Advertisement

ಗಿರಿಶಿಖರಗಳ ತಪ್ಪಲಲ್ಲಿ ಇದೆ ಚುನಾವಣ ಕಾವು

02:38 AM Apr 15, 2019 | sudhir |

ಬೆಳ್ತಂಗಡಿ: ಗಿರಿಶಿಖರಗಳ ತಪ್ಪಲಲ್ಲಿರುವ ಬೆಳ್ತಂಗಡಿ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಓಡಾಟ ಹೆಚ್ಚಿರು ವುದು ಚುನಾವಣೆಯ ಕಾವನ್ನು ಹೆಚ್ಚಿಸತೊಡಗಿದೆ. ಇತ್ತ ತಮ್ಮ ಬೇಡಿಕೆಗೆ ರಾಜಕೀಯ ಪಕ್ಷಗಳು ಸ್ಪಂದಿಸುತ್ತಿಲ್ಲ ಎಂಬ ಜನರ ಅಸಮಾಧಾನವೂ ಕೆಲವೆಡೆ ವ್ಯಕ್ತವಾಗುತ್ತಿದೆ.

Advertisement

ಕೃಷಿ ಪ್ರಧಾನವಾದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಉದಯವಾಣಿ ತಿರುಗಾಟ ನಡೆಸಿದಾಗ, ಬಹುತೇಕರ ಬೇಡಿಕೆ ಒಂದೇ- ನಮಗೆ ರಸ್ತೆ ಇಲ್ಲ, ನೀರಿನ ಮೂಲವಿದ್ದರೂ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.

ನಾಳದಲ್ಲಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿರು ವವರನ್ನು ಮಾತಿಗೆಳೆದಾಗ ಪ್ರತಿಕ್ರಿಯಿಸಿದ ಗಣೇಶ್‌, “ದೇಶ ಸುಭದ್ರವಾಗಿರಲು ಭ್ರಷ್ಟಾಚಾರ ರಹಿತ ಸರಕಾರ ನಮಗೆ ಬೇಕು. ನಾವು ಸಣ್ಣದಿರುವಾಗ ನಮ್ಮ ಊರು ಹೇಗಿತ್ತೋ ಈಗಲೂ ಹಾಗೇ ಇದೆ. ಅಲ್ಪಸ್ವಲ್ಪ ಅಭಿವೃದ್ಧಿಯಾಗಿದೆ ಎಂದರೆ ಅದರ ಹಿಂದೆ ಶ್ರಮಿಕರ ಕೆಲಸವಿದೆ. ಇಲ್ಲಿನ ಜ್ವಲಂತ ನೀರಿನ ಸಮಸ್ಯೆಗೆ ಪರಿಹಾರವಾಗಿ ಅಣೆಕಟ್ಟು ನಿರ್ಮಿ ಸಲಿ. ಅಂತರ್ಜಲ ಮಟ್ಟ ಇಳಿಯ ದಂತೆ ಪರಿಸರ ಸಂರಕ್ಷಣೆಗೆ ರಾಜಕರಣಿ ಗಳಿಂದಲೇ ಅಭಿಯಾನ ಆರಂಭವಾಗ ಬೇಕು. ನಮ್ಮನ್ನು ಸೋಮಾರಿಗಳನ್ನಾಗಿ ಮಾಡುವ ಯೋಜನೆಯಾಗಲಿ, ಹಣವಾಗಲಿ ಬೇಡ’ ಎಂದರು.

“ಗುರುವಾಯನಕರೆ ಒಂದು ಪ್ರಮುಖ ಜಂಕ್ಷನ್‌ ಆಗಿದ್ದರೂ ಇಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಯಾರೇ ಗೆದ್ದರೂ ಭರವಸೆಗಳೇ ಸಿಗುತ್ತಿವೆ. ಇಲ್ಲಿನ ಕಿರಿದಾದ ರಸ್ತೆ, ರಾಶಿ ಬಿದ್ದರೂ ವಿಲೇವಾರಿ ಯಾಗದ ಕಸ ದಿನನಿತ್ಯ ನಾವೆದುರಿಸುವ ಸಮಸ್ಯೆಗಳು’ ಎಂದರು ಆಟೋ ಚಾಲಕ ಹಂಝಾರಿ.

