Advertisement

ಮೆಟ್ರೊ ಸಗಟು ಮಾರಾಟ ಮಳಿಗೆ ಉದ್ಘಾಟನೆ

10:13 AM Apr 08, 2022 | Team Udayavani |

ಹುಬ್ಬಳ್ಳಿ: ಆಹಾರ ಧಾನ್ಯಗಳು, ಗೃಹೋಪಯೋಗಿ ಬಳಕೆ ಸಾಮಗ್ರಿಗಳ ಮಾರಾಟದಲ್ಲಿ ಖ್ಯಾತಿ ಹೊಂದಿರುವ ಮೆಟ್ರೊ ಸಗಟು ಮಾರಾಟ ಸಂಸ್ಥೆಯ ರಾಜ್ಯದ ಎಂಟನೇ ಹಾಗೂ ಉತ್ತರ ಕರ್ನಾಟಕದ ಮೊದಲ ಸಗಟು ಮಾರಾಟ ಮಳಿಗೆ ಗುರುವಾರ ಉದ್ಘಾಟನೆಗೊಂಡಿತು.

Advertisement

ಇಲ್ಲಿನ ನವನಗರದಲ್ಲಿ ಹು-ಧಾ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಬೃಹತ್‌ ಮಳಿಗೆ ತಲೆ ಎತ್ತಿದೆ. ದೇಶದಲ್ಲಿ ಸುಮಾರು 31 ಮಳಿಗೆಗಳನ್ನು ಹೊಂದಿರುವ ಮೆಟ್ರೊ ಬೆಂಗಳೂರಿನಲ್ಲಿ ಆರು, ತುಮಕೂರಿನಲ್ಲಿ ಒಂದು ಸೇರಿ ರಾಜ್ಯದಲ್ಲಿ ಏಳು ಮಳಿಗೆ ಹೊಂದಿದೆ. ಇದೀಗ ಉತ್ತರ ಕರ್ನಾಟಕದಲ್ಲೇ ಮೊದಲನೇ ಶಾಖೆಯನ್ನು ಹುಬ್ಬಳ್ಳಿಯಲ್ಲಿ ಆರಂಭಿಸಿದೆ.

ಗುರುವಾರದಿಂದಲೇ ಗ್ರಾಹಕರ ವಹಿವಾಟು ಕೈಗೊಂಡಿದೆ. ಶಾಸಕ ಅರವಿಂದ ಬೆಲ್ಲದ, ಮೆಟ್ರೊ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಮೇದಿರತ್ತ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪಾಲಿಕೆ ಆಯುಕ್ತ ಡಾ| ಬಿ.ಗೋಪಾಲಕೃಷ್ಣ ನೂತನ ಮಳಿಗೆ ಉದ್ಘಾಟಿಸಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಹು-ಧಾದಲ್ಲಿ ಮೆಟ್ರೊ ಮಳಿಗೆ ಆರಂಭ ಉತ್ತಮ ಕೊಡುಗೆಯಾಗಿದೆ. ಆಹಾರಧಾನ್ಯಗಳು ಹಾಗೂ ಗೃಹೋಪಯೋಗಿ ಬಳಕೆ ಸಾಮಗ್ರಿಗಳ ಮಾರಾಟದ ದೇಶದ ಮೊದಲ ಎಂಎನ್‌ಸಿ ಕಂಪೆನಿ ಮೆಟ್ರೊ ಆಗಿದೆ. ಮೊಟ್ರೊ ಮಳಿಗೆ ಆರಂಭದಿಂದ ಅವಳಿನಗರದ ವರ್ಚಸ್ಸು ಇನ್ನಷ್ಟು ಹೆಚ್ಚಲಿದ್ದು, ಸಣ್ಣಪುಟ್ಟ ವ್ಯಾಪಾರಿಗಳ ಬಲವರ್ಧನೆ ಹಾಗೂ ಬೆಳವಣಿಗೆಗೆ ಸಹಕಾರಿ ಆಗಲಿದೆ ಎಂದರು.

ಮೆಟ್ರೊ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಮೇದಿರತ್ತ ಮಾತನಾಡಿ, ಮೆಟ್ರೊ ಜಾಗತಿಕ ಪ್ರಮುಖ ಕಂಪೆನಿಗಳಲ್ಲಿ ಒಂದಾಗಿದೆ. ಬೆಂಗಳೂರು ಹೊರತಾದ ಪ್ರದೇಶದಲ್ಲಿ ಸ್ಥಾಪನೆಯಾಗುತ್ತಿರುವ ರಾಜ್ಯದ ಎರಡನೇ ಮಳಿಗೆ ಹುಬ್ಬಳ್ಳಿಯದ್ದಾಗಿದೆ. ಅನೇಕ ವರ್ಷಗಳಿಂದ ಇಲ್ಲಿ ಮಳಿಗೆ ಆರಂಭಿಸಬೇಕೆಂಬ ಚಿಂತನೆ ಇದೀಗ ಸಾಕಾರಗೊಂಡಿದೆ ಎಂದು ಹೇಳಿದರು.

