Advertisement

ಹದಗೆಟ್ಟ ರಸ್ತೆಯಿಂದ ಮೀನುಗಾರಿಕಾ ವಹಿವಾಟಿಗೆ ತೊಡಕು

11:49 PM Sep 15, 2019 | Team Udayavani |

ಗಂಗೊಳ್ಳಿ: ಬಂದರು ನಗರಿ ಗಂಗೊಳ್ಳಿಯನ್ನು ಕುಂದಾಪುರ ಹಾಗೂ ತ್ರಾಸಿ ಕಡೆಯಿಂದ ಸಂಪರ್ಕಿಸುವ ಮುಖ್ಯ ರಸ್ತೆಯ ಅನೇಕ ಕಡೆಗಳಲ್ಲಿ ಮಳೆಯಿಂದಾಗಿ ತೀರಾ ಹದಗೆಟ್ಟು ಹೋಗಿದೆ. ಈಗಷ್ಟೇ ಮೀನು ಗಾರಿಕಾ ಚಟುವಟಿಕೆ ಆರಂಭಗೊಂಡಿದ್ದು, ಈ ಹೊಂಡ – ಗುಂಡಿಗಳ ರಸ್ತೆಯಿಂದಾಗಿ ಮೀನುಗಾರಿಕಾ ವಹಿ ವಾಟಿಗೆ ತೊಡಕಾಗಿ ಪರಿಣಮಿಸಿದೆ.

Advertisement

ಮೇಲ್‌ಗ‌ಂಗೊಳ್ಳಿ ವಾಟರ್‌ ಟ್ಯಾಂಕ್‌ನಿಂದ ಗಂಗೊಳ್ಳಿ ಪಂಚಾಯತ್‌ ಕಚೇರಿವರೆಗಿನ ಸುಮಾರು 700 ಮೀ. ಉದ್ದದ ಮುಖ್ಯ ರಸ್ತೆಯನ್ನು ನೆರೆ ಪರಿಹಾರದಲ್ಲಿ ಮಂಜೂ ರಾಗಿದ್ದ 1.08 ಕೋ.ರೂ. ವೆಚ್ಚದಲ್ಲಿ ಕಳೆದ ಎಪ್ರಿಲ್‌ – ಮೇಯಲ್ಲಿ ಕಾಂಕ್ರೀಟೀಕರಣ ಕಾಮಗಾರಿ ಮಾಡಲಾಗಿತ್ತು. ಆದರೆ ಈ ಬಾರಿಯ ಭಾರೀ ಮಳೆಯಿಂದಾಗಿ ಇದನ್ನು ಹೊರತು ಪಡಿಸಿ ಬಾಕಿ ಹಲವೆಡೆಗಳಲ್ಲಿ ರಸ್ತೆಯಿಡೀ ಹೊಂಡ – ಗುಂಡಿಗಳೇ ಕಾಣಿಸಿಕೊಂಡಿವೆ.

ಹದಗೆಟ್ಟ ರಸ್ತೆ ಕಾಮಗಾರಿಯಿಂದಾಗಿ ಕುಂದಾಪುರ, ತ್ರಾಸಿ ಕಡೆಯಿಂದ ಬರುವ ಹಾಗೂ ಹೋಗುವ ಸಾವಿರಾರು ವಾಹನಗಳಿಗೆ ಸಮಸ್ಯೆಯಾಗುತ್ತಿದೆ. ಭಾರೀ ಮಳೆಯಾಗುತ್ತಿರುವ ಸಂದರ್ಭವಂತೂ ಮಳೆ ನೀರೆಲ್ಲ ರಸ್ತೆಯಲ್ಲಿಯೇ ಹರಿದು ಹೋಗುತ್ತಿದೆ. ಕೆಲವೆಡೆ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲಿಯೇ ನೀರು ನಿಂತು, ಪಾದಚಾರಿಗಳಿಗೆ ಕೆಸರಿನ ಎರಚಾಟ ಸಾಮಾನ್ಯವಾಗಿದೆ. ಈಗ ಮೀನುಗಾರಿಕಾ ಋತು ಆರಂಭಗೊಂಡಿದೆ. ಹಿಂದಿಗಿಂತ ಈಗ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ರಸ್ತೆಯ ಅನೇಕ ಕಡೆಗಳಲ್ಲಿರುವ ಹೊಂಡ – ಗುಂಡಿಗಳಿಗೆ ತಾತ್ಕಾಲಿಕವಾಗಿ ತೇಪೆ ಕಾರ್ಯವನ್ನು ಆದರೂ ಮಾಡಲಿ ಎನ್ನುವುದು ಮೀನುಗಾರರ ಆಗ್ರಹವಾಗಿದೆ.

ಮೀನುಗಾರಿಕೆಗೆ ತೊಡಕು
ಇದು ಗಂಗೊಳ್ಳಿಯ ಮೀನುಗಾರಿಕಾ ಬಂದರಿಗೆ ತೆರಳುವ ಮುಖ್ಯ ರಸ್ತೆಯಾಗಿದೆ. ಈ ಬಂದರಿನಿಂದ ಬೇರೆ ಬೇರೆ ಕಡೆಗಳಿಗೆ ಮೀನು ಸಾಗಾಟ ಮಾಡಲಾಗುತ್ತದೆ. ಮೀನು ಸಾಗಾಟದ ಲಾರಿಗಳು, ಐಸ್‌ ಸಾಗಾಟದ ವಾಹನ, ಸಾರಿಗೆ ಬಸ್‌ಗಳು, ಶಾಲಾ ವಾಹನಗಳು, ಕಾರು, ಆಟೋ ರಿಕ್ಷಾ ಸೇರಿದಂತೆ ಸಾವಿರಾರು ವಾಹನಗಳು ಪ್ರತಿನಿತ್ಯ ಇದೇ ಮಾರ್ಗವಾಗಿ ಸಂಚರಿಸುತ್ತವೆ. ಮುಖ್ಯವಾಗಿ ಈ ಹೊಂಡ – ಗುಂಡಿಗಳ ರಸ್ತೆಯಿಂದಾಗಿ ಮೀನುಗಾರಿಕಾ ವಹಿವಾಟಿಗೆ ತೊಂದರೆಯಾಗುತ್ತಿದೆ.

500 ಮೀ.ಗೆ ಪ್ರಸ್ತಾವನೆ ಸಲ್ಲಿಕೆ
ಈಗಾಗಲೇ 700 ಮೀ. ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ನಡೆಸಲಾಗಿದೆ. ಇನ್ನು ಗಂಗೊಳ್ಳಿ ಬಂದರು ಕಡೆಯಿಂದ ಬರುವ ರಸ್ತೆಗೆ ಕಾಂಕ್ರೀಟಿಕರಣಕ್ಕೆ 1.05 ಕೋ.ರೂ. ಮಂಜೂರಾಗಿದ್ದು, ಮಳೆ ಕಡಿಮೆಯಾದ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಇನ್ನು ಸುಮಾರು 500 ಮೀ. ರಸ್ತೆ ಕಾಂಕ್ರೀಟೀಕರಣಕ್ಕೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ಪ್ರಸ್ತಾವನೆ ಸಲ್ಲಿಸಲಾಗಿದೆ.
– ದುರ್ಗಾದಾಸ್‌,
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next