Advertisement

ಪಾಳ್ಯ ಗ್ರಾಮದ ಬಳಿ  ಅಕ್ರಮ ಗಣಿಗಾರಿಕೆ : ಗ್ರಾಮಸ್ಥರಿಂದ ಜಿಲ್ಲಾಧೀಕಾರಿಗೆ ದೂರು

06:10 PM Feb 03, 2021 | Team Udayavani |

ಬಾಗೇಪಲ್ಲಿ: ತಾಲೂಕಿನ ಪೈಪಾಳ್ಯ ಗ್ರಾಮದ ಬಳಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಯಮ ಉಲ್ಲಂಘಿಸಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿ,ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಒತ್ತಾಯಿಸಿ ದೂರು ಸಲ್ಲಿಸಿದ್ದಾರೆ.

Advertisement

ತಾಲೂಕಿನ ಮಿಟ್ಟೇಮರಿ ಹೋಬಳಿಯ ಪೈಪಾಳ್ಯ ಗ್ರಾಮದ ಬಳಿ ಹಲವು ದಿನಗಳಿಂದ ಕೆಲವರು ಸರ್ಕಾರಿ ನಿಯಮ ಉಲ್ಲಂಘಿಸಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಅಕ್ರಮ ಕಲ್ಲುಗಣಿಗಾರಿಕೆ ನಿಲ್ಲಿಸುವಂತೆ ಬಾಗೇಪಲ್ಲಿಯ ತಹಶೀಲ್ದಾರ್‌ ಕಚೇರಿಯಲ್ಲಿ ಹಲವು ಬಾರಿ ಗ್ರಾಮಸ್ಥರು ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಕೃಷಿಗೆ ತೊಂದರೆ: ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಪ್ರದೇಶ ಗ್ರಾಮದಿಂದ ಕೇವಲ ಕೂಗಳತೆ ದೂರದಲ್ಲಿರುವ ಕಾರಣ ಕಲ್ಲು ಗಣಿಗಾರಿಕೆ ಸ್ಫೋಟದಿಂದ ಹೊರಹೊಮ್ಮುವ ಧೂಳಿನಿಂದ ಕೆರೆಯ ನೀರು, ಕೃಷಿ ಬೆಳೆಗಳು ಕಲುಷಿತಗೊಂಡು ಜಾನುವಾರುಗಳ ಮೇವು ಮತ್ತು ಕುಡಿಯುವ ನೀರಿಗೆ ತೀವ್ರ ತೊಂದರೆ ಆಗುತ್ತಿದೆ.

ದಮ್ಕಿ ಆರೋಪ: ಬೃಹತ್‌ ಗಾತ್ರದ ಬಂಡೆಗಳನ್ನು ಜಿಲೆಟಿನ್‌ ಬಳಿಸಿ ಸ್ಫೋಟಿಸುತ್ತಾರೆ. ಈ ಸ್ಫೋಟದ ಶಬ್ದಕ್ಕೆ ಭೂಮಿ ತೀವ್ರವಾಗಿ ಕಂಪಿಸುತ್ತದೆ. ಪರಿಣಾಮ ಗಣಿಗಾರಿಕೆ ಪ್ರದೇಶಕ್ಕೆ ಹತ್ತಿರದಲ್ಲಿರುವ ಪೈಪಾಳ್ಯ ಗ್ರಾಮದ ವಾಸದ ಮನೆಗಳು ಬಿರುಕು ಬಿಡುತ್ತಿವೆ. ಕೊಳವೆ ಬಾವಿಗಳು ಮುಚ್ಚಿಹೋಗುತ್ತಿವೆ. ಗಣಿಗಾರಿಕೆ ಪ್ರದೇಶದ ಸುತ್ತಮುತ್ತಲು ಹಲವು ರೈತರ ಕೃಷಿ ಜಮೀನುಗಳಿದ್ದು, ಜಿಲೆಟಿನ್‌ ಸ್ಫೋಟದ ಸಮಯದಲ್ಲಿ ಕೃಷಿ ಜಮೀನಿನೊಳಗೆ ಹೋಗದಂತೆ ಗಣಿ ಮಾಲೀಕರು ರೈತರಿಗೆ ಕಡ್ಡಾಯ ನಿರ್ಬಂಧ ಹೇರುತ್ತಾರೆ. ಪ್ರಶ್ನೆ ಮಾಡುವ ರೈತರಿಗೆ ಗಣಿ ಮಾಲೀಕರು ದಮ್ಕಿ ಹಾಕುತ್ತಾರೆಂದು ಪೈಪಾಳ್ಯ ಗ್ರಾಮಸ್ಥರು ಆರೋಪಿಸಿದ್ದಾರೆ.