Advertisement

ಸಣ್ಣಪುಟ್ಟ ವ್ಯಾಪಾರಿಗಳು, ಕಿರಾಣಿ ಅಂಗಡಿಗಳು, ಹೋಟೆಲ್‌ಗ‌ಳು, ಖಾನಾವಳಿಗಳು, ಆಹಾರ ತಯಾರಕರು ಇನ್ನಿತರಿಗೆ ಒಂದೇ ಸೂರಿನಡಿ ಎಲ್ಲ ವಸ್ತುಗಳು ಕಡಿಮೆ ದರದಲ್ಲಿ ದೊರೆಯುವ ಮೂಲಕ ಅವರ ವ್ಯಾಪಾರ ವಹಿವಾಟು ವೃದ್ಧಿ-ಆರ್ಥಿಕ ಬೆಳವಣಿಗೆಗೆ ಸಹಕಾರಿ ಆಗಲಿದೆ. ಮೆಟ್ರೊ ಬಿಲಿಯನ್‌ ಡಾಲರ್‌ ವಹಿವಾಟು ನಡೆಸುವ ಲಾಭದಾಯಕವಾಗಿ ಮುನ್ನಡೆದ ಕಂಪೆನಿಯಾಗಿದ್ದು, ಹುಬ್ಬಳ್ಳಿ ಮಳಿಗೆಯಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಒಟ್ಟು 500 ಜನರಿಗೆ ಉದ್ಯೋಗ ಕಲ್ಪಿಸಲಾಗುತ್ತಿದೆ. ಕರ್ನಾಟಕದಲ್ಲಿ ಸುಮಾರು 5 ಸಾವಿರ ಜನರಿಗೆ ಉದ್ಯೋಗಾವಕಾಶ ನೀಡುತ್ತಿದೆ ಎಂದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಹು-ಧಾದಲ್ಲಿ ಮೆಟ್ರೊ ಆರಂಭ ಸಂತಸ ತಂದಿದೆ. ಇಲ್ಲಿನ ಕಿರಾಣಿ ಇನ್ನಿತರ ವ್ಯಾಪಾರ ವಹಿವಾಟಿಗೆ ಇದು ಸಹಕಾರಿ ಆಗಲಿದೆ. ಸುಮಾರು 8-10 ಜಿಲ್ಲೆಯವರು ಹುಬ್ಬಳ್ಳಿಗೆ ವಿವಿಧ ಖರೀದಿ, ವ್ಯಾಪಾರ ವಹಿವಾಟಿಗೆ ಬರುತ್ತಿದ್ದು, ಅವರೆಲ್ಲರಿಗೂ ಇದು ಸಹಕಾರಿ ಆಗಲಿದೆ ಎಂದು ಹೇಳಿದರು.

ಮೆಟ್ರೊ ಹುಬ್ಬಳ್ಳಿ ಶಾಖೆ ಪ್ರಧಾನ ವ್ಯವಸ್ಥಾಪಕ ಅನಿಲ ಪೂಜಾರ ಪ್ರಾಸ್ತಾವಿಕ ಮಾತನಾಡಿ, ಕಳೆದ 18 ವರ್ಷಗಳಿಂದ ಮೆಟ್ರೊ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಎಂಡಬ್ಲ್ಯೂಬಿ, ಎಸ್‌ವಿಟಿ, ವೈಷ್ಣವಿಯಂತಹ ಸ್ಥಳೀಯ ಸಂಸ್ಥೆಗಳ ವಿವಿಧ ಉತ್ಪನ್ನಗಳು ಇಲ್ಲಿ ಲಭ್ಯವಾಗಲಿವೆ. ಹು-ಧಾ ಅಲ್ಲದೆ ಗದಗ, ಹಾವೇರಿ, ಬೆಳಗಾವಿ, ದಾವಣಗೆರೆ ಇನ್ನಿತರ ಜಿಲ್ಲೆಗಳ ಗ್ರಾಹಕರಿಗೂ ಪ್ರಯೋಜನವಾಗಲಿದೆ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಡಾ| ಬಿ. ಗೋಪಾಲಕೃಷ್ಣ ಮಾತನಾಡಿದರು. ಸಂಸ್ಥೆಯ ಎರಿಕ್‌ ವಂದಿಸಿದರು.

