Advertisement

Kolar:ಉಳಿದ ಕಡೆ ಸಚಿವರ ಕುಟುಂಬಕ್ಕೆ ಟಿಕೆಟ್‌ ಕೊಟ್ಟರು, ಕೋಲಾರದಲ್ಲಿ ಮಾತ್ರ ಏಕೆ ಹೀಗೆ?

11:32 AM Apr 03, 2024 | Team Udayavani |

ಗೆಲ್ಲುವುದನ್ನೇ ಮಾನದಂಡವಾಗಿಟ್ಟುಕೊಂಡು ನನಗೆ ಟಿಕೆಟ್‌ ಕೊಟ್ಟಿದ್ದರೆ ಖಂಡಿತವಾಗಿಯೂ ಈ ಸಲ ಗೆದ್ದುಕೊಂಡು ಬರಲು ಸಾಧ್ಯವಿತ್ತು. ಈ ಮಾತನ್ನು(Siddaramaiah) ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಈ ಇಬ್ಬರು ನಾಯಕರಿಗೂ ನಾನು ಹೇಳಿದ್ದೆ. ಇಡೀ ರಾಜ್ಯದಲ್ಲಿ ಸಾಕಷ್ಟು ಕಡೆ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಶಮನಗೊಳಿಸಿ ಅಭ್ಯರ್ಥಿ ಆಯ್ಕೆ ಮಾಡುವುದು ಅವರ ಜವಾಬ್ದಾರಿ ಆಗಿತ್ತು. ಎಲ್ಲ ಕಡೆ ವಿರೋಧದ ನಡುವೆಯೂ ಟಿಕೆಟ್‌ ಕೊಟ್ಟು ಕೋಲಾರದಲ್ಲಿ ಮಾತ್ರ ಕೊಡದಿರುವುದು ಅಚ್ಚರಿ ತಂದಿದೆ. ಸಚಿವರ ಮಕ್ಕಳು- ಸಂಬಂಧಿಕರಿಗೆ ಟಿಕೆಟ್‌ ಕೊಡಬೇಕೋ-ಬೇಡವೋ ಎಂಬುದರ ಬಗ್ಗೆ ಮಾನದಂಡವನ್ನೇ ನಿಗದಿ ಮಾಡಲಿಲ್ಲ. ಹೀಗಾಗಿ ಈ ರೀತಿ ಆಯಿತು ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಕೋಲಾರ(Kolar) ಲೋಕಸಭಾ ಕ್ಷೇತ್ರಕ್ಕೆ ತಮ್ಮ ಅಳಿಯ ಚಿಕ್ಕಪೆದ್ದಣ್ಣನಿಗೆ ಕೊನೆಗಳಿಗೆಯಲ್ಲಿ ಟಿಕೆಟ್‌ ತಪ್ಪಲು ನಡೆದ ನಾಟಕದ ಸೂತ್ರಧಾರಿ- ಪಾತ್ರಧಾರಿ ಯಾರು ಎಂಬುದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ಗೆ ಎಲ್ಲವೂ ತಿಳಿದಿದೆ. ಈ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಹೇಳುವ ಮೂಲಕ ಸುರೇಶ್‌ ಕಡೆ “ನೇರಾ ನೇರ’ ದಲ್ಲಿ ಬೆಟ್ಟು ಮಾಡಿ ತೋರಿಸಿದರು.

