Advertisement

ಐಎಂಎ ಬಹುಕೋಟಿ ವಂಚನೆ: ತನಿಖೆ ಚುರುಕು

10:55 PM Jun 14, 2019 | Lakshmi GovindaRaj |

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ಚುರುಕುಗೊಳಿಸಿದೆ. ಮತ್ತೂಂದೆಡೆ ವಂಚನೆಗೊಳಗಾದವರ ಪಟ್ಟಿ ಬೆಳೆಯುತ್ತಿದ್ದು ಶುಕ್ರವಾರದ ಅಂತ್ಯಕ್ಕೆ ಐಎಂಎ ವಿರುದ್ಧ 30 ಸಾವಿರಕ್ಕೂ ಅಧಿಕ ದೂರುಗಳು ದಾಖಲಾಗಿವೆ.

Advertisement

ಶುಕ್ರವಾರವೂ ವಂಚನೆಗೊಳಗಾದವರು ದೂರು ದಾಖಲಿಸಿದರು. 3,200ಕ್ಕೂ ಅಧಿಕ ದೂರುಗಳು ಶುಕ್ರವಾರ ದಾಖಲಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಐಎಂಎ ಕಂಪೆನಿಯ ಏಳು ನಿರ್ದೇಶಕರನ್ನು ತೀವ್ರ ವಿಚಾರಣೆಗೊಳಪಡಿಸಿರುವ ಎಸ್‌ಐಟಿ ತನಿಖಾಧಿಕಾರಿಗಳು, ವಂಚನೆ ಕೇಸ್‌ನ ಮೂಲ ಬೇರಿಗೆ ಕೈ ಹಾಕಿದ್ದಾರೆ.

ಏಳು ಮಂದಿ ಆರೋಪಿಗಳು ಮನ್ಸೂರ್‌ ಪರಾರಿ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ ಎಂದು ಹೇಳುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ಹೂಡಿಕೆದಾರರಿಗೆ ಲಾಭಾಂಶ ಹಣ ಸಂದಾಯವಾಗಿಲ್ಲ ಎಂಬ ಸಂಗತಿಯನ್ನು ಒಪ್ಪಿಕೊಂಡಿದ್ದಾರೆಂದು ಎಸ್‌ಐಟಿ ಉನ್ನತ ಮೂಲಗಳು ತಿಳಿಸಿವೆ.

ಐಎಂಎ ಕಂಪೆನಿ ರಿಜಿಸ್ಟ್ರೇಶನ್‌, ಹಣಕಾಸು ವಹಿವಾಟು ಸೇರಿ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಬೇಕಿದೆ. ಹೂಡಿಕೆದಾರರಿಗೆ ನೀಡುತ್ತಿದ್ದ ಲಾಭಾಂಶದ ಮೂಲ, ಹಣಕಾಸು ವಹಿವಾಟಿನ ಪಾರದರ್ಶಕತೆ ಬಗ್ಗೆಯೂ ಖಚಿತವಾಗಬೇಕಿದೆ. ಈ ನಿಟ್ಟಿನಲ್ಲಿ ದಾಖಲೆಗಳ ಪರಿಶೀಲನೆಯನ್ನು ಒಂದು ತಂಡ ನಡೆಸುತ್ತಿದೆ.

ಈ ಸಂಬಂಧ ಐಎಂಎ ಲೆಕ್ಕಪರಿಶೋಧಕರನ್ನು ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣ ಪ್ರಮುಖ ಆರೋಪಿಯಾಗಿರುವ ಮನ್ಸೂರ್‌ ಹಾಗೂ ಆತನ ಕುಟುಂಬ ಸದಸ್ಯರ ದೂರವಾಣಿ ಕರೆಗಳ ವಿವರ ಕಲೆಹಾಕಲಾಗುತ್ತಿದೆ. ಜೂ.8ರಂದು ಆತ ಬೆಂಗಳೂರು ತೊರೆದಿರುವ ಸಾಧ್ಯತೆಯಿದೆ,

Advertisement

ಆತ ಮಾತನಾಡಿದ್ದಾನೆ ಎನ್ನಲಾದ ಎರಡೂ ಆಡಿಯೋ ಮುದ್ರಿಕೆಗಳನ್ನು ಸಂಗ್ರಹಿಸಲಾಗಿದ್ದು ಅವು ಆತನದ್ದೇ ಎಂಬುದು ಖಚಿತವಾಗಲು ಧ್ವನಿ ಪರೀಕ್ಷೆ ನಡೆಯಬೇಕಿದೆ. ಇಲ್ಲವೇ ಇತರೆ ಆರೋಪಿಗಳು ಖಚಿತ ಪಡಿಸಬೇಕು, ಈ ನಿಟ್ಟಿನಲ್ಲಿಯೂ ತನಿಖೆ ಮುಂದುವರಿದಿದೆ ಎಂದು ಮೂಲಗಳು ಹೇಳಿವೆ.

