ಬಾಗಲಕೋಟೆ: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೂ ಅಬಕಾರಿ ಇಲಾಖೆಯ ನಿಯಮ ಗಾಳಿಗೆ ತೂರಿ ತಡರಾತ್ರಿವರೆಗೂ ವಹಿವಾಟು ನಡೆಸುತ್ತಿದ್ದ ಜಿಲ್ಲೆಯ 17 ಸನ್ನದುದಾರರ (ಬಾರ್ ಆ್ಯಂಡ್ ರೆಸ್ಟೊರೆಂಟ್) ಪರವಾನಗಿ ಅಮಾನುತುಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಜಿ. ಶಾಂತಾರಾಂ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇರುವಾಗ ಕಾನೂನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ವಿವಿಧ ಮಾದರಿಯ ಬಾರ್ಗಳ ಪರವಾನಗಿ ಮೇ 16ರ ಮಧ್ಯ ರಾತ್ರಿವರೆಗೂ ಅಮಾನತುಗೊಳಿಸಲಾಗಿದೆ ಎಂದರು.
ಬೀಳಗಿ ತಾಲೂಕು ಗಲಗಲಿಯ ಐ.ಬಿ. ನ್ಯಾಮಗೌಡ ಅವರ ಸಿಎಲ್-2, ಹುನಗುಂದ ತಾಲೂಕು ಇಳಕಲ್ಲ ಪಟ್ಟಣದ ಎಚ್ .ಬಿ. ಪಾಟೀಲ ಅವರ ಸಿಎಲ್-9, ಬಾಗಲಕೋಟೆಯ ಆರ್. ಎಸ್. ಬಿರಾದಾರ ಅವರ ಸಿಎಲ್-2, ಬನಹಟ್ಟಿಯ ಎಂ.ಜೆ. ತೋರಗಲ್ ಅವರ ಸಿಎಲ್-9, ಬಾದಾಮಿ ತಾಲೂಕಿನ ಚೋಳಚಗುಡ್ಡದ ಎ.ಎ. ಈಳಗೇರ ಸಿಎಲ್-2, ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ನ ಎಸ್.ಎ. ಕೊತಂಬರಿಕರ ಅವರ ಸಿಎಲ್-2, ಇದೇ ಗ್ರಾಮದ ಎನ್.ಕೆ. ಹೊರಕೇರಿ ಅವರ ಸಿಎಲ್-2, ಬಾಗಲಕೋಟೆಯ ಸಿ.ವಿ. ಯಳಮಲಿ ಅವರ ಸಿಎಲ್-9, ಹುನಗುಂದ ತಾಲೂಕಿನ ಗುಡೂರಿನ ಎಸ್ .ಜಿ. ಧಲಬಂಜನ್, ಎಂ.ಜಿ. ಧಲಬಂಜನ್ ಅವರ ಸಿಎಲ್ -9, ಜಮಖಂಡಿಯ ಎ.ಟಿ. ಪಾಟೀಲ ಅವರ ಸಿಎಲ್-9, ಎಂ.ಆರ್. ಪಾಸಲಕರ ಸಿಎಲ್-2, ಹುನಗುಂದದ ಆರ್. ಎಸ್. ಕಲಾಲ ಅವರ ಸಿಎಲ್-9, ಸಾವಳಗಿಯ ಎಸ್.ಎಂ. ಕಲಾಲ ಅವರ ಸಿಎಲ್-9, ಬೀಳಗಿಯ ಎಂ.ಡಿ, ಎಂಎಸ್ ಐಎಲ್-11ಸಿ ಹಾಗೂ ಜಮಖಂಡಿಯ ರೇಣುಕಾ ಕೃಪಾ ಬಾರ್ ಸಿಎಲ್-7 ಸೇರಿ ಒಟ್ಟು 17 ಬಾರ್ಗಳ ಪರವಾನಗಿ ಅಮಾನತುಗೊಳಿಸಲಾಗಿದೆ ಎಂದು ಹೇಳಿದರು.
ಮತಕ್ಷೇತ್ರಕ್ಕೆ ತಲಾ 3 ಮಾದರಿ ಮತಗಟ್ಟೆ: ಈ ಬಾರಿ ಜಿಲ್ಲೆಯ ಏಳು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಪ್ರಮಾಣದಲ್ಲಿ ಇರುವ ಸುಮಾರು 17 ಮತಗಟ್ಟೆಯಲ್ಲಿ ಸಖೀ/ಪಿಂಕ್ ಮತಗಟ್ಟೆ ಸ್ಥಾಪಿಸಲು ನಿರ್ಧರಿಸಲಾಗಿದೆ. ಅದರಲ್ಲಿ ಬಾಗಲಕೋಟೆ ಮತಕ್ಷೇತ್ರದ 5 ಮತಗಟ್ಟೆಗಳನ್ನು ನಗರ ಪ್ರದೇಶದಲ್ಲಿ 5, ಉಳಿದ 6 ಮತಕ್ಷೇತ್ರಗಳಲ್ಲಿ ತಲಾ 1 ನಗರ ಮತ್ತು 1 ಗ್ರಾಮೀಣ ಪ್ರದೇಶಗಳಲ್ಲಿ ಸಖೀ/ಪಿಂಕ್ ಮತಗಟ್ಟೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮಾರ್ಚ್ 1ರಿಂದ 14ರ ವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ 33,696 ಅರ್ಜಿ ಬಂದಿವೆ. ಬೇರೆ ಮತಗಟ್ಟೆಗೆ ಸ್ಥಳಾಂತರಿಸುವಂತೆ 7071 ಅರ್ಜಿ ಬಂದಿವೆ. ಜಿಲ್ಲೆಗೆ ಒಟ್ಟು ಮೂವರು ಚುನಾವಣಾ ವೀಕ್ಷಕರ ವಿವರ ಪರಿವೀಕ್ಷಕರು ಬಂದಿದ್ದಾರೆ ಎಂದು ಹೇಳಿದರು.
1255 ಲೀಟರ್ ಮದ್ಯ ವಶ : ಎಸ್ಪಿ ಸಿ.ಬಿ. ರಿಷ್ಯಂತ್ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 1,37,17,830 ರೂ. ನಗದು ವಶಪಡಿಸಿಕೊಂಡಿದ್ದು, ಅಬಕಾರಿ ಮತ್ತು ಪೊಲೀಸ್ ಇಲಾಖೆಯಿಂದ ವಿವಿಧ ಚೆಕ್ಪೋಸ್ಟ್ಗಳಲ್ಲಿ 1255 ಲೀಟರ್ ಮದ್ಯ ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಾಟಕ ಪ್ರದರ್ಶನ : ಸ್ವಿಪ್ ಸಮಿತಿ ಜಿಲ್ಲಾ ನೋಡಲ್ ಅಧಿಕಾರಿ, ಜಿಪಂ ಸಿಇಒ ವಿಕಾಸ ಸುರಳ್ಕರ ಮಾತನಾಡಿ, ಜಿಲ್ಲೆಯಲ್ಲಿ ಮತದಾನ ಜಾಗೃತಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಶವಂತ ಸರದೇಶಪಾಂಡೆ ನೇತೃತ್ವದ ಕಲಾ ತಂಡದಿಂದ ಜಿಲ್ಲೆಯ ವಿವಿಧೆಡೆ ಮತದಾನ ಜಾಗೃತಿ ಕುರಿತು ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗುವುದು ಎಂದರು.