ಕಾಟಾಚಾರ: ಗ್ರಾಮಸ್ಥರು ವಿವಿಧ ಇಲಾಖೆ ಅಧಿಕಾರಿಗಳಿಗೆ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ದೂರು ಸಲ್ಲಿಸಿದ್ದು, ತನಿಖೆ ನಡೆಸಲು ಸ್ಥಳಕ್ಕೆ ಆಗಮಿಸುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಗ್ರಾಮಸ್ಥರು ಪ್ರಶ್ನೆ ಮಾಡಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ಪಡೆದಿರುವ ಸರ್ವೆ ನಂ, ವಿಸ್ತೀರ್ಣ, ಗಡಿ ರೇಖೆ ಹಾಗೂ ಪರವಾನಗಿ ದಾಖಲೆ ನೀಡಿ ಎಂದು ಒತ್ತಾಯಿಸಿದರೆ, ದಾಖಲೆ ಬೇಕಾದರೆ ಮಾಹಿತಿ ಹಕ್ಕುನಲ್ಲಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಿ ಎಂದು ಗ್ರಾಮಸ್ಥರಿಗೆ ಅಧಿಕಾರಿಗಳು ಹಾರಿಕೆ ಉತ್ತರ ನೀಡಿ ಕಾಟಾಚರಕ್ಕೆ ತನಿಖೆ ನಡೆಸಿ ಹೋಗುತ್ತಾರೆ ಎಂಬ ಆರೋಪವಿದೆ.

Advertisement

ಇದನ್ನೂ ಓದಿ :ಸತತ 3ನೇ ದಿನವೂ ಬಾಂಬೆ ಷೇರುಪೇಟೆ ಭರ್ಜರಿ ವಹಿವಾಟು; 50 ಸಾವಿರ ಗಡಿ ದಾಟಿದ ಸೆನ್ಸೆಕ್ಸ್

ಪೈಪಾಳ್ಯ ಗ್ರಾಮದ ಬಳಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿರುವ ಪರವಾನಗಿ ದಾಖಲೆ ನೀಡುವಂತೆ ಗಣಿ ಮತ್ತು ಭೂ ಸವಿಜ್ಞಾನ ಇಲಾಖೆ ಅಧಿಕಾರಿ ಕೃಷ್ಣಮೂರ್ತಿಗೆ ಅರ್ಜಿ ಸಲ್ಲಿಸಿದ್ದೇವೆ. ಪರವಾನಗಿ ದಾಖಲೆ ನೀಡಲು ನಿರಾಕರಿಸುತ್ತಾರೆ. ಗ್ರಾಮಕ್ಕೆ 600 ಮೀ. ದೂರದಲ್ಲೇ ಗಣಿಗಾರಿಕೆ ನಡೆಸುತ್ತಿದ್ದು, ಜಿಲೆಟಿನ್‌ ಸ್ಫೋಟದ ಸಮಯದಲ್ಲಿ ಗಣಿಗಾರಿಕೆ ಪ್ರದೇಶದಿಂದ ದೂರ ಹೋಗಬೇಕೆಂದು ಆದೇಶ ಮಾಡುತ್ತಾರೆ. ಪೈಪಾಳ್ಯ ಗ್ರಾಮದ ಅರ್ಧ ಭಾಗದಷ್ಟು ಮನೆಗಳು ಬೆಟ್ಟದ ಬಂಡೆ ಕಲ್ಲಿನ ಮೇಲೆ ನಿರ್ಮಿಸಿದ್ದು, ಸ್ಫೋಟದ ಶಬ್ದಕ್ಕೆ ಭೂಮಿ ಕಂಪಿಸಿ ವಾಸದ ಮನೆಗಳಿಗೆ ತೊಂದರೆ ಆಗುತ್ತಿದೆ ಎಂದು ಪೈಪಾಳ್ಯ ಗ್ರಾಮಸ್ಥರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next