Advertisement

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

12:04 AM Apr 30, 2024 | Team Udayavani |

ಮಣಿಪಾಲ: ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಶೈಕ್ಷಣಿಕ ಪಠ್ಯ ಕ್ರಮದ ಚೌಕಟ್ಟು ಪರಿಷ್ಕೃತಗೊಳ್ಳಬೇಕು. ಕೌಶಲಾಧಾರಿತ ಶಿಕ್ಷಣಕ್ಕೆ ಪಠ್ಯಕ್ರಮದಲ್ಲಿ ಆದ್ಯತೆ ಹೆಚ್ಚಬೇಕು.

Advertisement

ಕೌಶಲಾಧಾರಿತ ಮಾನವ ಶಕ್ತಿಯಿದ್ದರೆ ಸರ್ವ ಸಾಧನೆ ಸಾಧ್ಯ ಎಂದು ನ್ಯಾಶನಲ್‌ ಬ್ಯಾಂಕ್‌ ಫಾರ್‌ಫೈನಾನ್ಸಿಂಗ್‌ ಇನ್ಫ್ರಾಸ್ಟ್ರಕ್ಚರ್ ಆ್ಯಂಡ್‌ ಡೆವಲಪ್‌ಮೆಂಟ್‌ನ ಅಧ್ಯಕ್ಷರೂ ಆಗಿರುವ ಜಿಯೋ ಫೈನಾನ್ಸಿಯಲ್‌ ಸರ್ವೀಸಸ್‌ ಲಿ.ನ ಚೇರ್‌ಮನ್‌ ಕೆ.ವಿ. ಕಾಮತ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಫಾರ್ಚೂನ್‌ ವ್ಯಾಲಿ ವ್ಯೂ ಹೊಟೇಲ್‌ನಲ್ಲಿ ಸೋಮವಾರ ನಡೆದ ಮಾಹೆ ವಿ.ವಿ.ಯ ವಿಶೇಷ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೆಟ್‌ ಸ್ವೀಕರಿಸಿ ಅವರು ಮಾತನಾಡಿದರು.

ಎಂಜಿನಿಯರಿಂಗ್‌, ಮ್ಯಾನೇಜ್‌ಮೆಂಟ್‌ ಸಹಿತ ಶಿಕ್ಷಣದ ಹಲವು ವಿಭಾಗಗಳಲ್ಲಿ ಮಹತ್ತರ ಬದಲಾವಣೆ ಇಂದಿನ ಆವಶ್ಯಕತೆಗೆ ತಕ್ಕಂತೆ ಆಗಬೇಕು. ವರ್ತಮಾನದ ಬದಲಾವಣೆಗೆ ಅನುಗುಣವಾಗಿ ಪ್ರಮುಖ ಅಂಶಗಳನ್ನು ಪಠ್ಯಕ್ರಮದಲ್ಲಿ ಅಗತ್ಯವಾಗಿ ಸೇರಿಸಬೇಕು. ಸೇರದೆ ಇರುವ ಅಂಶಗಳನ್ನು ಶಿಕ್ಷಕರು, ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ತಿಳಿಸಬೇಕು ಅಥವಾ ಆ ಮಾಹಿತಿ ಎಲ್ಲಿ ಸಿಗಲಿದೆ ಎಂಬುದರ ಮಾರ್ಗದರ್ಶನವನ್ನಾದರೂ ಮಾಡ ಬೇಕು ಎಂದರು.

ಆರ್ಥಿಕ ಶಕ್ತಿಯಿಂದ ನವಭಾರತ
ಈಗ ಎಲ್ಲವೂ ಡಿಜಿಟಲ್‌ ಹಾಗೂ ಕೃತಕ ಬುದ್ಧಿಮತ್ತೆ (ಎಐ)ಯನ್ನು ಒಳಗೊಂಡಿದೆ. ಕೌಶಲಾಧಾರಿತ ಮಾನವಶಕ್ತಿ ಎಲ್ಲೆಡೆಗೂ ಅವಶ್ಯವಾಗಿದೆ ಮತ್ತು ಬೇಡಿಕೆಯೂ ಹೆಚ್ಚಿದೆ. ಈಗ ಭಾರತ 4 ಟ್ರಿಲಿಯನ್‌ ಆರ್ಥಿಕ ಶಕ್ತಿ. ಮುಂದಿನ 25 ವರ್ಷಗಳಲ್ಲಿ 25 ಟ್ರಿಲಿಯನ್‌ ಆರ್ಥಿಕ ಶಕ್ತಿಯನ್ನು ಹೊಂದಬೇಕಿದೆ. ಇದಕ್ಕಾಗಿ ನಿರಂತರ ಶೇ. 9ರಿಂದ ಶೇ. 10ರಷ್ಟು ಬೆಳವಣಿಗೆ ಆಗಬೇಕಿದ್ದು, ಅದು ಸಾಧ್ಯವಿದೆ. ಇದಕ್ಕೆ ಅಡಿಪಾಯ ಶಿಕ್ಷಣ ಸಂಸ್ಥೆಗಳು. ಶಿಕ್ಷಣ ಸಂಸ್ಥೆಗಳು ಹೊಸ ಪ್ರಯೋಗ, ಹೊಸ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಮೂಲಕ ಅವರನ್ನು ನವ ಭಾರತಕ್ಕೆ ಸಜ್ಜುಗೊಳಿಸಬೇಕು ಎಂದು ಸಲಹೆ ನೀಡಿದರು.

