Advertisement

ಸಮ್ಮಿಶ್ರ ಸರ್ಕಾರದಲ್ಲಿ ಬಡವಾದ ಯಾದಗಿರಿ

02:43 PM Jun 14, 2018 | |

ಅನೀಲ ಬಸೂದೆ

Advertisement

ಯಾದಗಿರಿ: ಸಮ್ಮಿಶ್ರ ಸರ್ಕಾರದಲ್ಲಿ ಯಾದಗಿರಿ ಅಧಿಕಾರ ಭಾಗ್ಯದಿಂದ ದೂರ ಉಳಿದಿದ್ದು, ಹಿಂದುಳಿದ ಜಿಲ್ಲೆ ಬಡವಾಗಿದೆ. ಜಿಲ್ಲೆ ನಾಲ್ಕು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದ್ದು, ಯಾದಗಿರಿ ಮತ್ತು ಸುರಪುರ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಗುರುಮಠಕಲ್‌ ನಲ್ಲಿ ತೆನೆಹೊತ್ತ ಮಹಿಳೆ ವಿಜಯ ಪತಾಕೆ ಹಾರಿಸಿದರೆ, ಶಹಾಪುರ ಮತದಾರರು ಶರಣಬಸಪ್ಪಗೌಡ ದರ್ಶನಾಪುರ ಅವರ ಕೈ ಹಿಡಿದ್ದಾರೆ.

ವಿಧಾನಸಭೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಹಲವು ರಾಜಕೀಯ ಚರ್ಚೆಗಳು ವೇಗ ಪಡೆದುಕೊಂಡಿದ್ದವು. ಸಂಪುಟ ರಚನೆಗೂ ಮುನ್ನ ಶಹಾಪುರ ಕ್ಷೇತ್ರದ ದರ್ಶನಾಪುರ ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದು ನಾಲ್ಕನೇ ಬಾರಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಏಕೈಕ ಕಾಂಗ್ರೆಸ್‌ ಅಭ್ಯರ್ಥಿ ಆರಿಸಿ ಬಂದಿರುವುದರಿಂದ ಕೈ ನಾಯಕರು ಈ ಭಾಗದಲ್ಲಿ ತಮ್ಮ ಪಕ್ಷ ಬಲಪಡಿಸಲು ದರ್ಶನಾಪುರ ಅವರಿಗೆ ಮಣೆ ಹಾಕುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇನ್ನೊಂದೆಡೆ ಗುರುಮಠಕಲ್‌ ಕ್ಷೇತ್ರದಿಂದ ಜೆಡಿಎಸ್‌ನಿಂದ ಆರಿಸಿ ಬಂದಿರುವ ನಾಗನಗೌಡ ಕಂದಕೂರ ಅವರಿಗೆ ಸಚಿವ ಸ್ಥಾನ ಪಕ್ಕಾ ಎನ್ನುವ ಮಾತುಗಳು ಸದ್ದು ಮಾಡಿದ್ದವು.

ನಾಗನಗೌಡ ಕಂದಕೂರ ಅವರು ಎಚ್‌.ಡಿ. ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಪಕ್ಷ ಸಂಘಟನೆಯಲ್ಲಿ ಸುಮಾರು ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಜೆಡಿಎಸ್‌ನಿಂದ ಅವರಿಗೆ ಸಚಿವ ಸ್ಥಾನ ಸಿಕ್ಕೇಸಿಗುತ್ತದೆ ಎನ್ನುವ ಲೆಕ್ಕಾಚಾರ ಹಾಕಲಾಗಿತ್ತು.
 
ಆದರೆ ಸಚಿವ ಸಂಪುಟ ರಚನೆಯಲ್ಲಿ ಯಾದಗಿರಿ ಜಿಲ್ಲೆಗೆ ಅವಕಾಶ ದೊರೆಯದೇ ಇರುವುದು ಇಲ್ಲಿನ ಜನತೆಗೆ ಶಾಕ್‌ ನೀಡಿದಂತಾಗಿದೆ. ಇದೀಗ ಜಿಲ್ಲಾ ಉಸ್ತವಾರಿ ಸಚಿವರನ್ನು ಸರ್ಕಾರ ನೇಮಿಸುತ್ತಿದ್ದು, ಯಾದಗಿರಿ ಜಿಲ್ಲೆಯನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌  ಎರಡೂ ಪಕ್ಷಗಳು ಕಡೆಗಣಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಯಾರಿಗೆ ನೀಡುವರೋ ಎನ್ನುವ ಎಂಬ ಪ್ರಶ್ನೆ ಕಾಡತೊಡಗಿದೆ.

