Advertisement

ಹೆಬ್ಬಾರಗೆ ಟಿಕೆಟ್‌ ಸಿಗದಿದ್ದರೆ ನನಗೇ ಕೊಡಿ

11:36 PM Oct 14, 2019 | Lakshmi GovindaRaju |

ಹುಬ್ಬಳ್ಳಿ: ಯಲ್ಲಾಪುರ ವಿಧಾನಸಭೆ ಕ್ಷೇತ್ರದಿಂದ ನಾನೂ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಆದರೆ ಶಿವರಾಮ ಹೆಬ್ಬಾರ ಅವರು ತ್ಯಾಗ ಮಾಡಿದ್ದರಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಅವರ ರಾಜೀನಾಮೆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಯಾವ ತೀರ್ಪು ಬರುತ್ತದೆ ಎಂಬುದನ್ನು ನೋಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ಉಪ ಚುನಾವಣೆಗೆ ನಾನೂ ಒಬ್ಬ ಆಕಾಂಕ್ಷಿ ಎಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ನೂತನ ಅಧ್ಯಕ್ಷ ವಿ.ಎಸ್‌. ಪಾಟೀಲ ತಿಳಿಸಿದರು.

Advertisement

ಗೋಕುಲ ರಸ್ತೆಯಲ್ಲಿರುವ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವರಾಮ ಹೆಬ್ಬಾರ ತ್ಯಾಗ ಮಾಡಿದ ಪರಿಣಾಮ ಪಕ್ಷ ಅಧಿಕಾರಕ್ಕೆ ಬಂದಿದೆ. ಒಂದು ವೇಳೆ ಪಕ್ಷ ಅವರಿಗೆ ಟಿಕೆಟ್‌ ನೀಡಿದರೆ ನಾನು ತ್ಯಾಗಕ್ಕೆ ಸಿದ್ಧನಿದ್ದೇನೆ. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇರುವುದರಿಂದ ತೀರ್ಪು ಏನಾಗಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಹಾಗೇನಾದರೂ ವ್ಯತಿರಿಕ್ತವಾಗಿ ತೀರ್ಪು ಬಂದರೆ ಬೇರೆಯವರಿಗೆ ಟಿಕೆಟ್‌ ನೀಡುವ ಬದಲು ನನಗೆ ಟಿಕೆಟ್‌ ನೀಡಲಿ.

ಸದ್ಯ ಉಪ ಚುನಾವಣೆಗೆ ನಾನೂ ಆಕಾಂಕ್ಷಿ ಎಂದರು. ಈಗಾಗಲೇ ನಾಲ್ಕು ಬಾರಿ ಚುನಾವಣೆ ಸ್ಪರ್ಧಿಸಿ ಕ್ಷೇತ್ರದಲ್ಲಿ ಉತ್ತಮ ಕಾರ್ಯ ಮಾಡಿದ್ದೇನೆ. ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಸೋತಿದ್ದೇನೆ. ಹೀಗಾಗಿ ಹೆಬ್ಬಾರ ಅವರನ್ನು ಬಿಟ್ಟು ಬೇರೆಯವರನ್ನು ಪರಿಗಣಿಸುವ ಬದಲು ಹೈಕಮಾಂಡ್‌ ನನಗೆ ಟಿಕೆಟ್‌ ನೀಡಲಿ ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಪಕ್ಷದಿಂದಲೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next