Advertisement

ಎರಡು ವರ್ಷದಲ್ಲಿ 13 ದೇಗುಲಗಳಲ್ಲಿ ಕಳ್ಳತನ

11:44 PM Feb 27, 2020 | Sriram |

ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಹೆಚ್ಚುತ್ತಿರುವ ಕಳವು ಪ್ರಕರಣಗಳು ದೇಗುಲಗಳ ಆಡಳಿತ ಮಂಡಳಿಗಳನ್ನು ಮಾತ್ರವಲ್ಲದೆ ಆಸ್ತಿಕ ಸಮುದಾಯದ ತೀವ್ರ ಆತಂಕಕ್ಕೂ ಕಾರಣವಾಗಿದೆ. ಕಳ್ಳರ ಸುಳಿವೂ ಪತ್ತೆಯಾಗದೇ ಇರುವುದು ಪೊಲೀಸರ ಮೇಲೆ ಇನ್ನಷ್ಟು ಒತ್ತಡವನ್ನೂ ಸೃಷ್ಟಿಸಿದೆ.

Advertisement

ಕುಂದಾಪುರ: ಕಳೆದ ಒಂದು ವಾರದೊಳಗೆ ಕುಂದಾಪುರ ಉಪ ವಿಭಾಗ ವ್ಯಾಪ್ತಿಯ 3 ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣ ನಡೆದಿದೆ. ಇನ್ನು 2018ರಿಂದ 2020ರ ಫೆ. 26ರ ವರೆಗೆ ಬರೋಬ್ಬರಿ 13 ದೇಗುಲಗಳಿಗೆ ಕಳ್ಳರು ಕನ್ನಹಾಕಿದ್ದು, ಇದರಲ್ಲಿ ಈ ವರೆಗೆ ಯಾವುದೇ ಪ್ರಕರಣ ದಲ್ಲಿಯೂ ಕಳ್ಳರ ಸುಳಿವು ಮಾತ್ರ ಪತ್ತೆಯೇ ಆಗಿಲ್ಲ.

2,035 ಚದರ ಕಿ.ಮೀ. ವ್ಯಾಪ್ತಿಯ ಕುಂದಾಪುರ ಉಪ ವಿಭಾಗದ 7 ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ 2018 ರಿಂದ ಈವರೆಗೆ ಒಟ್ಟು 13 ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣ ನಡೆದಿದೆ. ಆದರೆ ಇದರಲ್ಲಿ ಯಾವುದೇ ಪ್ರಕರಣದಲ್ಲಿಯೂ ಕಳ್ಳರ ಬಗ್ಗೆ ಮಾತ್ರ ಯಾವುದೇ ಸುಳಿವು ಸಿಗದಿರುವುದು ವಿಪರ್ಯಾಸವೇ ಸರಿ.

ಯಾವ್ಯಾವ ಠಾಣೆಗಳಲ್ಲಿ?
ಗಂಗೊಳ್ಳಿ ಠಾಣೆ ವ್ಯಾಪ್ತಿಯಲ್ಲಿ 2018ರಲ್ಲಿ ಹೊಸಾಡು, 2019ರಲ್ಲಿ ತ್ರಾಸಿಯ ಚೌಡೇಶ್ವರಿ, 2020ರಲ್ಲಿ ಆಲೂರು ಗ್ರಾಮದ ಮಹಾಲಿಂಗೇಶ್ವರ ಹಾಗೂ ಮಾರಿಕಾಂಬಾ ದೇವಸ್ಥಾನ, ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ 2018ರಲ್ಲಿ ಮುದೂರಿನ ಬ್ರಹ್ಮಲಿಂಗೇಶ್ವರ ದೇಗುಲ, ಬೈಂದೂರು ಠಾಣಾ ವ್ಯಾಪ್ತಿಯಲ್ಲಿ 2018ರಲ್ಲಿ ಬಿಜೂರು ದುರ್ಗಾಪರಮೇಶ್ವರೀ ಅರೆಕಲ್ಲು, ಉಪ್ಪುಂದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, 2020ರಲ್ಲಿ ಬಡಾಕೆರೆ ಶ್ರೀ ಲಕ್ಷ್ಮೀ ಜನಾರ್ದನ ದೇಗುಲ, ಕುಂದಾಪುರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ 2018ರಲ್ಲಿ ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನ, ಕುಂದಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ 2019ರಲ್ಲಿ ತಲ್ಲೂರು ಸಮೀಪದ ರಾಜಾಡಿ ದೇಗುಲ, ಅಮಾಸೆಬೈಲು ಠಾಣಾ ವ್ಯಾಪ್ತಿಯಲ್ಲಿ 2018 ರಲ್ಲಿ ಶಾಂತಕೇರಿ ದೇವಸ್ಥಾನ ಕೆರೆಕಟ್ಟೆ, ಹೊಸಂಗಡಿಯ ವಿರುಪಾಕ್ಷ ದೇವಸ್ಥಾನದಲ್ಲಿ ಕಳ್ಳತನ ಪ್ರಕರಣ ನಡೆದಿದೆ.

