Advertisement

ಪ್ರೀತಿಯಲ್ಲಿ ಇರೋ ಕಷ್ಟ ಗೊತ್ತೇ ಇರಲಿಲ್ಲ !

12:20 PM May 26, 2019 | mahesh |

ಅಂದು ಗೆಳತಿ ಅರುಣಾಳ ಮದುವೆಯ ಅರಸಿನ ಶಾಸ್ತ್ರ . ನಾವಿಬ್ಬರೂ ಒಂದೇ ವಯಸ್ಸಿನವರಾದರೂ ಅವಳ ಮದುವೆ ಮಾತ್ರ ನನ್ನ ಮದುವೆಯಾಗಿ ಎಂಟು ವರ್ಷಗಳ ನಂತರ ಆಗುತ್ತಿದೆ. ಕಾರಣ, ಅವಳು ನಮ್ಮ ಕಾಲೇಜಿನ ಗೆಳೆಯನಾದ ಸತೀಶನನ್ನು ಸುಮಾರು ಹತ್ತು ವರ್ಷ ಪ್ರೀತಿಸಿ ಮನೆಯಲ್ಲಿ ಅದೆಷ್ಟೇ ಮಾತು, ಜಗಳ, ಉಪವಾಸ ಮಾಡಿದರೂ ಹೆತ್ತವರು ಒಪ್ಪದ ಕಾರಣ ಕೊನೆಗೆ ಮೂವತ್ತೈದು ದಾಟುತ್ತಿರುವ ಅನಿವಾರ್ಯ ಪರಿಸ್ಥಿತಿಯಲ್ಲಿ ಬಲವಂತಕ್ಕೆ ಕಟ್ಟು ಬಿದ್ದು ಮನೆಯವರು ಹುಡುಕಿದ ಹುಡುಗನನ್ನೇ ಮದುವೆಯಾಗುತ್ತಿದ್ದಾಳೆ. ಮಾತು-ಮಾತಿನ ಮಧ್ಯೆ, “”ನೀನೇನಮ್ಮಾ ಅದೃಷ್ಟವಂತೆ! ಪ್ರೀತಿಸಿದ್ದು, ಮದುವೆಯಾದದ್ದು ಒಬ್ಬರನ್ನೇ. ನನ್ನ ಯಾವುದೋ ಜನ್ಮದ ಕರ್ಮ ನೋಡು. ಈ ಕಣ್ಣುಗಳಲ್ಲಿ ಇನ್ನೂ ಏನೇನು ನೋಡಬೇಕೋ… ಅದೆಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕೋ, ಆ ದೇವರೇ ಬಲ್ಲ. ಹೇಳ್ಳೋ ಹಾಗಿಲ್ಲ, ಬಿಡೋ ಹಾಗಿಲ್ಲ ಮನಸ್ಸಿನ ದ್ವಂದ್ವಗಳ, ಹೊಯ್ದಾಟಗಳ ಅದುಮಿಟ್ಟುಕೊಂಡು ಮುನ್ನೆಡೆಯಬೇಕಾಗಿದೆ. ಈ ಹೆತ್ತವರ ಕಟ್ಟುಪಾಡಿಗೆ ಬಿದ್ದು ನನ್ನ ನಿನ್ನೆಗಳೆಲ್ಲಾ ಹಾಳಾಗಿ ಹೋದವು. ಇನ್ನು ನಾಳೆಗಳ ಗತಿ ಏನೋ?” ಎಂದು ನಿಟ್ಟುಸಿರು ಬಿಟ್ಟು ಕಣ್ತುಂಬಿಕೊಂಡಳು. ಏನು ಹೇಳಬೇಕೆಂದು ತೋಚದೆ ಸುಮ್ಮನೆ ಅವಳ ತಬ್ಬಿಕೊಂಡು ಬೆನ್ನ ಸವರಿ ಸಮಾಧಾನಿಸಿದೆ.

