Advertisement

ಮಹಿಳೆಯರ ಮೇಲಿನ ಸೈಬರ್‌ ಅಪರಾಧಗಳ ಸಂಖ್ಯೆ ಹೆಚ್ಚಳ

10:28 AM Jul 14, 2019 | keerthan |

ಉಡುಪಿ: ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಮೇಲಿನ ಸೈಬರ್‌ ಅಪರಾಧಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್‌, ಪೊಲೀಸ್‌ ಠಾಣೆಗಳಲ್ಲಿನ “ನಿರ್ಭಯ’ ನಿಧಿಯೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂದಿದ್ದಾರೆ.

Advertisement

ಉದಯವಾಣಿಯೊಂದಿಗಿನ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ ಅವರು, ಆಯೋಗಕ್ಕೆ ಸಲ್ಲಿಕೆಯಾಗುತ್ತಿರುವ ಪ್ರಕರಣಗಳು 2 ವರ್ಷಗಳಿಂದ ಹೆಚ್ಚುತ್ತಿವೆ. 1990ರಲ್ಲಿ ರಾಷ್ಟ್ರೀಯ ಆಯೋಗ ಆರಂಭಗೊಂಡಾಗ ಪ್ರಕರಣಗಳು ಹೆಚ್ಚಿದ್ದವು. ಮಧ್ಯ ದಲ್ಲಿ ಸ್ವಲ್ಪ ಕಡಿಮೆಯಾಯಿತು. ಈಗ ಮತ್ತೆ ಹೆಚ್ಚಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ನಮ್ಮ ಎನ್‌ಆರ್‌ಐ ಸೆಲ್‌ನಲ್ಲೂ ಪ್ರಕರಣಗಳು ಹೆಚ್ಚುತ್ತಿವೆ ಎಂದಿದ್ದಾರೆ.

ನಿರ್ಭಯ ನಿಧಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅತ್ಯಾಚಾರಕ್ಕೆ ಒಳಗಾದ ಹೆಮ್ಮಕ್ಕಳಿಗೆ ವೈದ್ಯಕೀಯ, ಶೈಕ್ಷಣಿಕ ನೆರವಿಗೆ ಇರುವ “ನಿರ್ಭಯ’ ನಿಧಿಯನ್ನು ಪೊಲೀಸ್‌ ಇಲಾಖೆ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಅದಕ್ಕೂ ಕ್ರಮ ಕೈಗೊಳ್ಳಬೇಕಿದೆ ಎಂದರಲ್ಲದೇ, ಜಿಲ್ಲೆಯಲ್ಲಿ ಮಹಿಳಾ ಠಾಣೆಗಳಿರಬೇಕೆಂಬ ನಿಯಮ ವಿದ್ದರೂ ಕೆಲವೆಡೆ ಸಮರ್ಪಕವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅನುಷ್ಠಾನಗೊಳ್ಳದ ಯೋಜನೆಗಳ ಕುರಿತ ಮತ್ತೂಂದು ಪ್ರಶ್ನೆಗೆ, ಉಡುಪಿಯಲ್ಲಿ ಮಾತ್ರ ಸಖೀ ಒನ್‌ ಸ್ಟಾಪ್‌ ಸೆಂಟರ್‌ ಸ್ಥಾಪಿಸಲಾಗಿದೆ. ಇದು ಎಲ್ಲ ಜಿಲ್ಲೆಗಳಲ್ಲೂ ಸ್ಥಾಪನೆಯಾಗ ಬೇಕಿದೆ. ಕಟ್ಟಡ ನಿರ್ಮಾಣ ಕಾರ್ಮಿಕ ಮಹಿಳೆಯರ ಮಕ್ಕಳಿಗಾಗಿ ಸಂಚಾರಿ ಅಂಗನವಾಡಿ ಕೇಂದ್ರಗಳನ್ನು ತೆರೆಯ ಬೇಕಿದೆ. ಜಿಲ್ಲಾಸ್ಪತ್ರೆಗಳಲ್ಲಿ “ಗೆಳತಿ’ ಕೌಂಟರ್‌ ಆಗಬೇಕಿದೆ. ಇವುಗಳನ್ನು ಆರಂಭಿ ಸುವಂತೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರ. ಕಾರ್ಯದರ್ಶಿಯವರನ್ನು ಆಗ್ರಹಿಸಿದ್ದೇವೆ. ರಾಜ್ಯ ವಸತಿ ನಿಲಯಗಳಲ್ಲಿ, ಒನ್‌ ಸ್ಟಾಪ್‌ ಸೆಂಟರ್‌ಗಳಲ್ಲಿರುವ ಸಂತ್ರಸ್ತ ರಿಗೆ, ಮಹಿಳಾ ಕೈದಿಗಳಿಗೆ ಕೌಶಲ ಅಭಿವೃದ್ಧಿ ಯೋಜನೆ ಯನ್ನು ಜಾರಿಗೊಳಿಸಬೇಕು. ಇದರೊಂದಿಗೆ ಕಡತದಲ್ಲಿರುವ ಶಿಶುಪಾಲನ ಕೇಂದ್ರಗಳನ್ನು ನಮಗೆ ವಹಿಸಿ ಕೊಡುವಂತೆ ಸಮಾಜ ಕಲ್ಯಾಣ ಮಂಡಳಿಯನ್ನು ಕೋರಿದ್ದೇವೆ ಎಂದರು.

