Advertisement

ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ

11:16 AM Dec 20, 2021 | Team Udayavani |

ಚಳಿಗಾಲ ಎಂದಾಕ್ಷಣ ಮಕ್ಕಳ ಹೆತ್ತವರು ಒಂದಿಷ್ಟು ಆತಂಕಕ್ಕೀಡಾಗುವುದು ಸಹಜ. ಅದರಲ್ಲೂ ಎಳೆಯ ಶಿಶುಗಳ ತಾಯಂದಿರು ತಮ್ಮ ಕಂದಮ್ಮಗಳ ಆರೋಗ್ಯದ ಬಗೆಗೆ ತುಸು ಹೆಚ್ಚೇ ಆತಂಕಿತರಾಗುತ್ತಾರೆ. ಈ ಅವಧಿಯಲ್ಲಿ ಮಕ್ಕಳನ್ನು ಶೀತ, ನೆಗಡಿ, ಜ್ವರ, ಕೆಮ್ಮು ಮತ್ತಿತರ ಆರೋಗ್ಯ ಸಮಸ್ಯೆಗಳು ಕಾಡುವುದು ಅಧಿಕ. ಅಲ್ಲದೆ ಚರ್ಮದ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಇವೆಲ್ಲ ಕಾರಣಗಳಿಂದಾಗಿ ಮಕ್ಕಳ ಆರೋಗ್ಯ ರಕ್ಷಣೆಗೆ ಹೆತ್ತವರು ಹೆಚ್ಚಿನ ಕಾಳಜಿ ವಹಿಸಬೇಕಿದೆ.

Advertisement

ಈ ವರ್ಷದಲ್ಲಿ ತುಂಬಾ ಹವಾಮಾನ ವೈಪರೀತ್ಯ ಇದ್ದರೂ ಈಗ ಚಳಿಗಾಲದ ಹೊಸ್ತಿಲಲ್ಲಿ ನಿಂತಿದ್ದೇವೆ. ಶೀತ ಋತುವಿನಲ್ಲಿ ಆದಷ್ಟು ಜಾಗರೂಕತೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈ ಋತುವಿನಲ್ಲಿ ಶೀತ, ಕೆಮ್ಮು, ಜ್ವರ, ಗಂಟಲು ನೋವು ಹಾಗೂ ಚರ್ಮದ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. Prevention is better than cureಎಂಬ ಮಾತಿನಂತೆ ಎಲ್ಲರೂತಮ್ಮ ಆರೋಗ್ಯದ ಕಡೆ ಎಚ್ಚರಿಕೆ ವಹಿಸಬೇಕು. ಅದರಲ್ಲೂ ಮುಖ್ಯವಾಗಿ ಮಕ್ಕಳ ಬಗ್ಗೆ ನಿಗಾ ವಹಿಸಬೇಕು.

