Advertisement

ಡೊನೇಷನ್‌ ಹೆಚ್ಚಾದ್ರೆ, ಸರ್ಕಾರಿ ಶಾಲೆಗಳೇ ದಾರಿ

01:26 PM Apr 17, 2020 | mahesh |

ಎಂ. ಚಿದಾನಂದ ಭಟ್‌, ಬೆಂಗಳೂರು
ಕೊರೊನಾದಿಂದ ನಮ್ಮಂಥ ಮಧ್ಯಮವರ್ಗವರ ಸಂಬಳ ಕಟ್‌ ಆಯಿತು. ಕೆಲಸ ಹೋಯಿತು ನಿಜ. ಇನ್ನೇನು ಜೂನ್‌ ಬಂತು. ಮಗ 3ನೇ ತರಗತಿಗೆ ಹೋಗಬೇಕು. ಆದರೆ, ಶಾಲೆಗಳು ಅದೇ ಲಕ್ಷಗಳ ಲೆಕ್ಕದಲ್ಲಿ ಡೊನೇಷನ್‌ ಕೇಳಬಹುದು. ಶೈಕ್ಷಣಿಕ ವೆಚ್ಚ ಅಷ್ಟೇ ದುಬಾರಿ
ಇದ್ದರೆ, ನಮ್ಮಂಥವರಿಗೆ ದಾರಿಯೇನು?

Advertisement

ಮುಂದಿನ ಶೈಕ್ಷಣಿಕ ವರ್ಷಕ್ಕೆ ಸರ್ಕಾರದ ಆದೇಶದವರೆಗೂ ದಾಖಲಾತಿ ಹಾಗೂ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಈಗಾಗಲೇ ಸರ್ಕಾರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಿದ್ದೇವೆ. ಖಾಸಗಿ ಶಾಲೆಗಳು ಶುಲ್ಕ ಪಡೆಯಲು ನಿರ್ದಿಷ್ಟ ನಿಯಮವಿದೆ ಮತ್ತು ಶಾಲೆಗಳಲ್ಲಿ ಶುಲ್ಕದ ವಿವರ ಪ್ರಕಟಿಸಬೇಕು. ಹೆಚ್ಚುವರಿಯಾಗಿ ದುಬಾರಿ ಶುಲ್ಕ ವಸೂಲಿ ಮಾಡಿದರೆ ಪಾಲಕ, ಪೋಷಕರು ದೂರನ್ನು ನೀಡಬಹುದು. ಕೊರೊನಾದಿಂದ ಪರಿಸ್ಥಿತಿ ಹೇಗಾಗಿದೆ ಎಂಬುದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ತಿಳಿದಿದೆ. ಹೀಗಾಗಿ, 2020-21ನೇ ಸಾಲಿನಲ್ಲಿ ಶುಲ್ಕ ಹೆಚ್ಚಿಸದಂತೆ ಖಾಸಗಿ ಶಾಲಾಡಳಿತ
ಮಂಡಳಿಗೆ ಸರ್ಕಾರದಿಂದ ಸಲಹೆಯನ್ನು ನೀಡಲಿದ್ದೇವೆ. ಖಾಸಗಿ ಶಾಲೆಯಷ್ಟೇ ಗುಣಮಟ್ಟದ ಶಿಕ್ಷಣ ಈಗ ಸರ್ಕಾರಿ ಶಾಲೆಯಲ್ಲೂ ದೊರೆಯುತ್ತಿದೆ. ಕನ್ನಡ, ಇಂಗ್ಲಿಷ್‌ ಎರಡನ್ನೂ ಕಲಿಸುತ್ತಿದ್ದೇವೆ. ಯಾವುದೇ ಡೊನೇಷನ್‌ ಹಾವಳಿಯೂ ಇರಲ್ಲ. ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬಹುದು.
● ಉಮಾಶಂಕರ್‌, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ

ಮಣಿಕಂಠ ಪಾ ಹಿರೇಮಠ
ನಮ್ಮ ತಂದೆಯ ಸಹೋದರಿ, ಕೊರೊನಾ ಭಯಕ್ಕೆ ತುತ್ತಾಗಿದ್ದಾರೆ. ತಮಗೇ ಬಂದಿದೆ ಏನೋ ಅನ್ನುವಂತೆ ವರ್ತಿಸುತ್ತಿದ್ದಾರೆ. ಮನೆಯಲ್ಲಿರುವ ಅವರ ಮಕ್ಕಳಿಗೆ ಹೊರಗಿನ ತಿನಿಸುಗಳಾದ ಬಿಸ್ಕೆಟ್‌, ಬ್ರೆಡ್‌ಗಳನ್ನೂ ತಿನ್ನಲು ಬಿಡುತ್ತಿಲ್ಲ. ಆ ತಿಂಡಿಗಳಿಗೂ ವೈರಸ್‌ ತಗುಲಿದೆ ಎಂಬ ವಾದ ಮಾಡುತ್ತಾರೆ. ಹೀಗಾಗಿ, ಹೊರಗಿನದ್ದನ್ನು ಏನೂ ಮುಟ್ಟಲು ಬಿಡುತ್ತಿಲ್ಲ. ದಿನಪೂರ್ತಿಯೂ ಕೋವಿಡ್-19 ಬಗ್ಗೆಯೇ ಮಾತಾಡುತ್ತಿರುತ್ತಾರೆ. ಪರಿಹಾರ ಏನು?