ಪುತ್ತೂರಿನ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಘಟನೆಗೆ ಸಂಬಂಧಿಸಿ ಸುಮೊಟೊ ಪ್ರಕರಣ ದಾಖಲಿಸಿ ದ್ದೇವೆ. ಈ ಪ್ರಕರಣದಲ್ಲಿ ಅಫೀಮು, ಡ್ರಗ್ಸ್‌ ದೂರುಗಳು ಕೇಳಿಬರುತ್ತಿವೆ. ಈ ದೃಷ್ಟಿಯಿಂದಲೇ ಗಂಡುಮಕ್ಕಳಿಗೂ ಜಾಗೃತಿ ಮೂಡಿಸಬೇಕಿದೆ ಎಂದರು.

Advertisement

ಕಿರುಕುಳವನ್ನು ತಡೆಗಟ್ಟಲು ಜಾಗೃತಿ ಮೂಡಿಸು ವುದು, ಸಂತ್ರಸ್ತ ಮಹಿಳೆಯರಿಗೆ ಬೇಕಾದ ಕಾನೂನು, ವೈದ್ಯಕೀಯ, ಶೈಕ್ಷಣಿಕ ಸಹಿತ ನೆರವು ಒದಗಿಸುವುದು, ಲೆಕ್ಕದಲ್ಲಿ ತೋರಿಸುವುದಕ್ಕಿಂತ ಕಡಿಮೆ ವೇತನ ನೀಡುವ ಕಾರ್ಖಾನೆಗಳ ವಿರುದ್ಧವೂ ಕ್ರಮ ಜರಗಿ ಸುವುದು ಇತ್ಯಾದಿ ನಮ್ಮ ಕೆಲಸ ಎಂದರು.

ರಾಷ್ಟ್ರೀಯ, ರಾಜ್ಯ ಮಹಿಳಾ ಆಯೋಗದ ವ್ಯಾಪ್ತಿಗಳ ಬಗ್ಗೆ ವಿವರಿಸಿ, ರಾಜ್ಯ ಆಯೋಗ ರಾಜ್ಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದರೆ ನಮ್ಮದು ರಾಷ್ಟ್ರ ವ್ಯಾಪ್ತಿ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ ನನ್ನ ವ್ಯಾಪ್ತಿ. ಇತರ ರಾಜ್ಯಗಳಿಗೆ ಭೇಟಿ ಕೊಡುವ ಅಧಿಕಾರವೂ ಇದೆ ಎಂದರು. ಆಯೋಗದಲ್ಲಿ ವರ್ಷಕ್ಕೆ 35ರಿಂದ 40 ಸಾವಿರ, ಕರ್ನಾಟಕದಲ್ಲಿ ಸುಮಾರು 3 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಬಿಹಾರ, ಉತ್ತರ ಪ್ರದೇಶಗಳಲ್ಲಿ ಅತಿ ಹೆಚ್ಚು ಪ್ರಕರಣಗಳಿವೆ. ನಾವು ತೀರ್ಪು ಕೊಟ್ಟ ಬಳಿಕವೂ ನ್ಯಾಯಾಲಯಗಳಿಗೆ ಹೋಗಬಹುದು. ಆ ಸಂದರ್ಭಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದ ಮೂಲಕ ನ್ಯಾಯವಾದಿಗಳ ಒದಗಣೆ ಮತ್ತಿತರ ಸಹಾಯ ನೀಡಲಾಗುವುದು ಎಂದರು. ಆಯೋಗದಲ್ಲಿ ಐವರು ಸದಸ್ಯರು ಮತ್ತು ಅಧ್ಯಕ್ಷರು ಇರಬೇಕು. ಆದರೆ ಇದುವರೆಗೆ ಪೂರ್ಣ ಪ್ರಮಾಣದಲ್ಲಿ ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣದಲ್ಲಿ ಆಯೋಗ ರಚನೆಯಾಗಿದೆ ಎನ್ನುತ್ತಾರೆ ಅವರು.

ಶ್ಯಾಮಲಾ ಕುಂದರ್‌ ಬಿಜೆಪಿಯಲ್ಲಿ ತಳಮಟ್ಟದಿಂದ ಬೆಳೆದವರು. ಉಡುಪಿ ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ಕಾರ್ಯದರ್ಶಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆಯಾಗಿ ಹಲವು ಹೋರಾಟಗಳಲ್ಲಿ ತೊಡಗಿಕೊಂಡವರು. ಆಯೋಗದ ಸದಸ್ಯರಿಗೆ ಬಿಸಿನೆಸ್‌ ಕ್ಲಾಸ್‌ ಟಿಕೆಟ್‌ನಲ್ಲಿ ವಿಮಾನಯಾನ ನಡೆಸಬಹುದಾದರೂ ಅನಗತ್ಯ ದುಂದು ವೆಚ್ಚ ತಡೆಯಲು ಇಕಾನಮಿ ಕ್ಲಾಸ್‌ ನಲ್ಲೇ ಪ್ರಯಾಣಿಸುವುದಾಗಿ ತಿಳಿಸುತ್ತಾರೆ ಅವರು.

Advertisement

Udayavani is now on Telegram. Click here to join our channel and stay updated with the latest news.

Next