ವಾತಾವರಣದಲ್ಲಿ ತಂಪಾದ ಗಾಳಿ ಮತ್ತು ಒಣ ಹವೆ ಇರುವುದರಿಂದ ಚರ್ಮ ಒಡೆಯುತ್ತದೆ. ಮಕ್ಕಳ ಚರ್ಮ ತುಂಬಾ ಸೂಕ್ಷ್ಮ ಹಾಗೂ ಮೃದು ಇರುವುದರಿಂದ ಮುತುವರ್ಜಿಯಿಂದ ಆರೈಕೆ ಮಾಡಬೇಕಾಗುತ್ತದೆ. ಮಗುವಿನ ಕೆನ್ನೆ, ಕಾಲುಗಳು ಮತ್ತು ತುಟಿ ಒಡೆಯುವುದು ಅಧಿಕ. ಇವೆಲ್ಲವುಗಳಿಂದ ಮಕ್ಕಳನ್ನು ರಕ್ಷಿಸಲು ಸೂಕ್ತ ಮಾರ್ಗವೆಂದರೆ ಅಭ್ಯಂಗ ಸ್ನಾನ. ಪ್ರತೀದಿನ ಮಕ್ಕಳಿಗೆ ಎಣ್ಣೆ ಸ್ನಾನ ಮಾಡಿಸುವುದರಿಂದ ತ್ವಚೆ ಮೃದು ವಾಗುವುದಲ್ಲದೆ ಒಡೆಯುವುದನ್ನು ತಡೆಯಬಹುದು. ಎಳ್ಳೆಣ್ಣೆ, ತೆಂಗಿನ ಎಣ್ಣೆ ಅಥವಾ ಮಂಜಿಷ್ಟಾದಿ ತೈಲ ಇತ್ಯಾದಿ ಔಷಧೀಯ ಗುಣಗಳಿರುವ ಎಣ್ಣೆಯನ್ನು ಉಪಯೋಗಿಸಬಹುದು. ಅಭ್ಯಂಗ ಸ್ನಾನ ಮಾಡಿಸುವುದರಿಂದ ಬರೀ ಚರ್ಮಕ್ಕೆ ಮಾತ್ರವಲ್ಲದೆ ಇತರ ಲಾಭಗಳೂ ಇವೆ. ಕಣ್ಣಿನ ದೃಷ್ಟಿ ವೃದ್ಧಿಸುತ್ತದೆ, ದೇಹಕ್ಕೆ ಪುಷ್ಟಿ ಹಾಗೂ ಸ್ನಾಯುಗಳಿಗೆ ಬಲವನ್ನು ಕೊಡುತ್ತದೆ. ಎಣ್ಣೆಯನ್ನು ಹಚ್ಚಿ ಸುಮಾರು 15-20 ನಿಮಿಷಗಳ ಕಾಲ ಬಿಟ್ಟು ಸ್ನಾನ ಮಾಡಿಸಬೇಕು. ಮಕ್ಕಳಿಗೆ ಹದಾ ಬಿಸಿನೀರಿನಲ್ಲಿ ಸ್ನಾನ ಮಾಡಿಸಬೇಕು. ನೆವೆ, ತುರಿಕೆ, ದಡಾರ, ಶೀತ, ಪಿತ್ತ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಸ್ನಾನಕ್ಕೆ ಬೇವಿನ ಎಲೆಗಳ ಕಷಾಯ, ಹೊಂಗೆ ಎಲೆಗಳ ಕಷಾಯವನ್ನು ಉಪಯೋಗಿಸಬಹುದು. ತುಂಬಾ ಚಿಕ್ಕ ಮಕ್ಕಳಿಗೆ ಮಧ್ಯಾಹ್ನದ ಹೊತ್ತಿನಲ್ಲಿ ಸ್ನಾನ ಮಾಡಿಸಿದರೆ ಉತ್ತಮ. ಉಣ್ಣೆಯ ಬಟ್ಟೆ ತೊಡಿಸುವುದರಿಂದ ಮಕ್ಕಳನ್ನು ಬೆಚ್ಚಗಿಡಬಹುದು. ರಾಸಾಯನಿಕಗಳುಳ್ಳ ಹಾನಿಕಾರಕ ಕ್ರೀಮ…, ಲೋಷನ್‌, ಞಟಜಿsಠಿurಜಿsಛಿrs ನ್ನು ಉಪಯೋಗಿಸದಿರುವುದು ಒಳ್ಳೆಯದು.

ರೋಗ ಬಾಧೆ ಅಧಿಕ
ಚಳಿಗಾಲ ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಇವುಗಳಲ್ಲಿ ಜ್ವರ, ಶೀತ, ಕೆಮ್ಮು, ನೆಗಡಿ, ಕಫ‌ ಪ್ರಮುಖವಾದವುಗಳಾಗಿವೆ. ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಲ್ಲಿ ಪದೇಪದೆ ಈ ಸಮಸ್ಯೆಗಳು ಕಾಣಸಿಕೊಳ್ಳುತ್ತವೆ. ಹೀಗಾಗಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವುದು ತುಂಬಾ ಮುಖ್ಯ. ಹಿತಕರ ಆಹಾರ ಸೇವನೆಯಿಂದ ಮಾತ್ರ ಇದು ಸಾಧ್ಯ.

ಚಾಕೊಲೇಟ್‌, ಬಿಸ್ಕತ್ತ್, ಬೇಕರಿ ಉತ್ಪನ್ನಗಳು, ಸಂಸ್ಕರಿಸಿದ ಆಹಾರ ಪದಾರ್ಥಗಳಿಂದ ಮಕ್ಕಳನ್ನು ದೂರವಿಡಿ. ಕಾಲಮಾನಕ್ಕೆ ಅನುಗುಣವಾಗಿ ಸಿಗುವ ಹಣ್ಣು, ತರಕಾರಿಗಳನ್ನು ಯಥೇತ್ಛವಾಗಿ ಬಳಸಬಹುದು. ಇದರಿಂದ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