ಕೋವಿಡ್-19 ದಂಥ ಒತ್ತಡದ ಸಮಯದಲ್ಲಿ ಇದು ಸಾಮಾನ್ಯ. ಅದರಲ್ಲೂ ಅತೀವ ಆತಂಕದ ವ್ಯಕ್ತಿತ್ವವಿರುವವರಲ್ಲಿ ಈ ತರಹದ ಸಮಸ್ಯೆಗಳು ಹೆಚ್ಚು. ಅವರ ಗಮನವನ್ನು ಇತರ ವಿಷಯಗಳತ್ತ ಸೆಳೆಯುವ ಪ್ರಯತ್ನ ಮಾಡಿ. ಅವರನ್ನು ವಿರೋಧಿಸುವ ಬದಲು ವಿಷಯ ಬದಲಾಯಿಸಿ ಮಾತನಾಡುವುದು ಹೆಚ್ಚು ಉಪಯುಕ್ತ. ಅವರು ಹೇಳುವ ಎಲ್ಲವನ್ನೂ ಪಾಲಿಸಬೇಕೆಂದಿಲ್ಲ. ಆದರೆ, ರೇಗುವುದೂ, ಬುದ್ಧಿ ಹೇಳುವುದೂ ಬೇಡ. ಕಡ್ಡಾಯವಾಗಿ ಒಂದು ವೇಳಾಪಟ್ಟಿಯನ್ನು ಅನುಸರಿಸುವಂತೆ ನೋಡಿಕೊಳ್ಳಿ. ಆತಂಕ ಅತೀವ ಹೆಚ್ಚಾಗಿದ್ದರೆ, ಆಗ ಟೆಲಿ ಕನ್ಸಲ್ಟೆàಷನ್‌ ಮೂಲಕ ಮನೋವೈದ್ಯರನ್ನು ಸಂಪರ್ಕಿಸಬಹುದು.
● ಡಾ.ಕೆ.ಎಸ್‌. ಪವಿತ್ರ, ಮನೋವೈದ್ಯೆ

ಸುಧಾಕರ್‌, ಭದ್ರಾವತಿ
ನಾನು ಬೆಂಗಳೂರಿನಲ್ಲಿ ಕೆಲಸ ಮಾಡ್ತಾ ಇದ್ದೆ. ಮಾರ್ಚ್‌ 23ರಂದು ಭದ್ರಾವತಿಗೆ ಬಂದಿದ್ದು, ಲಾಕ್‌ ಡೌನ್‌ ಕಾರಣ ಮತ್ತೆ ಬೆಂಗಳೂರಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನಲ್ಲಿ ನನ್ನ ಹೆಂಡತಿ ಒಬ್ಬಳೇ ಇದ್ದಾಳೆ. ನಾನು ಬೆಂಗಳೂರಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ದಾರಿಯೇನು?

Advertisement

ಮೆಡಿಕಲ್‌ ಎರ್ಮೆಜೆನ್ಸಿ ಇದ್ದವರಿಗೆ ಮಾತ್ರ ಪಾಸ್‌ ಕೊಡಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ನೀವು ಎಲ್ಲಿದ್ದಿರೋ ಅಲ್ಲೇ ಇರುವುದು ಸೂಕ್ತ.
● ಕೆ.ಬಿ.ಶಿವಕುಮಾರ್‌, ಜಿಲ್ಲಾಧಿಕಾರಿ, ಶಿವಮೊಗ್ಗ

 ರಾಮಯ್ಯ ಹಿರೇಮಠ, ಗೋಕಾಕ
ಲಾಕ್‌ಡೌನ್‌ ಸಮಯದಲ್ಲಿ ಹೊಸ ಆಧಾರ್‌ ಕಾರ್ಡ್‌ ಮಾಡುವ ಅಥವಾ ತಿದ್ದುಪಡಿ ಮಾಡಿಸುವ ಕಾರ್ಯ ಚಾಲನೆಯಲ್ಲಿರುತ್ತದೆಯೇ?

ಲಾಕ್‌ಡೌನ್‌ ಕಾರಣದಿಂದಾಗಿ, ಗೋಕಾಕ ತಾಲೂಕಿನಲ್ಲಿ ಹೊಸ ಆಧಾರ್‌ ಕಾರ್ಡ್‌ ಮಾಡುವ ಮತ್ತು ತಿದ್ದುಪಡಿ ಮಾಡಿಸುವುದನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. ಆಧಾರ್‌ ಕಾರ್ಡ್‌ ಮಾಡುವ ಕಚೇರಿ ಸಿಬ್ಬಂದಿಗೆ ರಜೆಯನ್ನೂ ನೀಡಲಾಗಿದೆ. ಲಾಕ್‌ಡೌನ್‌ ಮುಗಿದ ನಂತರವಷ್ಟೇ ಎಲ್ಲ ಪ್ರಕ್ರಿಯೆ ಆರಂಭವಾಗಲಿವೆ.
● ಪ್ರಕಾಶ ಹೊಳೆಪ್ಪಗೋಳ, ತಹಶೀಲ್ದಾರರು, ಗೋಕಾಕ

Advertisement

Udayavani is now on Telegram. Click here to join our channel and stay updated with the latest news.

Next