Advertisement

ಅಂಗಳದಲ್ಲಿ ಹಾರುವ ವಿಮಾನ ನೋಡುತ್ತಿದ್ದವ ಇಂದು ವಿಂಗ್‌ ಕಮಾಂಡರ್‌ !

06:46 PM Jan 28, 2019 | Team Udayavani |

ಕೋಟೇಶ್ವರ: ಈ ಸೇನಾ ಕುಟುಂಬದ ಕಥೆಯ ಆರಂಭ ವಿಶಿಷ್ಟ. ಇಲ್ಲಿ ಇಬ್ಬರು ತಾಯಂದಿರೂ ಸಂತೃಪ್ತಿ ಹೊಂದಿದವರು. ಒಬ್ಬಳು ನಮ್ಮನ್ನೆಲ್ಲ ಪೊರೆವ ಭರತಮಾತೆ. ಮತ್ತೂಬ್ಬಳು ಇವರ ಹೆತ್ತ ಮಾತೆ. ಯಾಕೆಂದರೆ, ವಾಯುಪಡೆಯಲ್ಲಿ ವಿಂಗ್‌ ಕಮಾಂಡರ್‌ ಆಗಿರುವ ಸುಧೀಂದ್ರ ನಾವಡರ ಸಾಧನೆಯಿಂದ ಬಹಳ ಖುಷಿ ಪಟ್ಟಿರುವವರು ಅವರ ತಾಯಿ. ಹಾಗೆಯೇ ಭರತಮಾತೆಯೂ ತನ್ನ ಪುತ್ರ ಶೂರ ಎಂದು ಸಂಭ್ರಮಿಸದೇ ಇರುವಳೇ? ಪುತ್ರನನ್ನು ವಾಯುಪಡೆಗೆ ಸೇರಿಸಬೇಕೆಂಬ ಹಂಬಲ ಸುಧೀಂದ್ರರ ತಾಯಿ ಕೋಟೇಶ್ವರದಲ್ಲಿರುವ ರೋಹಿಣಿಯವ ರದ್ದು. ಈಗ ಅವರ ಆಸೆಯನ್ನು ಪೂರೈಸಿರುವ ಸುಧೀಂದ್ರ ಮತ್ತಷ್ಟು ಸಾಧನೆಯತ್ತ ಮುಖ ಮಾಡಿದ್ದಾರೆ.

Advertisement

ಪೈಲಟ್‌ ಆಗುವ ಕನಸು
ಬಾಲ್ಯದಲ್ಲಿ ಹಾರಾಡುವ ವಿಮಾನಗಳನ್ನು ಕಂಡು ಖುಷಿಪಡುತ್ತಿದ್ದವರು ಸುಧೀಂದ್ರ. ಕ್ರಮೇಣ ಕುತೂಹಲ ಬೆಳೆದು, ಅದನ್ನು ಚಾಲನೆ ಮಾಡುವ ಪೈಲಟ್‌ ಆಗಬೇಕೆಂಬ ಹಂಬಲ ತೀವ್ರವಾಗ ತೊಡಗಿತು. ಕನಸು ಕಂಡರಷ್ಟೇ ಸಾಕೇ? ಅದನ್ನು ಈಡೇರಿಸಿ ಕೊಳ್ಳುವ ಬಗೆ ಹುಡುಕಬೇಕಲ್ಲ. ಅದನ್ನೇ ಅವರು ಮಾಡಿದರು.

1979ರಲ್ಲಿ  ಕುಂದಾಪುರದಲ್ಲಿ ಜನಿಸಿದ ಅವರು ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಕುಂದಾಪುರ, ಭದ್ರಾವತಿಯಲ್ಲಿ ಪೂರೈಸಿ ಪಿಯುಸಿ ವಿದ್ಯಾಭ್ಯಾಸವನ್ನು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪಡೆದರು. ಅನಂತರ ಬಿ.ಇ. ಪದವಿಯನ್ನು ಹಾಸನದ ಮಲೆನಾಡು ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮುಗಿಸಿದರು. ಪದವಿಯ ಕೊನೆಯ ವರ್ಷ. ಕನಸನ್ನು ಈಡೇರಿಸುವ ಕಾಲ ಬಂದಿತು. ಭಾರತೀಯ ವಾಯುಸೇನೆಯ ಪ್ರವೇಶ ಪರೀಕ್ಷೆ ಬರೆದರು. ಅದರಲ್ಲಿ ಯಶಸ್ವಿಯೂ ಆಗಿ 2001ನೇ ಜನವರಿಯಲ್ಲಿ ಭಾರತೀಯ ವಾಯುಸೇನೆಗೆ ಫ್ಲೈಯಿಂಗ್‌ ಆಫೀಸರ್‌ ಆಗಿ ಸೇರಿದರು. ಆಕಾಶದಲ್ಲಿ ಸಂತೃಪ್ತಿ ಯಿಂದ ಹಾರಾಡಿದಷ್ಟೇ ಸಂತಸವಾಯಿತು ಅವರಿಗೆ. 