ದುಬೈನಲ್ಲಿದ್ದಾನೆಯೇ ಮನ್ಸೂರ್‌?: ಜೂ.4ರಂದು ಮನ್ಸೂರ್‌ ಕಚೇರಿಗೆ ತೆರಳಿದ್ದು ಇತರೆ ನಿರ್ದೇಶಕರನ್ನು ಭೇಟಿಯಾಗಿದ್ದ. ಜತೆಗೆ, ಸಿಬ್ಬಂದಿಗೆ ರಂಜಾನ್‌ ಶುಭಾಶಯ ಹೇಳಿ ಅಂದಿನಿಂದ ಐದು ದಿನಗಳವರೆಗೆ ರಜೆ ಘೋಷಿಸಲಾಗಿದೆ.

ಈ ಬೆಳವಣಿಗೆಗಳ ನಡುವೆಯೇ ಮನ್ಸೂರ್‌ ಜೂ.8ರಂದು ನಗರ ಬಿಟ್ಟು ತೆರಳಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಮನ್ಸೂರ್‌ ದುಬೈ ಸೇರಿರುವ ಸಾಧ್ಯತೆಯಿದೆ ಎನ್ನಲಾಗಿದೆ. ದುಬೈ, ಸೇರಿ ಯಾವುದೇ ಹೊರದೇಶಗಳಿಗೆ ತೆರಳಿದ್ದರೂ ಕಾನೂನು ಪ್ರಕ್ರಿಯೆಗಳ ಮೂಲಕ ಸಿಐಡಿ ರೆಡ್‌ಕಾರ್ನರ್‌ ನೋಟಿಸ್‌ ಹೊರಡಿಸುವ ಅಧಿಕಾರ ವ್ಯಾಪ್ತಿಹೊಂದಿದ್ದು. ಸಿಐಡಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ದೂರುದಾರರ ಅಳಲು: ಮಗಳ ಮದುವೆ, ಉಳಿತಾಯದ ಹಣ, ನಿವೃತ್ತಿ ಬಳಿಕ ಬಂದ ಒಟ್ಟು ಮೊತ್ತ, ಕನಸಿನ ಸೂರು ಕಟ್ಟಿಕೊಳ್ಳಲು ಐಎಂಎನಲ್ಲಿ ಹಣ ಹೂಡಿಕೆ ಮಾಡಿದ್ದೆವು. ಆದರೆ, ಮನ್ಸೂರ್‌ ಒಂದೇ ಬಾರಿ ಬಾವಿಗೆ ತಳ್ಳಿಬಿಟ್ಟ ಎಂದು ವಂಚನೆಗೊಳಗಾದವರು ಆಳಲು ತೋಡಿಕೊಂಡರು.

“ಮೆಕ್ಯಾನಿಕ್‌ ಕೆಲಸ ಮಾಡಿ ದುಡಿಮೆಯ ಫ‌ಲವಾಗಿ 2.5 ಲಕ್ಷ ರೂ. ಉಳಿಕೆ ಮಾಡಿದ್ದೆ. ಮಕ್ಕಳ ವಿಧ್ಯಾಭ್ಯಾಸ, ಕಷ್ಟಕಾಲದಲ್ಲಿ ಸಹಾಯಕ್ಕೆ ಆಗಲಿದೆ ಎಂದು ನಂಬಿ ಪರಿಚಯಸ್ಥರೊಬ್ಬರ ಮಾತು ಕೇಳಿ ಐಎಂಎನಲ್ಲಿ ಹೂಡಿಕೆ ಮಾಡಿದ್ದೆ. ಐದಾರು ತಿಂಗಳು ಮಾತ್ರವೇ ಲಾಭಾಂಶ ಬಂದಿತು. ಇದೀಗ ಪೂರ್ತಿ ಹಣವೇ ಸಿಗದಂತೆ ಆಗೋಗಿದೆ. 2.50 ಲಕ್ಷ ರೂ. ಕೂಡಿಡಲು ಮತ್ತಿನ್ನೆಷ್ಟು ವರ್ಷ ದುಡಿಯಬೇಕು’ ಎಂದು ಎಂದು ಸೈಫ‌ುದ್ದೀನ್‌ ಎಂಬಾತ ನೋವು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next