Advertisement

ಹೆಚ್ಚಳವಾದ ಸರಗಳ್ಳತನ ಪ್ರಕರಣ

01:40 PM Jan 15, 2018 | Team Udayavani |

ದೊಡ್ಡಬಳ್ಳಾಪುರ: ನಗರದಲ್ಲಿ ಸರಗಳ್ಳತನದ ಪ್ರಕರಣಗಳು ಹೆಚ್ಚಾಗಿದ್ದು, ಸರಣಿ ಕಳ್ಳತನ ಗಳಿಂದಾಗಿ ನಾಗರಿಕರು ಆತಂಕಗೊಂಡಿದ್ದಾರೆ. ಶನಿವಾರ ರಾತ್ರಿ 9.30 ಗಂಟೆ ಸುಮಾರಿನಲ್ಲಿ ನಗರದ ಚೌಡೇಶ್ವರಿಗುಡಿ ಬೀದಿಯಲ್ಲಿ
ನಡೆದುಕೊಂಡು ಹೋಗುತ್ತಿದ್ದ ಉಮಾದೇವಿ ಕತ್ತಿನಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಕಿತ್ತುಕೊಂಡು ಪರಾರಿಯಾಗಿದ್ದಾರೆ.

Advertisement

ನಗರದ ಕುಚ್ಚಪ್ಪನಪೇಟೆ ಅಡ್ಡರಸ್ತೆಯಲ್ಲಿ ನಾಗರತ್ನಮ್ಮ ಮನೆ ಮುಂದೆ ಭಾನುವಾರ ಮಧ್ಯಾಹ್ನ 3.30 ವೇಳೆಯಲ್ಲಿ ರಂಗೋಲಿ ಇಡುತ್ತಿದ್ದಾಗ, ನಡೆದುಕೊಂಡು ಬಂದ ಸರಕಳ್ಳ ಕ್ಷಣ ಮಾತ್ರದಲ್ಲಿ ಸುಮಾರು 20 ಗ್ರಾಂ ಚಿನ್ನದ ಸರ ಕುತ್ತಿಗೆಯಿಂದ ಕಿತ್ತುಕೊಂಡು ತುಸು ದೂರದಲ್ಲಿ ಜೊತೆಯಲ್ಲಿ ಬಂದಿದ್ದವ ನೊಂದಿಗೆ ಬೈಕ್‌ ಏರಿ ಪರಾರಿಯಾಗಿದ್ದಾರೆ. 

ಶುಕ್ರವಾರವಷ್ಟೇ ಬೆಳಗ್ಗೆ 10.30ರ ವೇಳೆಯಲ್ಲಿ ಶಾರದಮ್ಮ ವಹಿಗರ ಪೇಟೆಯ ಮೂಲಕ ನಡೆದುಕೊಂಡು ಬರುತ್ತಿರುವಾಗ ಪಲ್ಸರ್‌ ಬೈಕ್‌ನಲ್ಲಿ ಬಂದ ಇಬ್ಬರು, ಶಾರದಮ್ಮ ಅವರನ್ನು ನೂಕಿ ಅವರಿಂದ ಸುಮಾರು 70
ಗ್ರಾಂಗಳಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು.

ಸ್ಥಳಕ್ಕೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಜಿ.ಸಿದ್ದರಾಜು, ನಗರ ಪೊಲೀಸ್‌ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ಬಿ.ಎಂ.ಪಾಟೀಲ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಎಲ್ಲ ಪ್ರಕರಣವನ್ನು ದಾಖಲಿಸಿಕೊಂಡಿರುವ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಇರಾನಿ ಗ್ಯಾಂಗ್‌ ಶಂಕೆ: ನಗರಕ್ಕೆ ಇರಾನಿ ಗ್ಯಾಂಗ್‌ ಕಾಲಿಟ್ಟಿದ್ದು ಎರಡು ದಿನಗಳಿಂದ ರಾತ್ರಿ, ಹಗಲೆನ್ನದೇ ಸರಗಳ್ಳತನಗಳು ನಡೆಯುತ್ತಿದ್ದು ಸಾರ್ವಜನಿಕರು ಆತಂಕಕ್ಕೆ ಒಳಗಾಗುವಂತಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆಗಳಲ್ಲಿ ಸರಕಳವು ಮಾಡುವಲ್ಲಿ ಸಕ್ರಿಯವಾಗಿರುವ ಇರಾನಿ ಗ್ಯಾಂಗ್‌ನ ಸಹಚರರು ನಗರಕ್ಕೆ ಕಾಲಿಟ್ಟಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

