Advertisement

ಲೋಕಾಯುಕ್ತ ಇದ್ದಿದ್ದರೆ ಸಿದ್ದರಾಮಯ್ಯ ಜೈಲಿಗೆ ಹೋಗಬೇಕಾಗಿತ್ತು: ವಿಶ್ವನಾಥ್

03:42 PM Dec 17, 2021 | Team Udayavani |

ಮೈಸೂರು : ಲೋಕಾಯುಕ್ತ ಇದ್ದಿದ್ದರೆ ಸಿದ್ದರಾಮಯ್ಯ ಜೈಲಿಗೆ ಹೋಗಬೇಕಾಗಿತ್ತು, ರೀ ಡೂನಲ್ಲಿ ಜೈಲಿಗೆ ಹೋಗುತ್ತಿದ್ದರು ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಎಚ್. ವಿಶ್ವನಾಥ್ ಶುಕ್ರವಾರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅನುಭವಿಗಳು.ಸದನದಲ್ಲಿ ಮಾತನಾಡುವುದನ್ನು ಬೀದಿಯಲ್ಲಿ ಮಾತನಾಡುತ್ತಿದ್ದಾರೆ.ಇದು ಸಮಂಜಸವಲ್ಲ.40% ಕಮಿಷನ್ ಬಗ್ಗೆ ತನಿಖೆಯಾಗಬೇಕು ಅನ್ನೋದನ್ನು ಸದನದ ಒಳಗೆ ಕೇಳಬೇಕು. ಅದಕ್ಕೆ ಪೂರಕ ಸಾಕ್ಷಿ ದಾಖಲೆಯೊಂದಿಗೆ ಕೇಳಬೇಕು.ನೀವು ಮಾತ್ರ ಸತ್ಯವಂತರು‌ ಬಿಜೆಪಿ ಪರ್ಸೆಂಟೇಜ್ ಎಂದು ಅವರು ಹೇಳುತ್ತಾರೆ.ನಾನು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವುದಿಲ್ಲ.ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತೇನೆ ಎಂದರು.

”ನಿಮ್ಮ ಸರ್ಕಾರ ಇದ್ದಾಗ ಡಿ ಕೆ ಶಿವಕುಮಾರ್ ರಿಂದ 7 ಸಾವಿರ ಕೋಟಿ ಸೋಲಾರ್ ಟೆಂಡರ್ ಕೇವಲ 3 ನಿಮಿಷದಲ್ಲಿ ಮುಗಿದಿದೆ. ಆ ಟೆಂಡರ್ ಭಾಗ್ಯ ಸಿದ್ದರಾಮಯ್ಯ ಕಾಲದಲ್ಲಿ ಆಗಿದ್ದು.ಸತ್ಯವಂತ ಸಿದ್ದರಾಮಯ್ಯ ಲೋಕಾಯುಕ್ತ ಏಕೆ ಸ್ಕ್ಯ್ರಾಪ್ ಮಾಡಿದಿರಿ.? ಲೋಕಾಯುಕ್ತ ಬಿ. ಎಸ್. ಯಡಿಯೂರಪ್ಪ ಅವರನ್ನು ಸಿಎಂ ಆಗಿದ್ದಾಗಲೇ ಜೈಲಿಗೆ ಹಾಕಿತ್ತು. ಅರ್ಕಾವತಿ ರೀ ಡೂ ಹೊಸ ಹೆಸರು ನೀಡಿದಿರಿ. ಲ್ಯಾಂಡ್ ಡೀ ನೋಟಿಫಿಕೇಶನ್‌ಗೆ ಹೊಸ ಹೆಸರು. 40% ಜೊತೆಗೆ ರೀ ಡೂ ಸಹ ತನಿಖೆಯಾಗಲಿ. ಆಗ ಯಾರು ಸತ್ಯವಂತರು ಅಂತಾ ಗೊತ್ತಾಗುತ್ತದೆ.
ಯಾರೂ ಇದನ್ನು ಮರೆತಿಲ್ಲ ಸಿದ್ದರಾಮಯ್ಯ ಅವರೇ” ಎಂದು ಕಿಡಿ ಕಾರಿದರು.

