Advertisement

ಅನುಷ್ಠಾನಗೊಂಡ ಪ್ರಾಪರ್ಟಿ ಕಾರ್ಡ್‌ ವ್ಯವಸ್ಥೆ: ಜನಸ್ಪಂದನೆ

12:32 AM Sep 09, 2019 | Sriram |

ಮಹಾನಗರ: ಹಲವಾರು ಮುಂದೂಡಿಕೆಗಳ ಬಳಿಕ ಮೂರು ತಿಂಗಳ ಹಿಂದೆ ಕಡ್ಡಾಯಗೊಂಡು ಜಾರಿಯಲ್ಲಿರುವ ಪ್ರಾಪರ್ಟಿಕಾರ್ಡ್‌ಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಆದರೆ ಕಾರ್ಡ್‌ ನೀಡುವ ವ್ಯವಸ್ಥೆಯಲ್ಲಿರುವ ಕೆಲವು ಲೋಪಗಳನ್ನು ಸರಿಪಡಿಸದ ಕಾರಣ ಫಲಾನುಭವಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.

Advertisement

ನಗರ ವ್ಯಾಪ್ತಿಯಲ್ಲಿ ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಮುಂದೂಡಿಕೆ ಜೂ. 10ಕ್ಕೆ ಕೊನೆಗೊಂಡು, ಅನಂತರದಿಂದ ಅನುಷ್ಠಾನಕ್ಕೆ ಬಂದಿತ್ತು. ಇದೀಗ ಮಂಗಳೂರು ನಗರ, ಗ್ರಾಮಾಂತರ, ಮೂಲ್ಕಿ ಉಪನೋಂದಣಿ ಕಚೇರಿಗಳಲ್ಲಿ ಆಸ್ತಿ ಮಾರಾಟ ಮತ್ತು ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ಹೊಂದುವುದು ಕಡ್ಡಾಯವಾಗಿದೆ. ಕಾರ್ಡ್‌ ಮಾಡಿರುವ ಪ್ರಕ್ರಿಯೆಗೆ ಮೂರು ತಿಂಗಳಿನಿಂದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಹಳಷ್ಟು ಸಂಖ್ಯೆಯಲ್ಲಿ ಆಸ್ತಿ ಮಾಲಕರು ಕಚೇರಿಗೆ ಬರುತ್ತಿದ್ದು, ಪ್ರಾಪರ್ಟಿ ಕಾರ್ಡ್‌ ಪ್ರಕ್ರಿಯೆ ಮಾಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ನೀಡಿಕೆ ವ್ಯವಸ್ಥೆಯಲ್ಲಿರುವ ಕೆಲವು ಲೋಪಗಳು, ಅನಗತ್ಯ ಸೃಷ್ಟಿಸುತ್ತಿರುವ ಗೊಂದಲಗಳಿಂದಾಗಿ ಹೆಚ್ಚಿನವರು ಈ ಕಾರ್ಡ್‌ ವಿತರಣೆ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕಡತ ನಾಪತ್ತೆ ಸಮಸ್ಯೆ
ಪ್ರಾಪರ್ಟಿ ಕಾರ್ಡ್‌ಗಾಗಿ ನೀಡಿರುವ ಆಸ್ತಿಗಳ ದಾಖಲೆಗಳನ್ನು ವರುಷಗಳ ಹಿಂದೆಯೇ ನೀಡಲಾಗಿದೆ. ಆದರೆ ಇದೀಗ ಕಚೇರಿಗೆ ಬಂದರೆ ನಿಮ್ಮ ಕಡತ ಇಲ್ಲ ಎಂದು ಉತ್ತರಿಸುತ್ತಾರೆ. ನಾವು ಈ ಬಗ್ಗೆ ಸಿಬಂದಿಯನ್ನು ತರಾಟೆಗೆ ತೆಗೆದುಕೊಂಡರೆ ಕಡತ ಕಾಣಿಸಿಕೊಳ್ಳುತ್ತದೆ ಎಂದು ಪ್ರಾಪರ್ಟಿಕಾರ್ಡ್‌ಗಾಗಿ ಬಂದಿದ್ದ ಮಹಿಳೆಯೋರ್ವರು ತಿಳಿಸಿದ್ದಾರೆ. ಅವರ ಮಾವ 84 ವರ್ಷದವರು. ಒಂದು ವರ್ಷದಿಂದ ಪ್ರಾಪರ್ಟಿಕಾರ್ಡ್‌ ಕಚೇರಿಗೆ ಬಂದು ಸುಸ್ತಾಗಿ ಸೊಸೆಗೆ ಇದರ ಪವರ್‌ಆಫ್‌ ಆಟರ್ನಿ ನೀಡಿದ್ದಾರೆ. ಇದೀಗ ಸೊಸೆ ಕಚೇರಿಗೆ ಅಲೆದಾಡುತ್ತಿದ್ದಾರೆ. ಕಡತ ನಾಪತ್ತೆ ಎಂದು ದೊರೆತ ಉತ್ತರದಿಂದ ಅವರ ಸಹನೆ ಕಟ್ಟೆಯೊಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಪತ್ತೆಯಾಗಿದೆ. ಇದೇ ರೀತಿಯ ದೂರುಗಳು ಜನರಿಂದ ವ್ಯಾಪಕವಾಗಿ ಕೇಳಿಬರುತ್ತಿವೆ.

