಿಲ್ಲ. ಎರಡೂ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿ ಮುನ್ನೂರರ ಗಡಿ ಸಮೀಪಿಸಿದೆಯಾದರೂ ತಂಡದ ಓಪನಿಂಗ್‌ ಕೈಕೊಟ್ಟಿದೆ. ಫಿಂಚ್‌ ಕಪ್ತಾನನ ಆಟವಾಡುವಲ್ಲಿ ಸಂಪೂರ್ಣ ವಿಫ‌ಲರಾಗಿದ್ದಾರೆ. ಕ್ಯಾರಿ ಕೂಡ ನಿರೀಕ್ಷಿತ ಕ್ಲಿಕ್‌ ಆಗಿಲ್ಲ. ಆದರೆ ಮಧ್ಯಮ ಕ್ರಮಾಂಕದ ಹೋರಾಟ ಪ್ರಶಂಸನೀಯ. ಖ್ವಾಜಾ, ಮಾರ್ಷ್‌, ಹ್ಯಾಂಡ್ಸ್‌ಕಾಂಬ್‌, ಬ್ಯಾಕ್ಸ್‌ವೆಲ್‌, ಸ್ಟೋಯಿನಿಸ್‌ ಅವರೆಲ್ಲ ತಂಡದ ಬೃಹತ್‌ ಮೊತ್ತಕ್ಕೆ ಮಹತ್ತರ ಕೊಡುಗೆ ಸಲ್ಲಿಸಿದ್ದಾರೆ. ಮೆಲ್ಬರ್ನ್ನಲ್ಲೂ ಇದು ಪುನರಾವರ್ತನೆಯಾದೀತು.

ಈ ಪಂದ್ಯಕ್ಕಾಗಿ ವೇಗಿ ಸ್ಟಾನ್‌ಲೇಕ್‌ ಮತ್ತು ಸ್ಪಿನ್ನರ್‌ ಝಂಪ ಅವರನ್ನು ಆಸೀಸ್‌ ಆಡುವ ಬಳಗಕ್ಕೆ ಸೇರಿಸಿಕೊಂಡಿದೆ. ಲಿಯೋನ್‌ ಮತ್ತು ಬೆಹೆÅಂಡಾಫ್ì ಅವರನ್ನು ಕೈಬಿಟ್ಟಿದೆ.

ಸಂಭಾವ್ಯ ತಂಡಗಳು
ಭಾರತ
: ರೋಹಿತ್‌ ಶರ್ಮ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಮಹೇಂದ್ರ ಸಿಂಗ್‌ ಧೋನಿ, ದಿನೇಶ್‌ ಕಾರ್ತಿಕ್‌, ಕೇದಾರ್‌ ಜಾಧವ್‌/ವಿಜಯ್‌ ಶಂಕರ್‌, ರವೀಂದ್ರ ಜಡೇಜ, ಭುವನೇಶ್ವರ್‌ ಕುಮಾರ್‌, ಕುಲದೀಪ್‌ ಯಾದವ್‌, ಖಲೀಲ್‌ ಅಹ್ಮದ್‌, ಮೊಹಮ್ಮದ್‌ ಶಮಿ.

ಆಸ್ಟ್ರೇಲಿಯ: ಆರನ್‌ ಫಿಂಚ್‌ (ನಾಯಕ), ಅಲೆಕ್ಸ್‌ ಕ್ಯಾರಿ, ಉಸ್ಮಾನ್‌ ಖ್ವಾಜಾ, ಶಾನ್‌ ಮಾರ್ಷ್‌, ಪೀಟರ್‌ ಹ್ಯಾಂಡ್ಸ್‌ಕಾಂಬ್‌, ಮಾರ್ಕಸ್‌ ಸ್ಟೋಯಿನಿಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಪೀಟರ್‌ ಸಿಡ್ಲ್, ಜೇ ರಿಚರ್ಡ್‌ಸನ್‌, ಆ್ಯಡಂ ಝಂಪ, ಬಿಲ್ಲಿ ಸ್ಟಾನ್‌ಲೇಕ್‌.

ಆರಂಭ: ಬೆಳಗ್ಗೆ 7.50
ಪ್ರಸಾರ: ಸೋನಿ ಸಿಕ್ಸ್‌

Advertisement

Udayavani is now on Telegram. Click here to join our channel and stay updated with the latest news.

Next