Advertisement

Farmers: ಕ್ಷಮಿಸಿ ಬಿಡು ಅನ್ನದಾತ

04:04 PM Mar 07, 2024 | Team Udayavani |

ಒಬ್ಬ ಮನುಷ್ಯ ಬದುಕಲು ಮುಖ್ಯವಾಗಿ ನೀರು, ಗಾಳಿಯ ಜತೆ ಆಹಾರವು ಬೇಕು. ಅದಕ್ಕಾಗಿ ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಬ್ಬರ ಅಸ್ತಿತ್ವಕ್ಕೆ ಕಾರಣನಾದ ಅನ್ನದಾತನ ಋಣವನ್ನು ಎಲ್ಲರೂ ಹೊಂದಿರುತ್ತಾರೆ.

Advertisement

ರೈತರು ತಮ್ಮ ಆರ್ಥಿಕ ಸ್ಥಿರತೆ, ವಾಣಿಜ್ಯೋದ್ಯಮಕ್ಕೆಂದು ಮಾತ್ರ ವ್ಯವಸಾಯವನ್ನು ಮಾಡುವುದಿಲ್ಲ. ದೇಶ, ಸಮಾಜದ ಜನರ ಒಳಿತಿಗೆಂದು ಹಗಲಿರುಳು ಎನ್ನದೇ ಕಷ್ಟಪಟ್ಟು ಕೆಲಸ ಮಾಡುವ ಒಂದು ಜೀವವೆಂದರೆ ಅದು ರೈತ. ಕೇವಲ ಮನುಷ್ಯ ಕುಲವನ್ನು ಸಲಹದೆ ಪ್ರಾಣಿ ಪಕ್ಷಿಗಳ ಜೀವನಕ್ಕೂ ಆಧಾರವಾಗಿದ್ದಾನೆ.

ತಮ್ಮ ಒಂದು ಹೊತ್ತಿನ ಊಟ ತಡವಾದರೂ ಸಹಿತ ಕೃಷಿಗೆ ನೇರವಾದ ಮೂಕ ಪ್ರಾಣಿಗಳ ಹಸಿವನ್ನು ಮಾತ್ರ ಹೊತ್ತು ಹೊತ್ತಿಗೆ ಸರಿಯಾಗಿ ನಿಗಿಸುತ್ತಾರೆ. ಅಂತಹ ಉದಾರ ಭಾವದ ನಿಸ್ವಾರ್ಥಿಗಳು ನಮ್ಮ ಅನ್ನದಾತರು. ಅದಕ್ಕಾಗಿಯೇ ಇವರಿಗೆ ಸಮಾಜದಲ್ಲಿ ಉನ್ನತ ಗೌರವವನ್ನು ಸಲ್ಲಿಸುವುದು. ದೇಶದ ಬೆನ್ನೆಲುಬು ಎನ್ನುವುದು.

ಆದರೆ ಕೇವಲ ಮಾತಲ್ಲಿ ಗೌರವದ ಮನೆ ಕಟ್ಟಿದರೆ ಸಾಲದು. ಅವರಿಗೆ ನಮ್ಮಿಂದಾಗುವ ಸಹಾಯ ಹಸ್ತ ನೀಡಿದಾಗಲೇ ನಾವು ರೈತರಿಗೆ ನಿಜವಾಗಿ ಗೌರವ ನೀಡಿದಂತೆ. ಆದರೆ ಇದು ಕೇವಲ ಒಬ್ಬರು, ಇಬ್ಬರಿಂದ ಆಗುವಂತಹ ಕಾರ್ಯವಲ್ಲ. ಆಡಳಿತ ವರ್ಗದಿಂದಲೇ ಈ ಚಿಂತನೆ ಆರಂಭವಾಗಬೇಕು.

