Advertisement

Rice rate: ಹೆಚ್ಚಿದ ಅಕ್ಕಿ ರೇಟು:ಭತ್ತ ಮಾರಾಟಕ್ಕೆ ಹಿಂದೇಟು!

04:13 PM Nov 19, 2023 | Team Udayavani |

ಚಿಕ್ಕಬಳ್ಳಾಪುರ: ಅನ್ನಭಾಗ್ಯ ಯೋಜನೆಯಡಿ ತಲಾ 10 ಕೆಜಿ ಅಕ್ಕಿ ವಿತರಣೆಗೆ ಸಾಧ್ಯವಾಗದೇ, ಪರದಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಮತ್ತೂಂದು ಸಂಕಷ್ಟ ಎದುರಾಗಿ ತೊಡಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ರೇಟು ದಿನೇ ದಿನೇ ಹೆಚ್ಚಳ ಆಗುತ್ತಿರುವ ಪರಿಣಾಮ ಬೆಂಬಲ ಬೆಲೆ ಯೋಜನೆ ಯಡಿ ಭತ್ತ ಖರೀದಿಗೆ ಹೊರಟಿರುವ ಸರ್ಕಾರಕ್ಕೆ ಭತ್ತದ ಬೆಳೆಗಾರರಿಂದ ಸ್ಪಂದನೆ ಸಿಗದೇ ನಿರಾಸೆ ಮೂಡಿದೆ.

Advertisement

ಹೌದು, ರಾಜ್ಯದಲ್ಲಿ ತೀವ್ರ ಮಳೆ ಕೊರತೆಯ ಪರಿಣಾಮ ಬರದಿಂದ ಕಂಗೆಟ್ಟಿರುವ ರೈತರು ಈ ವರ್ಷ ಭತ್ತ ಉತ್ಪಾದನೆ ಕುಸಿದಿರುವ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮಾರಾಟಕ್ಕೆ ಯಾರು ಮುಂದಾ ಗುತ್ತಿಲ್ಲ. ಹೀಗಾಗಿ ರೈತರ ನೋಂದಣಿ ಪ್ರಕ್ರಿಯೆ ಆರಂಭವಾದರೂ ಇಲ್ಲಿವರೆಗೂ ಯಾರೊಬ್ಬ ರೈತರು ನೋಂದಣಿ ಮಾಡಿಸಿಲ್ಲ. ಅನ್ನಭಾಗ ಯೋಜನೆಯಡಿ 10 ಕೆಜಿ ಅಕ್ಕಿ ವಿತರಣೆ ಗ್ಯಾರಂಟಿ ನೀಡಿದ್ದ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ದಿಂದ ನಿರೀಕ್ಷಿತ ಸ್ಪಂದನೆ ಸಿಗದೇ 5 ಅಕ್ಕಿ ಜೊತೆಗೆ 5 ಕೆಜಿ ಅಕ್ಕಿ ಬದಲಾಗಿ ಹಣ ಕೊಡುತ್ತಿದೆ. ಇದರ ನಡುವೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಭಕ್ತ ಖರೀದಿಗೆ ರಾಜ್ಯದಿಂದ 2.5 ಲಕ್ಷ ಮೆಟ್ರಿಕ್‌ ಟನ್‌ ಭತ್ತ ಖರೀದಿ ಗುರಿ ಕೊಟ್ಟಿದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಬರದ ಪರಿಣಾಮ ಭತ್ತ ಮಾರಾಟಕ್ಕೆ ರೈತರು ಮುಂದಾಗುತ್ತಿಲ್ಲ.

ಭತ್ತದ ಬೆಲೆ ಕಡಿಮೆ: ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಹೆಚ್ಚಾಗಿದ್ದರೂ ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಾಲ್‌ ಭತ್ತಕ್ಕೆ ಕೇವಲ 2,203/ 2,183 ರೂ. ನಿಗದಿಪಡಿಸಿದೆ. ಮುಕ್ತ ಮಾರುಕಟ್ಟೆಯಲ್ಲಿ ಸರ್ಕಾರದ ಬೆಲೆಗಿಂತ ಭತ್ತಕ್ಕೆ ಉತ್ತಮ ಧಾರಣೆ ಇದೆ ಎಂಬ ಮಾತು ಕೂಡ ರೈತರಿಂದ ಕೇಳಿ ಬರುತ್ತಿದೆ. ಜೊತೆಗೆ 3 ವರ್ಷದ ಬಳಿ ಜಿಲ್ಲೆಯಲ್ಲಿ ಬರದ ಛಾಯೆ ಆವರಿ ಸಿದ್ದು ಭತ್ತದ ನಾಟಿ ಕೂಡ ಕುಸಿದಿದೆ. ಹೀಗಾಗಿ ತಮ್ಮಲ್ಲಿ ಉಳಿದಿರುವ ಅಲ್ಪಸ್ವಲ್ಪ ಭತ್ತ ಮಾರಿಕೊಂಡರೆ ಕಷ್ಟವಾದೀತು ಎಂಬ ಲೆಕ್ಕಾಚಾರದ ಜೊತೆಗೆ ಮಾರುಕಟ್ಟೆಯಲ್ಲಿ ಅಕ್ಕಿ ರೇಟು ದಿನದಿಂದ ದಿನಕ್ಕೆ ಏರುತ್ತಲೇ ಇದ್ದು ಕ್ವಿಂಟಾಲ್‌ ಅಕ್ಕಿ 5000 ರೂ.ಗಡಿ ದಾಟಿ ಹಲವು ದಿನಗಳೇ ಕಳೆದಿದ್ದು, ಸಾಮಾನ್ಯ ಅಕ್ಕಿ ಕನಿಷ್ಠ 6000 ರೂ. ಇದ್ದು ಉತ್ತಮವಾದ ಅಕ್ಕಿ 6000 ರಿಂದ 7000 ರೂ. ಮುಟ್ಟಿದೆ.

