Advertisement

INDvsENG: ರಾಂಚಿಯಲ್ಲೂ ಮಿಂಚಿದರೆ ಸರಣಿ ಕೈವಶ

10:39 PM Feb 22, 2024 | Team Udayavani |

ರಾಂಚಿ: ಧೋನಿ ಊರಾದ ರಾಂಚಿಯಲ್ಲಿ ಭಾರತ-ಇಂಗ್ಲೆಂಡ್‌ ಶುಕ್ರವಾರದಿಂದ ಸರಣಿಯ 4ನೇ ಟೆಸ್ಟ್‌ ಪಂದ್ಯವನ್ನು ಆಡಲಿಳಿಯಲಿವೆ. ಹೈದರಾಬಾದ್‌ನಲ್ಲಿ ಮುಗ್ಗರಿಸಿದರೂ ವಿಶಾಖಪಟ್ಟಣ ಹಾಗೂ ರಾಜ್‌ಕೋಟ್‌ನಲ್ಲಿ ಜಯಭೇರಿ ಮೊಳಗಿಸಿದ ರೋಹಿತ್‌ ಪಡೆ ಭರ್ಜರಿ “ಕಮ್‌ ಬ್ಯಾಕ್‌’ ಮಾಡಿದೆ. ರಾಂಚಿಯಲ್ಲೂ ಗೆದ್ದರೆ ತವರಲ್ಲಿ ಸತತ 17ನೇ ಟೆಸ್ಟ್‌ ಸರಣಿಯನ್ನು ವಶಪಡಿಸಿಕೊಂಡ ಹೆಗ್ಗಳಿಕೆ ಟೀಮ್‌ ಇಂಡಿಯಾದ್ದಗಲಿದೆ.

Advertisement

2012ರಲ್ಲಿ ಅಲಸ್ಟೇರ್‌ ಕುಕ್‌ ನೇತೃ ತ್ವದ ಇಂಗ್ಲೆಂಡ್‌ ವಿರುದ್ಧ ಕೊನೆಯ ಸಲ ಸರಣಿ ಕಳೆದುಕೊಂಡ ಭಾರತ, ಅನಂತರ ತವರಲ್ಲಿ ಯಾರಿಗೂ ಸರಣಿ ಬಿಟ್ಟು ಕೊಟ್ಟದ್ದಿಲ್ಲ. ಈ ಅವಧಿಯಲ್ಲಿ ಆಡಿದ 47 ಟೆಸ್ಟ್‌ಗಳಲ್ಲಿ 37 ಗೆಲುವು ಕಂಡಿದೆ.

ಬ್ಯಾಟಿಂಗ್‌ ಗಟ್ಟಿಗೊಂಡಿದೆ:

ಕಳೆದ ರಾಜ್‌ಕೋಟ್‌ ಟೆಸ್ಟ್‌ ಪಂದ್ಯ ಆಡಲಿಳಿಯುವಾಗ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಬಗ್ಗೆ ಚಿಂತೆ ಕಾಡಿತ್ತು. ಆದರೆ ಜೈಸ್ವಾಲ್‌, ರೋಹಿತ್‌, ಗಿಲ್‌, ಸಫ‌ìರಾಜ್‌, ಜಡೇಜ ಸೇರಿಕೊಂಡು ಬ್ಯಾಟಿಂಗ್‌ ಸಮಸ್ಯೆಗೆ ದೊಡ್ಡ ಮಟ್ಟದಲ್ಲೇ ಪರಿಹಾರ ಸೂಚಿಸಿದ್ದಾರೆ. ಮುಖ್ಯವಾಗಿ ಜೈಸ್ವಾಲ್‌ ಅವರ ಸತತ 2ನೇ ಡಬಲ್‌ ಸೆಂಚುರಿ, ಚೊಚ್ಚಲ ಟೆಸ್ಟ್‌ನಲ್ಲೇ ಸಫ‌ìರಾಜ್‌ ಪ್ರದರ್ಶಿಸಿದ ಭರವಸೆಯ ಆಟ, ಜಡೇಜ ಅವರ ಆಲ್‌ರೌಂಡ್‌ ಶೋ, ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕುಸಿತಕ್ಕೆ ಸಿಲುಕಿದಾಗ ಶತಕ ಬಾರಿಸಿ ತಂಡವನ್ನು ಮೇಲೆತ್ತಿದ ರೋಹಿತ್‌ ಶರ್ಮ, ಗಿಲ್‌ ಅವರ 90 ಪ್ಲಸ್‌ ರನ್‌ ಸಾಧನೆಯೆಲ್ಲ ಭಾರತದ ಬ್ಯಾಟಿಂಗ್‌ ಸರದಿಯ ಹೈಲೈಟ್‌ ಆಗಿತ್ತು.