Advertisement

ಸರಳ ಮನೆಮದ್ದುಗಳು
ಇನ್ನು ಚಳಿಗಾಲದಲ್ಲಿ ಮಕ್ಕಳನ್ನು ಶೀತ, ಕೆಮ್ಮು, ನೆಗಡಿ, ಗಂಟಲು ನೋವುಗಳಂಥ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಬಾಧಿಸುವುದು ಅಧಿಕ. ಇವುಗಳಿಗೆ ಸರಳ ಮನೆಮದ್ದುಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು.
-ತುಂಬಾ ಚಿಕ್ಕ ಮಕ್ಕಳಿಗೆ ದೊಡªಪತ್ರೆ ಎಲೆ (ಸಾಂಬಾರ ಬಳ್ಳಿ ಎಲೆ) ಅಥವಾ ವೀಳ್ಯದೆಲೆಯನ್ನು ಚೆನ್ನಾಗಿ ತೊಳೆದು, ಕಾದ ಕಾವಲಿ ಮೇಲೆ ಇಟ್ಟು ಬಿಸಿ ಮಾಡಿ ಎಲೆಗಳನ್ನು ಜಜ್ಜಿ ರಸ ತೆಗೆದು ಶುದ್ಧವಾದ ಜೇನುತುಪ್ಪದೊಂದಿಗೆ ನೀಡಬೇಕು.
-ಮನೆಯಲ್ಲಿ ಸುತ್ತು ಔಷಧ ಬಳಸುತ್ತಿದ್ದರೆ ತುಂಬಾ ಒಳ್ಳೆಯದು. ಇದರಿಂದ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ.
-ಹಿರಣ್ಯ ಪ್ರಾಶವನ್ನು ತಪ್ಪದೆ ಕೊಟ್ಟಲ್ಲಿ ಪದೇಪದೆ ಕಾಣಿಸಿಕೊಳ್ಳುವ ಶೀತ, ಕೆಮ್ಮು, ನೆಗಡಿ, ಜ್ವರ ಇತ್ಯಾದಿಗಳಿಂದ ಮಕ್ಕಳನ್ನು ದೂರವಿಡಲು ಸಾಧ್ಯವಾಗುತ್ತದೆ.
-ಬೆಳಗಿನ ಜಾವದಲ್ಲಿ ಸೀನು ಬರುವುದು ಹಾಗೂ ಮೂಗು ಕಟ್ಟುತ್ತಿದ್ದರೆ ಬಿಸಿ ಹಾಲಿಗೆ ಚಿಟಿಕೆ ಅರಶಿನ ಹಾಕಿ ಕೊಡಬಹುದು.
-4-5 ತುಳಸಿ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಕೊಡಬೇಕು.
-ಈ ಋತುವಿನಲ್ಲಿ ಸಿಗುವ ನೆಲ್ಲಿಕಾಯಿಯನ್ನು ಎಲ್ಲ ವಯಸ್ಸಿನವರು ಯಥೇತ್ಛವಾಗಿ ಉಪಯೋಗಿಸಬಹುದು. ಇದು ಅದ್ಭುತವಾದ ರಸಾಯನ ಗುಣವನ್ನು ಹೊಂದಿದೆ.
-ಹಿಪ್ಪಲಿ, ಕಾಳುಮೆಣಸು, ಶುಂಠಿ, ಜೇಷ್ಟಮಧು ಇತ್ಯಾದಿ ಮನೆಮದ್ದುಗಳು ತುಂಬಾ ಪ್ರಯೋಜನಕಾರಿ ಆಗಿವೆ.
ಕೊರೊನಾದಂತಹ ಸಾಂಕ್ರಾಮಿಕ ರೋಗಗಳನ್ನು ಕೂಡ ಹಿತ ಮಿತ ಆಹಾರ-ವಿಹಾರ ಅನುಸರಿಸುವುದರ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿ ರೋಗ ಬರದಂತೆ ತಡೆಯಬಹುದು. ಆದರೆ ಮಕ್ಕಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕಂಡು ಬಂದಲ್ಲಿ ನಿರ್ಲಕ್ಷ್ಯ ಮಾಡದೆ ಕೂಡಲೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಿ. “ಆರೋಗ್ಯವೇ ಭಾಗ್ಯ’ವಾಗಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ.

– ಡಾ| ನಿವೇದಿತಾ ಹೆಬ್ಟಾರ್‌ ವೈ. ಆರ್‌., ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next