ಓಬೀರಾಯನ ಕಾಲದ ವ್ಯವಸ್ಥೆ
ರಬ್ಬರ್‌ ಖರೀದಿ ಮಳಿಗೆಯ ಬಾಲಕೃಷ್ಣ ಶೆಟ್ಟಿ ಹೊಸಗದ್ದೆ, ವಿದ್ಯುತ್‌ ಸರಬರಾಜು ವ್ಯವಸ್ಥೆಯ ಕುರಿತು ಗಮನ ಸೆಳೆದರು. “ಇಲ್ಲಿ ಓಬೀರಾಯನ ಕಾಲದ ವಿದ್ಯುತ್‌ ಕಂಬಗಳು ಮತ್ತು ತಂತಿಗಳಿವೆ ಮಾರಾಯರೇ. ಸಣ್ಣ ಮಳೆ ಬಂದರೂ ದಿನಗಟ್ಟಲೆ ವಿದ್ಯುತ್‌ ಇಲ್ಲದೆ ಹರಸಾಹಸ ತಪ್ಪುವು ದಿಲ್ಲ. ಇಷ್ಟು ಮುಂದುವರಿದ ದೇಶ ವಾದರೂ ಇನ್ನೂ ಭೂಗತ ವಿದ್ಯುತ್‌ ಕೇಬಲ್‌ ಅಳವಡಿಕೆ ಸಾಧ್ಯವಾಗಿಲ್ಲ. ಇದಕ್ಕಾಗಿ ನಾವು ಮತ ಹಾಕಬೇಕೇ ಎಂದು ಅನಿಸಿದ್ದುಂಟು. ಆದರೂ ಮತ ಚಲಾವಣೆ ನಮ್ಮ ಹಕ್ಕಲ್ಲವೇ, ಅದನ್ನು ಬಿಡುವುದಿಲ್ಲ’ ಎಂದರು.

Advertisement

ನೆರಿಯದ ಕೃಷಿಕ ಸಂದೀಪ್‌, “ದೇಶದ ಬಗ್ಗೆ ಮಾತನಾಡುವ ಮೊದಲು ನಾನು ನನ್ನೂರಿನ ಬಗ್ಗೆ ಮಾತನಾಡುತ್ತೇನೆ. ನಮ್ಮದು ಸ್ವಾತಂತ್ರÂಪೂರ್ವದ ಸಮಸ್ಯೆ. ಪುಲ್ಲಾಜೆ ಭಾಗದ ಸುಮಾರು 50ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಲ್ಪಿಸಲು ಒಂದು ಸೇತುವೆ ಇಷ್ಟು ವರ್ಷ ವಾದರೂ ನಿರ್ಮಾಣವಾಗಿಲ್ಲÉ ಎಂದರೆ ಯಾರನ್ನು ದೂರುವುದು? ಪ್ರತಿಬಾರಿ ಮತ ಕೇಳಲು ಬರುತ್ತಾರೆ. ಆದರೆ ಮಳೆ ಗಾಲದಲ್ಲಿ ಚುನಾವಣೆ ಬಂದರೆ ಅವರು ನಮ್ಮ ಬಳಿಗೆ ಈಜಿಕೊಂಡೇ ಬರಬೇಕಾದ ಸ್ಥಿತಿ ಇದೆ.ಇಂದಲ್ಲ ನಾಳೆಯಾದರೂ ಇದು ಪರಿಹಾರವಾಗುವ ವಿಶ್ವಾಸದಲ್ಲಿ ಮತ ಹಾಕುತ್ತೇವೆ’ ಎನ್ನಲು ಮರೆಯಲಿಲ್ಲ.