Advertisement

ಅಪರಿಚತರು ಬೈಕ್‌ಗಳಲ್ಲಿ ಬಂದಾಗ ಎಚ್ಚರ ವಹಿಸಿ: ನಗರದಲ್ಲಿ ಸರಗಳವು ನಡೆದಿರುವ ಕೆಲವು ಕಡೆಗಳಲ್ಲಿನ ಸಿಸಿಟೀವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳು ಪೊಲೀಸರಿಗೆ ದೊರೆತಿದ್ದು ಕಪ್ಪು ಬಣ್ಣದ ಪಲ್ಸರ್‌ ಬೈಕ್‌ನಲ್ಲಿ ಸರಗಳ್ಳರು ಕಾರ್ಯಾಚರಣೆ ನಡೆಸಿರುವುದು ಬೆಳಕಿಗೆ ಬಂದಿದೆ. ಇರಾನಿ ಗ್ಯಾಂಗ್‌ ಸಹಚರರು ಸಾಮಾನ್ಯವಾಗಿ ಬೈಕ್‌ ಗಳಲ್ಲಿ ಬಂದು ಸರಣಿಯಾಗಿ ಕಳವು ನಡೆಸುತ್ತಾರೆ ಎನ್ನುವ ಸರ್ಕಲ್‌ ಇನ್‌ ಸ್ಪೆಕ್ಟರ್‌ ಜಿ.ಸಿದ್ದರಾಜು, ಸಿಸಿಟೀವಿ ಕ್ಯಾಮರಾಗಳಲ್ಲಿನ ದೃಶ್ಯಾವಳಿಗಳಲ್ಲಿನ ಭಾವ ಚಿತ್ರಗಳನ್ನು ಗಮನಿಸಿದರೆ ಈ ಹಿಂದೆ ಇರಾನಿ ಗ್ಯಾಂಗ್‌ ಗಳಲ್ಲಿ ಸಕ್ರಿಯರಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವವರೆ ಆಗಿದ್ದಾರೆ. ಭಾನುವಾರ ದಿಂದ ನಗರ ಸೇರಿದಂತೆ ತಾಲೂಕಿನ ಪ್ರಮುಖ ಸ್ಥಳಗಳಲ್ಲಿ ನಾಕಬಂದಿ ಹಾಕಿದ್ದು ಅನುಮಾಸ್ಪದ ವಾಹನಗಳು, ಬೈಕ್‌ ಸವಾರರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಮಹಿಳೆಯರು ಸಂಜೆ ವೇಳೆ ಯಲ್ಲಿ ಒಂಟಿಯಾಗಿ ಒಡಾಡುವಾಗ ಅಥವಾ ಬೇರಾವುದೇ ಸಂದರ್ಭದಲ್ಲಿ ಕುತ್ತಿಗೆಯಲ್ಲಿನ ಚಿನ್ನದ ಸರಗಳು ಹೊರಗೆ ಕಾಣದಂತೆ ಬಟ್ಟೆ ಮುಚ್ಚಿಕೊಳ್ಳುವುದು, ವಿಳಾಸ ಕೇಳುವ ನೆಪದಲ್ಲಿ ಅಪರಿಚತರು ಬೈಕ್‌ಗಳಲ್ಲಿ ಬಂದಾಗ ಎಚ್ಚರ ವಹಿಸುವುದು ಸೇರಿದಂತೆ ಮುನ್ನೆಚ್ಚರಿಕೆಗಳನ್ನು ಸಾರ್ವಜನಿಕರು ವಹಿಸಬೇಕು ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ಇರಾನಿ ಗ್ಯಾಂಗ್‌ನ ಸರಗಳ್ಳರು ಬೆಂಗಳೂರಿನ ಕಡೆಗೆ ಹೋಗುವಾಗ ಮತ್ತೆ ಹಿಂದಿರುಗಿ ಹೋಗುವಾಗ ದಾರಿಯಲ್ಲಿನ ಸಣ್ಣಪುಟ್ಟ ನಗರಗಳಲ್ಲೂ ಸರಗಳವು ಮಾಡಿಕೊಂಡು ಹೋಗುತ್ತಾರೆ. ಎರಡು