ಹೈದರಾಬಾದ್‌, ಬೀದರ್‌, ಬೆಂಗಳೂರುಗಳಲ್ಲಿ ಕಠಿನ ತರಬೇತಿಯ ಅನಂತರ ರಾಜಸ್ಥಾನದ ಗಂಗಾನಗರ, ಗುಜರಾತ್‌ನ ಜಾಮ್‌ ನಗರ, ಆಗ್ರಾ, ದಿಲ್ಲಿ, ರಾಜಸ್ಥಾನದ ಬಿಕಾನೇರ್‌ ಸಮೀಪದ ನಾಲ್‌ ಮುಂತಾದೆಡೆ ನಿಯೋಜಿಸಲಾಯಿತು. ಬಳಿಕ 2012ರಲ್ಲಿ ವಿಂಗ್‌ ಕಮಾಂಡರ್‌ ಆಗಿ ಮುಂಭಡ್ತಿಯೂ ಸಿಕ್ಕಿತು. ಈಗ ದಿಲ್ಲಿಯ ವಾಯುಸೇನೆಯ ಮುಖ್ಯ ಕಚೇರಿಯಲ್ಲಿ ಕಾರ್ಯನಿರತರಾಗಿದ್ದಾರೆ. 2012ರಲ್ಲಿ ಪುಣೆಯ ಡಿ.ಆರ್‌.ಡಿ.ಒ.ದಲ್ಲಿ ಎಂ.ಟೆಕ್‌. ಸ್ನಾತಕೋತ್ತರ ಪದವಿಯನ್ನೂ ಪಡೆದರು. ಓರ್ವ ಶಿಸ್ತುಬದ್ಧ ಫ್ಲೈಯಿಂಗ್‌ ಆಫೀಸರ್‌ ಎಂಬುದು ಅವರ ಕಾರ್ಯಕ್ಕೆ ಸಿಕ್ಕ ಮೆಚ್ಚುಗೆ. ಆಸಕ್ತಿ ಮತ್ತು ಛಲದಿಂದಲೇ ಸೇನೆಗೆ ಸೇರುವ ತಮ್ಮ ಬಯಕೆಯನ್ನು ಈಡೇರಿಸಿಕೊಂಡವರು. ರಾಜಸ್ಥಾನದ ಬಿಕಾನೇರ್‌ನಿಂದ ಆಂಧ್ರಪ್ರದೇಶದ ವಿಜಯವಾಡ ಬಳಿಯ ಸೂರ್ಯಲಂಕ ಎನ್ನುವಲ್ಲಿ ಪ್ರಯೋಗಾತ್ಮಕ ಕ್ಷಿಪಣಿಯನ್ನು ಮೂರು ತಿಂಗಳು ಅಲ್ಲೇ ಇದ್ದು ಉಡಾವಣೆ ಯಶಸ್ವಿಗೊಳಿಸಿದ್ದರಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಕೃಷಿಕ ಕುಟುಂಬ
ಸೇನಾಪುರ ಮೂಲದವರಾದ ಅವರ ತಂದೆ ದಿ| ನರಸಿಂಹ ನಾವಡ ಅವರು ಎಸ್‌.ಐ.ಸಿ. ಅಧಿಕಾರಿಯಾಗಿದ್ದವರು. ತಾಯಿ ರೋಹಿಣಿ ನಾವಡ ಅವರಿಗೆ ತಮ್ಮ ಪುತ್ರ ಬದುಕಿನಲ್ಲಿ  ಸರ್ವಶ್ರೇಷ್ಠ ಪದವಿ ಪಡೆಯಬೇಕು ಹಾಗೂ ವಾಯುಸೇನೆಗೆ ಸೇರಬೇಕೆಂಬ ಹಂಬಲವಿತ್ತು. ಸುಧೀಂದ್ರರ ಪತ್ನಿ ಲತಾ ಎಂ.ಕಾಂ. ಪದವೀಧರೆ. ಸಿದ್ಧಾರ್ಥ ಹಾಗೂ ಸಮರ್ಥ ಮಕ್ಕಳು. ಹದಿನೆಂಟು ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ಬಾಲ್ಯದಿಂದಲೂ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದ ಸಹೋದರನ ಒಲವು ಸೈನ್ಯದ ಕಡೆಗಿತ್ತು. ಅದಕ್ಕೆ ಪೂರಕ ಸಹಕಾರ ನೀಡಿ ಬೆನ್ನುತಟ್ಟಿದೆವು. ಇಂದು ಖುಷಿ ಎನಿಸಿದೆ ಎನ್ನುತ್ತಾರೆ ಸುಧೀಂದ್ರರ ಸಹೋದರ ರವೀಂದ್ರ ನಾವಡ. ಆತ ವಾಯುಪಡೆಗೆ ಸೇರುವ ವಿಷಯ ತಿಳಿಸಿದಾಗ ಮೊದಲು ಭಯವಾಗಿತ್ತು. ಆದರೂ ದೇಶ ರಕ್ಷಣೆಗಾಗಿ ಇಟ್ಟ ದಿಟ್ಟ ಹೆಜ್ಜೆಯ ಹಿಂದಿನ ಉದ್ದೇಶವನ್ನು ಅರ್ಥ ಮಾಡಿಕೊಂಡು ಸಂತೋಷದಿಂದ ಒಪ್ಪಿ ಬೆಂಬಲಿಸಿದೆವು. ಇಂದು ಅವನ ಸಾಧನೆ ನಮಗೆಲ್ಲ  ಗೌರವ ತಂದಿದೆ ಎನ್ನುತ್ತಾರೆ ಸಹೋದರಿ ರಜನಿ ಶಶಿಕಾಂತ ಉಡುಪ.

