Advertisement

“ಜಾಗೃತ ಭಾರತ, ಸಮೃದ್ಧ ಭಾರತ’

02:39 PM Jun 22, 2021 | Team Udayavani |

ಅರಿವೇ ಗುರು, ಗುರುವೇ ದೇವರು ಅನ್ನುತ್ತಾರೆ. ದೈವತ್ವದ ಆ ಸ್ಥಿತಿಯೇ ಜಾಗೃತ ಸ್ಥಿತಿ. ಜಾಗೃತ ಮನಸ್ಸಿನ ಮೂಲವೇ ಸಕಾರಾತ್ಮಕ ಅರಿವು. ಈ ಅರಿವೇ ಜ್ಞಾನದಿಂದ ಉಂಟಾಗುವುದು. ಇಂತಹ ವೈಯಕ್ತಿಕ ಜಾಗೃತಿಯ ನಿಸ್ವಾರ್ಥ ರೂಪವೇ ಸಾಮಾಜಿಕ ಮತ್ತು ರಾಷ್ಟ್ರೀಯ ಜಾಗೃತಿಗೆ ಮೂಲ. ಈ ರಾಷ್ಟ್ರ ಜಾಗೃತಿಯೇ ಸಮೃದ್ಧ ಭಾರತದ ಪ್ರೇರಣಾ ಶಕ್ತಿ.

Advertisement

ಈ ಜ್ಞಾನವೆಂಬುದು ಮನುಷ್ಯನಲ್ಲಿಯೇ ಅಡಗಿರುವುದು. ಹೊರಗಿನಿಂದ ಯಾವ ಜ್ಞಾನವೂ ಬರುವುದಿಲ್ಲ. ನ್ಯೂಟನ್‌ ಗುರುತ್ವಾಕರ್ಷಣೆಯನ್ನು ಕಂಡುಹಿಡಿದನೆಂದು ನಾವು ಹೇಳುತ್ತೇವೆ. ಆದರೆ ಎಲ್ಲಿಯೋ ಒಂದು ಮೂಲೆಯಲ್ಲಿ ಕುಳಿತು ನ್ಯೂಟನ್‌ ತನ್ನನ್ನು ಕಂಡುಹಿಡಿಯಲು ಬರುವನು ಎಂದು ಅದು ಕಾಯುತ್ತಿತ್ತೇನು? ಅದು ಆತನ ಮನಸ್ಸಿನಲ್ಲಿಯೇ ಇದ್ದದ್ದು. ಸಮಯ ಬಂದಾಗ ಆ ಜ್ಞಾನ ಪ್ರಕಟಗೊಂಡಿತು. ಜಗತ್ತು ಗಳಿಸಿರುವ ಜ್ಞಾನವೆಲ್ಲ ಮನಸ್ಸಿನಿಂದ ಬಂದುದೇ ಆಗಿವೆ. ಜಗತ್ತಿನ ಅನಂತ ಪುಸ್ತಕ ಭಂಡಾರವೆಲ್ಲ ನಿಮ್ಮ ಮನಸ್ಸಿನಲ್ಲಿಯೇ ಇದೆ. ಬಾಹ್ಯ ಪ್ರಪಂಚವೆಂಬುದು ಸೂಚನೆ ಮಾತ್ರ. ಅದು ನಿಮ್ಮ ಮನಸ್ಸು ವಿಚಾರ ಮಾಡುವಂತೆ ಪ್ರೇರೆಪಿಸುವುದು ಎನ್ನುತ್ತಾರೆ ಸ್ವಾಮಿ ವಿವೇಕಾನಂದರು.