ಇತ್ತೀಚಿನ ದಿನಗಳಲ್ಲಿ ಮಾದ್ಯಮಗಳಲ್ಲಿ ನಿತ್ಯ ರೈತರ ಸಮಸ್ಯೆಗಳ ಕುರಿತು ವರದಿಗಳನ್ನು ನೋಡುತ್ತೇವೆ . ಅಷ್ಟೇ , ಈ ಸಮಸ್ಯೆಗಳಿಗೆ ಕೊನೆಯಿಲ್ಲವೆಂದು ಕೇವಲ ನೋಡಿ ಸುಮ್ಮನಾಗುತ್ತೇವೆ. ಅದರ ಕುರಿತು ಸಾರ್ವಜನಿಕರಾಗಲಿ, ಯಾವ ಆಡಳಿತಾಧಿಕಾರಿಗಳೇ ಆಗಲಿ ದ್ವನಿ ಎತ್ತುವುದಿಲ್ಲ.

Advertisement

ಕಳೆದ ವರ್ಷ ಸರಿಯಾದ ಮಳೆ ಇಲ್ಲದೆ ಬೆಳೆಯು ಬಂದಿಲ್ಲ, ಕುಡಿಯಲು ನೀರು ಸಹ ಸಿಗುತ್ತಿಲ್ಲ. ಅದೆಷ್ಟೋ ಕಡೆಗಳಲ್ಲಿ ಕುಡಿಯುವ ನೀರಿನ ಅಭಾವ ಈಗಾಗಲೇ ಆರಂಭವಾಗಿದೆ. ಹಲವಾರು ಗ್ರಾಮಗಳು ಇದರಿಂದ ನಿತ್ಯ ಬಳಲುತ್ತಿವೆ. ವರ್ಷವಿಡೀ ಅನ್ನವನ್ನು ನೀಡಿದ ಅನ್ನದಾತನಿಗೆ ಕುಡಿಯುವ ನೀರಿನ ಸರಿಯಾದ ವ್ಯವಸ್ಥೆಯನ್ನು ಮಾಡದೆ ಹೋದರೆ ಅವರು ಕೊಟ್ಟ ಅನ್ನಕ್ಕೆ ನಾವು ದ್ರೋಹ ಬಗೆದಂತೆ.

ರೈತರು ತಮ್ಮ ಬೆಳೆಗೆ ಎಂದು ಬೆಲೆ ಸಿಗಲಿಲ್ಲವೆಂದು ಕೃಷಿ ನಿಲ್ಲಿಸಲಿಲ್ಲ., ನಮ್ಮನ್ನು ಉಪವಾಸ ಇರಿಸಲಿಲ್ಲ. ಹೀಗಿರುವಾಗ ಹನಿ ನೀರಿಗೂ ಅವರ ಕಣ್ಣಲ್ಲಿ ನೀರು ಹಾಕಿಸುವುದು ಸರಿಯೇ?. ಇಷ್ಟು ದಿನಗಳು ಆಗಿರುವ ತಪ್ಪುಗಳನ್ನು ಇನ್ನಾದರೂ ಸರಿ ಮಾಡಿಕೊಳ್ಳೋಣ. ಮಿತವಾಗಿ ಎಲ್ಲರೂ ನೀರನ್ನು ಬಳಸಿ ಜಲ ಸಂರಕ್ಷಣೆಯಲ್ಲಿ ಬಾಗಿಯಾಗೋಣ. ರೈತರ ಈ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ಒದಗಿಸುವಂತೆ ಸರಕಾರಕ್ಕೆ ಮನವಿ ಮಾಡುವ ಮೂಲಕ ಅನ್ನದಾತನು ನೀಡಿದ ಅನ್ನದ ಋಣಕ್ಕೆ ಗೌರವಿಸೋಣ.

 ಪೂಜಾ ಹಂದ್ರಾಳ,

ಶಿರಸಿ

 

Advertisement

Udayavani is now on Telegram. Click here to join our channel and stay updated with the latest news.

Next