Advertisement

ಕಾಯಕದಲ್ಲಿ ನಿಷ್ಠೆ-ಪ್ರಾಮಾಣಿಕತೆಯಿದ್ದರೆ ಯಶಸ್ಸು ಸಾಧ್ಯ

12:23 PM Aug 28, 2017 | |

ನಿಡಗುಂದಿ: ಲಾಭದ ನಿರೀಕ್ಷೆ ಬದಿಗೊತ್ತಿ ಕಾಯಕ ನಿಷ್ಠೆ, ಶ್ರದ್ಧೆ, ಪ್ರಾಮಾಣಿಕತೆಯಿಂದ ಕಾರ್ಯ ನಡೆಸಿದರೆ ಯಶಸ್ಸಿನ ಗುರಿ ತಲುಪಲು ಸಾಧ್ಯ ಎನ್ನುವುದಕ್ಕೆ ಶಾಂತೇಶ್ವರ ವಿವಿಧೋದ್ದೇಶಗಳ ಸಹಕಾರಿ ಸಂಘದ ಕಾರ್ಯವೇ ಸಾಕ್ಷಿ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಹೇಳಿದರು. ರವಿವಾರ ಪಟ್ಟಣದಲ್ಲಿ ಶಾಂತೇಶ್ವರ ವಿವಿಧೋದ್ದೇಶಗಳ ಸಹಕಾರಿ ಸಂಘದ 9ನೇ ಶಾಖೆ ಹಾಗೂ 4ನೇ ಸೂಪರ್‌ ಮಾರ್ಕೆಟ್‌ ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರದ ಬಲಿಷ್ಠತೆಗೆ ಹಾಗೂ ಸುಭದ್ರತೆಯಲ್ಲಿ ಸಹಕಾರಿ ರಂಗಗಳ ಪಾತ್ರ ಅಗ್ರಗಣ್ಯ. ಜತೆಗೆ ಸಾಮಾಜಿಕ ಕ್ರಾಂತಿಗೆ ಸಹಕಾರಿ ಸಂಸ್ಥೆಗಳ ಪಾಲು ಅಧಿಕವಾಗಿವೆ. ದೇಶದ ಬಹುತೇಕ ಜನತೆಗೆ ಸಮೀಪವಾಗಿ ಅವರ ಕಷ್ಟಗಳನ್ನು ಅರಿತು ಅವರ ಪಾಲಿಗೆ ಬೆಳಕಾಗಿದ್ದು ಸಹಕಾರಿ ಕ್ಷೇತ್ರವೇ ಆಗಿದೆ. ಸರಕಾರ ಎಷ್ಟೇ ಸೌಕರ್ಯಗಳನ್ನು ಜಾರಿಗೆ ತಂದರೂ ಅವುಗಳನ್ನು ಸಾಮಾನ್ಯ ಜನರಿಗೆ ತಲುಪಿಸಿ ಅವರ ದೈನಂದಿನ ಬದುಕಿಗೆ ಬೆಳಕಾಗಿರುವುದು ಸಹಕಾರಿ ಕ್ಷೇತ್ರವಾಗಿದೆ. ಸಹಕಾರಿ ಸಂಸ್ಥೆಗಳನ್ನು ಕಟ್ಟುವುದು ಸುಲಭ ಆದರೆ, ಅದನ್ನು ಮುನ್ನಡೆಸಿಕೊಂಡು ಸಾಧನೆ ಮಾಡುವುದು ಸುಲಭವಲ್ಲ. ಪರಸ್ಪರ ಸಹಕಾರ, ಸಾಮೂಹಿಕ ಸಹಭಾಗಿತ್ವದ ತಳಹದಿಯಲ್ಲಿ ಬಸವಣ್ಣನವರ ಕಾಯಕ ತತ್ವವನ್ನು ಮೈಗೂಡಿಸಿಕೊಂಡು ಸಾಗಿದಾಗ ಮಾತ್ರ ಯಶಸ್ಸು ದೊರಕಲು ಸಾಧ್ಯ. ಸತತ ಬರಗಾಲ ಎನ್ನುವ ಹಣೆಪಟ್ಟೆ ಅಂಟಿಸಿಕೊಂಡಿದ್ದ ವಿಜಯಪುರ ಜಿಲ್ಲೆಗೆ ಈ ಭಾರಿ ಉತ್ತಮ ಮಳೆ ಹಾಗೂ ನೀರಾವರಿ ಯೋಜನೆಗಳು ಸಾಕಾರವಾದ ಪರಿಣಾಮ ಬರಗಾಲದ ಛಾಪು ಅಳಿಸಿದೆ ಎಂದರು. ಶಾಸಕ ಶಿವಾನಂದ ಪಾಟೀಲ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಿಡಗುಂದಿ ಪಟ್ಟಣಕ್ಕೆ ಭವಿಷ್ಯದ ತಾಲೂಕು ಎನ್ನುವ ಸ್ಥಾನ ದೊರಕಿರುವ ಜತೆಗೆ ವಾಣಿಜ್ಯ ನಗರಿಯಾಗಿ ಪ್ರಗತಿಯತ್ತ ದಾಪುಗಾಲಿಡುತ್ತಿದೆ. ಸಹಕಾರಿ ಚಳವಳಿ ಜನ್ಮ ತಾಳಿದ್ದು ಧಾರವಾಡ ಜಿಲ್ಲೆಯಾಗಿದ್ದರೂ ರಾಜ್ಯದಲ್ಲಿ ಬೆಳವಣಿಗೆ ಕಂಡಿರುವ ಮೊದಲ ಜಿಲ್ಲೆ ವಿಜಯಪುರವಾಗಿದೆ ಎಂದರು. ರೈತರ ಶೋಷಣೆ ತಡೆಗಟ್ಟಿ ಅವರಿಗೆ ಧೈರ್ಯ ತುಂಬುವಲ್ಲಿ ಸಹಕಾರಿ ರಂಗಗಳು ಮೊದಲಾಗಿವೆ. ಸಹಕಾರಿ ಸಂಘಗಳು ಕೇವಲ ಲಾಭ ಮಾಡುವ ಉದ್ದೇಶ ಹೊಂದಿರದೇ ಸಾಮಾಜಿಕ, ಶೈಕ್ಷಣಿಕವಾಗಿ ರಾಷ್ಟ್ರಕ್ಕೆ ಕೊಡುಗೆ ಸಲ್ಲಿಸಬೇಕು. ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದರೂ ಅವಿಭಜಿತ ಅವಳಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಮೂಲಕ ರಾಜ್ಯಕ್ಕೆ ಜಿಲ್ಲೆ 2ನೇ ಸ್ಥಾನಕ್ಕೇರಿ ಜಿಲ್ಲೆಯಲ್ಲಿ ಕ್ಷೀರಕ್ರಾಂತಿ ಮೂಲಕ ಲಕ್ಷಾಂತರ ಮಹಿಳೆಯರಿಗೆ ಉದ್ಯೋಗ ನೀಡಿದೆ ಎಂದರು. ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರ ಆಧ್ಯಾತ್ಮದ ತಳಹದಿಯಲ್ಲಿ ಸ್ಥಾಪನೆಯಾದ ಸಹಕಾರಿ ರಂಗಗಳು 20ನೇ ಶತಮಾನದ ದಿನಗಳಲ್ಲಿ ಆರ್ಥಿಕ ರಂಗದಲ್ಲಿ ಸ್ಥಾಪನೆಯಾಗಿಸುವ ಮೂಲಕ ನೆರೆ ರಾಜ್ಯಗಳಿಗಿಂತ ನಮ್ಮ ಉತ್ತರಕರ್ನಾಟಕದಲ್ಲಿ ಸಹಕಾರಿ ಕ್ಷೇತ್ರ ಉತ್ತಮ ಸಾಧನೆ ಕಂಡಿದೆ. ಸಹಕಾರಿ ಸಂಘದ ಭದ್ರ ಬುನಾದಿಗೆ ಅನೇಕ ಗಣ್ಯರ ಶ್ರಮದಿಂದ ಸಾಕಾರವಾಗಿದೆ ಎಂದರು. ಚಿಮ್ಮಲಗಿ ಹಿರೇಮಠದ ನೀಲಕಂಠ ಶ್ರೀಗಳ ಮರಿದೇವರು, ಇಟಗಿ ಗುರುಶಾಂತವೀರ ಶ್ರೀಗಳು, ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ, ಅಪ್ಪುಗೌಡ ಪಾಟೀಲ (ಮನಗೂಳಿ), ಸಂಗರಾಜ ದೇಸಾಯಿ ಮಾತನಾಡಿದರು. ಶಾಂತೇಶ್ವರ ವಿವಿಧೋದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್‌. ಪ್ರಾಸ್ತಾವಿಕ ಮಾತನಾಡಿದರು. ಪಪಂ ಅಧ್ಯಕ್ಷ ಸಂಗಮೇಶ ಬಳಿಗಾರ, ಸಹಕಾರಿ ಧುರೀಣ ಸಿದ್ದಣ್ಣ ನಾಗಠಾಣ, ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಕರವೀರಪ್ಪ ಕುಪ್ಪಸ್ತ, ರುದ್ರಪ್ಪಣ್ಣ ರೇವಡಿ, ಈರಣ್ಣ ಪಟ್ಟಣಶೆಟ್ಟಿ, ಗುರುಶಾಂತ ನಿಡೋಣಿ, ಬಸವರಾಜ ಕುಂಬಾರ, ಅರವಿಂದ ಕೊಪ್ಪ, ಶಿವಾನಂದ ಮುಚ್ಚಂಡಿ, ರಾಮನಗೌಡ ಪಾಟೀಲ, ಶೇಖರ ದೊಡಮನಿ, ವೈ.ಎಸ್‌. ಗಂಗಶೆಟ್ಟಿ, ಬಿ.ಟಿ.ಗೌಡರ, ಸ್ವಾಮಿರಾವ್‌ ಪರ್ವತಿಕರ ಇದ್ದರು. ಶ್ರೀಮಂತ ಇಂಡಿ ಸ್ವಾಗತಿಸಿದರು. ಬಸವರಾಜ ಹಂಚಲಿ ನಿರೂಪಿಸಿದರು. ಬಸವರಾಜ ಸಾಹುಕಾರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next