ಸಚಿವ ಆಂಜನೇಯ ಅವರ ಬೆಡ್‌ಶೀಟ್ ಭ್ರಷ್ಟಾಚಾರ ಪ್ರಸ್ತಾಪ

ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ನಡೆದಿರುವ ಭ್ರಷ್ಟಾಚಾರ. ಇದು ಜಗಜ್ಜಾಹಿರವಾಗಿರುವ ವಿಚಾರ. ಸ್ಟೀಲ್ ಬ್ರಿಡ್ಜ್‌ನಲ್ಲಿ ಎಷ್ಟು ಪರ್ಸೆಂಟೇಜ್, ನೀವು ಮಹಾದೇವಪ್ಪ ಏಕೆ ಮಾತು ಬಿಟ್ಟಿದ್ದೀರಿ.? ಜನರಿಗೆ ಇದರ ಕಾರಣ ನೀಡಿ ಎಂದು ಸವಾಲು ಹಾಕಿದರು.

Advertisement

ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯೋದು ಸುಲಭವಲ್ಲ. ನೀವು ಸತ್ಯವಂತರಾಗಿದ್ದರೆ ನಿಮ್ಮ ಮಾತು ಕೇಳಬಹುದಿತ್ತು.ನಿಮ್ಮ ಕಾಲದ ರೀ ಡೂಗೆ ನೀವು ಸಿದ್ದರಿದ್ದೀರಾ.? ನಿಜವಾಗಲೂ ಸತ್ಯವಂತರಾಗಿದ್ದರೆ ಒಪ್ಪಿಕೊಳ್ಳಿ. ಉಗ್ರಪ್ಪ-ಸಲೀಂ ನಡುವಿನ ಮಾತುಕತೆ ಉಲ್ಲೇಖಿಸಿದ ಎಚ್ ವಿಶ್ವನಾಥ್, ಡಿ ಕೆ ಶಿವಕುಮಾರ್ ಬಂದ ಮೇಲೆ ಜಾಸ್ತಿ ಆಯ್ತು ಅಂತಾ ಒಪ್ಪಿಕೊಂಡಿದ್ದಾರೆ. ಲೋಕಾಯುಕ್ತ ಇದ್ದಿದ್ದರೆ ಸಿದ್ದರಾಮಯ್ಯ ಜೈಲಿಗೆ ಹೋಗಬೇಕಾಗಿತ್ತು, ರೀ ಡೂನಲ್ಲಿ ಜೈಲಿಗೆ ಹೋಗುತ್ತಿದ್ದರು. ಅದನ್ನು ತಪ್ಪಿಸಿಕೊಳ್ಳಲು ಲೋಕಾಯುಕ್ತಕ್ಕೆ ಬಾಗಿಲು ಹಾಕಲಾಯ್ತು. ಪವರ್‌ಪುಲ್ ಆಗಿದ್ದ ಲೋಕಾಯುಕ್ತವನ್ನು ಬಂದ್ ಮಾಡಿಸಿದ್ದು ಸಿದ್ದರಾಮಯ್ಯ. ಇಲ್ಲವಾದರೆ ಯಡಿಯೂರಪ್ಪ ರೀತಿ ಸಿದ್ದರಾಮಯ್ಯ ಸಹ ಜೈಲಿಗೆ ಹೋಗುತ್ತಿದ್ದರು ಎಂದು ಕಿಡಿ ಕಾರಿದರು.

