Advertisement

ಕಾಮಗಾರಿ ವಿಳಂಬವಾದ್ರೆ ಏಜೆನ್ಸಿ ಕಪ್ಪುಪಟ್ಟಿಗೆ

09:38 AM Jan 12, 2019 | Team Udayavani |

ಚಿತ್ರದುರ್ಗ: ಶುದ್ಧ ಕುಡಿಯುವ ನೀರಿನ ಘಟಕಗಳ ಕಾಮಗಾರಿ ವಿಳಂಬ ಮಾಡಿರುವ ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸುವುದರ ಜತೆಯಲ್ಲಿ ಆ ಏಜೆನ್ಸಿಗಳ ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಸೂಚಿಸಿದರು.

Advertisement

ಇಲ್ಲಿನ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಕರೆಯಲಾಗಿದ್ದ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ತೀವ್ರ ನೀರಿನ ಕೊರತೆ ಇದೆ. ಜನತೆ ಅಶುದ್ಧ ನೀರು ಕುಡಿಯುತ್ತಾರೆ. ಶುದ್ಧ ನೀರು ಕುಡಿಯಲಿ ಎನ್ನುವ ಉದ್ದೇಶದಿಂದ ಸರ್ಕಾರ ಕೋಟ್ಯಂತರ ರೂ. ಅನುದಾನ ನೀಡಿ ಆರ್‌ ಒ ಘಟಕಗಳನ್ನು ಮಂಜೂರು ಮಾಡಿ ಟೆಂಡರ್‌ ಕರೆದಿ ಆರೇಳು ತಿಂಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇವಲ 45 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎನ್ನುವ ಗುತ್ತಿಗೆ ನಿಬಂಧನೆಗಳನ್ನು ಎಲ್ಲರೂ ಗಾಳಿಗೆ ತೂರಿದ್ದು ಕೂಡಲೇ ಕಾಮಗಾರಿ ವಿಳಂಬ ಮಾಡಿರುವ ಎಲ್ಲ ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಪರ್ಯಾಯ ವ್ಯವಸ್ಥೆಯಾಗಿ ಆರ್‌ಒ ಘಟಕಗಳ ಸ್ಥಾಪನೆಗೆ ನೀಡಲಾದ ಅನುದಾನ ಕೂಡಲೇ ವಾಪಸ್‌ ಪಡೆದು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಆರ್‌ಒ ಘಟಕಗಳಲ್ಲಿ ನೀರಿಲ್ಲ ಎನ್ನುವ ಸಬೂಬು ಹೇಳುವಂತಿಲ್ಲ. ಘಟಕಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಿ ಶುದ್ಧೀಕರಿಸಿ ಸಾರ್ವಜನಿಕರಿಗೆ ಸರಬರಾಜು ಮಾಡಬೇಕು ಎಂದು ಅಧ್ಯಕ್ಷರು ಇಒಗಳಿಗೆ ತಾಕೀತು ಮಾಡಿದರು.

Advertisement

ಆರ್‌ಒ ಘಟಕಗಳನ್ನು ಪಡೆದಿರುವ ಏಜೆನ್ಸಿಗಳು ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ. ಏನೇ ದಾಖಲುಗಳನ್ನು ಕೇಳಿದರೂ ಕೊಡುತ್ತಿಲ್ಲ ಎಂದು ಅಧಿಕಾರಿಗಳು ನೋವು ತೋಡಿಕೊಂಡರು.

ಏಜೆನ್ಸಿಯವರು ಮಾಹಿತಿ ನೀಡುತ್ತಿಲ್ಲ, ಪೋನ್‌ ರಿಸೀವ್‌ ಮಾಡುತ್ತಿಲ್ಲ ಎಂದು ಅಧಿಕಾರಿಗಳು ಯಾವುದೇ ಮಾಹಿತಿ ನಮಗಿಲ್ಲ ಎನ್ನುವ ಸಬೂಬು ಹೇಳುವುದು ಬೇಡ. ಆರ್‌ಒ ಹಾಕಿದ ಮೇಲೆ ಐದು ವರ್ಷಗಳ ಕಾಲ ಅವರೇ ನಿರ್ವಹಣೆ ಮಾಡಬೇಕು. ಅಂತಹವರಿಂದ ಹೇಗೆ ಕೆಲಸ ತೆಗೆದುಕೊಳ್ಳಬೇಕು ಎಂದು ಅಧ್ಯಕ್ಷರು ಆಕ್ರೋಶ ವ್ಯಕ್ತ ಪಡಿಸಿದರು.