ಸಾವಿರಾರು ಸಂಖ್ಯೆಯಲ್ಲಿ ಕಡತಗಳು ವರ್ಷಗಟ್ಟಲೆಯಲ್ಲಿ ರೆಕಾರ್ಡ್‌ ರೂಂನಲ್ಲಿ ಬಾಕಿ ಇರುವ ಕಾರಣ ಕೆಲವು ಬಾರಿ ಕಡತಗಳನ್ನು ಹುಡುಕುವಲ್ಲಿ ವಿಳಂಬವಾಗುತ್ತದೆ ಎಂಬುದು ಇಲಾಖೆಯ ಇದಕ್ಕೆ ನೀಡುವ ಉತ್ತರ.

ಪ್ರಾಪರ್ಟಿಕಾರ್ಡ್‌ ನೀಡುವ ಸಂದರ್ಭ ಉದ್ಬವಿಸುವ ನ್ಯೂನ್ಯತೆಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರತಿ ಬುಧವಾರ ಸಂಜೆ 5 ಗಂಟೆಗೆ ಜಿಲ್ಲಾಧಿಕಾರಿಯವರ ಕೋರ್ಟ್‌ ಹಾಲ್‌ನಲ್ಲಿ ಪರಿಹಾರ ಸಮಿತಿ ಸಭೆಯನ್ನು ನಿರ್ಗಮನ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಮಾಡಿದ್ದರು.

Advertisement

ಸಾರ್ವಜನಿಕರು ಯಾವುದಾದರೂ ಸಮಸ್ಯೆಗಳಿದ್ದಲ್ಲಿ ಯುಪಿಓಆರ್‌ ನಂಬರ್‌,/ ಸಲ್ಲಿಸಿದ ಅರ್ಜಿ ಸಮೇತ ಸಮಿತಿಗೆ ಲಿಖೀತವಾಗಿ ಸಲ್ಲಿಸುವ ವ್ಯವಸ್ಥೆ ಇತ್ತು. ಇದೀಗ ಜಿಲ್ಲಾಧಿಕಾರಿಯರು ರಾಜೀನಾಮೆ ನೀಡಿದ್ದು ಈ ವ್ಯವಸ್ಥೆಯು ಮುಂದುವರಿಯುವ ಬಗ್ಗೆ ಅನಿಶ್ಚಿತತೆ ಮೂಡಿದೆ.

ಪ್ರಾಪರ್ಟಿ ಕಾರ್ಡ್‌ಗೆ ಆನ್‌ಲೈನ್‌ ವ್ಯವಸ್ಥೆ ರೂಪಿಸುವ ಕಾರ್ಯ ಅಂತಿಮಗೊಂಡಿದೆ. ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಪ್ರಸ್ತುತ ಇದನ್ನು ತಡೆ ಹಿಡಿಯಲಾಗಿದೆ. ಕೆಲವು ಸೂಕ್ತ ಭದ್ರತಾ ವ್ಯವಸ್ಥೆಗಳು ಆಗತ್ಯವಿದ್ದು ಈ ನಿಟ್ಟಿನಲ್ಲಿ ಭೂಮಿ ಮಾನಿಟರ್‌ ಸೆಲ್‌ ಕಾರ್ಯಪ್ರವೃತ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

1,53,500 ಆಸ್ತಿಗಳು
ಮಂಗಳೂರಿನಲ್ಲಿ 2019ರ ಆಗಸ್ಟ್‌ 31ರ ವರೆಗೆ 1,53,500 ಆಸ್ತಿಯಲ್ಲಿ 93,727 ಆಸ್ತಿಗಳ ದಾಖಲೆಪತ್ರಗಳನ್ನು ಸಂಗ್ರಹಿಸಲಾಗಿದೆ. 48,583 ಕರಡು ಕಾರ್ಡ್‌ ಗಳಲ್ಲಿ 33,912 ಅಂತಿಮ ಕಾರ್ಡ್‌ ಗಳನ್ನು ವಿತರಿಸಲಾಗಿದೆ.