2018ರಿಂದ ಈ ವರೆಗೆ ಶಂಕರನಾರಾಯಣ ಪೊಲೀಸ್‌ ಠಾಣಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಯಾವುದೇ ಕಳ್ಳತನ ಪ್ರಕರಣಗಳು ನಡೆದಿಲ್ಲದಿರುವುದು ಸಂತಸಕರ ಸಂಗತಿ.

Advertisement

ವಾರದಲ್ಲಿ 3 ಪ್ರಕರಣ
ಫೆ. 21ರಂದು ಆಲೂರು ಗ್ರಾಮದ ಶ್ರೀ ಮಹಾಲಿಂಗೇಶ್ವರ, ಫೆ. 22ರಂದು ಮಾರಿಕಾಂಬಾ ದೇವಸ್ಥಾನ, ಫೆ. 25 ರಂದು ನಾವುಂದದ ಬಡಾಕೆರೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಹೀಗೆ ಕೇವಲ ಒಂದೇ ವಾರದೊಳಗೆ 3 ದೇವಸ್ಥಾಗಳಲ್ಲಿ ಕಳ್ಳತನ ಪ್ರಕರಣ ನಡೆದಿದೆ.

2016ರಲ್ಲಿ ಇತಿಹಾಸ ಪ್ರಸಿದ್ಧ ಸೌಕೂರು ದೇವಸ್ಥಾನಗಳಲ್ಲಿ ಒಂದೇ ವರ್ಷದಲ್ಲಿ ಎರಡೆರಡು ಬಾರಿ ಕಳ್ಳತನ ಪ್ರಕರಣ ನಡೆದಿದ್ದರೂ, ಕಳ್ಳರ ಸುಳಿವು ಮಾತ್ರ ಈವರೆಗೆ ಪತ್ತೆಯಾಗಲೇ ಇಲ್ಲ.

ಸಿಸಿಟಿವಿ ಅಳವಡಿಕೆಗೆ ಮನವಿ
ಇತ್ತೀಚಿನ ದಿನಗಳಲ್ಲಿ ದೇಗುಲಗಳ ಕಳ್ಳತನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಳ್ಳತನ ಆಗದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಕುಂದಾಪುರ ಪೊಲೀಸ್‌ ಉಪವಿಭಾಗದ ಸುಮಾರು 170 ದೇವಸ್ಥಾನಗಳ ಆಡಳಿತ ಮಂಡಳಿಯವರ ಸಭೆಯನ್ನು ಕಳೆದ ರವಿವಾರ ಕುಂದಾಪುರದಲ್ಲಿ ನಡೆಸಲಾಯಿತು. ದೇವಸ್ಥಾನಗಳಿಗೆ ಸಿಸಿ ಕೆಮೆರಾಗಳನ್ನು ಅಳವಡಿಸಿಕೊಳ್ಳುವ ಬಗ್ಗೆ, ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಿಸಿಕೊಳ್ಳುವ ಕುರಿತು, ದೇವಸ್ಥಾನಕ್ಕೆ ಸಂಬಂಧಿಸಿದ ಚಿನ್ನಾಭರಣಗಳನ್ನು ಸೇಫ್ ಲಾಕರ್‌ನಲ್ಲಿ ಇಡುವ ಕುರಿತು ಮಾಹಿತಿ ನೀಡಲಾಯಿತು. ಸೈನ್‌ಇನ್‌ ಸೆಕ್ಯುರಿಟಿ ಸಂಸ್ಥೆಯವರು ಈಗಗಾಲೇ ಸೇಫ್ ಕುಂದಾಪುರ ಎಂಬ ಪರಿಕಲ್ಪನೆಯಲ್ಲಿ ದೇವಸ್ಥಾನಗಳಿಗೂ ಸಿಸಿಟಿವಿ ಅಳವಡಿಸಿ ಎನ್ನುವುದಾಗಿ ಸಭೆಯಲ್ಲಿ ಕುಂದಾಪುರ ಎಎಸ್‌ಪಿ ಹರಿರಾಮ್‌ ಶಂಕರ್‌ ಮನವಿ ಮಾಡಿಕೊಂಡಿದ್ದರು.

