Advertisement

ಸೂರ್ಯನಂತೆ ಹೊಳೆಯಲು ಮೊದಲು ಉರಿಯಬೇಕು

03:21 PM Feb 26, 2021 | Team Udayavani |

ಜೇನುನೊಣವು ಝೇಂಕರಿಸುತ್ತಾ ಪ್ರತಿಯೊಂದು ಹೂವಿನ ಬಳಿ ಸಾಗಿ ಮಕರಂದವನ್ನು ಸಂಗ್ರಹಿಸುತ್ತದೆ. ಒಂದೊಂದು ಹನಿಗೂ ಅದು ಪಡುವ ಕಷ್ಟವೂ ಸವಿಯಾದ ಜೇನನ್ನು ರೂಪಿಸುತ್ತದೆ.

Advertisement

ನಮ್ಮ ವ್ಯಕ್ತಿತ್ವವೂ ಹೀಗೆಯೇ. ಹಲವು ವ್ಯಕ್ತಿಗಳು, ಘಟನೆಗಳು, ಸಂದರ್ಭ, ಸನ್ನಿವೇಶ, ಅವಕಾಶಗಳು ನಮ್ಮನ್ನು ಸಾಧನೆಗೆ ಪ್ರೇರೇಪಿಸುತ್ತವೆ. ಒಬ್ಬ ರೋಗಿ, ಮುದುಕ, ಶವವೂ ಬುದ್ಧನ ಹುಟ್ಟಿಗೆ ಕಾರಣವಾದಂತೆ ನಮ್ಮ ವ್ಯಕ್ತಿತ್ವದ ಉಗಮದಲ್ಲು ಹಲವು ಅಂಶಗಳು ಪ್ರಭಾವ ಬೀರುತ್ತವೆ.

ನನ್ನ ಮೇಲೆ ಪ್ರಭಾವ ಬೀರಿರುವ ಸ್ವಾಮಿ ವಿವೇಕಾನಂದರ ಬಗ್ಗೆ ಹೇಳಲೇಬೇಕು. ಅಬ್ಬರಿಸುವ ತೆರೆಯ ನಡುವೆ ಈಜಿ, ಬಂಡೆಗಲ್ಲನ್ನೇರಿ ಧ್ಯಾನಸಕ್ತರಾದ ವಿವೇಕಾನಂದರ ಆತ್ಮಾಭಿಮಾನ, ದೇಶಭಕ್ತಿ, ಧೈರ್ಯ ಯುವಜನತೆಗೆ ಆದರ್ಶವಾಗಿರುವ ಅವರ ಸಂದೇಶಗಳಿಂದ ನಾನು ಪುಳಕಗೊಳ್ಳುತ್ತೇನೆ. ಸಾಗರದಾಚೆ ಸಹೋದರತ್ವ ಸಾರಿದ ಅವರ “ಶಕ್ತಿಯೇ ಜೀವನ, ದುರ್ಬಲತೆಯೇ ಮರಣ, ಅಧೈರ್ಯವೂ ಪತನಕ್ಕೆ ಹಾಗೂ ಪಾಪಕಾರ್ಯಕ್ಕೆ ಮೂಲ, ಆತ್ಮವಿಶ್ವಾಸದಿಂದ ಸಕಲವೂ ಸಾಧ್ಯ, ಗುರಿ ಮುಟ್ಟುವವರೆಗೂ ಪ್ರಯತ್ನಶೀಲರಾಗಿರಬೇಕು’ ಎಂಬ ಸಂದೇಶ ನನಗೆ ಸ್ಫೂರ್ತಿ. ಈ ಸಂದೇಶಗಳು ನಾನು ಸೋಲುವಾಗ ನನ್ನ ಜತೆ ನಿಲ್ಲುತ್ತವೆ. ನನ್ನನ್ನು ಪ್ರಯತ್ನ ಶೀಲಳಾನ್ನಾಗಿಸುತ್ತದೆ. ಧೈರ್ಯ ನೀಡಿ ಧನಾತ್ಮಕ ಚಿಂತನೆಗಳನ್ನು, ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ನನಗೆ ವಿವೇಕಾನಂದರೇ ಸ್ಫೂರ್ತಿ.

ಭಾರತದ ಸುಪುತ್ರ, ಕನ್ನಡಿಗರ ಹೆಮ್ಮೆಯ ವಿಶ್ವೇಶ್ವರಯ್ಯನವರ ಹೆಸರು ಕೇಳದವರಿಲ್ಲ. ಇವರು ಕೇವಲ ಭಾರತದ ಉತ್ಥಾನಕ್ಕೆ ಕಾರಣರಲ್ಲ. ನನ್ನಲ್ಲೂ ಕ್ರಿಯಾಶೀಲತೆಯನ್ನು ಮೂಡಿಸಿದವರು. ಇವರು ಸಮಯಕ್ಕೆ ಮತ್ತು ಶಿಸ್ತಿಗೆ ಮಹತ್ವ ಕೊಡುತ್ತಿದ್ದುದು ಅನುಕರಣೀಯವಾಗಿದೆ. ಅವರ ಆರೋಗ್ಯ ಮತ್ತು ಕ್ರಿಯಾಶೀಲ ದೀರ್ಘಾಯುಷ್ಯದ ಗುಟ್ಟು ನನ್ನನ್ನು ಕುತೂಹಲಗೊಳಿಸುತ್ತದೆ. ಅವರು ಸದಾ ಪರಿಶ್ರಮಿಯಾಗಿದ್ದರು.

