Advertisement

ರೈತರಿಗೆ ಅನ್ಯಾಯ ಮಾಡಿದ್ರೆ ನಿರ್ದಾಕ್ಷಿಣ್ಯ ಕ್ರಮ

03:22 PM Aug 11, 2022 | Team Udayavani |

ಹಾವೇರಿ: ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿಯ ಬಗ್ಗೆ ಸುಳ್ಳು ವರದಿ ಕೊಟ್ಟರೆ, ರೈತರಿಗೆ ಅನ್ಯಾಯ ಮಾಡಿದರೆ ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಖಡಕ್‌ ಎಚ್ಚರಿಕೆ ನೀಡಿದರು.

Advertisement

ನಗರದ ಜಿಲ್ಲಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಪ್ರವಾಹ ಪರಿಸ್ಥಿತಿ ಹಾಗೂ ಬೆಳೆ ಹಾನಿ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಅತಿವೃಷ್ಟಿಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಮಾನವೀಯತೆ, ಹೃದಯ ವೈಶಾಲ್ಯತೆಯಿಂದ ನಿಖರವಾಗಿ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಬೇಕು. ರೈತರ ಹೊಲಗಳಿಗೆ ತೆರಳಿ ಹಾನಿ ಪರಿಶೀಲಿಸಬೇಕು. ಸಮೀಕ್ಷೆ ಕುರಿತಂತೆ ರೈತರಿಂದ ಯಾವುದೇ ದೂರುಗಳು ಬರಬಾರದು. ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಳ್ಳುವವರೆಗೂ ಯಾವೊಬ್ಬ ಕೃಷಿ ಅಧಿ ಕಾರಿಯೂ ರಜೆ ಮೇಲೆ ತೆರಳಬಾರದು. ಕೇಂದ್ರ ಸ್ಥಾನ ಬಿಡಬಾರದು. ರೈತರ ಸಂಪರ್ಕಕ್ಕೆ ಸಿಗಬೇಕು. ರೈತರ ಸಂಕಷ್ಟದ ಸಂದರ್ಭದಲ್ಲಿ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ಸೂಚನೆ ನೀಡಿದರು.

ಕೆರೆ ಕೋಡಿಯಿಂದ ನೀರು ನುಗ್ಗಿ ಹಾನಿಯಾದ ಬೆಳೆಗಳಿಗೂ ವಿಮಾ ಸೌಕರ್ಯ ಕಲ್ಪಿಸಬೇಕು. ವಿಮಾ ಕಂಪನಿಗಳು ಸೂಚಿಸಿದಂತೆ ಕೃಷಿ ಅಧಿಕಾರಿಗಳು ವರದಿ ನೀಡಬಾರದು. ಸ್ಥಳ ಪರಿಶೀಲನೆ ನಡೆಸಿ ವಿಮಾ ಸೌಕರ್ಯ ಕಲ್ಪಿಸಬೇಕೆಂದು ಸೂಚನೆ ನೀಡಿದರು.

ಜಿಲ್ಲೆಯ ಬಹುಪಾಲು ಗ್ರಾಮಗಳಿಗೆ ಮಳೆಯಿಂದ ಕುಡಿಯುವ ನೀರಿನ ಪೈಪ್‌ಗ್ಳು ಹಾಳಾಗಿ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಕುಡಿಯುವ ನೀರು ಪೂರೈಕೆ ಪಂಪ್‌ಗ್ಳು ಹಾಳಾಗಿವೆ. ಈ ಕುರಿತಂತೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ. ಮುಂಗಾರಿಗೆ ಹಳೆಯ ದಾಸ್ತಾನು ಸೇರಿ 1,16,827 ಮೆಟ್ರಿಕ್‌ ಟನ್‌ ಜಿಲ್ಲೆಗೆ ಪೂರೈಕೆಯಾಗಿದೆ. 1,08,495 ಮೆಟ್ರಿಕ್‌ ಟನ್‌ ಹಂಚಿಕೆ ಮಾಡಲಾಗಿದೆ. 9,732 ಮೆಟ್ರಿಕ್‌ ಟನ್‌ ಗೊಬ್ಬರ ದಾಸ್ತಾನಿದೆ. ಯೂರಿಯಾ ಗೊಬ್ಬರದ ಬದಲು ನ್ಯಾನೋ ಗೊಬ್ಬರ ಬಳಸಬೇಕು. ಈ ಕುರಿತಂತೆ ರೈತರಿಗೆ ಜಾಗೃತಿ ಮೂಡಿಸಬೇಕೆಂದು ಅ ಕಾರಿಗಳಿಗೆ ಸೂಚನೆ ನೀಡಿದರು.

ಕೃತಕ ಅಭಾವ ಸೃಷ್ಟಿಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕೃಷಿ ಜಾಗೃತ ದಳದಿಂದ ಕಳಪೆ ಬೀಜ-ಗೊಬ್ಬರ, ಕೃತಕ ಅಭಾವ ಸೃಷ್ಟಿಸಿದವರ ಮೇಲೆ 144 ಪ್ರಕರಣಗಳು ದಾಖಲಾಗಿವೆ. 15 ಪ್ರಕರಣಗಳಲ್ಲಿ ಶಿಕ್ಷೆ ಹಾಗೂ ದಂಡ ಹಾಕಲಾಗಿದೆ. 28 ಕೋಟಿ ಮೊತ್ತದ ಕಳಪೆ ಬೀಜ ವಶಪಡಿಸಿಕೊಳ್ಳಲಾಗಿದೆ ಎಂದರು.