ನಮ್ಮ ವಹಿವಾಟಿನಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಇವೆ. ಮುಂದಿನ ದಿನಗಳಲ್ಲಿ ಮೈಸೂರು, ಮಂಗಳೂರು ಇನ್ನಿತರ ಕಡೆಗಳಲ್ಲಿ ಮೆಟ್ರೊ ಆರಂಭಕ್ಕೆ ಯೋಜಿಸಲಾಗಿದೆ. ಇ-ಕಾಮರ್ಸ್‌ ಸೇವೆಯನ್ನೂ ಆರಂಭಿಸಲಾಗಿದ್ದು, ಶೇ.25 ವಹಿವಾಟು ಇದರ ಮೂಲಕವೇ ನಡೆಯುತ್ತಿದೆ. ಒಟ್ಟಾರೆ 10 ಲಕ್ಷಕ್ಕಿಂತ ಹೆಚ್ಚು ಕಿರಾಣಿ ಅಂಗಡಿ, ಹೋಟೆಲ್‌ ಗಳ ಸಂಪರ್ಕ ಹೊಂದಿದ್ದು, 30ಲಕ್ಷಕ್ಕೂ ಅಧಿಕ ಗ್ರಾಹಕರನ್ನು ತಲುಪಿದೆ. –ಅರವಿಂದ ಮೇದಿರತ್ತ, ಮೆಟ್ರೊ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಬೆಳಗಾವಿಯಲ್ಲೂ ಆರಂಭಕ್ಕೆ ಚಿಂತನೆ: ಹುಬ್ಬಳ್ಳಿಯಲ್ಲಿ ಉತ್ತರದ ಮೊದಲ ಮೆಟ್ರೊ ಸಗಟು ಮಾರಾಟ ಮಳಿಗೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಬೆಳಗಾವಿ ಸೇರಿದಂತೆ ಉತ್ತರದ ಇನ್ನಷ್ಟು ಕಡೆ ಮಳಿಗೆ ಆರಂಭದ ಚಿಂತನೆ ಇದೆ ಎಂದು ಮೆಟ್ರೊ ಸಿಇಒ ಅರವಿಂದ ಮೇದಿರತ್ತ “ಉದಯವಾಣಿ’ಗೆ ತಿಳಿಸಿದರು.

ತುಮಕೂರಿನಲ್ಲಿ ಆರಂಭವಾದ ಮಳಿಗೆ ಬೆಂಗಳೂರು ಹೊರತಾದ ರಾಜ್ಯದ ಮೊದಲ ಮಳಿಗೆಯಾಗಿದೆ. ಅಲ್ಲಿ ಸುಮಾರು 20 ಸಾವಿರ ಚದರಡಿ ಜಾಗದಲ್ಲಿ ಮಳಿಗೆ ಆರಂಭಿಸಲಾಗಿತ್ತು. ಇದೀಗ ಹುಬ್ಬಳ್ಳಿಯಲ್ಲಿ ಸುಮಾರು 23 ಸಾವಿರ ಚದರಡಿ ಮಳಿಗೆ ಸೇರಿ ಒಟ್ಟಾರೆ 34 ಸಾವಿರ ಚದರಡಿ ಜಾಗದಲ್ಲಿ ಆರಂಭವಾಗಿದೆ. ಮುಂದಿನ ದಿನದಲ್ಲಿ ಬೆಳಗಾವಿಯಲ್ಲಿ ಆರಂಭಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ. 5-10 ಲಕ್ಷ ಜನಸಂಖ್ಯೆ ಇರುವ ನಗರಗಳನ್ನು ಗಮನದಲ್ಲಿರಿಸಿಕೊಂಡು ಸಣ್ಣ ಪ್ರಮಾಣದ್ದಾದರೂ ಮೆಟ್ರೊ ಮಾರಾಟ ಮಳಿಗೆ ಆರಂಭಿಸುವ ಚಿಂತನೆ ಇದೆ. ಸ್ಥಳೀಯ ಸಗಟು ಮಾರುಕಟ್ಟೆಗೆ ಹೋಲಿಸಿದರೆ ಪೈಪೋಟಿ ರೂಪದ ದರಕ್ಕೆ ಉತ್ಪನ್ನಗಳು ದೊರೆಯುತ್ತವೆ. ಕಿರಾಣಿ ಇನ್ನಿತರ ವ್ಯಾಪಾರಿಗಳಿಗೆ ಒಂದೇ ಕಡೆ ಎಲ್ಲ ಉತ್ಪನ್ನ ದೊರೆಯುತ್ತಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಇ-ವಾಣಿಜ್ಯ ಮೂಲಕ ಉತ್ಪನ್ನಗಳಿಗೆ ಬೇಡಿಕೆ ಸಲ್ಲಿಸಿದವರಿಗೆ ಅವರ ಬಾಗಿಲಿಗೆ ಸೇವೆ ನೀಡುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next