Advertisement

ರಾಮ-ಸೀತೆಯ ಜೋಡಿ ನಮಗೆಲ್ಲರಿಗೂ ಆದರ್ಶ. ಆದರೆ, ಕಲಿಯುಗದಲ್ಲಿ ಸೀತೆಗೆ ಯಾವಾಗಲೂ ರಾಮನೇ ಸಿಗುವುದಿಲ್ಲ ಹಾಗೆಯೇ ರಾಮನಿಗೆ ಸೀತೆ ಕೂಡ. ಈಗಿನ ದಿನಗಳಲ್ಲಿ ಮದುವೆಗೂ ಮುಂಚೆಯೇ ಮತ್ತಿನ್ಯಾರನ್ನೋ ಇಷ್ಟ ಪಡುವುದು, ನಂತರ ತಂದೆ-ತಾಯಿಯ ಒತ್ತಡಕ್ಕೆ ಬೇರೆಯವರನ್ನು ಮದುವೆಯಾಗುವುದು ಸಾಮಾನ್ಯವಾಗಿ ಹೋಗಿದೆ. ಬದುಕು ಆಧುನಿಕವಾದಷ್ಟೂ ಸಂಸಾರ ಪ್ರಾಯೋಗಿಕವಾಗತೊಡಗಿದೆ. ಒಂದೊಂದು ಮನೆಯಲ್ಲೂ, ಒಂದೊಂದು ಸಂಸಾರದಲ್ಲೂ, ಒಂದೊಂದು ಜೀವದಲ್ಲೂ ಒಂದೊಂದು ಕಥೆ. ಟೀವಿಯಲ್ಲಿ ಬರುವ ಎಲ್ಲಾ ಮೆಗಾ ಧಾರಾವಾಹಿಗಳಲ್ಲಿರುವುದು ಇಂಥವೇ ಮನೆಮನೆಗಳ ಮನಸುಗಳ ಕಥೆಗಳು. ಆದರೆ, ಧಾರಾವಾಹಿಗೂ ನಿಜ ಜೀವನಕ್ಕೂ ಬಹಳ ಅಂತರವಿದೆ. ಬದುಕು ಯಾರೋ ನಿರ್ದೇಶಿಸಿ ಮತ್ತಿನ್ಯಾರೋ ನಟಿಸಿದಂತೆ ನಡೆಯುವುದಿಲ್ಲ. ಅದನ್ನು ನಾವೇ ನಮ್ಮ ಕೈಯಾರೆ ರೂಪಿಸಿಕೊಳ್ಳಬೇಕು. ಮುನ್ನೆಡೆಸುವಾಗ ತೆಗೆದುಕೊಂಡ ನಿರ್ಧಾರಗಳು ದೃಢವಾಗಿರಬೇಕು. ಯಾವುದೋ, ಯಾರದೋ ಒತ್ತಡಕ್ಕೆ ಬೀಳದೆ ಮುಂದಿನ ದಿನಗಳ ದಾರಿಯ ಖಚಿತಪಡಿಸಿಕೊಂಡು ಸಾಗಬೇಕು.

ಏಕೆಂದರೆ, ಜೀವನ ಎನ್ನುವುದು ಧಾರಾವಾಹಿಗಳಂತೆ ಸಂಚಿಕೆಗೊಮ್ಮೆ ಹೊಸ ತಿರುವನ್ನು ಪಡೆಯುವುದೂ ಇಲ್ಲ ಟಿಆರ್‌ಪಿ ಕಡಿಮೆಯಾಯಿತೆಂದು ಹೇಳದೆ ಕೇಳದೆ ಮುಗಿಯುವುದೂ ಇಲ್ಲ. ಮುಂದಿಟ್ಟ ಹೆಜ್ಜೆಗಳ ಬೇಕೆಂದಾಗಲೋ, ಬೇಡವೆನಿಸಿದಾಗಲೋ ಹಿಂತೆಗೆಯಲಾಗುವುದಿಲ್ಲ. ಒಮ್ಮೆ ಮದುವೆಯಾಯಿತೆಂದರೆ ಮುಗಿಯಿತು. ಇಬ್ಬರು ವ್ಯಕ್ತಿಗಳು ಜೀವನವ ಒಟ್ಟಿಗೆ ನಡೆಸಲೇಬೇಕು. ಇತ್ತೀಚಿನ ದಿನಗಳಲ್ಲಿ ವಿಚ್ಛೇದನ, ಬೇರೆಯಾಗುವುದು ಸುಲಭವಾಗಿದ್ದರೂ ಇದರಿಂದ ಮಾನಸಿಕ ಹಿಂಸೆ ಜೊತೆಗೆ ವಿಚ್ಛೇದಿತ/ತೆ ಅಥವಾ ಗಂಡ/ಹೆಂಡತಿ ಬಿಟ್ಟವಳು/ನು ಎನ್ನುವ ಹಣೆಪಟ್ಟಿ ಅಂಟಿಕೊಂಡುಬಿಡುತ್ತದೆ. ಬದುಕಿನ ಪ್ರತಿ ಹಂತದಲ್ಲೂ ಮುಜುಗರ ಉಂಟುಮಾಡುತ್ತದೆ. ಬದುಕಿನ ಕೊನೆಯವರೆಗೂ ಕಪ್ಪುಚುಕ್ಕೆಯಾಗಿ ಕಾಡಿಬಿಡುತ್ತದೆ.