ಉಳಿದವರಿದಂಲೂ ಅದನ್ನೇ ಅಪೇಕ್ಷಿಸುತ್ತಿದ್ದರು. ಎಲ್ಲಿಯವರೆಗೆ ಅಲಸ್ಯವನ್ನು ತೊರೆಯುವುದಿಲ್ಲವೊ ಅಲ್ಲಿಯವರೆಗೆ ವಿಕಾಸ ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಅವರ ವಿನಯಶೀಲತೆ ಮತ್ತು ಸಾಧು ಪ್ರಕೃತಿ ನನ್ನಲ್ಲೂ ಬೆಳೆಯ ಬೇಕೆನಿಸುತ್ತದೆ.

Advertisement

ಪ್ರಾಮಾಣಿಕತೆಯಂತೂ ಅವರ ಚರಿತ್ರೆಯ ಅವಿ ಭಾಜ್ಯ ಅಂಗವಾಗಿದೆ. ಅಸಾಧಾರಣ ಪ್ರತಿಭೆಯಿದ್ದರೂ ಗರ್ವದಿಂದ ಮೆರೆದವರಲ್ಲ. ಸದಾ ದೇಶದ ಅಭಿವೃದ್ಧಿ ಕನಸು ಕಾಣುತ್ತಿದ್ದರು. ಅವರ ಈ ಎಲ್ಲ ನಡೆಗಳು ನನ್ನಲ್ಲಿ ಹುರುಪು ಮೂಡಿಸುತ್ತವೆ.

ನಾವು ಪಡೆಯುವ ಗೌರವವು ನಮ್ಮ ಕಾರ್ಯದಿಂದ ಬರುತ್ತದೆಯೇ ಹೊರತು ನಾವು ನಿರ್ವಹಿಸುವ ವೃತ್ತಿ ಅಥವಾ ಹುದ್ದೆಯಿಂದಲ್ಲ ಎಂಬುದಕ್ಕೆ ಸಾಕ್ಷಿಯಾಗಿರುವ ಡಾ|ಎ.ಪಿ.ಜೆ ಅಬ್ದುಲ್‌ ಕಲಾಂ ನನ್ನ ಕನಸಿನ ನಕ್ಷತ್ರ. ಪತ್ರಿಕೆ ವಿತರಣೆ ಮಾಡುತ್ತಿದ್ದ ಹುಡುಗ ಶಿಕ್ಷಕ, ಲೇಖಕ, ಕ್ಷಿಪಣಿ ವಿಜ್ಞಾನಿ, ರಾಷ್ಟ್ರಪತಿ ಹುದ್ದೆಯನ್ನು ದಕ್ಷತೆಯಿಂದ ನಿರ್ವಹಿಸಿದರು. ಇದಕ್ಕೆ ಕಾರಣ ಅವರ ಪರಿಶ್ರಮ, ಚುರುಕು ಬುದ್ಧಿ, ವಿಷಯದ ಮೇಲೆ ಆಸಕ್ತಿ ಎಂಬುದು ನಮಗೆ ತಿಳಿದಿರುವ ಸತ್ಯ. ಕಲಾಂ ಅವರ ಈ ಸಾಧನೆ ನನ್ನ ಅಭಿರುಚಿಗೆ ಸ್ಫೂರ್ತಿ ಮಂತ್ರವಾಗಿದೆ.

ಹನಿ ಹನಿ ಕೂಡಿ ಹಳ್ಳವೆಂಬಂತೆ ಹಲವು ಸದ್ಗುಣಗಳು ಸೇರಿ ಉತ್ತಮಳಾಗಬೇಕೆಂಬುದು ನನ್ನ ಅಭಿಲಾಷೆ. ಸೂರ್ಯನಂತೆ ಹೊಳೆಯಲು ಮೊದಲು ಉರಿಯಬೇಕು ಎಂಬಂತೆ ನಾನು ಅವರು ಹಾಕಿ ಕೊಟ್ಟ ಹಾದಿಯಂತೆ ನಡೆಯಲು ಸಂಕಲ್ಪ ಮಾಡಿದ್ದೇನೆ.

 ಅಭಿಜ್ಞಾ ಲಕ್ಷ್ಮೀ ಪಿ., ವಿವೇಕಾನಂದ ಕಾಲೇಜು, ಪುತ್ತೂರು 

Advertisement

Udayavani is now on Telegram. Click here to join our channel and stay updated with the latest news.

Next