ಅಧಿಕಾರಿಗಳು ಸಭೆಗೆ ಬರುವಾಗ ಕಡ್ಡಾಯವಾಗಿ ಸಂಪೂರ್ಣ ಮಾಹಿತಿಯೊಂದಿಗೆ ಆಗಮಿಸಬೇಕು. ಮಾಹಿತಿ ಇಲ್ಲದೆ ಸಭೆಗೆ ಬಂದರೆ ಹೇಗೆ, ನಾವೇ ಪ್ರಶ್ನೆ ಹಾಕಿಕೊಂಡು ನಾವೇ ಉತ್ತರ ಪಡೆದುಕೊಳ್ಳಬೇಕಾ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಅಧ್ಯಕ್ಷರು ಈ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ತೋರುವಂತಿಲ್ಲ ಎಂದು ಅಧ್ಯಕ್ಷರು ಎಚ್ಚರಿಸಿದರು.

ಜಿಲ್ಲೆಯಲ್ಲಿ ಹೊಸದಾಗಿ 68 ಆರ್‌ಒ ಗುತ್ತಿಗೆ ಪಡೆದಿರುವ ಕಂಪನಿಯರು ಮುಂದಿನ 15 ದಿನಗಳಲ್ಲಿ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಿದರೆ ಸರಿ, ಇಲ್ಲವಾದರೆ ಅಳವಡಿಕೆ ಮಾಡಲು ಅವಕಾಶ ನೀಡಬೇಡಿ. ಅಂತಹ ಏಜೆನ್ಸಿ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ಅಧ್ಯಕ್ಷರು ಸಿಇಒಗೆ ತಾಕೀತು ಮಾಡಿದರು.

ಜಿಪಂ ಸಿಇಒ ಪಿ.ಎನ್‌. ರವೀಂದ್ರ ಪ್ರತಿಕ್ರಿಯಿಸಿ, ನ್ಯೂಟೆಕ್‌ ಕಂಪನಿ ಸೇರಿದಂತೆ ತಿಪ್ಪೇಸ್ವಾಮಿ ಅವರು ಆರ್‌ಒ ಘಟಕಗಳನ್ನು ಗುತ್ತಿಗೆ ಪಡೆದಿದ್ದಾರೆ. ಇಂತಹ ಏಜೆನ್ಸಿಯವರು ನಮ್ಮ ನೆಂಟರಲ್ಲ. ನಮಗೆ ಯಾವುದೇ ನಂಟಸ್ಥತನವಿಲ್ಲ. ಎಲ್ಲ ಇಒಗಳು ಆ ಏಜೆನ್ಸಿಗಳಿಗೆ ನೋಟಿಸ್‌ ನೀಡಬೇಕು. ಒಂದು ವೇಳೆ ಈಗಾಗಲೇ ನೋಟಿಸ್‌ ನೀಡಿದ್ದರೆ ಕಡ್ಡಾಯವಾಗಿ ಬ್ಲಾಕ್‌ ಲಿಸ್ಟ್‌ ಗೆ ಆ ಏಜೆನ್ಸಿಗಳನ್ನು ಹಾಕಬೇಕು ಎಂದು ಸೂಚಿಸಿದರು. ಎಸ್ಸಿ, ಎಸ್ಟಿ, ಬಿಸಿಎಂ ಅಭಿವೃದ್ಧಿ ನಿಗಮಗಳು ಫಲಾನುಭವಿಗಳಿಗೆ ಸಾಲ ಸೌಲಭ್ಯಗಳನ್ನು ಪೂರೈಸಬೇಲಿ/ ಸಕಾಲದಲ್ಲಿ ಬ್ಯಾಂಕುಗಳಿಗೆ ಪ್ರಸ್ತಾವನೆ ಕಳುಹಿಸುವಂತೆ ಅಧ್ಯಕ್ಷರು ಸೂಚಿಸಿದರು.

ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಲು ಶ್ರಮಿಸಿ
ಚಿತ್ರದುರ್ಗ:
ಬಡವರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳ್ಳುವ ಯೋಜನೆಗಳಿಗೆ ಜನವರಿ ಅಂತ್ಯದೊಳಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಅಂತ್ಯಗೊಂಡು, ಫಲಾನುಭವಿಗಳಿಗೆ ಶೀಘ್ರ ಸವಲತ್ತು ದೊರೆಯಬೇಕು ಎಂದು ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲ್ಲಿನ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆರ್ಥಿಕವಾಗಿ ಹಿಂದುಳಿದಿರುವ ಬಡವರಿಗೆ, ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಪೈಕಿ ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ಸಾಲ ಸೌಲಭ್ಯ, ಗಂಗಾ ಕಲ್ಯಾಣ, ಕಿರು ಸಾಲದಂತಹ ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಎಂದರು. ಪ್ರಸಕ್ತ ಆರ್ಥಿಕ ವರ್ಷ ಮುಗಿಯಲು ಕೇವಲ ಎರಡು ತಿಂಗಳು ಮಾತ್ರ ಉಳಿದಿದ್ದರೂ, ಕೆಲವು ಅಭಿವೃದ್ಧಿ ನಿಗಮಗಳು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನೇ ಪೂರ್ಣಗೊಳಿಸಿಲ್ಲ.