ಜಿಲ್ಲೆಯ ಶಾಸಕರಿಗೆ ಮಂತ್ರಿ ಮಂಡಲದಲ್ಲಿ ಸೂಕ್ತ ಸ್ಥಾನಮಾನ ನೀಡದಿರುವುದು ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ. ಇದಕ್ಕೆ ಪುಷ್ಟಿ ನೀಡುವಂತೆ ಜಿಪಂ ಅಧ್ಯಕ್ಷರೂ ಸೇರಿದಂತೆ 12 ಜನ ಕಾಂಗ್ರೆಸ್‌ ಸದಸ್ಯರ ನಿಯೋಗ ಎರಡನೇ ಪಟ್ಟಿಯಲ್ಲಿ ಯಾದಗಿರಿ ಜಿಲ್ಲೆಗೆ ಸೂಕ್ತ ಸ್ಥಾನ ಕಲ್ಪಿಸುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದೆ.

Advertisement

ಅಭಿವೃದ್ಧಿಗೆ ಹಿನ್ನಡೆಯಾಗುವ ಆತಂಕ: ರಾಜ್ಯದ 30ನೇ ಜಿಲ್ಲೆ ಆಗಿರುವ ಯಾದಗಿರಿಗೆ ಸಚಿವ ಸ್ಥಾನ ನೀಡುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುತ್ತದೆ ಎನ್ನುವ ಆಲೋಚನೆಯಲ್ಲಿದ್ದ ಜನರಿಗೆ ಇದೀಗ ಅಭಿವೃದ್ಧಿಗೆ ಹಿನ್ನಡೆ ಆಗುವ ಆತಂಕ ಮನೆಮಾಡಿದೆ. ಸಚಿವ ಸ್ಥಾನ ದೊರೆತರೆ ಜಿಲ್ಲೆಗೆ ಕನಿಷ್ಟ ಮೂಲ ಸೌಲಭ್ಯಗಳನ್ನಾದರೂ ಒದಗಿಸಿ ಸಮರ್ಪಕ ನೀರಾವರಿ ಒದಗಿಸುವುದು, ಗುಳೆ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಅಗತ್ಯ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯೊಲು ಸಹಕಾರಿಯಾಗುತ್ತಿತ್ತು. ಆದರೆ ಸಮ್ಮಿಶ್ರ ಸರ್ಕಾರ ಇದಕ್ಕೆ ತಣ್ಣೀರೆರಚಿದೆ.

ಜಿಲ್ಲಾ ಉಸ್ತುವಾರಿ ಸಚಿವ ಪಟ್ಟ ಯಾರಿಗೆ?: ಯಾದಗಿರಿ ಜಿಲ್ಲೆಯ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರಿಬ್ಬರಿಗೂ ಸಚಿವ ಸ್ಥಾನ ಕೈತಪ್ಪಿದ್ದು, ಜಿಲ್ಲಾ ಉಸ್ತುಚಾರಿ ಸಚಿವ ಯಾರಾಗುತ್ತಾರೆ ಎನ್ನುವ ಪ್ರಶ್ನೆ ಕಾಡತೊಡಗಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಆಯ್ಕೆಯ ಹೆಸರಿರುವ ಪಟ್ಟಿ ಹರಿದಾಡುತ್ತಿದ್ದು, ಇದರಲ್ಲಿ ಯಾದಗಿರಿ ಜಿಲ್ಲೆಯ ಹೆಸರೇ ಮಾಯವಾಗಿದೆ.

ಜೆಡಿಎಸ್‌ನ ಪಶು ಸಂಗೋಪನಾ ಸಚಿವ ವೆಂಕಟರಾವ್‌ ನಾಡಗೌಡ ಪಕ್ಕದ ರಾಯಚೂರು ಜಿಲ್ಲೆಯವರಾಗಿದ್ದು, ಅವರಿಗೆ ಹೆಚ್ಚುವರಿಯಾಗಿ ಯಾದಗಿರಿ ಜಿಲ್ಲೆಯ ಉಸ್ತುವಾರಿ ವಹಿಸಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next