ಹೀಗಾಗಿ ರೈತರು ಮುಂದಾಲೋಚನೆಯಿಂದಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮಾರಾಟಕ್ಕೆ ಮುಂದಾಗದೇ ಜಾಣ್ಮೆ ಮೆರೆಯುತ್ತಿರುವ ಪರಿಣಾಮ ಜಿಲ್ಲೆಯಲ್ಲಿ ನಿರೀಕ್ಷಿತ ಅನ್ನುವುದಕ್ಕಿಂತ ಭತ್ತ ಮಾರಾಟಕ್ಕೆ ರೈತರು ಒಲವು ತೋರುತ್ತಿಲ್ಲ ಎನ್ನಬಹುದಾಗಿದೆ. ಆಹಾರ ಇಲಾಖೆ ಅಧಿಕಾರಿಗಳು ಹೇಳಿದ್ದೇನು? ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗಾಗಿ ಬೆಳೆಗಾರರಿಂದ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಈ ಬಗ್ಗೆ ಎಪಿಎಂಸಿಗಳ ಮೂಲಕ ಸಾಕಷ್ಟು ಪ್ರಚಾರ ಮಾಡಲಾಗಿದೆ.

ಆದರೆ ಭತ್ತದ ಬೆಳೆಗಾರರು ಮಾರಾಟಕ್ಕೆ ಯಾರು ನೋಂದಣಿಗೆ ಆಸಕ್ತಿ ತೋರುತ್ತಿಲ್ಲ. ಕಳೆದ ವರ್ಷ ಕೂಡ ಭತ್ತ ಮಾರಾಟಕ್ಕೆ ರೈತರು ಯಾರು ಮುಂದೆ ಬರಲಿಲ್ಲ. ನಮ್ಮ ಜಿಲ್ಲೆಯಲ್ಲಿ ಭತ್ತಕ್ಕಿಂತ ರಾಗಿ ಮಾರಾಟಕ್ಕೆ ರೈತರು ಆಸಕ್ತಿ ತೋರುತ್ತಾರೆ. ಎರಡು ವರ್ಷದ ಹಿಂದೆ ಕೇವಲ 700 ಕ್ವಿಂಟಾಲ್‌ ಭತ್ತ ಅಷ್ಟೇ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿ ಆಗಿತ್ತು. ಈ ವರ್ಷ ಕೂಡ ಭತ್ತದ ಬೆಳೆಗಾರರಿಂದ ಭತ್ತ ಮಾರಾಟಕ್ಕೆ ನೋಂದಣಿ ಆಗುವುದು ಅನುಮಾನ.

Advertisement

ನೋಂದಣಿಗೆ ರೈತರು ಸ್ಪಂದಿಸದೇ ಹೋದರೆ ನೊಂದಣಿ ಅವಧಿಯನ್ನು ಸರ್ಕಾರ ವಿಸ್ತರಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಜಿಲ್ಲೆಯ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಉಪ ನಿರ್ದೇಶಕಿ ಸವಿತಾ.

2.5 ಲಕ್ಷ ಮೆಟ್ರಿಕ್‌ ಟನ್‌ ಭತ್ತ ಖರೀದಿ ಗುರಿ: 2023-24ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರವು ನಿಗಧಿಪಡಿಸಿರುವಂತೆ ರಾಜ್ಯದ ಬರೋಬ್ಬರಿ 2.5 ಲಕ್ಷ ಮೆಟ್ರಿಕ್‌ ಟನ್‌ ಭತ್ತದ ಖರೀದಿ ಮಾಡಬೇಕಿದ್ದು, ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ 2,183 ರೂ. ಹಾಗೂ ಗ್ರೇಡ್‌-1 ಭತ್ತಕ್ಕೆ ಪ್ರತಿ ಕ್ವಿಂಟಾಲ್‌ ಭತ್ತಕ್ಕೆ 2,203 ರೂ. ಗಳನ್ನು ನಿಗದಿಪಡಿಸಲಾಗಿದೆ. ರಾಜ್ಯ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ, ರಾಜ್ಯ ಸಹಕಾರ ಮಾರಾಟ ಮಂಡಳಿ ಹಾಗೂ ರಾಜ್ಯ ಕೃಷಿ ಮಾರಾಟ ಮಂಡಳಿಗಳನ್ನು ಖರೀದಿ ಏಜೇನ್ಸಿಗಳಾಗಿ ರಾಜ್ಯ ಸರ್ಕಾರ ನೇಮಿಸಿದೆ. ನ.15 ರಿಂದಲೇ ರೈತರ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next