Advertisement

ಕಾಗವಾಡ-ಅಥಣಿಯಲ್ಲಿ ಅಕ್ರಮ ಮರಳುಗಾರಿಕೆ

01:50 PM Jul 27, 2019 | Suhan S |

ಅಥಣಿ: ಕಾಗವಾಡ ಹಾಗೂ ಅಥಣಿ ಕ್ಷೇತ್ರದಲ್ಲಿ ಅನಧಿಕೃತ ಮರಳಿನ ದಂಧೆ ಕೃಷ್ಣಾ ನದಿ ತಟ ಹಾಗೂ ಅಗ್ರಾಣಿ ನದಿಯಲ್ಲಿ ಎಗ್ಗಿಲ್ಲದೇ ನಡೆದರೂ ಸಂಬಂಧ ಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆಂದು ಆ ಭಾಗದ ರೈತರು ಹಾಗೂ ಸಾರ್ವಜನಿಕರ ಆರೋಪವಾಗಿದೆ.

Advertisement

ಅಕ್ರಮ ಮರಳು ಎನ್ನುವ ಈ ಕಪ್ಪು ಬಂಗಾರದ ಬೆಲೆಯನ್ನು ತಾರಕಕ್ಕೆ ಏರಿಸುವ ಮೂಲಕ ಅಕ್ರಮ ಹಣವನ್ನು ಸಂಗ್ರಹಿಸಲಾಗುತ್ತಿದೆ. ಅಧಿಕಾರಿಗಳ ಕಣ್ಣ ಕೆಳಗೆ ಈ ಧಂದೆ ನಡೆಯುತ್ತಿದ್ದು, ಅದು ಕಾಗವಾಡ ಮತ್ತು ಅಥಣಿ ಕ್ಷೇತ್ರಗಳಲ್ಲಿ ಖೀಳೇಗಾಂವ, ಆಜೂರ ಶೀರುರ ಪಾಂಡೇಗಾಂವ, ಕಲೋತಿ, ಮಸರಗುಪ್ಪಿ, ಕೋಕಟನೂರ, ಶಂಬರಗಿ, ಸುಟ್ಟಟ್ಟಿ, ಸವದಿ, ಕೃಷ್ಣಾ ಕಿತ್ತೂರ, ಮಹೇಶವಾಡಗಿ, ಝುಂಜರವಾಡ, ಕಕಮರಿ ಕೊಟ್ಟಲಗಿ, ಜಂಬಗಿ, ಮೈನಟಿ, ಹುಲಗಬಾಳಿ ಸೇರಿದಂತೆ ಹತ್ತು ಹಲವು ಗ್ರಾಮಗಳಲ್ಲಿ ನಿರಂತರವಾಗಿ ನಡೆಯುತ್ತಿದೆ. ಇಂತಹ ಮರಳು ಮಾಫಿಯಾ ತಡೆಯುವಲ್ಲಿ ಪೊಲೀಸ್‌ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತಾಲೂಕಾ ಆಡಳಿತ ಸಂಪೂರ್ಣವಾಗಿ ವೀಫಲವಾಗಿದೆ ಎನ್ನುವುದು ಜನರ ಆರೋಪವಾಗಿದೆ.

ಕೃಷ್ಣಾ ನದಿಯಿಂದ ಅನಧಿಕೃತ ಮರಳು ಎತ್ತುವುದು ನದಿ ತಟದ ಭೂ ಕುಸಿತಕ್ಕೆ ಕಾರಣವಾಗಿದೆ. ಇದರಿಂದ ನದಿಗೆ ಮಹಾಪೂರ ಬಂದರೆ ಗ್ರಾಮಗಳಿಗೆ ನದಿ ನೀರು ನುಗ್ಗಿ ಅಪಾರ ಹಾನಿ ಸಂಭವಿಸುವ ಅಪಾಯವೂ ಇದೆ. ಅನಾಹುತ ಸಂಭವಿಸುವುಕ್ಕಿಂತ ಮುಂಚೆ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮ ಮರಳನ್ನು ತಡೆಯುವಂತೆ ಗ್ರಾಮಸ್ಥರು ಹಾಗೂ ರೈತರು ಆಗ್ರಹಿಸಿದ್ದಾರೆ.

ಒಂದು ಟಿಪ್ಪರ್‌ ಮರಳಿಗೆ 60 ರಿಂದ 80 ಸಾವಿರದವರೆಗೆ ಮರಳು ಮಾರಾಟವಾಗುತ್ತಿದೆ. ಈ ಭಾಗದ ಅಕ್ರಮ ಮರಳು ಮಹಾರಾಷ್ಟಕ್ಕೂ ಅಕ್ರಮವಾಗಿ ಸಾಗಾಟವಾಗುತ್ತಿರುವುದರಿಂದ ಮಧ್ಯಮ ವರ್ಗದವರಿಗೆ ಮರಳು ಕೈಗೆ ಸಿದಂತಾಗಿದೆ. ಬಡ ಮತ್ತು ಮಧ್ಯಮ ವರ್ಗದವರು ಮನೆ ಕಟ್ಟುವ ಕನಸು ಕನಸಾಗಿ ಉಳಿದಿದೆ.

ಇದರೊಂದಿಗೆ ಅನಧಿಕೃತವಾಗಿ ಸಂಗ್ರಹಿಸಿ ಇಡಲಾದ ಮರಳನ್ನು ಕಳ್ಳ ಮಾರ್ಗವಾಗಿ ಮಹಾರಾಷ್ಟ್ರ ಮತ್ತು ಇತರ ಕಡೆ ಸಾಗಿಸಲಾಗುತ್ತಿದೆ. ಅಧಿಕಾರಿಗಳು ತಕ್ಷಣ ಅಕ್ರಮ ಮರಳು ದಂಧೆ ತಡೆಯುವ ಮೂಲಕ ಅನಧಿಕೃತವಾಗಿ ಸಂಗ್ರಹಿಸಿಡಲಾದ ಮರಳು ವಶಪಡಿಸಿಕೊಳ್ಳುವಂತೆ ಸಮಾಜ ಸೇವಕ ಮಾಂತೇಶ ಬಾಡಗಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Advertisement

ಈ ಕುರಿತು ಅಥಣಿ ತಹಶೀಲ್ದಾರ ಬಿ.ಎನ್‌.ಬಳಿಗಾರ ಅವರನ್ನು ಸಂಪರ್ಕಿಸಿದಾಗ, ಅಕ್ರಮ ಮರಳು ಸಂಗ್ರಹ ವಶಪಡಿಸಿಕೊಂಡು ಅದನ್ನು ಸರ್ಕಾರಿ ದರದಲ್ಲಿ ಸವಾಲವನ್ನು ಮಾಡಿ ಬಂದ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ಹಾಕಲಾಗಿದೆ. ಅದೇ ರೀತಿ ಅಕ್ರಮ ಮರಳು ಧಂದೆ ಕಂಡು ಬಂದರೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

 

•ವಿಜಯಕುಮಾರ ಅಡಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next