ಬಿಜೆಪಿ ಅಭ್ಯರ್ಥಿಯ ಸೋಲಿಗೆ ಬಿಜೆಪಿಯ ಕೆಲ ನಾಯಕರೇ ಕಾರಣ

ಮೈಸೂರು-ಚಾಮರಾಜನಗರ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಮಾಯಕ ರಘುರವರನ್ನು ಕೆಲ ಬಿಜೆಪಿ ನಾಯಕರೇ ಬಲಿ ಕೊಟ್ಟರು. ಬಿಜೆಪಿ ಅಭ್ಯರ್ಥಿಯ ಸೋಲಿಗೆ ಬಿಜೆಪಿಯ ಕೆಲ ನಾಯಕರೇ ಕಾರಣರಾಗಿದ್ದಾರೆ.ಮೈಸೂರು ಭಾಗದಲ್ಲಿ ಬಿಜೆಪಿ‌ಯ ಕೆಲ ನಾಯಕರು ಜೆಡಿಎಸ್ ಏಜೆಂಟರುಗಳಾಗಿದ್ದಾರೆ. ಜೆಡಿಎಸ್‌ ಏಜೆಂಟ್‌ಗಳಾಗಿ ಬಿಜೆಪಿಗೆ ಒಳ ಏಟು ಕೊಡುತ್ತಿದ್ದಾರೆ.
ಅಂತಹ ನಾಯಕರ ಹೆಸರುಗಳು ಆದಷ್ಟು ಬೇಗ ತೇಲಿ ಬರುತ್ತವೆ. ಇವರ ಒಳ ಏಟಿಗೆ ಬಿಜೆಪಿ ಅಭ್ಯರ್ಥಿ ಬಲಿಯಾದರು. ಕೊಟ್ಟ ದುಡ್ಡು ಸಮರ್ಪಕವಾಗಿ ತಲುಪಲಿಲ್ಲ. ಕೆಲವರು ಜೆಡಿಎಸ್ ಪರವಾಗಿಯೇ ಕೆಲಸ ಮಾಡಿದರು ಎಂದು ಸ್ವಪಕ್ಷದ ವಿರುದ್ಧವೇ ಸರಣಿ ಆರೋಪಗಳನ್ನು ಮಾಡಿದರು.

ಎಲ್ಲಾ ಕಥೆಗಳು ಎಲ್ಲರಿಗೂ ಗೊತ್ತು

ಸದನದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರೇಪ್ ಕುರಿತು ಹೇಳಿರುವ ಮಾತಿನ ವಿಚಾರಕ್ಕೆ ಪ್ರತಿಕ್ರಿಯಿಸಿ, ರಮೇಶ್ ಕುಮಾರ್ ಸ್ಪೀಕರ್ ಆಗಿದ್ದವರು. ಯಾವ ವಿಚಾರ ಹೇಗೆ ಮಾತನಾಡಬೇಕೆಂದು ಅರಿಯಬೇಕಿತ್ತು.ತಾನೇ ಮಹಾನ್ ಬುದ್ಧಿವಂತ, ನಾನೇ ಪಂಡಿತ ಎಂದು ಬಿಂಬಿಸಿಕೊಳ್ಳುವ ರಮೇಶ್ ಕುಮಾರ್ ಎಂತಹ ಮನುಷ್ಯ ಎಂಬುದು ರಾಜ್ಯದ ಜನರ ಮುಂದೆ ಸಾಬೀತಾಗಿದೆ. ಅವರ ಎಲ್ಲಾ ಕಥೆಗಳು ಎಲ್ಲರಿಗೂ ಗೊತ್ತು. ನಾನು ಆ ಕಥೆ ಹೇಳಿದರೆ, ನನ್ನನ್ನು ಹುಚ್ಚ ಅಂತಾ ಹೇಳುತ್ತಾರೆ. ಅವರ ಸಭ್ಯಸ್ಥಿಕೆ ನಿನ್ನೆ ಸದನದಲ್ಲಿ ಗೊತ್ತಾಗಿದೆ ಎಂದರು.

ಅನಾರೋಗ್ಯ

ಅಧಿವೇಶನಕ್ಕೆ ಹೋಗಲು ಅನಾರೋಗ್ಯದ ಕಾರಣ ಸಾಧ್ಯವಾಗಲಿಲ್ಲ.ಎರಡು ತಿಂಗಳು ವಿಶ್ರಾಂತಿಗೆ ಸೂಚಿಸಿದ್ದಾರೆ.ಈ ಬಗ್ಗೆ ಸ್ಪೀಕರ್ ಬಳಿ ಅನುಮತಿ ಪಡೆದಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next