ಕೃಷಿ ಜಂಟಿ ನಿರ್ದೇಶಕ ಮಂಜುನಾಥ್‌ ಮಳೆಯಿಂದ ಆದ ಬೆಳೆ ಹಾನಿ ಮಾಹಿತಿಯನ್ನು ಸಭೆಗೆ ವಿವರಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್‌ ರೋಷನ್‌ ಇದ್ದರು.

ನಿಖರ ಸಮೀಕ್ಷೆ ಕೈಗೊಳ್ಳಿ

ಬೆಳೆ ಹಾನಿ ಸಮೀಕ್ಷೆ ಕೇವಲ ಕೃಷಿ ಇಲಾಖೆ ಕೆಲಸವೆಂದು ಪರಿಗಣಿಸಬೇಡಿ. ತೋಟಗಾರಿಕೆ, ರೇಷ್ಮೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಬೇಕು. ರೈತರ ಪರಿಸ್ಥಿತಿ ಗಂಭೀರವಾಗಿದೆ. ರೈತರು ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಅತ್ಯಂತ ಗಂಭೀರವಾಗಿ ಪರಿಗಣಿಸಿ ನಿಖರ ಸಮೀಕ್ಷೆ ಕೈಗೊಳ್ಳಿ. ಆ ಮೂಲಕ ಕಷ್ಟದಲ್ಲಿರುವ ರೈತರ ನೆರವಿಗೆ ನಿಲ್ಲಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಸೂಚನೆ ನೀಡಿದರು.

ಬೆಳೆ ಕಟಾವು ಸಮೀಕ್ಷೆ ನಿಖರವಾಗಿ ಕೈಗೊಳ್ಳಬೇಕು. ಬೆಳೆ ನಷ್ಟವಾದಲ್ಲಿ ಎಲ್ಲಿ ಸರ್ವೇ ಮಾಡಬೇಕು. ಕೇವಲ ವಿಮಾ ಕಂಪನಿಗಳು ಶಿಫಾರಸ್ಸು ಮಾಡಿದ ಪತ್ರಕ್ಕೆ ಸಹಿ ಹಾಕಬೇಡಿ. ಕೃಷಿ ಅಧಿಕಾರಿಗಳು ಖುದ್ದಾಗಿ ಪರಿಶೀಲನೆ ನಡೆಸಬೇಕು. ಇಲ್ಲವಾದರೆ ರೈತರಿಗೆ ವಿಷ ಕೊಟ್ಟ ಹಾಗೆ ಆಗುತ್ತದೆ. ಎಲ್ಲ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ∙ಬಿ.ಸಿ.ಪಾಟೀಲ, ಕೃಷಿ ಸಚಿವರು

ಜಿಲ್ಲೆಯಲ್ಲಿ 450 ಮಿ.ಮೀ. ವಾಡಿಕೆ ಮಳೆ ಎದುರು 632 ಮಿ.ಮೀ. ಮಳೆಯಾಗಿದೆ. ಶೇ.40ರಷ್ಟು ಹೆಚ್ಚಿನ ಮಳೆಯಾಗಿದೆ. 3.8 ಲಕ್ಷ ಹೆಕ್ಟೇರ್‌ ಮುಂಗಾರು ಬಿತ್ತನೆಯಾಗಿದ್ದು, ಅತಿವೃಷ್ಟಿಯಿಂದ ಜುಲೈನಿಂದ ಆಗಸ್ಟ್‌ 5ರವರೆಗೆ ಅಂದಾಜು 27,353 ಹೆಕ್ಟೇರ್‌, ಆಗಸ್ಟ್‌ 8ರವರೆಗೆ 40,027 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಈ ಸಮೀಕ್ಷೆ ನನಗೆ ತೃಪ್ತಿ ತಂದಿಲ್ಲ. ಹಾನಗಲ್ಲನಂತಹ ಮಲೇನಾಡು ಪ್ರದೇಶದಲ್ಲಿ ಕೇವಲ ಎರಡು ಸಾವಿರ ಹೆಕ್ಟೇರ್‌ ಬೆಳೆ ಹಾನಿಯಾಗಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ 1,99,167 ರೈತರಿಗೆ 502 ಕೋಟಿ ಪರಿಹಾರ ಹಣ ನೀಡಲಾಗಿದೆ. 2021ನೇ ಸಾಲಿನಲ್ಲಿ 58,072 ರೈತರಿಗೆ 68 ಕೋಟಿ ವಿಮಾ ಹಣ ಬಂದಿದೆ. ರೈತ ವಿದ್ಯಾನಿಧಿ ಯೋಜನೆಯಡಿ 22 ಸಾವಿರ ವಿದ್ಯಾರ್ಥಿಗಳು 3.44 ಕೋಟಿ ಹಣ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next