ಈ ವಿಚಾರ ಮಾಡುವಂತೆ ಮಾಡುವ ಪ್ರೇರಣೆಯೇ ಜಾಗೃತ ಪ್ರಜ್ಞೆ ಮತ್ತು ಇದು ಸದಾ ನಿಸ್ವಾರ್ಥ ಮತ್ತು ವಿವೇಕದಿಂದ ಕೂಡಿದ್ದಾಗ ಅದರಲ್ಲಿ ದೇಶ ಮತ್ತು ವ್ಯಕ್ತಿಯ ಸಮೃದ್ಧಿ ಅಡಗಿದೆ. ಹಸಿವೆ ಇಲ್ಲದಿದ್ದರೆ ಊಟ ವ್ಯರ್ಥ, ಉಪಯೋಗಿಸದಿದ್ದರೆ ಹಣ ವ್ಯರ್ಥ. ಇದರ ಜತೆಗೆ ಆ ಹಣ ಸಂಪಾದನೆಯ ಮಾರ್ಗ ಮತ್ತು ಉಪಯೋಗಿಸುವ ಉದ್ದೇಶ ಮಾನವೀಯತೆ ಮತ್ತು ನೈತಿಕತೆಯನ್ನು ಒಳಗೊಂಡಿರಬೇಕು. ಪ್ರಾಮಾಣಿಕ ಶ್ರಮದಿಂದ ಪಡೆದ ಹತ್ತು ರೂಪಾಯಿಯ ತೃಪ್ತಿ ಕಳ್ಳ ಮಾರ್ಗದಿಂದ ಸಂಪಾದಿಸಿದ ಕೋಟಿ ರೂಪಾಯಿ ಕೊಟ್ಟರೂ ದೊರೆಯದು. ಕೇವಲ ಹಣ, ಆಸ್ತಿ ಸಂಪಾದನೆ ಸಮೃದ್ಧಿಯಲ್ಲ. ಜ್ಞಾನ ಸಂಪಾದನೆ ಮತ್ತು ನ್ಯಾಯಯುತ ಹಣ- ಆಸ್ತಿ ಸಂಪಾದನೆ ಸಮೃದ್ಧಿ ಎನಿಸಿಕೊಳ್ಳುತ್ತದೆ. ಒಬ್ಬನ ವೈಯಕ್ತಿಕ ಸಮೃದ್ಧಿ ಅವನ ಶಿಷ್ಟಾಚಾರ, ಸಂಸ್ಕೃತಿ, ಸತ್‌-ಸಂಪ್ರದಾಯ ಮತ್ತು ನೈತಿಕತೆಗಳಾಗಿವೆ. ವ್ಯಕ್ತಿಯಿಂದ ರಾಷ್ಟ್ರ -ರಾಷ್ಟ್ರೀಯತೆ.

ಐತಿಹಾಸಿಕವಾಗಿ ನಮ್ಮ ಭವ್ಯ ಭಾರತ ಅಗೆದಷ್ಟು ಅಮೃತದಂತಹ ಫ‌ಲ ನೀಡಿದ ಭೂಮಿ. ಚಿನ್ನ- ಬೆಳ್ಳಿ- ಮುತ್ತು- ರತ್ನಗಳ ಆಗರ ಈ ಭರತ ಭೂಮಿ. ಭರತ ಭೂಮಿಯ ಅದೆಷ್ಟೋ ಆದರ್ಶ ರಾಜರ ಮಧ್ಯೆ ಬಂದ ಕೆಲವು ಸ್ವಾರ್ಥ ಮತ್ತು ನೀಚ ಬುದ್ಧಿಯ ಅರಸರು ಅನ್ಯ ದೇಶೀಯರ ಒಡೆದು ಆಳುವ ಕುಟಿಲತೆಗೆ ಬಲಿಯಾದದ್ದು ಮತ್ತು ಈಗಲೂ ಮುಂದುವರಿಯುತ್ತಿರುವುದು ವಿಪರ್ಯಾಸ. ಇದು ಅವರ ಆಂತರಿಕ ಸಮೃದ್ಧಿಯ ಕೊರತೆಯನ್ನು ತೋರಿಸುತ್ತದೆ. ರಾಷ್ಟ್ರ ಪ್ರೇಮ ಮತ್ತು ಭಕ್ತಿ ವೈಯಕ್ತಿಕ ಜೀವನವನ್ನೂ ಕೂಡ ಸಮೃದ್ಧಗೊಳಿಸುತ್ತದೆ. ಜತೆಗೆ ನೈತಿಕ ಜ್ಞಾನ ನೀಡುತ್ತದೆ. ಇದು ಜಾಗೃತ ಭಾರತ ಕಟ್ಟಲು ಪ್ರೇರಣೆಯಾಗುತ್ತದೆ.

