ಗದಗ: “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೋದಿ ಅವರ ಕಾಲಿಗೆ ಬಿದ್ದಾದರೂ ಒಂದು ಲಕ್ಷ ಕೋಟಿ ರೂ. ಅನುದಾನ ತಂದು ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.
ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ “ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ’ ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಪ್ರತಿ ವರ್ಷ 10 ಸಾವಿರ ಕೋಟಿ ರೂ.ತಂದು 5 ವರ್ಷದೊಳಗೆ ಯೋಜನೆ ಪೂರ್ಣಗೊಳಿಸುವ ಭರವಸೆ ಹುಸಿಗೊಳಿಸಿದೆ. ಇದುವರೆಗೆ ರಾಜ್ಯ ಸರ್ಕಾರ ಈ ಯೋಜನೆಗೆ ಕೊಟ್ಟಿದ್ದು ಕೇವಲ ಆರೇಳು ಸಾವಿರ ಕೋಟಿ ರೂ.ಮಾತ್ರ ಎಂದು ಆರೋಪಿಸಿದರು.
ಕಳಸಾ-ಬಂಡೂರಿ ನಾಲೆಗೆ ನೀರು ಬಿಡುವ ಕುರಿತು ನಡೆದ ಸಭೆಗೆ ಕರೆದರೆ ಉದಾಸೀನ ಮಾಡಿದ ಸಿಎಂ ಸಿದ್ದರಾಮಯ್ಯ, ಈಗ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಈ ವಿಷಯವಾಗಿ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದ್ದೇ ಕಾಂಗ್ರೆಸ್. ಮಾತುಕತೆಯಲ್ಲಿ ಬಗೆಹರಿಸಿಕೊಳ್ಳಬಹುದಾದ ವಿಚಾರವನ್ನು ನ್ಯಾಯಾಧಿಕರಣದವರೆಗೆ ತಂದು ನಿಲ್ಲಿಸಿದ್ದು ಕಾಂಗ್ರೆಸ್. ಗೋವಾದಿಂದ ಹನಿ ನೀರನ್ನೂ ಕರ್ನಾಟಕಕ್ಕೆ ಕೊಡಲ್ಲ ಎಂದಿದ್ದು ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ಎಂದು ವಾಗ್ಧಾಳಿ ನಡೆಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಎಚ್.ಕೆ.ಪಾಟೀಲ ಅವರು ನೀರಾವರಿ ಸಚಿವರಾಗಿದ್ದಾಗ “ಕೃಷ್ಣೆಯ ಕಣ್ಣೀರು’ ಎಂಬ ಪುಸ್ತಕ ಬರೆದರು. ಆದರೆ, ಈಗಲೂ ಅವರಿಗೆ ಕಣ್ಣೀರು ಅಳಿಸಿ ಹಾಕುವ ಮನಸ್ಸು ಬಂದಿಲ್ಲ.
– ಜಗದೀಶ ಶೆಟ್ಟರ್, ವಿಧಾನಸಭೆ ವಿರೋಧ ಪಕ್ಷದ ನಾಯಕ