ಹೊಳಲ್ಕೆರೆ: ಪ್ರಕೃತಿಯಲ್ಲಾಗುವ ನಿತ್ಯ ಬದಲಾವಣೆಯಂತೆ ಕಾನೂನು ಮತ್ತು ಸಾಮಾಜಿಕ ಕ್ಷೇತ್ರದಲ್ಲಿಯೂ ನಿತ್ಯ ಬದಲಾವಣೆಗಳು ನೆಡೆದು ಹೊಸ ಕಾನೂನು ಬರುತ್ತವೆ. ಹಾಗಾಗಿ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರಿಗೂ ಕಾನೂನು ಜಾಗೃತಿ ಮೂಡಿಸಬೇಕು ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಬಿ. ವಸ್ತ್ರಮಠ ಹೇಳಿದರು.
ಪಟ್ಟಣದ ತಾಪಂ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಪಂ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲ ಸಂಘದ ಸಹಯೋಗದಲ್ಲಿ ಸೋಮವಾರ ಗ್ರಾಪಂ ಸದಸ್ಯರು, ಪಿಡಿಒಗಳಿಗೆ ಹಮ್ಮಿಕೊಂಡಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾವಲಂಬಿ ಗ್ರಾಮ ಸ್ವರಾಜ್ ಕನಸು ಕಂಡಿದ್ದ ಮಹಾತ್ಮ ಗಾಂಧೀ ಜಿ, ದೇಶದಲ್ಲಿದ್ದ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ದೇಶಕ್ಕೆ ಬೇಕಾದ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ್ದರು. ದೇಶದಲ್ಲಿನ ಕಂದಾಚಾರ, ಕಾರ್ಮಿಕ ಶೋಷಣೆ, ಜೀತಪದ್ಧತಿ, ಬಾಲ್ಯವಿವಾಹ ಸೇರಿದಂತೆ ಹಲವು ಅನಿಷ್ಠ ಪದ್ಧತಿಗಳ ನಿರ್ಮೂಲನೆಗೆ ಶ್ರಮಿಸಿದ್ದರು. ಕೃಷಿ, ನೀರಾವರಿ, ಹಳ್ಳಿಗಳ ಅಭಿವೃದ್ಧಿ ಕನಸು ಕಂಡಿದ್ದರು ಎಂದರು.
ಜನರು ಸ್ವಾರ್ಥ ರಹಿತ, ಸಮಾಜ ಮುಖೀ ಚಿಂತನೆ ಮಾಡಬೇಕು. ಪಕ್ಷಪಾತ ಕೈಬಿಡಬೇಕು. ಶಾಲೆಯಲ್ಲಿ ಉತ್ತಮ ಪರಿಸರ ನಿರ್ಮಿಸಬೇಕು. ಶಾಲೆಯ ಅಕ್ಕಪಕ್ಕದಲ್ಲಿ ಗುಟ್ಕಾ ಮದ್ಯಪಾನ ಮಾರಾಟ ನಿಲ್ಲಿಸಬೇಕು. ರಸ್ತೆ, ಸರಕಾರಿ ಜಾಗ ಅಕ್ರಮಿಸುವುದು ಸರಿಯಲ್ಲ. ಪ್ರತಿ ಗ್ರಾಪಂ ಸದಸ್ಯನ ಮನೆಯಲ್ಲಿ ಶೌಚಾಲಯ ಕಡ್ಡಾಯ. ಇಲ್ಲವಾದಲ್ಲಿ ಸದಸ್ಯತ್ವ ರದ್ದಾಗಲಿದೆ. ಕಳಪೆ ಕಾಮಗಾರಿ, ನಕಲಿ ಬಿಲ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವಾಸರೆಡ್ಡಿ ವಿಜಯ ಜ್ಯೋತ್ಸಾ ° ಮಾತನಾಡಿ, ಪ್ರತಿಯೊಬ್ಬರೂ ಸೌಲಭ್ಯಗಳನ್ನು ಕೇಳುವ ಸ್ಥಿತಿಯಲ್ಲಿದ್ದಾರೆ. ಹಳ್ಳಿಯ ಜನರು ಕಟ್ಟೆ ಮೇಲೆ ಕುಳಿತು ಜಗತ್ತಿನ ವಿಚಾರ ಚರ್ಚಿಸುತ್ತಾರೆ. ಅದರೆ, ತಾವು ಸಮಾಜಕ್ಕಾಗಿ ಏನು ಮಾಡಬೇಕೆಂದು ಚಿಂತಿಸದೆ, ಪ್ರಧಾನಿ, ಮುಖ್ಯಮಂತ್ರಿ ಹಾಗೆ ಹೀಗೆ ಮಾಡಬೇಕೆಂದು ಮಾತನಾಡುತ್ತಾರೆ. ಇನ್ನೊಬ್ಬರಿಗೆ ಕೆಲಸ ಹಾಗೂ ನೀತಿ ಪಾಠ ಹೇಳುವ ಮನಸ್ಥಿತಿ ನಿಲ್ಲಬೇಕು. ನಮ್ಮ
ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ನಮ್ಮಗಳ ಹೊಣೆಗಾರಿಕೆ ಅರಿತು ನಿರ್ವಹಿಸುವ ಬದ್ಧತೆ ಬೆಳೆಸಿಕೊಳ್ಳಬೇಕು ಎಂದರು.
ಪಂಚಾಯ್ತಿ ಕಾಯ್ದೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಕಲ್ಪಿಸಿದೆ. ಕಾರ್ಯಾಗಾರಕ್ಕೆ ಮಹಿಳೆಯರು ಬಂದಿಲ್ಲ. ಅವರ ಪತಿ ಅಥವಾ ಮಕ್ಕಳು ಅ ಧಿಕಾರ ಚಲಾಯಿಸುವ ಪದ್ಧತಿ ಇದೆ. ಮಹಿಳೆಯರು ಕೈಕಟ್ಟಿ ಕುಳಿತುಕೊಳ್ಳದೆ ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಜಿಪಂ ಸಿಇಒ ಪಿ.ಎನ್. ರವೀಂದ್ರ, ವಕೀಲರ ಸಂಘದ ಅಧ್ಯಕ್ಷ ಎಸ್. ವಿಜಯ, ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್. ದಿಂಡಲಕೊಪ್ಪ, ಅಪರ
ಸಿವಿಲ್ ನ್ಯಾಯಾಧೀಶ ವಿ. ರವಿಕುಮಾರ್, ತಾಪಂ ಇಒ ಬಾಲಸ್ವಾಮಿ ದೇಶಪ್ಪ, ಜಿಪಂ ಮುಖ್ಯಲೆಕ್ಕಾಧಿಕಾರಿ ಕೆ.ಎಚ್. ಓಂಕಾರಪ್ಪ, ವಕೀಲರಾದ ಎಸ್. ಎಂ. ಅನಂದಮೂರ್ತಿ, ಜೆ.ಎಸ್. ಹನುಮಂತೆಗೌಡ ಉಪನ್ಯಾಸ ನೀಡಿದರು. ವಕೀಲರ ಸಂಘದ ಉಪಾಧ್ಯಕ್ಷ ಎಸ್.ರಂಗಸ್ವಾಮಿ ನಿರೂಪಿಸಿದರು. ತಾಲೂಕಿನ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒಗಳು ಪಾಲ್ಗೊಂಡಿದ್ದರು.