ಇಂತಹ ವೃತ್ತಿ ನಿಷ್ಠೆ ಹಾಗೂ ದೇಶಪ್ರೇಮ ಇರುವ ಭಾರತೀಯ ಎಂದೂ ತನ್ನ ಅಧಿಕಾರ, ಪ್ರಭಾವಗಳಿಂದ ಬೇರೆಯವರಿಂದ ಕೆಟ್ಟ ಕೆಲಸ ಮಾಡಿಸುವುದಿಲ್ಲ ಮತ್ತು ಆತ ಯಾರ ಮುಂದೆಯೂ ಭ್ರಷ್ಟನಾಗುವುದಿಲ್ಲ. ಆತನ ಕರ್ತವ್ಯಕ್ಕಾಗಿ ಇನ್ನೊಬ್ಬರನ್ನು ಪೀಡಿಸುವುದಿಲ್ಲ. ನ್ಯಾಯಯುತವಾಗಿ, ಇತರರ ಶಾಪವಿಲ್ಲದೆ ಸಂಪಾದಿಸಿದ ಒಂದು ತುತ್ತು ಅನ್ನವು ಅದು ಸಮೃದ್ಧಿಯೇ ಆಗಿದೆ. ಬಿತ್ತಿದ್ದನ್ನೆ ಬೆಳೆಯಲು ಸಾಧ್ಯ, ಬಯಸಲೂ ಸಾಧ್ಯ. ಬೇವಿನ ಮರದಿಂದ ಮಾವು ಬಯಸಲು ಹೇಗೆ ತಾನೆ ಸಾಧ್ಯ?

Advertisement

ಸಾರ್ವಜನಿಕ ನಂಬಿಕೆ, ಮೌಲ್ಯಗಳನ್ನು ಗಾಳಿಗೆ ತೂರುವ ಭ್ರಷ್ಟಾಚಾರವು ಭಾರತದಲ್ಲಿ ಯೋಜನೆ ಹಾಗೂ ಅಭಿವೃದ್ಧಿ ಪ್ರಕ್ರಿಯೆಗಳನ್ನು ಹಳಿ ತಪ್ಪಿಸಿದೆ. ಭಾರತ ಸಾಧು- ಸಂತರು, ಜ್ಞಾನಿಗಳು, ವಿಜ್ಞಾನಿಗಳೂ ಹಾಗೂ ಸಂಸ್ಕೃತಿ, ಸಂಸ್ಕಾರ ಮತ್ತು ನೈತಿಕ ಮೌಲ್ಯಗಳಿಂದ ಸಮೃದ್ಧವಾದ ದೇಶ. ಆದರೂ ದುರಾಸೆಗಳು, ಭ್ರಷ್ಟಾಚಾರ, ಅನಾಚಾರಗಳು ತಾಂಡವವಾಡುತ್ತಿವೆ. ಆಸೆಯೇ ದುಃಖಕ್ಕೆ ಮೂಲ ಎಂದ ಬುದ್ಧನ ಮೂಲ ಸ್ಥಾನವಿದು. ಆದರೆ ಇತ್ತೀಚೆಗೆ ಭಾರತೀಯ ಮೌಲ್ಯ, ಸಂಸ್ಕೃತಿಗಳ ಮೇಲಿನ ಅಪನಂಬಿಕೆ, ಅನ್ಯ ದೇಶಿಯ ಸಂಸ್ಕೃತಿಗಳ ಅವಲಂಬನೆ, ಆಕರ್ಷಣೆಗಳು ನಮ್ಮ ದೇಶೀಯ ಸಂಸ್ಕಾರ ಸಮೃದ್ಧಿಯನ್ನು ಮಂಕುಗೊಳಿಸಿವೆ. ಜಾಗೃತ ಮತ್ತು ಪ್ರಜ್ಞಾವಂತ ನಾಗರಿಕತೆ ಜಾಗೃತ ಭಾರತವನ್ನು ಮರು ಸ್ಥಾಪಿಸಬಹುದು. ಈ ಜಾಗೃತಿ ಅನಾಗರಿಕತೆಯನ್ನು ಕೊನೆಗಾಣಿಸಿ ಭಾರತದ ಸಮೃದ್ಧತೆಗೆ ಕೊಡುಗೆ ನೀಡಬಹುದು. ಭ್ರಷ್ಟಾಚಾರವೆಂಬ ಹುಳು ಭಾರತವೆಂಬ ಕಲ್ಪವೃಕ್ಷವನ್ನು ಒಳ-ಒಳಗೆ ಕೊರೆಯುತ್ತಿದೆ. ಭಾರತದ ಸಮೃದ್ಧಿಯ ತಿರುಳು ನಶಿಸುತ್ತದೆ. ಇದನ್ನು ಕೇವಲ ಕಾನೂನು, ಶಿಕ್ಷೆಗಳಿಂದ ಕಡಿಮೆಗೊಳಿಸಲು, ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಭಾರತ ಜಾಗೃತವಾಗಬೇಕಿದೆ, ತನ್ನ ಒಡಲ ಅಮೋಘ ಸಮೃದ್ಧ ಜ್ಞಾನ ಸಂಪತ್ತು, ಮೌಲ್ಯಗಳಿಂದ ತುಂಬಿಕೊಳ್ಳಬೇಕಿದೆ.