ನಮ್ಮ ಸಮಸ್ಯೆ ಪರಿಹರಿಸುವವರ್ಯಾರು?
“ದೇಶದ ಹಿತದೃಷ್ಟಿಯಿಂದ ಚುನಾವಣೆ ಬಂದಾಗ ನಾವು ಮತದಾನ ಮಾಡಬೇಕು ನಿಜ. ಆದರೆ ಗೆದ್ದವರಲ್ಲಿ ನಮ್ಮ ಸಮಸ್ಯೆ ಪರಿಹರಿಸುವವರು ಯಾರು ಎಂಬುದು ಯಕ್ಷಪ್ರಶ್ನೆ ಎಂದದ್ದು ರಾಜೇಶ್‌ ಚಾರ್ಮಾಡಿ. ಈ ಭಾಗದಲ್ಲಿ ಆದಿವಾಸಿ ಸಮಸ್ಯೆ ಸಾಕಷ್ಟಿದೆ. ಹುಲಿ ಯೋಜನೆ, ಒಕ್ಕಲೆಬ್ಬಿಸುವಿಕೆ, ಕಸ್ತೂರಿ ರಂಗನ್‌- ಜನರನ್ನು ಹೆದರಿ ಸುವುದು ನಿಂತಿಲ್ಲ. ಯಾರೇ ಗೆಲ್ಲಲಿ; ಪರಿಹಾರ ಸಿಗಲಿ’ ಎಂದರವರು.

ಯುವ ಮತದಾರ ಅಭಿಜಿತ್‌, “ಹಿಂದೆ ನಾವು ಇಂಟರ್‌ನೆಟ್‌ ಪಡೆಯ ಬೇಕಾದರೆ ದುಬಾರಿ ಹಣ ತೆರಬೇಕಿತ್ತು. ಆದರೆ ಈಗ ಕನಿಷ್ಠ ದರದಲ್ಲೂ 4ಜಿ ಇಂಟರ್‌ನೆಟ್‌ ಸಿಗುತ್ತಿದೆ. ಇಂತಹ ಬದಲಾವಣೆಗಳು ಭವಿಷ್ಯದ ಭಾರತಕ್ಕೆ ಬೇಕಿವೆ. ಉದ್ಯೋಗವನ್ನು ಯಾರು ಯಾರಿಗೂ ತೆಗೆಸಿಕೊಡಬೇಕಿಲ್ಲ. ಕೈಗಾರಿಕೆ ಮತ್ತಿತರ ಅವಕಾಶಗಳನ್ನು ಹುಟ್ಟು ಹಾಕಿದಾಗ ಉದ್ಯೋಗ ತಂತಾನೆ ಸೃಷ್ಟಿಯಾಗುತ್ತದೆ’ ಎಂದು ಬದಲಾಗುತ್ತಿರುವ ಭಾರತದ ದಿಕ್ಕನ್ನು ತೆರೆದಿಟ್ಟರು.

ಲಾೖಲದ ಲತೇಶ್‌, “ಹಳ್ಳಿಗಳಲ್ಲಿ ಮೂಲ ಸೌಕರ್ಯ ಬದಲಾಗದೆ ಈ ದೇಶದ ಅಭಿವೃದ್ಧಿ ಅಸಾಧ್ಯ. ರಾಜಕಾರಣಿಗಳು ರಾಜಧಾನಿಗಳಲ್ಲಿ ಚರ್ಚಿಸುವಾ ಬದಲು ಹಳ್ಳಿಗಳಲ್ಲಿ ಅಭಿವೃದ್ಧಿ ಚರ್ಚೆ ನಡೆಯಬೇಕು. ವಿದ್ಯುತ್‌, ರಸ್ತೆ, ನೀರು ಇತ್ಯಾದಿ ಬಗೆಹರಿದರೆ ನಮ್ಮ ಮತಕ್ಕೂ ನ್ಯಾಯ ಸಿಕ್ಕಂತೆ’ ಎಂದರು.