Advertisement

ಸೃಜನಶೀಲ ಚಿಂತನೆಯ ಡಾ| ಟಿಎಂಎ ಪೈ
ಶಿಕ್ಷಣ ಸಂಸ್ಥೆಗಳು ಸ್ವಾಯತ್ತವಾಗಿ ಬೆಳೆದರೆ ದೀರ್ಘ‌ಕಾಲ ಉಳಿಯುತ್ತವೆ ಎಂಬುದನ್ನು ಮಣಿಪಾಲ ಸಂಸ್ಥೆಗಳ ಸ್ಥಾಪಕ ಡಾ| ಟಿಎಂಎ ಪೈ ಅವರು ಬಲವಾಗಿ ನಂಬಿದ್ದರು ಮತ್ತು ಅದರಂತೆಯೇ ಸಂಸ್ಥೆಯನ್ನು ಕಟ್ಟಿ ಸ್ವಾಯತ್ತವಾಗಿ ಬೆಳೆಸಿದ್ದಾರೆ. ಮದ್ರಾಸ್‌ ಭಾಗದಲ್ಲಿ ಮಾತ್ರ ವೈದ್ಯಕೀಯ ಸಂಸ್ಥೆಗಳಿದ್ದ ಕಾಲದಲ್ಲಿ ಡಾ| ಟಿಎಂಎ ಪೈ ಅವರು ಈ ಭಾಗದಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ, ಬೆಳೆಸಿದರು. ಸಂಸ್ಥೆಯ ಇಂದಿನ ಅಭಿವೃದ್ಧಿ ಅವರ ಸೃಜನಶೀಲ ಚಿಂತನೆಗೆ ಪ್ರತ್ಯಕ್ಷ ನಿದರ್ಶನ ಎಂದು ಕಾಮತ್‌ ಅವರು ತಮ್ಮ ವೃತ್ತಿ ಜೀವನದ ಅನುಭಗಳನ್ನು ಹಂಚಿಕೊಂಡರು.ಮಾಹೆ ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಅವರು ವಿಶೇಷ ಘಟಿಕೋತ್ಸವ ಪ್ರಕ್ರಿಯೆ ನಡೆಸಿಕೊಟ್ಟರು.

ಕುಲಪತಿ ಲೆ|ಜ|ಡಾ| ಎಂ.ಡಿ. ವೆಂಕಟೇಶ್‌ ಅವರು ಮಾಹೆ ವಿ.ವಿ.ಯ ಸಾಧನೆಯ ಪರಿಚಯ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಬೆಳಕು ಚೆಲ್ಲಿದರು.

ಎಂಇಎಂಜಿ ಚೇರ್‌ಮನ್‌ ಹಾಗೂ ಮಾಹೆ ಟ್ರಸ್ಟ್‌ ಅಧ್ಯಕ್ಷರಾದ ಡಾ| ರಂಜನ್‌ ಆರ್‌. ಪೈ, ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್‌. ಪೈ ಉಪಸ್ಥಿತರಿದ್ದರು.

ಕುಲಸಚಿವ ಡಾ| ಗಿರಿಧರ ಕಿಣಿ ಸ್ವಾಗತಿಸಿ, ಕೆಎಂಸಿ ಅಸೋಸಿಯೆಟ್‌ ಡೀನ್‌ ಡಾ| ಅನಿಲ್‌ ಭಟ್‌ ನಿರೂಪಿಸಿದರು. ಸಹ ಕುಲಪತಿಗಳಾದ ಡಾ| ಮಧು ವೀರರಾಘವನ್‌ ಅತಿಥಿ ಪರಿಚಯ ಮಾಡಿದರು. ಡಾ| ದಿಲೀಪ್‌ ಜಿ. ನಾಯ್ಕ ಗೌರವ ಡಾಕ್ಟರೇಟ್‌ ಪದವಿ ಪತ್ರ ವಾಚಿಸಿದರು. ಡಾ| ಶರತ್‌ ಕುಮಾರ್‌ ರಾವ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next