Advertisement

ತಾಲಿಬಾನ್‌ ಸಂಸ್ಕೃತಿಗೆ ಪ್ರೋತ್ಸಾಹ: ಮಠಂದೂರು

09:44 AM Dec 20, 2017 | Team Udayavani |

ಪುತ್ತೂರು: ಚುನಾವಣೆಯಲ್ಲಿ ಮತ ಗಳಿಸುವ ಉದ್ದೇಶದಿಂದ ಸರಕಾರ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಸರಕಾರದ
ಕುಮ್ಮಕ್ಕಿನಿಂದ ತಾಲೀಬಾನ್‌ ಸಂಸ್ಕೃತಿಯಲ್ಲಿ ಹಿಂದೂಗಳನ್ನು ದಮನಿಸುವ ಕಾರ್ಯ ನಡೆಯುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಆರೋಪಿಸಿದ್ದಾರೆ.

Advertisement

ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಗೆ ರಾಜ್ಯ ಸರಕಾರ ನೇರ ಬೆಂಬಲ ನೀಡುವುದನ್ನು ವಿರೋಧಿಸಿ,
ಹೊನ್ನಾವರದ ಹಿಂದೂ ಕಾರ್ಯಕರ್ತ ಪರೇಶ್‌ ಮೇಸ್ತ ಹತ್ಯೆ ಖಂಡಿಸಿ ಹಿಂದೂ ಹಿತರಕ್ಷಣ ಸಮಿತಿ, ಹಿಂದೂ ಸಂಘಟನೆಗಳ ವತಿಯಿಂದ ಮಂಗಳವಾರ ಮಿನಿ ವಿಧಾನ ಸೌಧದ ಮುಂಭಾಗ ನಡೆದ ಪ್ರತಿಭಟನ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಸರಕಾರ ಪೊಲೀಸ್‌ ಇಲಾಖೆಯನ್ನು ಬಳಸಿಕೊಂಡು ದಬ್ಟಾಳಿಕೆ ನಡೆಸುತ್ತಿದೆ. ಕರಾವಳಿಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆಯ ಆರೋಪಿಗಳನ್ನು ಬಂಧಿಸುವಲ್ಲಿ ಸರಕಾರ, ಗೃಹ ಇಲಾಖೆ ವಿಫಲವಾಗಿದೆ. ಶರತ್‌ ಮಡಿವಾಳ, ಪರೇಶ್‌ ಮೇಸ್ತ ಹತ್ಯೆ ಇಡೀ ರಾಜ್ಯವನ್ನೇ ಭಯಗೊಳಿಸಿವೆ. ಆದರೆ ಅಧಿಕಾರದ ಮದದಿಂದ ಮೆರೆಯುತ್ತಿರುವ ಸಿದ್ದರಾಮಯ್ಯ ಹಾಗೂ ಸಚಿವರು ಕೈಕಟ್ಟಿ ಕುಳಿತಿದ್ದಾರೆ . ಇದಕ್ಕೆ ತಕ್ಕ ಪಾಠ ಕಲಿಸಲು ಹಿಂದೂಗಳು ಸಿದ್ಧರಾಗಿದ್ದಾರೆ ಎಂದರು. 

ಹತ್ಯೆಗಳ ಕೊಡುಗೆ
ರಾಜ್ಯ ಕಾಂಗ್ರೆಸ್‌ ಸರಕಾರ ಹತ್ಯೆಗಳ ಕೊಡುಗೆಯನ್ನಷ್ಟೇ ಜನತೆಗೆ ನೀಡಿದೆ. ಪುತ್ತೂರು ಸಂಪ್ಯದ ಎಸ್‌ಐ ಹಾಗೂ ಸಿಬಂದಿ ಒಂದು ಕೋಮಿಗೆ ಬೆಂಬಲ ನೀಡುತ್ತಿರುವುದು ಜಗಜ್ಜಾಹೀರಾಗಿದೆ. ಅಮಾಯಕ ಹಿಂದೂಗಳ ಮೇಲೆ ಇಲ್ಲಿನ ಠಾಣೆಯ ಮೂಲಕ ನಿರಂತರ ದಬ್ಟಾಳಿಕೆ ನಡೆಯುತ್ತಿದೆ. ಆದರೂ ಶಾಸಕರು ಅವರಿಗೆ ಸಮ್ಮಾನ ಮಾಡುತ್ತಾರೆ ಎಂದು
ಸಂಜೀವ ಮಠಂದೂರು ಆರೋಪಿಸಿದರು.