Advertisement

ಸಂದರ್ಶನದ ಪೂರ್ಣ ಪಾಠ ಇಲ್ಲಿದೆ…

ಡಿಸಿಎಂ ಸಹೋದರ ಸೇರಿ ಸರಕಾರದಲ್ಲಿನ ನಾಲ್ಕೈದು ಸಚಿವರ ಮಕ್ಕಳಿಗೆ ಟಿಕೆಟ್‌ ಸಿಗುತ್ತೆ, ನಿಮ್ಮ ಅಳಿಯನಿಗೆ ಮಿಸ್‌ ಆಗುತ್ತೇ, ಏಕೆ?
ನಮ್ಮಲ್ಲಿ ಮುಖಂಡರು ಹಾಗೂ ಶಾಸಕರು ಒಗ್ಗಟ್ಟಿನಿಂದ ಇರಲು ಆಗಲಿಲ್ಲ. ಎರಡು ಗುಂಪುಗಳಿದ್ದವು, ಒಂದು ಗುಂಪು ಒಪ್ಪಲಿಲ್ಲ, ಗೆಲ್ಲುವುದು ಕಷ್ಟವಾಗಬಹುದೆಂಬ ಕಾರಣದಿಂದ ಆ ತೀರ್ಮಾನ ಆಗಿರಬಹುದು ಅನಿಸುತ್ತೆ, ಸದ್ಯದ ಪರಿಸ್ಥಿತಿಯಲ್ಲಿ ನಾನು ಈ ಬಗ್ಗೆ ಏನೂ ಹೆಚ್ಚಿಗೆ ಮಾತನಾಡುವುದಿಲ್ಲ.

ನೀವು ಸಚಿವರಾಗಿದ್ದೀರಿ, ಮಗಳು ಶಾಸಕಿ ಆಗಿದ್ದಾರೆ, ಅಳಿಯನಿಗೂ ಟಿಕೆಟ್‌ ಬಯಸಿದ್ದು ತಪ್ಪು ಎನ್ನುವವರಿದ್ದಾರೆ, ಏನು ಹೇಳುವಿರಿ?
ಸಚಿವರ ಮಕ್ಕಳು ಅಥವಾ ಸಂಬಂಧಿಕರಿಗೆ ಈ ಲೋಕಸಭಾ(Lok Sabha Poll) ಚುನಾವಣೆಯಲ್ಲಿ ಟಿಕೆಟ್‌ ಕೊಡುವುದಿಲ್ಲ ಎಂಬ ಮಾನದಂಡ ಮಾಡಿದ್ದರೆ ಈ ಪ್ರಶ್ನೆ ಉದ್ಭವಿಸುತ್ತಿಲಿಲ್ಲ. ಎಲ್ಲ ಸಚಿವರ ಸಂಬಂಧಿಕರಿಗೆ ಟಿಕೆಟ್‌ ಇಲ್ಲ ಎಂಬ ಮಾನದಂಡ ಮಾಡಲಿಲ್ಲ. ಆದರೆ ಹಲವು ಕಡೆ ಸಚಿವರ ಮಕ್ಕಳು, ಅಳಿಯಂದಿರು, ಸಂಬಂಧಿಕರಿಗೆ ಈ ಸಲ ಟಿಕೆಟ್‌ ಕೊಟ್ಟಿದ್ದಾರೆ. ಕೋಲಾರದಲ್ಲಿ ಮಾತ್ರ ಟಿಕೆಟ್‌ ನಿರಾಕರಿಸಲಾಗಿದೆ. ಇದೊಂದು ಹೊಸ ಮಾನದಂಡ.

ಟಿಕೆಟ್‌ ಪೈಪೋಟಿ ವೇಳೆ ಪರಿಶಿಷ್ಟ ಜಾತಿಯ ಎಡಗೈ ಬದಲಿಗೆ ಬಲಗೈ ಸಮುದಾಯಕ್ಕೆ ಟಿಕೆಟ್‌ ಕೊಡಬೇಕೆಂಬ ವಾದವೂ ನಡೆಯಿತು, ಈ ವಾದ ಮುಂಚೂಣಿಗೆ ಬಂದಿದ್ದೇಕೆ?
ಈ ನಿಟ್ಟಿನಲ್ಲಿ ಯಾರು ಪ್ರಯತ್ನ ಮಾಡಿದರೋ ಅವರ ಹತ್ತಿರ ಕೇಳಿದರೆ ಕಾರಣ ಸಿಗಬಹುದು, ನನ್ನ ಹತ್ತಿರ ಇದಕ್ಕೆ ಕಾರಣ ಇಲ್ಲ.