ದಿನಗಳಿಂದ ಬೆಂಗಳೂರಿನ ನಾನಾ ಕಡೆಗಳಲ್ಲೂ ನಿರಂತರವಾಗಿ ಸರಗಳು ನಡೆಯುತ್ತಿವೆ. ಹೀಗಾಗಿ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಿ ಸೂಕ್ತ ಮಾಹಿತಿ ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಮನೆ ಕಳವು ಮಾಡುತ್ತಿದ್ದ  ಆರೋಪಿಗಳ ಸೆರೆ
ದೊಡ್ಡಬಳ್ಳಾಪುರ: ನಗರದ ಮನೆಗಳಲ್ಲಿ ಚಿನ್ನಾಭರಣ ಹಾಗೂ ಬೈಕ್‌ ಕಳವು ಮಾಡುತ್ತಿದ್ದ ಮೂರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಎರಡು ಬೈಕ್‌, 1 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಸರ್ಕಲ್‌ ಇನ್‌ಸ್ಪೆಕ್ಟರ್‌ ಜಿ.ಸಿದ್ದರಾಜು, ನಗರದ ಒಂಟಿ ಮನೆಗಳನ್ನು ಟಾಗೇìಟ್‌ ಮಾಡಿ ಕಳವು ಮಾಡುತ್ತಿದ್ದ ನಗರದಲ್ಲಿನ ಖಾಸ್‌ಬಾಗ್‌ ನಿವಾಸಿ ಪ್ರವಿಣ್‌ಕುಮಾರ್‌, ಮುತ್ತೂರು ನಿವಾಸಿ ರಂಗನಾಥ್‌ ಹಾಗೂ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಬಾಶೆಟ್ಟಿಹಳ್ಳಿ ನಿವಾಸಿ ಮಧುಗಿರಿ ಮೂಲದ ಆಟೋ ಚಾಲಕ ಹರೀಶ್‌ ಎಂಬುವವರನ್ನು ಬಂಧಿಸಲಾಗಿದೆ. ನಗರದ ದರ್ಗಾಪುರದ ಪಿಳ್ಳೆಗೌಡರ ತೋಟದಲ್ಲಿನ ಕೃಷ್ಣಪ್ಪ, ಕರೇನಹಳ್ಳಿಯ ಶಶಿಕಲಾ ಹಾಗೂ ಬ್ರಾಹ್ಮಣರ ಬೀದಿಯಲ್ಲಿನ ವಿಜಯ ಎಂಬುವವರ ಮನೆಗಳಿಂದ ಚಿನ್ನದ ಸರಗಳನ್ನು ಕಳವು ಮಾಡಿದ್ದರು.

 ವಿಚಾರಣೆ ವೇಳೆ ಈ ಬಗ್ಗೆ ಮಾಹಿತಿ ನೀಡಿದ್ದ ಅರೋಪಿಗಳು ನಂತರ ಅಡವಿಟ್ಟಿದ್ದ ಸರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು. ಈ ಸಂದರ್ಭದಲ್ಲಿ ನಗರ ಪೊಲೀಸ್‌ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ಬಿ.ಎಂ.ಪಾಟೀಲ್‌, ನಗರ ಠಾಣೆ ಸಿಬ್ಬಂದಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next