ಮುಂಜಾಗ್ರತಾ ಕ್ರಮ ಅವಶ್ಯಕ
ದೇವಸ್ಥಾನಗಳಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳಿಗೆ ಪ್ರಮುಖ ಕಾರಣ ದೇವಸ್ಥಾನದ ಆಡಳಿತ ಮಂಡಳಿಯವರು ಸುರಕ್ಷತೆ ಬಗ್ಗೆ ತೀರಾ ನಿರ್ಲಕ್ಷé ವಹಿಸುತ್ತಿರುವುದು ಹಾಗೂ ಕಳ್ಳತನ ಪ್ರಕರಣ ನಡೆದ ಬಳಿಕ ಕಳ್ಳರ ಪತ್ತೆ ಕಾರ್ಯಾಚರಣೆಯನ್ನು ಗಂಭೀರವಾಗಿ ಪರಿಗಣಿಸದೇ ಇರುವುದು. ಇನ್ನು ಎಲ್ಲ ದೇವಸ್ಥಾನಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡುವುದು ಅಷ್ಟು ಸುಲಭವಲ್ಲ. ಕೆಲ ದೇಗುಲಗಳ ವಾರ್ಷಿಕ ಆದಾಯ ಅಲ್ಲಿನ ಪೂಜೆ, ಇನ್ನಿತರ ವೆಚ್ಚಕ್ಕೆ ಸಾಕಾಗುವುದಿಲ್ಲ. ಇನ್ನು ಸಿಸಿಟಿವಿ ಅಳವಡಿಸಿದರೆ ಹೇಗೆ ನಿರ್ವಹಣೆ ಮಾಡುವುದು.
– ಬಿ. ಅಪ್ಪಣ್ಣ ಹೆಗ್ಡೆ, ಧರ್ಮದರ್ಶಿಗಳು, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಪೊಲೀಸ್‌ ಇಲಾಖೆಯಿಂದ ಈಗಾಗಲೇ ಕುಂದಾಪುರದಲ್ಲಿ 170 ದೇವಸ್ಥಾನಗಳ ಪ್ರಮುಖರ ಸಭೆ ಕರೆದು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಸೂಚನೆ ನೀಡಲಾಗಿದೆ. ಇನ್ನು ಕಳ್ಳತನ ಪ್ರಕರಣಗಳ ಕುರಿತು ಸುಳಿವು ಪತ್ತೆಗೆ ಇಲಾಖೆಯಿಂದ ಎಲ್ಲ ರೀತಿಯಿಂದಲೂ ಪ್ರಯತ್ನ ಮಾಡಲಾಗುತ್ತಿದೆ. ಇತ್ತೀಚೆಗೆ ನಡೆದ 3 ಕಳವು ಪ್ರಕರಣಗಳನ್ನು ತನಿಖೆ ಮಾಡಲಾಗುತ್ತಿದೆ.
– ಕುಮಾರಚಂದ್ರ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ, ಉಡುಪಿ

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next