Advertisement

ಕುಷ್ಟಗಿ: ಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋದ ವೃದ್ದ

01:06 PM Oct 24, 2021 | Team Udayavani |

ಕುಷ್ಟಗಿ: ಕುಷ್ಟಗಿ ತಾಲೂಕಿನಾದ್ಯಂತ ಶನಿವಾರ ಸಂಜೆ ಸುರಿದ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಹಳ್ಳದ ಪ್ರವಾಹಕ್ಕೆ ವಯೋವೃದ್ದ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

Advertisement

ಬುಡ್ನೆಸಾಬ್ ಅಗಸಿಮುಂದಿನ (65) ಹಳ್ಳದ ಪ್ರವಾಹಕ್ಕೆ ಬಲಿಯಾದ ವಯೋವೃದ್ದ.

ಇಳಿವಯಸ್ಸಿನಲ್ಲಿ ಮನೆಯಲ್ಲಿಖಾಲಿ ಕುಳಿತುಕೊಳ್ಳದ ಬುಡ್ನೆಸಾಬ್ ಹಿರೇಮನ್ನಾಪೂರ ಗ್ರಾಮದಿಂದ ಜುಮ್ಲಾಪೂರ ರಸ್ತೆಯಲ್ಲಿರುವ ಚಾಕ್ರಿ ಹಳ್ಳದ ಆಚೆ ಇರುವ ಜಮೀನಿಗೆ ಎತ್ತು ತೆಗೆದುಕೊಂಡು ಹೋಗಿದ್ದರು. ಮೋಡ ಕವಿಯುತ್ತಿದ್ದಂತೆ‌  ಬುಡ್ನೆಸಾಬ್  ಮನೆಯತ್ತ ಎತ್ತಿನೊಂದಿಗೆ ಹೆಜ್ಜೆ ಹಾಕಿದ್ದರು. ಆ ವೇಳೆಗೆ ದೋ…ಅಂತ ಮಳೆ ಸುರಿಯಲಾರಂಬಿಸಿತ್ತು. ಹೇಗೋ ಹಳ್ಳ ದಾಟಿಕೊಂಡರೆ ಮುಗಿಯಿತು ಎಂದು ಹಳ್ಳ ದಾಟುವ ದೈರ್ಯ ಮಾಡಿದ್ದರು. ಅವಸರದಿಂದಲೇ ಹಳ್ಳ ದಾಟುವ ಸಂಧರ್ಭದಲ್ಲಿ ಎತ್ತಿನ ಸಮೇತ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದರು. ಎತ್ತು ಪಾರಾಗಿದ್ದು, ಬುಡ್ನೆಸಾಬ್ ಪ್ರವಾಹ ವಿರುದ್ದ ಈಜಲಾಗದೇ ದುರ್ಮರಣಕ್ಕೀಡಾದರು.

ಹೊಲಕ್ಕೆ ಹೋಗಿದ್ದ ಅಜ್ಜ, ಬುಡ್ನೆಸಾಬ್ ವಾಪಸ್ಸು ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಪ್ರವಾಹ ತಗ್ಗಿದ ಬಳಿಕ ಬುಡ್ನೆಸಾಬ್ ಶವ ಪತ್ತೆಯಾಗಿದೆ. ಭಾನುವಾರ ಬೆಳಗ್ಗೆ ತಹಶಿಲ್ದಾರ ಎಂ.ಸಿದ್ದೇಶ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ನೀಡುವ ಭರವಸೆ ನೀಡಿದರು. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next