ಪಕ್ಷ ನೋಡಿ ಮತಪ್ರಚಾರ
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಪೇಟೆ, ಅರೆ ಪಟ್ಟಣ, ತೀರಾ ಹಳ್ಳಿಗಾಡು ಪ್ರದೇಶಗಳನ್ನು ಹೊಂದಿ ರುವ ಪ್ರದೇಶ. ಮತದಾರರೂ ಹಾಗೆಯೇ – ವಿದ್ಯಾವಂತರು, ಅನಕ್ಷರಸ್ಥರು, ಯುವ ಮತದಾರರ ಮಿಶ್ರಣ ಇಲ್ಲಿದೆ. ಕೆಲವು ತೀರಾ ಹಳ್ಳಿ ಪ್ರದೇಶಗಳತ್ತ ಇನ್ನೂ ರಾಜಕೀಯ ಪಕ್ಷಗಳು ತಲೆ ಹಾಕಿಲ್ಲ. ಎಲ್ಲಿ ಮತದಾರರ ಸಂಖ್ಯೆ ಹೆಚ್ಚಿದೆಯೋ ಆ ಭಾಗಗಳನ್ನು ಮಾತ್ರ ಕೇಂದ್ರೀಕರಿಸಿ ಪಕ್ಷಗಳವರು ಪ್ರಚಾರ ನಡೆಸುತ್ತಾರೆ. ಊರು, ಜನರ ಸಾಮಾನ್ಯ ಒಲವು ಏನು- ಎತ್ತ ಎಂಬ ಎಂಬ ಚಹರೆ ಗೊತ್ತಿರುವುದರಿಂದ ಅದರ ಆಧಾರದಲ್ಲಿ ಮತಯಾಚನೆಯೂ ನಡೆಯುತ್ತಿದೆ. ಒಂದು ಊರಿನ ಮತ ಯಾರಿಗೆ ಎಂದು ನಾಯಕರೇ ನಿರ್ಧರಿಸಿ “ಆಯೆ ಕಾಂಗ್ರೆಸ್‌’ (ಅವನು ಕಾಂಗ್ರೆಸ್‌) ಅಥವಾ “ಆಯೆ ಬಿಜೆಪಿ’ (ಅವನು ಬಿಜೆಪಿ); ಹೀಗಾಗಿ “ಆಯೆನಾಡೆ ಪೋವೊಡಿc ಓಟು ಕೇನ್ಯರೆ’ (ಅವರಲ್ಲಿಗೆ ಓಟು ಕೇಳಲು ಹೋಗಬೇಡಿ) ಎಂದು ಸೂಚಿಸುತ್ತಾರೆ. ನಾವು ನಮ್ಮ ಸಮಸ್ಯೆ ಹೇಳಿಕೊಂಡರೆ ತಮ್ಮ ಮರ್ಯಾದೆ ಮಣ್ಣು ಪಾಲಾಗಬಹುದೇನೋ ಎಂದು ಯೋಚಿಸಿ ಇತ್ತ ತಲೆ ಹಾಕಲು ಹಿಂದೆಮುಂದೆ ಯೋಚಿಸುವ ಮುಖಂಡರಿದ್ದಾರೆ. ಅದರ ವಿನಾ ಅಭಿವೃದ್ಧಿಗೆ ಮನಸ್ಸು ಯಾಕೆ ಮಾಡುವುದಿಲ್ಲ? – ಇದು ಹೆಸರು ಹೇಳಲು ಇಚ್ಛಿಸದ ಕೆಲವು ಮತದಾರರಿಂದ ವ್ಯಕ್ತವಾದ ಅಭಿಮತ.

- ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next