ಪುಲ್ವಾಮಾ ದಾಳಿಗೆ ಸಾಕ್ಷ್ಯ ನೀಡಬೇಕು ಎಂದಿರುವ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಟ್ವಿಟರ್ನಲ್ಲಿ ತಿರುಗೇಟು ನೀಡಿದ್ದಾರೆ. “ಇಮ್ರಾನ್ ಖಾನ್ ಅವರೇ, ಮುಂಬಯಿ ದಾಳಿಯ ಬಗ್ಗೆ ಭಾರತ ಸಾಕ್ಷ್ಯಾಧಾರ ನೀಡಿತ್ತಲ್ಲ? ಆನಂತರ ಪಾಕಿಸ್ಥಾನ ಸರಕಾರ ಯಾವ ಕ್ರಮ ಕೈಗೊಂಡಿದೆ?’ ಎಂದು ಪ್ರಶ್ನಿಸಿರುವ ಸಿಂಗ್, “”ಬಹಾವಾಲ್ಪುರದಲ್ಲೇ ಕುಳಿತುಕೊಂಡು ಐಎಸ್ಐ ನೆರವಿನೊಂದಿಗೆ ಅಲ್ಲಿಂದಲೇ ಪುಲ್ವಾಮಾ ದಾಳಿಗೆ ಯೋಜನೆ ರೂಪಿಸಿರುವ ಮಸೂದ್ನನ್ನು ಮೊದಲು ಬಂಧಿಸಿ. ನಿಮ್ಮಿಂದಾಗದಿದ್ದರೆ ಹೇಳಿ ನಾವು ಬಂಧಿಸುತ್ತೇವೆ” ಎಂದಿದ್ದಾರೆ.
ಸಿಧು ಅವರೇ, ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ಉಗ್ರ ಮಸೂದ್ ಅಜರ್ ಮತ್ತು ಹಫೀಜ್ ಸಯೀದ್ನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ನಿಮ್ಮ ಸ್ನೇಹಿತ ಇಮ್ರಾನ್ಗೆ ಮನವರಿಕೆ ಮಾಡಿ. ಏಕೆಂದರೆ ಅವರು ನಿಮ್ಮ ಸ್ನೇಹಿತರಲ್ಲವೇ?
ದಿಗ್ವಿಜಯ ಸಿಂಗ್, ಕಾಂಗ್ರೆಸ್ ನಾಯಕ
ಪ್ರತಿ ದಿನ ನೋವು ಅನುಭವಿಸುವ ಬದಲು, ಪಾಕಿಸ್ಥಾನದೊಂದಿಗೆ ಯುದ್ಧ ಮಾಡುವುದೇ ಸೂಕ್ತ. ಪಾಕಿಸ್ಥಾನವನ್ನು ಮೂರು ಭಾಗಗಳಾಗಿ ತುಂಡರಿಸಬೇಕು. ಅದಕ್ಕೆ ಎಂಥ ಪಾಠ ಕಲಿಸಬೇಕೆಂದರೆ, ಮುಂದಿನ 50 ವರ್ಷಗಳ ಕಾಲ ಎದ್ದು ನಿಲ್ಲುವಂಥ ಧೈರ್ಯವನ್ನೂ ಆ ದೇಶ ತೋರಿಸಬಾರದು.
ಬಾಬಾ ರಾಮ್ ದೇವ್, ಯೋಗಗುರು
ಇಮ್ರಾನ್ ಖಾನ್ ಅವರೇ, ಪುಲ್ವಾಮಾ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡವಿದೆ ಎನ್ನುವುದಕ್ಕೆ ಪ್ರಬಲ ಸಾಕ್ಷ್ಯಗಳಿವೆ. ಈ ಕುರಿತ ಪುರಾವೆಗಳು ನಮ್ಮ ಭದ್ರತಾ ಮತ್ತು ತನಿಖಾ ಸಂಸ್ಥೆಗಳ ಕೈಯ್ಯಲ್ಲಿದ್ದು, ಅದನ್ನು ಪಾಕಿಸ್ಥಾನಕ್ಕೆ ಸ್ಪಷ್ಟವಾಗಿ ತಿಳಿಸಿದ್ದೇವೆ.
ರಾಜ್ಯವರ್ಧನ್ ಸಿಂಗ್ ರಾಥೋಡ್, ಕೇಂದ್ರ ಸಚಿವ
ಇಮ್ರಾನ್ ಖಾನ್ ಪಾಕ್ ಮಿಲಿಟರಿಯ ಕೈಗೊಂಬೆ. ಹಾಗಾಗಿ, ಪುಲ್ವಾಮಾ ಉಗ್ರರ ದಾಳಿಯ ಬಗ್ಗೆ ಪ್ರತಿಕ್ರಿಯಿಸಲು ಅವರು ಸೇನೆಯ ಆದೇಶಕ್ಕಾಗಿ ಇಷ್ಟು ದಿನ ಕಾಯುತ್ತಿದ್ದರು. ಅವರು ತಮ್ಮೆಲ್ಲ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಂಡೇ ಅಧಿಕಾರಕ್ಕೆ ಬಂದಿರುವುದು.
ರೆಹಾಂ ಖಾನ್, ಇಮ್ರಾನ್ ಖಾನ್ ಮಾಜಿ ಪತ್ನಿ