ನಮ್ಮ ಭಾರತೀಯ ಸಮಾಜದಲ್ಲಿ ಮೂರು ಗಂಟುಗಳಿಗಿರುವ ಮಹತ್ವವೇ ಅಂಥಾದ್ದು. ಜನ್ಮಜನ್ಮಾಂತರದ ನಂಟನ್ನು ಬೆಸೆಯುವ ಶಕ್ತಿ ಈ ಮೂರು ಗಂಟುಗಳಿಗಿದೆ ಎನ್ನುವುದು ಯುಗಯುಗಗಳಿಂದ ಬಂದಿರುವ ನಂಬಿಕೆ. ಮೊದಲು ಪ್ರೀತಿಸಿ ನಂತರ ಮದುವೆ ಆಗುವುದು ಈಗ ಕಾಮನ್‌. ಆದರೆ, ಮದುವೆ ಆದ ಮೇಲೆ ಪ್ರೀತಿಸುವುದನ್ನು ಕಲಿಸಿಕೊಟ್ಟಿದ್ದು ನಮ್ಮ ಭಾರತೀಯ ದಾಂಪತ್ಯ. ಪ್ರೀತಿಸಿದವರನ್ನು ಬಿಟ್ಟು ಬೇರೆಯವರನ್ನು ಮದುವೆ ಆಗುವುದು ಅಥವಾ ಮದುವೆ ಆದ ಮೇಲೂ ಬೇರೆಯವರನ್ನು ಪ್ರೀತಿಸುವಂಥ ಗೊಂದಲ, ಗೋಜಲು ಗಳಿಂದ ಸಂಸಾರ ಸ್ವಾರಸ್ಯ ಕಳೆದುಕೊಳ್ಳುವ ಅಪಾಯ ಎದುರಾಗುತ್ತಿದೆ. ಪ್ರೀತಿ ಮಾಡುವುದು ತಪ್ಪಲ್ಲ. ಪ್ರೀತಿಯ ತಳಹದಿ ಸರಿಯಾಗಿರಬೇಕು ಮತ್ತು ಅದನ್ನು ಎಂತಹುದೇ ಸಂದರ್ಭದಲ್ಲಿಯೂ ಉಳಿಸಿಕೊಳ್ಳಬೇಕು. ಇಲ್ಲದೆ ಹೋದರೆ ತುಳಿದ ಹೊಸ ದಾರಿಯಲ್ಲಿ ಹೊಸ ಜೀವನವನ್ನು ಶುರುಮಾಡಬೇಕು. ವಿವೇಚನೆಯನ್ನು ಮೀರಿದ ಆಕರ್ಷಣೆಗಳಿಂದ ದಾಂಪತ್ಯ ಅಪಥ್ಯವಾಗುತ್ತಿದೆ. ವಿಚ್ಛೇದನಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಮದುವೆ ಮುರಿಯುವುದು ನಮ್ಮ ತಪ್ಪಿಂದ. ಆದರೆ, ಅದೊಂದು ಬದುಕಿಗೆ ಪಾಠ ಹೇಳಿ ಹೋಗುತ್ತದೆ. ಆ ಸಂದರ್ಭವನ್ನು ಹೇಗೋ ತಳ್ಳಿಕೊಂಡು ನಿಭಾಯಿಸಿಬಿಡಬಹುದು. ಆದರೆ, ಹೆತ್ತವರ ಕಟ್ಟುಪಾಡುಗಳ ಬಲವಂತದಿಂದ ಆದ ಮದುವೆ ಸಫ‌ಲವಾಗಲಿಲ್ಲವೆನ್ನಿ, ಆಗ ಅದೊಂದು ಬದುಕಿನ ಮಹಾದುರಂತವಾಗಿಬಿಡುತ್ತದೆ. ಯಾರೋ ಮಾಡಿದ ಜಾತಿ, ಧರ್ಮ, ವಿಚಾರಗಳ ಬೆನ್ನತ್ತಿ ಹೊರಟು ಬದುಕನ್ನು ತಾವೇ ತಮ್ಮ ಕೈಯಾರೆ ಸುಟ್ಟು ಹಾಕಿದಂತೆನ್ನಿಸುತ್ತದೆ. ದಿನೇ ದಿನೇ ಮತ್ತಷ್ಟು ಕುಗ್ಗಿ ಹೋಗಿಬಿಡುತ್ತೇವೆ. ಪ್ರೀತಿಯ ಉಳಿಸಿಕೊಳ್ಳಲಾಗದ, ಬದುಕನ್ನು ಕಟ್ಟಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಸಿಲುಕಿ ಜೀವ ನಲುಗಿಬಿಡುತ್ತದೆ. ಅಂತಹ ಸಂದರ್ಭದಲ್ಲಿ ನಮ್ಮ ಕೈಯಿಂದ ಮಗಳ/ಮಗನ ಬದುಕನ್ನು ಹಾಳು ಮಾಡಿಬಿಟ್ಟೆವು ಎಂದು ಕೊರಗುವುದನ್ನು ಬಿಟ್ಟು ಮತ್ತೇನನ್ನೂ ಹೆತ್ತವರು ಮಾಡಲಾರರು.