ಆದರೆ ರಜತ್‌ ಪಾಟಿದಾರ್‌ ಮಾತ್ರ ಈವರೆಗೆ ಸಿಕ್ಕಿದ ಅವಕಾಶಗಳನ್ನೆಲ್ಲ ವ್ಯರ್ಥಗೊಳಿಸಿದ್ದಾರೆ. ಇವರಿಗೆ ಇನ್ನೊಂದು ಚಾನ್ಸ್‌ ನೀಡಬೇಕೇ, ಬೇಡವೇ ಎಂಬ ಸಂದಿಗ್ಧ ಪರಿಸ್ಥಿತಿ ತಂಡದ ಆಡಳಿತ ಮಂಡಳಿಯದ್ದು. ಒಂದು ವೇಳೆ ಪಾಟಿದಾರ್‌ ಅವರನ್ನು ಕೈಬಿಟ್ಟರೆ ಕರ್ನಾಟಕದ ಎಡಗೈ ಬ್ಯಾಟರ್‌ ದೇವದತ್ತ ಪಡಿಕ್ಕಲ್‌ ಟೆಸ್ಟ್‌ ಕ್ಯಾಪ್‌ ಧರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಪ್ರಸಕ್ತ ಸೀಸನ್‌ನಲ್ಲಿ ರನ್‌ ಪ್ರವಾಹವನ್ನೇ ಹರಿಸುತ್ತ ಬಂದಿರುವ ಪಡಿಕ್ಕಲ್‌ ಮಧ್ಯಮ ಸರದಿಗೆ ಯೋಗ್ಯ ಆಯ್ಕೆ ಎಂಬುದರಲ್ಲಿ ಎರಡು ಮಾತಿಲ್ಲ. ಇದು ಪಡಿಕ್ಕಲ್‌ ಮುಂದಿರುವ ಅಂತಿಮ ಅವಕಾಶವೂ ಹೌದು. ಮುಂದೆ ಕೆ.ಎಲ್‌. ರಾಹುಲ್‌ ಮರಳಿದರೆ, ವಿರಾಟ್‌ ಕೊಹ್ಲಿ ವಾಪಸಾದರೆ ಪಡಿಕ್ಕಲ್‌ ಟೀಮ್‌ ಇಂಡಿ ಯಾಕ್ಕೆ ಆಯ್ಕೆಯಾಗುವುದೇ ಕಷ್ಟವಿದೆ.

Advertisement

ಬುಮ್ರಾ ಸ್ಥಾನಕ್ಕೆ ಯಾರು?:

ಈ ಬಾರಿ ವೇಗದ ಬೌಲಿಂಗ್‌ ವಿಭಾಗದಲ್ಲಿ ಭಾರತಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಸರಣಿಯಲ್ಲಿ ಸರ್ವಾಧಿಕ 17 ವಿಕೆಟ್‌ ಉರುಳಿಸಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದ ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್‌ಪ್ರೀತ್‌ ಬುಮ್ರಾ ಅನುಪಸ್ಥಿತಿಯೇ ಇದಕ್ಕೆ ಕಾರಣ. ವಿಶಾಖಪಟ್ಟಣ ಪಂದ್ಯದ 2ನೇ ದಿನದಾಟದಲ್ಲಿ ಇವರ ರಿವರ್ಸ್‌ ಸ್ವಿಂಗ್‌ಗೆ 6 ವಿಕೆಟ್‌ ಉರುಳಿದ ಕಾರಣ ಭಾರತಕ್ಕೆ ಸರಣಿಯನ್ನು ಸಮಬಲಕ್ಕೆ ತರಲು ಸಾಧ್ಯವಾಗಿತ್ತೆಂಬುದನ್ನು ಮರೆ ಯುವಂತಿಲ್ಲ.

ಮೊಹಮ್ಮದ್‌ ಸಿರಾಜ್‌ ಅವರೇ ಈಗ ವೇಗದ ವಿಭಾಗದ ಅನುಭವಿ ಬೌಲರ್‌. ಇವರಿಗೆ ಜತೆ ನೀಡಲು ಇಬ್ಬರು ಬಂಗಾಲಿಗಳಾದ ಮುಕೇಶ್‌ ಕುಮಾರ್‌ ಮತ್ತು ಆಕಾಶ್‌ ದೀಪ್‌ ಮಧ್ಯೆ ಸ್ಪರ್ಧೆ ಇದೆ. ಆದರೆ ಅಂತಿಮವಾಗಿ ಭಾರತದ ತ್ರಿವಳಿ ಸ್ಪಿನ್ನರ್‌ಗಳೇ ಪ್ರಭುತ್ವ ಸಾಧಿಸುವ ನಿರೀಕ್ಷೆ ಇರುವುದರಿಂದ ಬುಮ್ರಾ ಗೈರಿನ ಬಗ್ಗೆ ವಿಶೇಷವಾಗಿ ಚಿಂತಿಸಬೇಕಿಲ್ಲ ಎಂದೂ ಸಮಾಧಾನಪಡಬಹುದು.

ಬಾಝ್ ಬಾಲ್‌’ ಠುಸ್‌:

ಇಂಗ್ಲೆಂಡಿಗರ “ಬಾಝ್ ಬಾಲ್‌’ ಕ್ರಿಕೆಟ್‌ ಇದೀಗ ಠುಸ್‌ ಆಗಿದೆ. ಇದಕ್ಕೆ ಅಲ್ಲಿನ ಮಾಜಿಗಳೇ ಟೀಕಿಸುತ್ತಿದ್ದಾರೆ. ಎಲ್ಲ ಕಾಲಕ್ಕೂ ಇದು ನಡೆಯದು ಎಂದು ಬುದ್ಧಿವಾದವನ್ನೂ ಹೇಳಿದ್ದಾರೆ. ಇದು ಸ್ಟೋಕ್ಸ್‌ ಬಳಗಕ್ಕೆ ಅರ್ಥವಾಗಬೇಕಿದೆ.

ರಾಜ್‌ಕೋಟ್‌ ಟೆಸ್ಟ್‌ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಎದುರಾದ ಬ್ಯಾಟಿಂಗ್‌ ಕುಸಿತ ಕಂಡಾಗ ಇಂಗ್ಲೆಂಡ್‌ ಸರಣಿಗೆ ಮರಳುವುದು ಸುಲಭವಲ್ಲ ಎಂದೇ ಭಾವಿಸಬೇಕಿದೆ.

