ನವದೆಹಲಿ: ಭಾರತದಲ್ಲಿಯೂ ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪ ಸಂಭವಿಸಬಹುದು ಎಂದು ಐಐಟಿ ಕಾನ್ಪುರದ ಭೂ ವಿಜ್ಞಾನ ವಿಭಾಗದ ಪ್ರೊಫೆಸರ್, ಹಿರಿಯ ವಿಜ್ಞಾನಿ ಯೊಬ್ಬರು ಹೇಳಿದ್ದಾರೆ.
ಪ್ರೊಫೆಸರ್ ಜಾವೇದ್ ಮಲಿಕ್ ಅವರು ದೇಶದಲ್ಲಿ ಭೂಕಂಪಗಳ ಹಳೆಯ ಘಟನೆಗಳ ಕಾರಣಗಳು ಮತ್ತು ಬದಲಾವಣೆಗಳ ಬಗ್ಗೆ ದೀರ್ಘಕಾಲದಿಂದ ಸಂಶೋಧನೆ ನಡೆಸುತ್ತಿದ್ದಾರೆ. ಬಹಳ ಸಮಯದಿಂದ ಈ ಬಗ್ಗೆ ಅಧ್ಯಯನ ನಡೆಸಿರುವ ಪ್ರೊಫೆಸರ್ ಜಾವೇದ್ ಭಾರತ ಭಯಾನಕ ಭೂಕಂಪ ಸಂಭವಿಸುವ ಅಪಾಯದಲ್ಲಿದೆ ಎಂದಿದ್ದಾರೆ.
ಭಾರತದಲ್ಲಿ 7.5 ಕ್ಕೂ ಹೆಚ್ಚಿನ ತೀವ್ರತೆಯ ಪ್ರಮಾಣದಲ್ಲಿ ಭೂಕಂಪ ಸಂಭವಿಸಬಹುದು. ಭಾರತದ ಕೆಲ ಭಾಗಗಳಲ್ಲಿ ಈ ಭೂಕಂಪ ಸಂಭವಿಸಬಹುದು. ಇದು ಮುಂದಿನ ಒಂದು-ಎರಡು ದಶಕಗಳಲ್ಲಿ ಸಂಭವಿಸಬಹುದು ಅಥವಾ ಮುಂದಿನ 1-2 ವರ್ಷಗಳಲ್ಲೂ ಸಂಭವಿಸಬಹುದು. “ಭೂಕಂಪದ ಕೇಂದ್ರಬಿಂದು ಹಿಮಾಲಯ ಮಾಸಿಫ್ ಅಥವಾ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಾಗುವ ಸಾಧ್ಯತೆಯಿದೆ. ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದಿದ್ದಾರೆ.
ಪ್ರೊಫೆಸರ್ ಮಲಿಕ್ ಭೂಕಂಪ ಪೀಡಿತ ಪ್ರದೇಶವಾಗಿರುವ ಕಚ್, ಅಂಡಮಾನ್ ಮತ್ತು ಉತ್ತರಾಖಂಡದಲ್ಲಿ ದೀರ್ಘಕಾಲದಿಂದ ಭೂಮಿಯ ಬದಲಾವಣೆ ಕುರಿತು ಅಧ್ಯಯನ ಮಾಡುತ್ತಿದ್ದಾರೆ. ಭೂಕಂಪದ ಹಿನ್ನೆಲೆಯಲ್ಲಿ ದೇಶದಲ್ಲಿ ಐದು ವಲಯಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ಈ 5 ಝೋನ್ ಗಳಲ್ಲಿ ಕಚ್, ಅಂಡಮಾನ್ ಮತ್ತು ನಿಕೋಬಾರ್ ಮತ್ತು ಹಿಮಾಲಯ ಪ್ರದೇಶಗಳು, ಬಹ್ರೈಚ್, ಲಖಿಂಪುರ, ಪಿಲಿಭಿತ್, ಘಾಜಿಯಾಬಾದ್, ರೂರ್ಕಿ, ನೈನಿತಾಲ್ ಸೇರಿದಂತೆ ತೆರಾಯ್ ಪ್ರದೇಶಗಳನ್ನು ಒಳಗೊಂಡಿದೆ. ಕಾನ್ಪುರ್, ಲಕ್ನೋ, ಪ್ರಯಾಗ್ರಾಜ್, ವಾರಣಾಸಿ, ಸೋನಭದ್ರ ಮುಂತಾದ ಪ್ರದೇಶಗಳು ಸೇರಿವೆ ಎಂದಿದ್ದಾರೆ.