Advertisement

ಪುತ್ರನಿಗೆ ನನ್ನದೊಂದು ಸೆಲ್ಯೂಟ್‌
ಪುತ್ರನನ್ನು ಓರ್ವ  ಸೇನಾಧಿಕಾರಿಯಾಗಿ ಕಾಣಲು ಇಷ್ಟಪಟ್ಟಿದ್ದೆ. ಅದು ಸಾಕಾರಗೊಂಡು ಆತ ಹುದ್ದೆಯಲ್ಲಿ ಭಡ್ತಿ ಹೊಂದಿರುವುದು ಅಭಿಮಾನ ಹೆಚ್ಚಿಸಿದೆ. ದೇಶ ಸೇವೆಗೆ ಮುಂದಾಗಿರುವ ಆತನಿಗೆ ನನ್ನದೊಂದು ಸೆಲ್ಯೂಟ್‌.
– ರೋಹಿಣಿ ನಾವಡ, ತಾಯಿ

ದೇಶ ರಕ್ಷಣೆಗೆ ಯಾವ ತ್ಯಾಗಕ್ಕೂ ಸಿದ್ಧ
ವಾಯುಪಡೆ, ಭೂ ಸೇನೆ, ನೌಕಾದಳ ಮುಂತಾದವುಗಳಲ್ಲಿ ವಿಪುಲ ಅವಕಾಶಗಳಿವೆ. ಅವುಗಳನ್ನು ಇಂದಿನ ಯುವ ಪೀಳಿಗೆ ಸದುಪಯೋಗಪಡಿಸಿಕೊಳ್ಳಬೇಕು.ದೇಶದ ರಕ್ಷಣೆಗಾಗಿ ಯಾವುದೇ ತ್ಯಾಗಕ್ಕೆ ನಾನು ಸಿದ್ಧ  ಹಾಗೂ ಬದ್ಧ. 
– ಸುಧೀಂದ್ರ ನಾವಡ

Advertisement

Udayavani is now on Telegram. Click here to join our channel and stay updated with the latest news.

Next