ಇಂಗ್ಲೆಂಡ್‌ ಆಡುವ ಬಳಗದಲ್ಲಿ ರಾಬಿನ್ಸನ್‌, ಶೋಯಿಬ್‌ ಬಶೀರ್‌ :

ಎಂದಿನಂತೆ ಇಂಗ್ಲೆಂಡ್‌ ಒಂದು ದಿನ ಮುಂಚಿತವಾಗಿ ತನ್ನ ಆಡುವ ಬಳಗವನ್ನು ಪ್ರಕಟಿಸಿದೆ. ಮಾರ್ಕ್‌ ವುಡ್‌ ಮತ್ತು ರೆಹಾನ್‌ ಅಹ್ಮದ್‌ ಅವರನ್ನು ಕೈಬಿಟ್ಟಿದ್ದು, ಮಧ್ಯಮ ವೇಗಿ ಓಲೀ ರಾಬಿನ್ಸನ್‌ ಮತ್ತು ಸ್ಪಿನ್ನರ್‌ ಶೋಯಿಬ್‌ ಬಶೀರ್‌ ಅವರನ್ನು ಸೇರಿಸಿಕೊಂಡಿದೆ.

ಇಂಗ್ಲೆಂಡ್‌ ಇಲೆವೆನ್‌: ಜಾಕ್‌ ಕ್ರಾಲಿ, ಬೆನ್‌ ಡಕೆಟ್‌, ಓಲೀ ಪೋಪ್‌, ಜೋ ರೂಟ್‌, ಜಾನಿ ಬೇರ್‌ಸ್ಟೊ, ಬೆನ್‌ ಸ್ಟೋಕ್ಸ್‌ (ನಾಯಕ), ಬೆನ್‌ ಫೋಕ್ಸ್‌, ಟಾಮ್‌ ಹಾಟಿÉì, ಓಲೀ ರಾಬಿನ್ಸನ್‌, ಜೇಮ್ಸ್‌ ಆ್ಯಂಡರ್ಸನ್‌, ಶೋಯಿಬ್‌ ಬಶೀರ್‌.

ರಾಂಚಿ ಟೆಸ್ಟ್‌ ದಾಖಲೆ: 

ರಾಂಚಿ: ರಾಂಚಿಯಲ್ಲಿ ಮೊದಲ ಟೆಸ್ಟ್‌ ನಡೆದದ್ದು 2017 ರಲ್ಲಿ. ಎದುರಾಳಿ ಆಸ್ಟ್ರೇಲಿಯ. ದೊಡ್ಡ ಮೊತ್ತದ ಈ ಪಂದ್ಯ ಡ್ರಾಗೊಂಡಿತ್ತು. ಆಸ್ಟ್ರೇಲಿಯದ 451ಕ್ಕೆ ಉತ್ತರವಾಗಿ ಭಾರತ 9ಕ್ಕೆ 603 ರನ್‌ ಪೇರಿಸಿ ಡಿಕ್ಲೇರ್‌ ಮಾಡಿತ್ತು. ಆಸೀಸ್‌ ಪರ ನಾಯಕ ಸ್ಮಿತ್‌ 178, ಮ್ಯಾಕ್ಸ್‌ ವೆಲ್‌ 104; ಭಾರತದ ಪರ ಪೂಜಾರ 202, ಸಾಹಾ 117 ರನ್‌ ಬಾರಿಸಿದ್ದರು. ಜಡೇಜ ಒಟ್ಟು 9 ವಿಕೆಟ್‌ ಕೆಡವಿದ್ದರು.

2ನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯವನ್ನು 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಾಗಿತ್ತು. ವಿರಾಟ್‌ ಕೊಹ್ಲಿ ಪಡೆ ಇದನ್ನು ಇನ್ನಿಂಗ್ಸ್‌ ಹಾಗೂ 202 ರನ್‌ ಅಂತರದಿಂದ ಜಯಿಸಿತ್ತು. ಭಾರತ 9ಕ್ಕೆ 497 ರನ್‌ ಪೇರಿಸಿ ಡಿಕ್ಲೇರ್‌ ಮಾಡಿದರೆ, ಫಾಲೋಆನ್‌ಗೆ ತುತ್ತಾದ ದ. ಆಫ್ರಿಕಾ 162 ಮತ್ತು 133ಕ್ಕೆ ಆಟ ಮುಗಿಸಿತ್ತು. ರೋಹಿತ್‌ 212, ಕೊಹ್ಲಿ 115 ರನ್‌ ಬಾರಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next