ಸರ್ಕಾರದ ಯೋಜನೆಯಡಿ ಸವಲತ್ತು ದೊರೆಯುತ್ತದೆ ಎಂದು ಜನರು ಕಾಯುವಂತಹ ಸ್ಥಿತಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇವರಾಜ ಅರಸು ನಿಗಮದಿಂದ ಕುಶಲಕರ್ಮಿಗಳಿಗೆ ಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಕಿರು ಸಾಲ ಯೋಜನೆಯಡಿ ಸೌಲಭ್ಯಕ್ಕಾಗಿ ಫಲಾನುಭವಿಗಳ ಆಯ್ಕೆ ಇನ್ನೂ ಆಗಿಲ್ಲ. ಇನ್ನು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವೂ ಕೂಡ ಫಲಾನುಭವಿಗಳನ್ನು ಇನ್ನೂ ಆಯ್ಕೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಿಗಮದ ಅಧಿಕಾರಿಗಳು, ಪ್ರಸಕ್ತ ವರ್ಷದಲ್ಲಿ ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನಿಸಿದ್ದು, ಆಯಾ ಶಾಸಕರ ಅಧ್ಯಕ್ಷತೆಯಲ್ಲಿನ ಆಯ್ಕೆ ಸಮಿತಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿದೆ. ಆದರೆ ಶಾಸಕರುಗಳ ಅಧ್ಯಕ್ಷತೆಯ ಸಮಿತಿಯಿಂದ ಇನ್ನೂ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳದಿರುವುದರಿಂದ ವಿಳಂಬವಾಗಿದೆ ಎಂದರು. ಜಿಪಂ ಸಿಇಒ ಪಿ.ಎನ್‌. ರವೀಂದ್ರ, ಜಿಪಂ ಉಪಕಾರ್ಯದರ್ಶಿ ಬಸವರಾಜ್‌, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಕಾರಿಗಳು ಭಾಗವಹಿಸಿದ್ದರು.

ತಾಪಂ ಇಒ ಕೃಷ್ಣನಾಯ್ಕ ತಬ್ಬಿಬ್ಬು
ಲ್ಯಾಂಡ್‌ ಆರ್ಮಿ ಅವರ ಚಿತ್ರದುರ್ಗ ತಾಲೂಕಿನ 11 ಹಳ್ಳಿಗಳ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರಿಲ್ಲ ಸ್ಥಘಿತಗೊಂಡಿವೆ ಎಂದು ಸಭೆಗೆ ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ತಾಪಂ ಇಒ ಕೃಷ್ಣನಾಯ್ಕ, ಎಲ್ಲೋ ಯೋಚನೆ ಮಾಡುತ್ತಿರುವುದನ್ನು ಗಮನಿಸಿದ ಅಧ್ಯಕ್ಷರು, ಯಾವ್ಯಾವ ಹಳ್ಳಿಗಳ ಆರ್‌ಒಗಳಿಗೆ ನೀರಿಲ್ಲ ಎಂದು ಮಾಹಿತಿ ನೀಡಿ ಎಂದು ಪ್ರಶ್ನಿಸಿದಾಗ ತಬ್ಬಿಬ್ಟಾದ ಇಒಗೆ ಅಧ್ಯಕ್ಷರು ತರಾಟೆ ತೆಗೆದುಕೊಂಡು ಸಭೆಯಲ್ಲಿ ಚರ್ಚೆ ಆಗುವ ವಿಷಯಗಳನ್ನು ಗಂಭೀರವಾಗಿದ್ದು ಕೇಳಬೇಕು. ಆಗ ಅದಕ್ಕೆ ಪರಿಹಾರ ಹುಡುಕಲು ಸಾಧ್ಯ ಎಂದು ಬೇಸರ ವ್ಯಕ್ತ ಪಡಿಸಿದರು.

ಜಿಲ್ಲೆಯ ಜಾನಪದ ಕಲಾವಿದರ ಪಟ್ಟಿ ಮತ್ತು ಮಾಹಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಬಳಿಯೇ ಇಲ್ಲ ಎಂದಾದರೆ ನೀವು ಏನು ಮಾಡುತ್ತೀರಿ, ಕಲಾವಿದರಿಗೆ ನ್ಯಾಯ ಕೊಡಿಸುವುದಾದರೂ ಹೇಗೆ, ಸಂಪೂರ್ಣ ಮಾಹಿತಿ ಇಟ್ಟುಕೊಳ್ಳಬೇಕು.
ಸೌಭಾಗ್ಯ ಬಸವರಾಜನ್‌, ಅಧ್ಯಕ್ಷರು, ಜಿಪಂ.

Advertisement

Udayavani is now on Telegram. Click here to join our channel and stay updated with the latest news.

Next