Advertisement

INDIA ಜತೆ ಭಾರತ್‌: ವಿಪಕ್ಷಗಳ ಒಕ್ಕೂಟದ ಐಎನ್‌ಡಿಐಎ ಹೆಸರಿಗೆ ಟ್ಯಾಗ್‌ಲೈನ್‌

12:20 AM Jul 20, 2023 | Team Udayavani |

ಹೊಸದಿಲ್ಲಿ: ವಿಪಕ್ಷಗಳು ಬೆಂಗಳೂರಿನಲ್ಲಿ ನಡೆಸಿದ್ದ ಸಭೆಯಲ್ಲಿ ಒಕ್ಕೂಟಕ್ಕೆ ಐಎನ್‌ಡಿಐಎ (INDIA) ಎಂದು ಹೆಸರು ಇಟ್ಟ ಮಾರನೇ ದಿನವೇ ಅದಕ್ಕೆ “ಜೀತೇಗಾ ಭಾರತ್‌'(ಭಾರತ ಗೆಲ್ಲಲಿದೆ) ಎಂಬ ಹೊಸ ಟ್ಯಾಗ್‌ಲೈನ್‌ ಅನ್ನು ಸೇರ್ಪಡೆ ಮಾಡಿದೆ.

Advertisement

ಈ ಟ್ಯಾಗ್‌ಲೈನ್‌ ಅನ್ನು ಕನ್ನಡ ಸಹಿತ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಮುದ್ರಿಸಲಾಗುತ್ತದೆ. ಬೆಂಗಳೂರಿನಲ್ಲಿ ಮಂಗಳವಾರ ಮುಕ್ತಾಯವಾಗಿದ್ದ ವಿಪಕ್ಷಗಳ ಸಭೆಯಲ್ಲಿಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಹಿರಿಯ ನಾಯಕರೊಬ್ಬರು ಬುಧವಾರ ತಿಳಿಸಿದ್ದಾರೆ.

ನಿತೀಶ್‌ ಅಪಸ್ವರ: ಈ ನಡುವೆ ಒಕ್ಕೂಟಕ್ಕೆ ಐಎನ್‌ಡಿಐಎ ಎಂಬ ಹೆಸರು ಇರಿಸುವ ಬಗ್ಗೆ ಜೆಡಿಯು ಮುಖಂಡ ಮತ್ತು ಬಿಹಾರ ಸಿಎಂ ನಿತೀಶ್‌ ಕುಮಾರ್‌ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಹೀಗಾಗಿಯೇ ಅವರು ಪತ್ರಿಕಾಗೋಷ್ಠಿಗೆ ಕೂಡ ಕಾಯದೆ ಪಟ್ನಾಕ್ಕೆ ವಾಪಸಾ ಗಿದ್ದರು ಎಂದು ಹಲವು ವರದಿಗಳಲ್ಲಿ ವಿಶ್ಲೇಷಿಸಲಾಗುತ್ತಿದೆ.

ಸಭೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ “ಐಎನ್‌ಡಿಐಎ’ ಹೆಸ ರನ್ನು ಶಿಫಾರಸು ಮಾಡಿದ್ದರು. ಆಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ನಿತೀಶ್‌ ಕುಮಾರ್‌, “ಐಎನ್‌ಡಿಐಎ’ ಎಂಬ ಹೆಸರಿನಲ್ಲೂ “ಎನ್‌ಡಿಎ’ ಎಂಬ ಪದಗಳು ಬರುತ್ತವೆ. ಎರಡೂ ಒಕ್ಕೂಟಗಳ ಹೆಸರಲ್ಲಿ “ಎನ್‌ಡಿಎ’ ಎಂದು ಇರುವುದು ಸಮಂಜಸವಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.