Advertisement

ಪ್ರೀತಿ, ಪ್ರೇಮ, ಮದುವೆ ಎಂದು ಹದಿನೈದು-ಇಪ್ಪತ್ತರ ಹೊಸ್ತಿಲಲ್ಲಿ ಮಕ್ಕಳು ಬಡಬಡಿಸಿದರೆ ಹಿಡಿದು ಬುದ್ಧಿ ಹೇಳುವ, ಸರಿ ದಾರಿಗೆ ತರುವ ಆವಶ್ಯಕತೆ ಇರುತ್ತದೆ. ಆದರೆ ಬೆಳೆದು, ವಿದ್ಯಾಭ್ಯಾಸ ಮುಗಿಸಿ, ತನ್ನ ಕಾಲಮೇಲೆ ನಿಂತು ಪ್ರಪಂಚವನ್ನು, ಒಳ್ಳೆಯದು-ಕೆಟ್ಟದ್ದನ್ನು ಅರಿತ ಮಕ್ಕಳನ್ನು ತಮ್ಮ ಪ್ರತಿಷ್ಟೆಗಾಗಿ, ನಾಲ್ಕು ಜನರ ಮುಂದೆ ಅವಮಾನವಾಗುತ್ತದೆ ಎನ್ನುವ ಭಯಕ್ಕಾಗಿ ಮಕ್ಕಳ ಖುಷಿಯನ್ನು ಬಲಿಕೊಡುವುದು ಎಷ್ಟು ಸರಿ? ಇದನ್ನು ತಿಳಿಹೇಳಲು ಪ್ರಯತ್ನಿಸಿದರೂ ತಲೆಮಾರುಗಳಿಂದ ಒಗ್ಗಿಕೊಂಡು ಬಂದ ಮನಃಸ್ಥಿತಿ ಯನ್ನು ಬದಲಾಯಿಸುವುದು ಸುಲಭವಲ್ಲ. ನಿಜ ಹೇಳಬೇಕೆಂದರೆ ಪ್ರೀತಿಸಿದವರನ್ನು ಮದುವೆಯಾಗಿ ಬಾಳಲು ಸಹಕರಿಸಿದರೆ ಶೇ. 5% ರಷ್ಟು ವಿಚ್ಛೇದನಗಳು ಮತ್ತು ಶೇ. 4%ರಷ್ಟು ಆತ್ಮಹತ್ಯೆಗಳು ನಮ್ಮ ಭಾರತದಲ್ಲಿ ಕಡಿಮೆಯಾಗುತ್ತವೆ.

ಒಂದು ವೇಳೆ ಪ್ರೀತಿಸಿದವರನ್ನು ಮದುವೆಯಾಗಲು ಸಾಧ್ಯವಾಗದಿದ್ದರೆ ನಿನ್ನೆಗಳ ಮರೆತು ಇಂದಿನೊಂದಿಗೆ ಜೀವಿಸಿ, ನಾಳೆಗಳ ಆಲಂಗಿಸಿ. ಸಿಕ್ಕಿರುವ ಬದುಕನ್ನೆ, ಜೊತೆಯಾದ ಸಂಗಾತಿಯನ್ನೆ ಅರಿತು, ಬೆರೆತು, ಹೊಂದಾಣಿಕೆ ಮಾಡಿಕೊಂಡು ಖುಷಿಯಿಂದ ಬದುಕುವುದ ಕಲಿಯಿರಿ. ಇದರ ಬದಲು ಹೆತ್ತವರು ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಮದುವೆಯಾಗದೆ ಉಳಿದು ಬಿಡುವುದೋ ಅಥವಾ ಇಷ್ಟವಿಲ್ಲದ ಸಂಗಾತಿ ಎನ್ನುವ ಕಾರಣಕ್ಕೆ ಮೊಸರಲ್ಲಿ ಕಲ್ಲು ಹುಡುಕುವುದನ್ನು ಶುರು ಮಾಡುವುದೋ ಆದರೆ ಬದುಕು ಬವಣೆಯ ಬಣವೆಯಾಗುತ್ತದೆ. ಚಿಕ್ಕ ಚಿಕ್ಕ ತಪ್ಪುಗಳೂ ಬೃಹದಾಕಾರವಾಗಿ ಬೆಳೆಯುತ್ತವೆ. ಎರಡು ಹೃದಯಗಳ ಸನಿಹದ ಸದ್ದು ಕರ್ಕಶವಾಗಿ ಸಂಬಂಧದ ತಮಟೆ ಹರಿದುಬಿಡುತ್ತದೆ.