ಭ್ರಷ್ಟಾಚಾರದಂತಹ ಅನಾಚಾರಗಳನ್ನು ತಡೆಯಲು ಭ್ರಷ್ಟಾಚಾರ ನಿಯಂತ್ರಣ ದಳಗಳ ದಾಳಿಯಿಂದ ಸಾಧ್ಯವಿಲ್ಲ. ಅದು ಕೇವಲ ಆ ವಿಷದ ಮುಳ್ಳಿನ ರೆಂಬೆ ಕೊಂಬೆಗಳನ್ನು ಕಡಿದಂತೆ ಆಗುತ್ತದೆ ಹೊರತು ಬುಡ ಸಮೇತ ನಾಶವಾಗದು. ಅವು ಆಮಿಷಗಳ ನೀರು ಬಿದ್ದಾಗ ಮತ್ತೆ ಚಿಗುರಿಕೊಳ್ಳುತ್ತವೆ. ಭಾರತೀಯ ಸಮೃದ್ಧಿಯ ಸಂಪತ್ತೆಂಬ ಅಂತರ್ಜಲವನ್ನು ಹೀರುತ್ತದೆ. ಇದರ ನಿರ್ಮೂಲನೆಗೆ ಉತ್ತಮ ನೈತಿಕ ಶಿಕ್ಷಣವೆಂಬ ಸಮೃದ್ಧಿ, ಸಾಮಾಜಿಕ ಕಳಕಳಿ ಮತ್ತು ಸ್ವಂತ ಹೊಣೆಗಾರಿಕೆಯಿಂದ ಮೂಡುವ ಪ್ರಜ್ಞಾಪೂರ್ವಕ ಜಾಗೃತಿಯಿಂದ ಸಾಧ್ಯ. ಇಂತಹ ಜಾಗೃತಿ ಮೂಡಲು ವಿಶ್ವ ಗುರು ಭಾರತದಲ್ಲಿ ನೈಸರ್ಗಿಕ ಸಂಪತ್ತಿನ ಜತೆಗೆ ನೈತಿಕ ಮತ್ತು ಜ್ಞಾನ ಸಂಪತ್ತಿಗೇನು ಕಡಿಮೆಯಿಲ್ಲ. ಭಾರತೀಯ ಸಮೃದ್ಧತೆ ಕೊಳ್ಳೆ ಹೊಡೆಯುವುದನ್ನು ಮತ್ಸ್ಯದ ಹೆಜ್ಜೆಯಂತೆ ಅದರ ಜಾಡು ಹಿಡಿಯುವುದು ಕಠಿನ. ಆದರೆ ಮತ್ಸ್ಯ ಯಂತ್ರ ಭೇದಿಸಿದ ಚರಿತ್ರೆಯುಳ್ಳ ದೇಶ ನಮ್ಮದು. ಜಾಗೃತ ಮನಸ್ಸು ಅಸಾಧ್ಯವನ್ನೂ ಸಾಧಿಸಬಲ್ಲದು ಎಂಬುದನ್ನು ಮರೆಯುವಂತಿಲ್ಲ. ಜಾಗೃತ ಭಾರತ ಸಮೃದ್ಧ ಭಾರತವನ್ನು ಕಟ್ಟಬಲ್ಲದು.

 

ದಿನೇಶ ಎಂ.

ಎಸ್‌.ಡಿ.ಎಂ. ಸ್ನಾತಕೋತ್ತರ ಪದವಿ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next