ಅಲ್ಲದೇ ಅವರು ಇಂಡಿಯಾ ಮೈನ್‌ ಫ್ರಂಟ್‌ ಮತ್ತು ಇಂಡಿಯಾ ಮೈನ್‌ ಅಲಯನ್ಸ್‌ ಎಂಬ ಎರಡು ಹೆಸರುಗಳನ್ನು ಇಡುವಂತೆ ಸಲಹೆ ನೀಡಿದ್ದರು. ಆದರೆ ಅದಕ್ಕೆ ಸೂಕ್ತ ಸ್ಪಂದನೆ ವ್ಯಕ್ತವಾಗದೇ ಇದ್ದಾಗ “ಹಾಗಿದ್ದರೆ ನೀವು ಸೂಚಿಸಿದ ಐಎನ್‌ಡಿಐಎ ಹೆಸರೇ ಇರಲಿ’ ಎಂದು ಹೇಳಿದ್ದರು ಎನ್ನಲಾಗಿದೆ.

Advertisement

ಇದೇ ವೇಳೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಕೈಗೊಂಡಿದ್ದ ಭಾರತ್‌ ಜೋಡೋ ಯಾತ್ರೆಯಿಂದ ಸ್ಫೂರ್ತಿಗೊಂಡು ಮೈತ್ರಿಕೂಟಕ್ಕೆ ಈ ಹೆಸರನ್ನು ಇರಿಸಲಾಗಿದೆ. ರಾಹುಲ್‌ ಅದನ್ನು ಸೂಚಿಸಿದ್ದು ಹೌದಾದರೂ, ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿಯವರೇ ಹೆಸರನ್ನು ನಿರ್ಧರಿಸಿದ್ದರು ಎಂದೂ ಹೇಳಲಾಗಿದೆ.

ವೈಮನಸ್ಸು ತಳ್ಳಿಹಾಕಿದ ಜೆಡಿಯು: ಈ ನಡುವೆ ನಿತೀಶ್‌ ಕೋಪಗೊಂಡಿದ್ದಾರೆ ಎಂಬ ವರದಿಗಳನ್ನು ಜೆಡಿಯು ಬಿಹಾರ ಘಟಕದ ಅಧ್ಯಕ್ಷ ರಂಜನ್‌ ಸಿಂಗ್‌ ಲಲ್ಲನ್‌ ತಳ್ಳಿಹಾಕಿದ್ದಾರೆ. ವಿಪಕ್ಷಗಳ ಒಕ್ಕೂಟದ ವಿರುದ್ಧ ಬಿಜೆಪಿ ನೇತೃತ್ವದ ಎನ್‌ಡಿಎ ಈಗ ಅಪ ಪ್ರಚಾರ ನಡೆಸಲಾರಂಭಿಸಿದೆ ಎಂದು ದೂರಿದ್ದಾರೆ.

ಎನ್‌ಡಿಎ ಮೈತ್ರಿಕೂಟಕ್ಕೆ 330 ಸ್ಥಾನ ಖಚಿತ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ 330 ಸ್ಥಾನಗಳು ಲಭಿಸಲಿವೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ.ಪಳನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನಲ್ಲಿ ಡಿಎಂಕೆ ಜತೆಗೆ ಗುರುತಿಸಿಕೊಂಡಿರುವ ಪಕ್ಷಗಳನ್ನು ಗುಲಾಮರು ಎಂದು ಅವರು ಟೀಕಿಸಿದ್ದಾರೆ.

ನಾವು ಅಸ್ಪೃಶ್ಯರು: ಜಾತ್ಯತೀತವಾದಿಗಳು ಎಂದು ಹೇಳಿಕೊಳ್ಳುತ್ತಿರುವ ಪಕ್ಷಗಳು ನಮಗೆ ಆಹ್ವಾನ ನೀಡುವುದಿಲ್ಲ. ಏಕೆಂದರೆ ನಾವು ರಾಜಕೀಯವಾಗಿ ಅವರಿಗೆ ಅಸ್ಪೃಶ್ಯರಾಗಿದ್ದೇವೆ ಎಂದು ಸಂಸದ ಅಸಾ ದುದ್ದೀನ್‌ ಒವೈಸಿ ನೇತೃತ್ವದ ಎಐಎಂಐಎಂ ಹೇಳಿದೆ.