Advertisement

ರಮೇಶ್‌ ಕುಮಾರ್‌ಗೂ ನಿಮಗೂ ಏನಂಥಾ ವೈಷಮ್ಯ? ಇದು ರಾಜಕೀಯ ವೈಷಮ್ಯವೋ? ವೈಯಕ್ತಿಕ ದ್ವೇಷವೋ?
ಏನೂ ಇಲ್ಲ, ರಾಜಕೀಯವಾಗಿ ನಾನೇ ಅವರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬಂದೆ. ಇದು ಹಿಂಗಾಯಿತು. ಈಗ ಚುನಾವಣೆ ಮಧ್ಯದಲ್ಲಿ ಇದ್ದೇವೆ, ನಾನು ಸದ್ಯಕ್ಕೆ ಯಾರ ಬಗ್ಗೆಯೂ ಏನನ್ನೂ ಮಾತನಾಡಲು ಇಷ್ಟಪಡುವುದಿಲ್ಲ. ಎಲ್ಲರೂ ಗೆದ್ದುಬರಲಿ ಪಾಪ.

ಅಂತಿಮವಾಗಿ ಕೋಲಾರಕ್ಕೆ ಗೌತಮ್‌ ಕಾಂಗ್ರೆಸ್‌ ಅಭ್ಯರ್ಥಿ ಆಗಿದ್ದಾರೆ, ಇದು ಯಾವ ಬಣಕ್ಕೆ ಸಿಕ್ಕ ಜಯ?
ಕೋಲಾರ ಅಭ್ಯರ್ಥಿ ಆಯ್ಕೆ ಹೈಕಮಾಂಡ್‌ ತೀರ್ಮಾನ, ರಾಜ್ಯದ ಸಿಎಂ, ಡಿಸಿಎಂ ಇಬ್ಬರು ಸೇರಿ ಕೈಗೊಂಡ ನಿರ್ಣಯ. ಅದು ಯಾರೇ ಆಗಲಿ ಒಂದು ಸಲ ಹೈಕಮಾಂಡ್‌ ಪಕ್ಷದ ಅಭ್ಯರ್ಥಿಗೆ ಬಿ ಫಾರಂ ಕೊಟ್ಟ ಮೇಲೆ ಎಲ್ಲರೂ ಕೂಡ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಕೆಲಸ ಮಾಡಬೇಕು, ಎಲ್ಲದಕ್ಕಿಂತ ಮುಖ್ಯವಾಗಿ ಯಾರು ಜವಾಬ್ದಾರಿ ಹೊತ್ತಿದ್ದಾರೋ ಅವರು ಕೆಲಸ ಮಾಡಬೇಕು, ನನಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕೆಲಸ ಮಾಡಲು ಹೇಳಿದ್ದಾರೆ, ನಾನು ಆ ಭಾಗದಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದೇನೆ.

ಅಳಿಯನಿಗೆ ಟಿಕೆಟ್‌ ಕೊಡಲು ಕಾಂಗ್ರೆಸ್‌ ಹೈಕಮಾಂಡ್‌ ಒಪ್ಪಿತ್ತು, ಆದರೂ ಟಿಕೆಟ್‌ ತಪ್ಪಿಸಿದ ಶಕ್ತಿ ಯಾವುದು?
ಇದಕ್ಕೆ ನನ್ನ ಹತ್ತಿರ ಉತ್ತರವಿಲ್ಲ, ನಿಮಗೆ ಎಲ್ಲವೂ ಗೊತ್ತಿದೆ. ನನ್ನನ್ನು ಏಕೆ ಕೇಳುತ್ತೀರಿ. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ಗೆ ಕೋಲಾರ ಕ್ಷೇತ್ರದ ಟಿಕೆಟ್‌ ಹಂಚಿಕೆಯ ಕತೆ-ನಾಟಕ ಎಲ್ಲವೂ ಗೊತ್ತಿದೆ, ಸೂತ್ರಧಾರಿ, ಪಾತ್ರಧಾರಿ ಯಾರೆಂಬುದು ಅವರಿಗೂ ತಿಳಿದಿದೆ. ಕೋಲಾರದ ಬಗ್ಗೆ ಏನೇ ಇದ್ದರೂ ಅವರನ್ನೇ ಕೇಳಬೇಕು. ಅವರೇ ಕರೆಕ್ಟಾಗಿ ಹೇಳುತ್ತಾರೆ.