ಎಲ್ಲರ ದಾಂಪತ್ಯ ಬಂಡಿಯಲ್ಲಿ ಪ್ರೀತಿ, ವಿರಹ, ಕಷ್ಟ-ಕಾರ್ಪಣ್ಯ, ತ್ಯಾಗ, ಮೋಹ ಎಲ್ಲಕ್ಕೂ ಮಿಗಿಲಾಗಿ ಜೀವನವನ್ನು ಇಡಿಯಾಗಿ ಆಸ್ವಾದಿಸುವ ಸಾರ್ಥಕ ಕ್ಷಣಗಳ ಖಜಾನೆಯಿರುತ್ತದೆ. ಸಾಂಸಾರಿಕ ಜೀವನ ಹಿತವೆನ್ನಿಸಲು ಪ್ರೇಮ ವಿವಾಹವೇ ಆಗಬೇಕೆಂದಿಲ್ಲ. ಮೂರು ಗಂಟು ಬೆಸೆದ ಸಂಬಂಧ ಕೂಡ ಅವರನ್ನು ಅಂತರಂಗದ ಬಂಧುವನ್ನಾಗಿ ಮಾಡಬಲ್ಲದು. ಈ ಸಂಬಂಧದಲ್ಲಿ ಬಂಧಿಯಾದವರು ಆತ್ಮಸಖ-ಆತ್ಮಸಖೀಯರಾಗಿ ಬದುಕನ್ನು ಸೆಳೆಯಬೇಕು-ಸವೆಸಬೇಕು. ಆದರೆ, ಹೆಚ್ಚಿನವರು ಭಾವಿಸುವುದೇ ತಾವು ಶೂರ್ಪನಖೀಯನ್ನೋ/ಕೀಚಕನನ್ನೋ ಮದುವೆಯಾಗಿದ್ದೀವೆಂದು. ಅದಕ್ಕೇ ಒಟ್ಟಿಗೆ ಬಾಳುವ ಮನೆಯೆಂಬ ರಣರಂಗದಲ್ಲಿ ದಿನಬೆಳಗಾದರೆ ಯುದ್ಧದ್ದೇ ಮೇಲುಗೈ.

ಪ್ರೀತಿ ನಿರಂತರ ಪುಟಿಯುವ ಚಿಲುಮೆ. ಅದನ್ನು ಶೇಖರಿಸಿ, ಹಂಚಿ, ಖುಷಿಪಡುವ ವಿಶಾಲ ಮನೋಭಾವ ಬೆಳೆಯುತ್ತಲೇ ಇರಬೇಕು. ಪ್ರೀತಿಗೆ ಜಗತ್ತನ್ನೇ ಗೆಲ್ಲುವ ಶಕ್ತಿ ಇದೆ. ಇಷ್ಟಪಟ್ಟವರು ಜೊತೆಯಾದಾಗ ಯುಗವೊಂದು ಕ್ಷಣದಂತೆ ಸರಿದುಹೋಗುತ್ತದೆ. ಅದಕ್ಕೆ ಸಿಕ್ಕವರನ್ನು ಇಷ್ಟಪಡುವ ಅಥವಾ ಇಷ್ಟಪಟ್ಟವರನ್ನು ಸಿಗುವಂತೆ ನೋಡಿಕೊಳ್ಳುವ, ಪ್ರೀತಿಸುವ ದೊಡ್ಡ ಮನಸ್ಸು ನಮ್ಮದಾಗಬೇಕಷ್ಟೆ.

ಜಮುನಾರಾಣಿ ಹೆಚ್‌. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next