ಹೆಚ್ಚಿದ ಮಧ್ಯವರ್ತಿಗಳ ಹಾವಳಿ
ಪ್ರಾಪರ್ಟಿ ಕಾರ್ಡ್‌ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಜಾಸ್ತಿಯಾಗಿದ್ದು, ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯವರ್ತಿಗಳಿಂದಾಗಿ ಪ್ರಾಪರ್ಟಿ ಕಾರ್ಡ್‌ ಮಾಡಿಸುವುದಕ್ಕೆ ನೇರವಾಗಿ ಕಚೇರಿಗೆ ಬರುವವರಿಗೆ ಅನ್ಯಾಯವಾಗುತ್ತಿದೆ. ಈ ಮಧ್ಯವರ್ತಿಗಳು ಒಂದಷ್ಟು ಕಡತಗಳನ್ನು ಹಿಡಿದುಕೊಂಡು ನೇರವಾಗಿ ಬಂದು ಸಿಬ್ಬಂದಿ ಜತೆ ಶಾಮೀಲಾಗಿ ವ್ಯವಹರಿಸುತ್ತಿರುವ ದೃಶ್ಯ ಕಚೇರಿಯಲ್ಲಿ ಸಾಮಾನ್ಯವಾಗಿದೆ. ಇದೆ ಕಾರಣದಿಂದ ಜನಸಾಮಾನ್ಯರು ನೀಡುವ ಕಡತಗಳು ಪರಿಗಣಿಸಲು ಅನಗತ್ಯ ವಿಳಂಬವಾಗುತ್ತಿದೆ ಎನ್ನುವ ಆರೋಪ ಕೂಡ ಇದೆ. “ನಾವು ಕಡತ ನೀಡಿ ಒಂದು ವರ್ಷವಾದರೂ ಪ್ರಾಪರ್ಟಿ ಕಾರ್ಡ್‌ ಆಗುತ್ತಿಲ್ಲ. ಮಧ್ಯವರ್ತಿಗಳು ನೀಡಿದರೆ ಒಂದು ತಿಂಗಳಲ್ಲಿ ದೊರೆಯುತ್ತದೆ. ಪ್ರಾಪರ್ಟಿ ಕಾರ್ಡ್‌ ಒಂದು ದಂಧೆಯಾಗಿ ಪರಿವರ್ತಿವಾಗುತ್ತಿದೆ’ ಎಂದು ಕೆಲವು ಫಲಾನುಭವಿಗಳು ಮಧ್ಯವರ್ತಿಗಳ ಹಾವಳಿ ಬಗ್ಗೆ ನೇರ ಆರೋಪ ಮಾಡಿದ್ದಾರೆ.

ಕಾರ್ಡ್‌ ನೀಡಿಕೆ ತ್ವರಿತಗತಿಯಲ್ಲಿ
ಆಸ್ತಿ ನೊಂದಣಿಗೆ ಪ್ರಾಪರ್ಟಿ ಕಾರ್ಡ್‌ ನೀಡಿಕೆ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ. ಸಾರ್ವಜನಿಕರಿಂದ ವ್ಯಕ್ತವಾಗುವ ದೂರುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ. ಕಾರ್ಡ್‌ ನೀಡುವ ಸಂದರ್ಭ ಉದ್ಬವಿಸುವ ನ್ಯೂನ್ಯತೆಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರತಿ ಬುಧವಾರ ಸಂಜೆ 5 ಗಂಟೆಗೆ ಜಿಲ್ಲಾಧಿಕಾರಿಯವರ ಕೋರ್ಟ್‌ ಹಾಲ್‌ನಲ್ಲಿ ಪರಿಹಾರ ಸಮಿತಿ ಸಭೆ ಆಯೋಜಿಸಲಾಗುತ್ತಿದೆ. ಇದೀಗ ನೂತನ ಜಿಲ್ಲಾಧಿಕಾರಿಯವರಲ್ಲೂ ಇದನ್ನು ಮುಂದುವರಿಸುವ ನಿಟ್ಟಿನಲ್ಲಿ ಕೋರಲಾಗುವುದು.
 - ಪ್ರಸಾದಿನಿ,ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕಿ

Advertisement

Udayavani is now on Telegram. Click here to join our channel and stay updated with the latest news.

Next