ಕೋಲಾರದಲ್ಲಿ ಕಾಂಗ್ರೆಸ್‌ ಗೆದ್ದರೆ ಕ್ರೆಡಿಟ್‌ ಯಾರಿಗೆ, ಸೋತರೆ ಯಾರು ಹೊಣೆ?
ಇಡೀ ಚುನಾವಣೆಯ ಉಸ್ತುವಾರಿ ಹೊತ್ತಿರುವ ಬೈರತಿ ಸುರೇಶ್‌ ಪ್ರಮುಖವಾಗಿ ಕೆಲಸ ಮಾಡಬೇಕಿದೆ. ಅವರ ಮೇಲೆಯೇ ಹೆಚ್ಚಿನ ಜವಾಬ್ದಾರಿ ಇದೆ. ಆ ಕ್ಷೇತ್ರದಲ್ಲಿ ಲೋಕಸಭೆಗೆ ನನ್ನನ್ನು 7 ಸಲ ಗೆಲ್ಲಿಸಿದ್ದರು, ನನ್ನದೇ ಜನ ಇದ್ದರು, ಸೋತಾಗ 5 ಲಕ್ಷ ಮತಗಳು ಬಂದಿದ್ದರೆ ಗೆದ್ದಾಗ 4.50 ಲಕ್ಷ ಮತಗಳು ದೊರೆತಿದ್ದವು. ಜನ ನನ್ನ ಜತೆಯಲ್ಲಿದ್ದರು, ಗೆಲ್ಲುವುದೇ ಮಾನದಂಡವಾಗಿದ್ದರೆ ನನಗೆ ಟಿಕೆಟ್‌ ಕೊಡಬೇಕಿತ್ತು, ಈ ಮಾತನ್ನು ಇಬ್ಬರಿಗೂ (ಸಿಎಂ-ಡಿಸಿಎಂ) ಹೇಳಿದ್ದೆ. ಆದರೂ ಟಿಕೆಟ್‌ ಕೊಡಲಿಲ್ಲ.

ಕೋಲಾರಕ್ಕೆ ಪ್ರಚಾರಕ್ಕೆ ಹೋಗುತ್ತೀರಾ?
ನನಗೆ ಕೋಲಾರದ ಜವಾಬ್ದಾರಿನೇ ಇಲ್ಲ. ನನ್ನ ಜವಾಬ್ದಾರಿ ಚಿಕ್ಕಬಳ್ಳಾಪುರದ್ದು. ರಮೇಶ್‌ ಕುಮಾರ್‌, ಸಚಿವ ಸುಧಾಕರ್‌ ಅವರು ಕ್ಷೇತ್ರದವರು, ಅವರು ಕೆಲಸ ಮಾಡಬೇಕು. ನಾನು ರಾಷ್ಟ್ರಮಟ್ಟದಲ್ಲಿ ರಾಜಕೀಯ ಮಾಡಿ ಬಂದವನು, ಈ ಬಗ್ಗೆ ಹೆಚ್ಚು ಮಾತನಾಡುವುದು ಸೂಕ್ತವಲ್ಲ. ಸಮಯವೂ ಇಲ್ಲ, ಕಾರಣ ಇಷ್ಟೆ, ಚುನಾವಣೆಗೆ ಹೊರಟಿದ್ದೇವೆ, ಯುದ್ಧರಂಗದಲ್ಲಿ ಇದ್ದಾಗ ಬೇರೆ ಮಾತನಾಡುವುದು ಸಮಂಜಸವಲ್ಲ. ಎಲ್ಲಾ ಅಭ್ಯರ್ಥಿಗಳು ಗೆದ್ದುಬರಲಿ, ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಲಿ. ಯಾವುದರ ಬಗ್ಗೆಯೂ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಇಷ್ಟಪಡಲ್ಲ, ನನಗೆ ಕೊಟ್ಟಿರುವ ಜವಾಬ್ದಾರಿ ನಾನು ಮಾಡುತ್ತೇನೆ.