ಮತಾಂಧತೆಗೆ ಬೆಂಬಲ
ಮತಾಂಧ ಸಂಘಟನೆಗಳಿಗೆ ಬೆಂಬಲ ನೀಡುವ ಕೆಲಸವನ್ನು ಸರಕಾರ ಮಾಡುತ್ತಿದೆ. ಕಾಂಗ್ರೆಸ್‌ ಸರಕಾರದಲ್ಲಿ ಸಾಮಾಜಿಕ ನ್ಯಾಯ ಎಂಬುದೇ ಇಲ್ಲ. ಪರೇಶ್‌ ಮೇಸ್ತ ಅವರನ್ನು ಕ್ರೂರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಕೈಗೊಂಡ ಕ್ರಮವೇ ಇದಕ್ಕೆ ಸಾಕ್ಷಿ. ನ್ಯಾಯ ಕೊಡಬೇಕಾದ ಪೊಲೀಸ್‌ ಇಲಾಖೆ ತನ್ನ ಇನ್ನೊಂದು ಮುಖವನ್ನು ತೋರಿಸುತ್ತಿದೆ. ಹಿಂಜಾವೇ ಜಿಲ್ಲಾ ಕಾರ್ಯದರ್ಶಿ ಅಜಿತ್‌ ಹೊಸಮನೆ ಹಾಗೂ ಕಾರ್ಯಕರ್ತರಿಗೆ ಸಂಪ್ಯ ಠಾಣೆಯಲ್ಲಿ ಹಿಂಸಾತ್ಮಕವಾಗಿ ಹೊಡೆಯುವ ಮೂಲಕ ತಾರತಮ್ಯ ನೀತಿ ಎಲ್ಲೆ ಮೀರಿದೆ. ಇದಕ್ಕೆ ತಕ್ಕ ಉತ್ತರವನ್ನು ಹಿಂದೂ ಸಂಘಟನೆಗಳು ನೀಡಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.

Advertisement

ಬಿಜೆಪಿ ಸಂಘಟನ ಕಾರ್ಯದರ್ಶಿ ಯತೀಶ್‌ ಅರ್ವಾರ್‌ ದಿಕ್ಸೂಚಿ ಭಾಷಣ ಮಾಡಿದರು. ಬಿಜೆಪಿ ನಗರ ಮಂಡಲ ಅಧ್ಯಕ್ಷ ಜೀವಂಧರ್‌ ಜೈನ್‌, ಕಾರ್ಯದರ್ಶಿ ರಾಮದಾಸ್‌ ಹಾರಾಡಿ, ಮಹಿಳಾ ಮೋರ್ಚಾ ಅಧ್ಯಕ್ಷೆ ವಿದ್ಯಾಗೌರಿ, ನಗರಸಭಾ ಸದಸ್ಯ ರಾಜೇಶ್‌ ಬನ್ನೂರು, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯರಾದ ಮೀನಾಕ್ಷಿ ಮಂಜುನಾಥ, ಸಾಜ ರಾಧಾಕೃಷ್ಣ ಆಳ್ವ, ದಿವ್ಯಾ ಪುರುಷೋತ್ತಮ, ಸುಜಾತಾ ಆಚಾರ್ಯ, ಲಕ್ಷ್ಮಣ ಗೌಡ, ಮುಕುಂದ, ಬಜರಂಗ ದಳ ವಿಭಾಗ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ, ಬಜರಂಗದಳ, ವಿಹಿಂಪ, ಹಿಂಜಾವೇ, ಹಿಂದೂ ಹಿತರಕ್ಷಣ ಸಮಿತಿ, ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ವಿಹಿಂಪ ಜಿಲ್ಲಾಧ್ಯಕ್ಷ ಡಾ| ಕೃಷ್ಣ ಪ್ರಸನ್ನ ವಂದಿಸಿದರು. ದಿನೇಶ್‌ ಜೈನ್‌ ನಿರ್ವಹಿಸಿದರು.

ರಾಜ್ಯಪಾಲರಿಗೆ ಮನವಿ
ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳು, ಹೊನ್ನಾವರದ ಹಿಂದೂ ಕಾರ್ಯಕರ್ತ ಪರೇಶ್‌ ಮೇಸ್ತ ಹತ್ಯೆ
ಪ್ರಕರಣಗಳನ್ನು ತತ್‌ಕ್ಷಣ ರಾಷ್ಟ್ರೀಯ ತನಿಖಾ ದಳದ ಮೂಲಕ ತನಿಖೆ ನಡೆಸಿ ಭಯೋತ್ಪಾದಕ ಸಂಘಟನೆಗಳನ್ನು
ಮಟ್ಟ ಹಾಕಲು ಕ್ರಮ ಕೈಗೊಳ್ಳಬೇಕು ಹಾಗೂ ಪರೇಶ್‌ ಮೇಸ್ತ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರಧನವನ್ನು ಬಿಡುಗಡೆಗೊಳಿಸಲು ಸರಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ಸಹಾಯಕ ಕಮಿಷನರ್‌ ಕಚೇರಿ ಮೂಲಕ ಮನವಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next