ಇಂದು ಮೊದಲ ಸಭೆ
ಸಂಸತ್‌ನ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ವಿಪಕ್ಷಗಳ ಹೊಸ ಒಕ್ಕೂಟದ ಸಭೆ ಹೊಸದಿಲ್ಲಿಯಲ್ಲಿ ಗುರುವಾರ ನಡೆಯಲಿದೆ. ಸಂಸತ್‌ ಭವನದಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕೊಠಡಿಯಲ್ಲಿ ಈ ಸಭೆ ಆಯೋಜಿಸಲಾಗಿದೆ. ಕೇಂದ್ರ ಸರಕಾರದ ವಿರುದ್ಧ ಅಧಿವೇಶನದಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಗುತ್ತದೆ.

ಹಿಮಾಂತ ಪ್ರೊಫೈಲ್‌; ಕಾಂಗ್ರೆಸ್‌ ವಾಗ್ಧಾಳಿ
ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಶರ್ಮಾ ಬಿಸ್ವಾ ತಮ್ಮ ಟ್ವಿಟರ್‌ ಪ್ರೊಫೈಲ್‌ನಲ್ಲಿ “ಇಂಡಿಯಾ’ ಎಂಬುದನ್ನು ತೆಗೆದು, “ಭಾರತ್‌’ ಎಂದು ಬದಲಿಸಿದ್ದಾರೆ. ತಮ್ಮ ನಿರ್ಧಾರಕ್ಕೆ ಸಮರ್ಥನೆ ನೀಡಿರುವ ಹಿಮಾಂತ “ನಮ್ಮ ದೇಶಕ್ಕೆ ಇಂಡಿಯಾ ಎಂಬ ಹೆಸರನ್ನು ಬ್ರಿಟಿಷರು ನೀಡಿದರು. ಆ ಹೆಸರು ಏನಿದ್ದರೂ ವಸಾಹತುಶಾಹಿ ದಿನಗಳನ್ನು ನೆನಪಿಸುತ್ತದೆ’ ಎಂದಿದ್ದಾರೆ. ನಮ್ಮ ದೇಶದ ಹೆಸರು ಭಾರತ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಭಾರತಕ್ಕಾಗಿ ಹೋರಾಡಿದ್ದಾರೆ ಎಂದಿದ್ದಾರೆ.

ಹಿಮಾಂತ ಅವರ ನಡೆಯನ್ನು ಟೀಕಿಸಿರುವ ಕಾಂಗ್ರೆಸ್‌ “ನಿಮ್ಮ ಬಾಯಿಯಲ್ಲಿ ಹುಳಿ ದ್ರಾಕ್ಷಿಯೇ ಜಾಸ್ತಿ ಇದ್ದಂತಿದೆ. ಪ್ರಧಾನಿ ಮೋದಿಯವರ ನೆಚ್ಚಿನ ಯೋಜನೆಗಳಿಗೆಲ್ಲ “ಡಿಜಿಟಲ್‌ ಇಂಡಿಯಾ’, “ಸ್ಕಿಲ್‌ ಇಂಡಿಯಾ’, “ಸ್ಟಾರ್ಟಪ್‌ ಇಂಡಿಯಾ’ ಎಂದು ಹೆಸರು ಇಟ್ಟಿದ್ದೇಕೆ’ ಎಂದು ಪ್ರಶ್ನಿಸಿದೆ. ಬಿಜೆಪಿ ತನ್ನ ಟ್ವಿಟರ್‌ ಹ್ಯಾಂಡಲ್‌(ಬಿಜೆಪಿ4ಇಂಡಿಯಾ) ಅನ್ನು ಯಾವಾಗ ಬದಲಿಸುತ್ತದೆ ಎಂದು ಎನ್‌ಸಿಪಿ ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next