ಕಾಂಗ್ರೆಸ್‌ ಸರಕಾರದ ಗ್ಯಾರಂಟಿಗಳು ಈ ಚುನಾವಣೆಯಲ್ಲಿ ಕೈ ಹಿಡಿಯುತ್ತವೆ ಎಂಬ ವಿಶ್ವಾಸವಿದೆಯೇ?
ನಮ್ಮ ಸರ್ಕಾರ ಒಳ್ಳೆಯ ಕಾರ್ಯಕ್ರಮಗಳು, ಗ್ಯಾರಂಟಿಗಳನ್ನು ಕೊಟ್ಟಿದೆ. ನಮ್ಮ ಗ್ಯಾರಂಟಿಗಳು ಕೈಹಿಡಿಯುತ್ತವೆ ಎಂಬ ಆಶಾಭಾವನೆ ಇದೆ. ರಾಜ್ಯದಲ್ಲಿ 28 ಕ್ಕೆ 28 ಗೆಲ್ಲಬೇಕು, ಭಾರತದಲ್ಲಿ ಯಾವ ರಾಜ್ಯದಲ್ಲೂ ಈ ರೀತಿಯ ಗ್ಯಾರಂಟಿಗಳನ್ನು ಜಾರಿಗೊಳಿಸಿಲ್ಲ. ಗೆಲ್ಲಲೇಬೇಕು. ಶಕ್ತಿ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ ಹಾಗೂ ಯುವ ನಿಧಿ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿ ಮನೆಗೂ ಒಂದಲ್ಲ ಒಂದು ರೀತಿ ತಲಪಿವೆ, ಪ್ರತಿ ಮನೆಯಲ್ಲೂ ಫ‌ಲಾನುಭವಿಗಳು ಇದ್ದಾರೆ. ಹಲವು ಕಡೆಗಳಿಂದ ನಮ್ಮ ಗ್ಯಾರಂಟಿಗಳಿಗೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಈ ಫ‌ಲಾನುಭವಿಗಳು ಚುನಾವಣೆಯಲ್ಲಿ ಸರಕಾರದ ಪರ ನಿಲ್ಲುತ್ತಾರೆಂಬ ವಿಶ್ವಾಸವಿದೆ. ಜತೆಗೆ ಇತರೆ ಅಭಿವೃದ್ಧಿ ಕೆಲಸಗಳಿಗೂ ಯಾವುದೇ ರೀತಿಯಿಂದಲೂ ಅನುದಾನ ಕಡಿತಗೊಳಿಸಿಲ್ಲ. ಅಭಿವೃದ್ಧಿ ಜತೆಗೆ ಗ್ಯಾರಂಟಿ ಯೋಜನೆಗಳು, ಕಲ್ಯಾಣ ಕಾರ್ಯಕ್ರಮಗಳು ಮುಂದುವರಿದಿವೆ. ಈ ಚುನಾವಣೆಯಲ್ಲಿ ರಾಜ್ಯದ ಜನ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್‌ ಕೈ ಹಿಡಿಯುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಉದಯವಾಣಿ ಸಂದರ್ಶನ: ಎಂ.ಎನ್‌.ಗುರುಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next